ರೈತರಾಯಿತು, ಈಗ ರಜನಿಯಿಂದ ಹಿಂದೂ ಸಂಘಟನೆಗಳ ಭೇಟಿ
ಚೆನ್ನೈ, ಜೂನ್ 19: ತಮಿಳು ನಟ ರಜನೀಕಾಂತ್ ಇಷ್ಟು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಉದಾಹರಣೆ ಕಡಿಮೆ. ಅದೂ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಈ ಪರಿಯ ಚಟುವಟಿಕೆಯಿಂದ ಇರಲಿಲ್ಲ. ಆದರೆ ನಾಲ್ಕೈದು ತಿಂಗಳಿಂದ ವಿಪರೀತ ಸುದ್ದಿಯಲ್ಲಿದ್ದಾರೆ.
ಭಾನುವಾರವಷ್ಟೇ ರೈತರಿಗೆ ಒಂದು ಕೋಟಿ ರುಪಾಯಿ ನೀಡುವ ಮೂಲಕ ಸುದ್ದಿಯಲ್ಲಿದ್ದ ರಜನಿ, ಹಿಂದೂಪರ ಸಂಘಟನೆಯ ಭೇಟಿಗೆ ಸಿದ್ಧತೆ ನಡೆಸಿದ್ದಾರೆ. ಸದ್ಯದಲ್ಲೇ ತಮಿಳುನಾಡಿನ ಹಿಂದೂ ಮಕ್ಕಳ್ ಕಚ್ಚಿಯ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಈ ವರಸೆಗಳೆಲ್ಲ ಯಥಾಪ್ರಕಾರ ರಜನಿ ರಾಜಕೀಯ ಅರಂಗೇಟ್ರಂ ಕಡೆಗೆ ಬೊಟ್ಟು ಮಾಡುತ್ತದೆ.

ಹಿಂದೂ ಮುನ್ನಣಿಯಿಂದ ಬೇರ್ಪಟ್ಟು, ರಾಷ್ಟ್ರೀಯತಾವಾದಿ ಹಿಂದೂ ಪಕ್ಷ ಎಂದು ಹಿಂದೂ ಮಕ್ಕಳ್ ಕಚ್ಚಿ ಕರೆದುಕೊಳ್ಳುತ್ತದೆ. ಅಂದಹಾಗೆ ರಜನಿ ಇತ್ತೀಚೆಗೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ, ಸರಿಯಾದ ಸಮಯಕ್ಕೆ ರಾಜಕೀಯ ಪ್ರವೇಶ ಮಾಡುವ ಸುಳಿವು ನೀಡಿದ್ದರು.
ಆ ನಂತರ ಸರಣಿಯಾಗಿ ಭೇಟಿಗಳನ್ನು ಶುರು ಮಾಡಿದ್ದ ರಜನಿ, ಊಹೆಗಳಿಗೆ ಒಂದಿಷ್ಟು ತುಪ್ಪ ಸುರಿದರು. ಸೋಮವಾರ ಮಧ್ಯಾಹ್ನ ಹಿಂದೂ ಮಕ್ಕಳ ಕಚ್ಚಿಯ ಸದಸ್ಯರು ರಜನಿಯನ್ನು ಭೇಟಿ ಮಾಡಲು ಎಲ್ಲ ಸಿದ್ಧತೆ ನಡೆದಿದೆ. ಭೇಟಿಯ ಉದ್ದೇಶ ಏನು ಎಂಬುದು ಸ್ಪಷ್ಟವಿಲ್ಲದಿದ್ದರೂ ಇದರ ಸಂದೇಶ ಏನು ಎಂಬುದು ಸ್ಪಷ್ಟವಾಗಿದೆ.
ರಜನೀಕಾಂತ್ ನಿಧಾನವಾಗಿ ಸಾರ್ವಜನಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಸದಾ ಸುದ್ದಿಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಯಾವತ್ತಿಗೂ ನಡೆದುಕೊಳ್ಳದ ರೀತಿಯಲ್ಲಿ ಭಾನುವಾರ ರೈತರ ನಿಯೋಗವನ್ನು ಭೇಟಿ ಮಾಡಿ ಸಹಾಯದ ಭರವಸೆ ನೀಡಿದ್ದಾರೆ.
ಹಣಕಾಸಿನ ನೆರವು ನೀಡುವ ಬಗ್ಗೆ ಕೂಡ ಹೇಳಿ, ನದಿ ಜೋಡಣೆ ಸಂಬಂಧ ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಒನ್ಇಂಡಿಯಾ ನ್ಯೂಸ್












Click it and Unblock the Notifications