ಬಂಗಾಲಿಗಳಿಗೂ ಕನ್ನಡ ಕಲಿಸಿದ ಸುಮಂತ್ ಬಗ್ಗೆ ನಿಮಗೆಷ್ಟು ಗೊತ್ತು?
ಮಂಗಳೂರು, ಮೇ 2: ಕೃಷಿ ವಿಷಯಗಳಿಗೆ ಸಂಬಂಧಿಸಿದ 'ಅಡಿಕೆ ಪತ್ರಿಕೆ', ಅದರ ಸಂಪಾದಕರಾದ ಶ್ರೀಪಡ್ರೆ ಅವರನ್ನು ಮತ್ತೊಮ್ಮೆ ಮಗದೊಮ್ಮೆ ನೆನಪಿಸಿಕೊಳ್ಳುತ್ತಲೇ ಇರುವಂಥ ಕೆಲಸ ಇದು. ಅದನ್ನು ಮಾಡಿರುವವರು 22 ವರ್ಷದ ಎಸ್.ಸುಮಂತ್. ಅಡಿಕೆ ಪತ್ರಿಕೆ ಮೂಲಕ ಎಂ.ಎಸ್ಸಿ ಭಾಗವಾಗಿ ಪಶ್ಚಿಮ ಬಂಗಾಲದ ವಿಶ್ವ ಭಾರತಿ ವಿಶ್ವ ವಿದ್ಯಾಲಯಕ್ಕೆ ಅಲ್ಪಾವಧಿ ಇಂಟರ್ನ್ ಷಿಪ್ ಗೆ ತೆರಳಿದವರು ಅಲ್ಲೊಂದು ಕ್ರಾಂತಿ ಮಾಡಿದ್ದಾರೆ.
ಅಲ್ಲಿನ ವಿಶ್ವವಿದ್ಯಾಲಯದಲ್ಲಿ ತಮಗೆ ಆದ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ. "ಕ್ಯಾಂಪಸ್ ನಲ್ಲಿ ಅಲ್ಲಿನವರಿಗೆ ಕನ್ನಡ ಕಲಿಯುವ ಆಸಕ್ತಿ ಕಂಡು ಅಚ್ಚರಿಯಾಯಿತು. ಶಾಂತಿ ನಿಕೇತನ್ ತಲುಪುವ ಮೊದಲು ನನಗೆ ಬಂಗಾಲಿ ಅರ್ಥವಾಗುತ್ತದಾ ಅಥವಾ ಕಲಿಯುತ್ತೇನಾ ಎಂಬ ಆತಂಕ ಇತ್ತು. ಅಡಿಕೆ ಪತ್ರಿಕೆ ವಿದ್ಯಾರ್ಥಿಗಳ ಮಧ್ಯೆ, ಸಂಶೋಧಕರ ನಡುವೆ ಅಷ್ಟು ಖ್ಯಾತಿ ಎಂಬುದು ಗೊತ್ತಿರಲಿಲ್ಲ. ಪತ್ರಿಕೆಗಳಲ್ಲಿ ಬಂದ ವಿಚಾರಗಳನ್ನು ವಿದ್ಯಾರ್ಥಿಗಳು ವಿಶ್ಲೇಷಣೆ ಮಾಡುತ್ತಾರೆ".
ಕನ್ನಡ ಎಂಎಯಲ್ಲಿ ಐದು ಚಿನ್ನದ ಪದಕ ಪಡೆದ ಮಹಾರಾಷ್ಟ್ರದ ಯುವತಿ
ಎರಡನೇ ವರ್ಷದ ವಿದ್ಯಾರ್ಥಿ ಸುಮಂತ್ ಕಳೆದ ವರ್ಷ ಜುಲೈನಲ್ಲಿ ಹತ್ತು ಮಂದಿಗೆ ಕನ್ನಡ ಹೇಳಿಕೊಳ್ಳಲು ಆರಂಭಿಸಿದರು. ಆದರೆ ವಾಸ್ತವವಾಗಿ ಸುಮಂತ್ ತಮಗೆ ಬಂಗಾಲಿ ಹೇಳಿಕೊಡುವಂತೆ ಕೇಳಿದ್ದರು. ಆದರೆ ದೇಶದ ನಾನಾ ಭಾಗದಿಂದ ಬಂದವರು ಕನ್ನಡ ಕಲಿಯಲು ಆಸಕ್ತಿ ತೋರಿದರು.
ಸುಮಂತ್ ಅವರ ಜತೆ ಕೋಣೆಯಲ್ಲಿ ಉಳಿದುಕೊಂಡಿದ್ದ ಮೂವರು ತಮಿಳುನಾಡು ಮೂಲದವರು ಕೂಡ ಕನ್ನಡ ಕಲಿಯಲು ಆರಂಭಿಸಿದ್ದಾರೆ. ಮೊದಲಿಗೆ ಹತ್ತು ವಿದ್ಯಾರ್ಥಿಗಳಿಂದ ಆರಂಭವಾದ ಸುಮಂತ್ ರ ತರಗತಿ ಮೊದಲ ವರ್ಷದ ಕೊನೆಗೆ ಇಪ್ಪತ್ತು ಮುಟ್ಟಿತ್ತು. "ಜನರು, ಅದರಲ್ಲೂ ಪಶ್ಚಿಮ ಬಂಗಾಲದವರು ಕನ್ನಡ ಕಲಿಯಲು ಆಸಕ್ತರಾಗಿದ್ದಾರೆ. ಏಕೆಂದರೆ ಹಲವರು ಬೆಂಗಳೂರಿಗೆ ವಲಸೆ ಬಂದಿದ್ದಾರೆ. ಅವರು ಕನ್ನಡದ ಕಲಾತ್ಮಕ ಸಿನಿಮಾವನ್ನು ಬಂಗಾಲಿ/ಇಂಗ್ಲಿಷ್ ಸಬ್ ಟೈಟಲ್ ಜತೆ ನೋಡುತ್ತಾರೆ.
"ಈಚೆಗೆ ಯಶ್ ಅಭಿನಯದ ಕೆಜಿಎಫ್ ದೊಡ್ಡ ಮಟ್ಟದ ಹಿಟ್ ಆಗಿದೆ. ಅವರಿಗೆ ಆ ಸಿನಿಮಾದ ಕೆಲವು ಹಾಡುಗಳು ಪರಿಚಿತ. ಜತೆಗೆ ಬಂಗಾಲದ ವಿದ್ಯಾರ್ಥಿಗಳು ರವೀಂದ್ರನಾಥ್ ಠಾಗೂರ್ ರನ್ನು ಕುವೆಂಪು ಅವರಿಗೆ ಹೋಲಿಕೆ ಮಾಡಿ ನೋಡುತ್ತಾರೆ. ಹೆಚ್ಚಿವ ವೈದ್ಯಕೀಯ ಚಿಕಿತ್ಸೆಗೆ ಬೆಂಗಳೂರಿಗೆ ತೆರಳುವವರೂ ಇದ್ದಾರೆ. ಆದ್ದರಿಂದ ಕನ್ನಡ ಮುಖ್ಯವಾಗಿ ಕಲಿಯಬೇಕು ಅಂದುಕೊಳ್ಳುತ್ತಾರೆ" ಎಂದು ಸುಮಂತ್ ಹೇಳುತ್ತಾರೆ.
ಸುಮಂತ್ ಮೂಲತಃ ಉಡುಪಿ ಜಿಲ್ಲೆಯ ಕುಕ್ಕಿಕಟ್ಟೆಯವರು. ತೀರ್ಥಹಳ್ಳಿಯಲ್ಲಿ ವಾಸಿಸುತ್ತಾರೆ. ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು, ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಅಗ್ರಿಕಲ್ಚರ್ ಪೂರ್ಣಗೊಳಿಸಿದ್ದಾರೆ.