ಕೇಂದ್ರದ ವಿರುದ್ಧ ಅಣ್ಣಾ ಹಜಾರೆ ಕಿಡಿ, ಮಾ.23ರಿಂದ ಸತ್ಯಾಗ್ರಹ
ಬೆಂಗಳೂರು, ಜನವರಿ 31: ಮಾರ್ಚ್ 23 ಕ್ಕೆ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಉಪವಾಸ, ಡಾ.ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ. ಎಲ್ಲ ರೈತರು ಬನ್ನಿ , ದೇಶದ ಜೈಲುಗಳು ಭರ್ತಿಯಾಗುವಂತೆ ಹೋರಾಟ ಮಾಡೋಣ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕರೆ ನೀಡಿದರು.
ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬುಧವಾರ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಅಣ್ಣಾ ಹಜಾರೆ ಮಾತನಾಡಿದರು.
ಕೇಂದ್ರ ಸರ್ಕಾರವು ಉದ್ಯಮಪತಿಗಳ ಬಗ್ಗೆ ಮಾತ್ರ ಚಿಂತೆ ಮಾಡುತ್ತಿದೆ. ರೈತರ ಬಗ್ಗೆ ಅದಕ್ಕೆ ಚಿಂತೆ ಇಲ್ಲ. ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆಯನ್ನೂ ಕೇಂದ್ರ ಸರ್ಕಾರ ಈಡೇರಿಸಿಲ್ಲ. ಈಗ ನಮ್ಮ ಮಾತನ್ನೂ ಕೇಳುತ್ತಿಲ್ಲ ಎಂದು ಹಜಾರೆ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಾರ್ಚ್ 23ರಂದು ದೆಹಲಿ ರಾಮಲೀಲಾ ಮೈದಾನದಲ್ಲಿ ಉಪವಾಸ ಕೂರುವುದು ಖಚಿತ. ನನಗೆ 80 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಬಹಳಷ್ಟು ಜನರು ಹೃದಯಾಘಾತದಿಂದ ಸಾಯುತ್ತಾರೆ. ಉಪವಾಸದಿಂದ ನನ್ನ ಪ್ರಾಣ ಅಂದು ಹೋದರೂ ಚಿಂತೆ ಇಲ್ಲ. ರೈತರಿಗಾಗಿ ನೆಮ್ಮದಿಯಿಂದ ಸಾಯುತ್ತೇನೆ ಎಂದು ಅಣ್ಣಾ ಹೇಳಿದರು.
ಉದ್ಯಮಪತಿಗಳು ಉದ್ಯಮದಲ್ಲಿ ನಷ್ಟವಾಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಜಗತ್ತಿನಲ್ಲಿಯೇ ಇಲ್ಲ. ದೇಶದಲ್ಲಿ 12 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪಟ್ಟಿ ಇದೆ. ರೈತರು ಕೃಷಿಗೆ ಮಾಡಿದ ಖರ್ಚಿಗೆ ತಕ್ಕನಾd ಆದಾಯ ಸಿಗಬೇಕು. ಎಲ್ಲ ರಾಜ್ಯಗಳಲ್ಲಿ ಬೆಂಬಲ ಬೆಲೆ ಆಯೋಗ ಇದೆ. ಕೇಂದ್ರದಲ್ಲೂ ಕೃಷಿ ಆಯೋಗ ಇದೆ. ಆದರೆ ರಾಜ್ಯ ಆಯೋಗಗಳು ಕಳುಹಿಸುವ ವರದಿಯಲ್ಲಿ ಬೆಂಬಲ ಬೆಲೆಗೆ ಕೇಂದ್ರದ ಅಧಿಕಾರಿಗಳು ಶೇ50 ರಷ್ಟು ಕತ್ತರಿ ಹಾಕುತ್ತಾರೆ ಎಂದು ಅವರು ಕಿಡಿಕಾರಿದರು.












Click it and Unblock the Notifications