ಹುಬ್ಬಳ್ಳಿ: ರೈತಪಕ್ಷ ಸ್ಥಾಪನೆ ಕುರಿತು ಸುಳಿವು ನೀಡಿದ ಬಾಬಾಗೌಡ
ಹುಬ್ಬಳ್ಳಿ, ಜುಲೈ 22: ಅಖಿಲ ಕರ್ನಾಟಕ ರೈತ ಸಂಘದ ಅಧ್ಯಕ್ಷ ಹಾಗೂ ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಅವರು ರೈತರನ್ನು ಸಂಘಟಿಸಿ ನೂತನ ರೈತರ ಪಕ್ಷದ ಮೂಲಕ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
ನಗರದಲ್ಲಿ ಜುಲೈ 21ರಂದು ರೈತ ಹುತಾತ್ಮರ ದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರನ್ನು ಸಂಘಟಿಸಲು ರೈತ ಯಾತ್ರೆ ಮೂಲಕ ರಾಜಕೀಯ ಶಕ್ತಿಯನ್ನಾಗಿ ರೂಪಿಸಲು ಯೋಜಿಸಿದ್ದೇವೆ. ರಾಜಕೀಯ ಶಕ್ತಿ ಇಲ್ಲದಿದ್ದರೇ ಏನನ್ನು ಸಾಸಲು ಸಾಧ್ಯವಿಲ್ಲ. ಅಗತ್ಯ ಬಿದ್ದರೆ ರೈತ ಪರವಾದ ರಾಜಕೀಯ ಪಕ್ಷ ಸ್ಥಾಪಿಸುವ ಗಂಭೀರ ಚಿಂತನೆಯೂ ಇದೆ ಎಂದು ಸ್ಪಷ್ಟಪಡಿಸಿದರು.

ರಾಜಕಾರಣಿಗಳ ಮನಸ್ಥಿತಿ, ಭಾಷೆ ಬದಲಾಗಿಲ್ಲ. ಸಮಾವೇಶಗಳ ಮೂಲಕ ಹವಾ ಮಾಡುತ್ತಿದ್ದಾರೆ. ಇವರಿಗೆ ತಕ್ಕ ಉತ್ತರ ನೀಡಲು ಮುಂಬರುವ ಚುನಾವಣೆಗಾಗಿ ಆಯ್ದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ನಾವು ಗೆಲ್ಲದಿದ್ದರೂ ರೈತರನ್ನು ಅವಮಾನಿಸಿದವರನ್ನು ಸೋಲಿಸುವುದು ಶತಃಸಿದ್ಧ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಸಮಿಪಿಸುತ್ತಿದ್ದಂತೆ ಶಾಸಕರು, ಮಂತ್ರಿಗಳು, ರಾಜಕಾರಣಿಗಳಿಗೆ ರೈತರ ನೆನಪಾಗುತ್ತಿದ್ದಾರೆ. ಅಣ್ಣ, ತಮ್ಮ, ಚಿಕ್ಕಮ್ಮ, ಹಿರಿಯರು, ಹೆಸರು ಹಿಡಿದು ಕರೆದು ಕಾಳಜಿ ವ್ಯಕ್ತಪಡಿಸುತ್ತ ಹೆಗಲ ಮೇಲೆ ಕೈ ಹಾಕಿ ಚೆನ್ನಾಗಿ ಮಾಡನಾಡಿಸಿ ಮರಳು ಮಾಡುತ್ತಾರೆ. ಹೀಗೆ ಮಾತಿನಲ್ಲೇ ಮರಳು ಮಾಡಿ ವೋಟು ಕೀಳುವ ತಂತ್ರ ಮಾಡುತ್ತಾರೆ. ಇದಕ್ಕೆಲ್ಲ ಸೊಪ್ಪು ಹಾಕದೇ ರೈತ ಎನ್ನುವುದನ್ನು ಸ್ವಾಭಿಮಾನ ಪ್ರದರ್ಶಿಸಿ ಪಾಠ ಕಲಿಸಬೇಕು. ರೈತರ ಬಗ್ಗೆ ನಿಜವಾದ ಕಳಕಳಿ ಇರುವವರನ್ನು ಬೆಂಬಲಿಸಿ, ಆದರೆ, ನಾಟಕ ಮಾಡುವವರನ್ನು ದೂರ ಇಡಬೇಕೆಂದು ಕಿವಿಮಾತು ಹೇಳಿದರು.












Click it and Unblock the Notifications