'ಪ್ರತಿಭಟನೆ ವೇಳೆ 750 ರೈತರು ಮೃತ, ಆದರೆ ಕೇಂದ್ರ ಸಂತಾಪವೇ ಸೂಚಿಸಿಲ್ಲ'
ನವದೆಹಲಿ, ನವೆಂಬರ್ 08: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. "ರೈತ ಚಳವಳಿಯಲ್ಲಿ ಹಲವಾರು ಮಂದಿ ರೈತರು ಸಾವನ್ನಪ್ಪಿದ್ದಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಸಂತಾಪವನ್ನು ವ್ಯಕ್ತಪಡಿಸಿಲ್ಲ," ಎಂದು ರಾಕೇಶ್ ಟಿಕಾಯತ್ ಟೀಕೆ ಮಾಡಿದ್ದಾರೆ.
ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ರಾಕೇಶ್ ಟಿಕಾಯತ್, "ರೈತ ಚಳವಳಿಯಲ್ಲಿ ಒಟ್ಟು 750 ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದಾರೆ. ಆದರೆ ಭಾರತ ಸರ್ಕಾರ ಯಾವುದೇ ಸಂತಾಪವನ್ನು ವ್ಯಕ್ತಪಡಿಸಿಲ್ಲ. ಈ ಕಾರಣದಿಂದಾಗಿ ದೇಶದ ರೈತರು ಪ್ರಧಾನಿಯ ಮೇಲಿನ ನಂಬಿಕೆಯನ್ನು ಹೊಂದಿಲ್ಲ," ಎಂದಿದ್ದಾರೆ.
'ಮೃತ ರೈತರಿಗೆ ಮೋದಿ ಸಂಸತ್ತಿನಲ್ಲಿ ಒಮ್ಮೆಯಾದರೂ ಸಂತಾಪ ಸೂಚಿಸಲಿ': ಟಿಕಾಯತ್
"ಪ್ರಧಾನಿ ರೈತರಿಗಾಗಿ ಇರುವವರು ಅಲ್ಲ ಎಂಬ ಭಾವನೆ ರೈತರಲ್ಲಿ ಮೂಡಿದೆ. ರೈತರನ್ನು ಪ್ರಧಾನಿ ಈ ದೇಶದಿಂದಲ್ಲೇ ಪ್ರತ್ಯೇಕ ಎಂದು ಭಾವಿಸುತ್ತಾರೆ ಎಂಬ ಭಾವನೆಯು ರೈತರಲ್ಲಿ ಮೂಡಿದೆ," ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ಮಾತನಾಡಿದ್ದ ರಾಕೇಶ್ ಟಿಕಾಯತ್, "ರೈತರು ಎಂದಿಗೂ ಈ ಪ್ರತಿಭಟನೆಯನ್ನು ಕೊನೆಗೊಳಿಸುವುದಿಲ್ಲ," ಎಂದು ಹೇಳಿದ್ದರು. "ಈ ದೇಶದ ರೈತರು ಪ್ರತಿಭಟನೆ ಮಾಡುವುದನ್ನು ನಿಲ್ಲಿಸಿ ಎಲ್ಲಿಗೂ ಹೋಗಲಾರೆವು. ಸರ್ಕಾರ ಐದು ವರ್ಷಗಳ ಕಾಲ ನಡೆಯುತ್ತದೆ ಎಂದು ಆದರೆ, ನಮ್ಮ ಪ್ರತಿಭಟನೆ ಯಾಕೆ ನಡೆಯಲಾರದು. ನಮ್ಮ ಬೇಡಿಕೆ ಈಡೇರಿಕೆ ಆಗುವವರೆಗೂ ನಾವು ಪ್ರತಿಭಟನೆ ನಡೆಸುತ್ತೇವೆ," ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷ ನವೆಂಬರ್ 26 ರಿಂದ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ವರ್ಷ ನವೆಂಬರ್ 26 ಕ್ಕೆ ರೈತರು ಪ್ರತಿಭಟನೆ ಆರಂಭಿಸಿ ಒಂದು ವರ್ಷ ಆಗಲಿದೆ. ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಆದರೆ ಎಲ್ಲಾ ಮಾತುಕತೆಗಳು ವಿಫಲವಾಗಿದೆ.
ದೆಹಲಿಯಲ್ಲಿ ಪ್ರತಿಭಟನಾನಿರತ ರೈತರ ಸಾವು; ಅಧ್ಯಯನ ವರದಿ
ದೆಹಲಿ-ಹರಿಯಾಣ-ಉತ್ತರ ಪ್ರದೇಶ ಮತ್ತು ಪಂಜಾಬಿನ ಮೂರು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಒಂದು ವರ್ಷ ಸಮೀಪಿಸುತ್ತಿರುವ ಹಿನ್ನೆಲೆ ರೈತ ಸಂಘಟನೆಗಳಿಂದ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಕೃಷಿ ಕಾಯ್ದೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಗಡುವು ವಿಧಿಸಲಾಗಿದೆ.
"ಕೇಂದ್ರ ಸರ್ಕಾರಕ್ಕೆ ನವೆಂಬರ್ 26ರವರೆಗೂ ಕಾಲಾವಕಾಶವಿದೆ. ಅದಾದ ಮರುದಿನವೇ ಅಂದರೆ ನವೆಂಬರ್ 27ರಂದು ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಿದ್ದಾರೆ. ದೇಶದ ಮೂಲೆ ಮೂಲಗಳಿಂದ ಟ್ರ್ಯಾಕ್ಟರ್ ಗಳಲ್ಲಿ ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಮೂರು ಗಡಿಗಳಿಗೆ ಆಗಮಿಸಲಿದ್ದಾರೆ. ಆ ಮೂಲಕ ರೈತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು," ಎಂದು ಕಿಸಾನ್ ಯೂನಿಯಸ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಸಂಸತ್ತಿನಲ್ಲಿ ರೈತರಿಗೆ ಸಂತಾಪ ಸೂಚಿಸಲು ಟಿಕಾಯತ್ ಮನವಿ
"ಮೃತ ರೈತರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಒಮ್ಮೆಯಾದರೂ ಸಂತಾಪ ಸೂಚಿಸಲಿ," ಎಂದು ಆಗ್ರಹ ಮಾಡಿದ್ದಾರೆ. "ಈ ಕನಿಷ್ಠ ಬೆಂಬಲ ಬೆಲೆ ನೀಡುವ ಭರವಸೆಯು ಕೇವಲ ಕಾಗದದಲ್ಲಿ ಉಳಿದಿದೆ. ಆದರೆ ರೈತರು ಇದನ್ನು ವಾಸ್ತವವಾಗಿ ಬಯಸುತ್ತಾರೆ," ಎಂದಿದ್ದರು. "ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ಕಳೆದ ಹನ್ನೊಂದು ತಿಂಗಳುಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯನ್ನು ಸಾವನ್ನಪ್ಪಿದ 750 ಮಂದಿಯ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಒಂದು ಬಾರಿ ಆದರೂ ಮಾತನಾಡಬೇಕು," ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಆಗ್ರಹ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)