ಹಳ್ಳಿಕಡೆ ಒಂದು ಬಾರಿ ಪಿಕ್ನಿಕ್ಕಿಗೆ ಹೋಗಿಬನ್ನಿ
ದಕ್ಷಿಣಾಯಣ ಮುಗಿದು ಉತ್ತರಾಯಣ ಪುಣ್ಯಕಾಲ ಪ್ರಾರಂಭದ ದಿನ ಮಾಗಿಯ ಚಳಿ ಮುಗಿದು ಸೂರ್ಯ ತನ್ನ ಅಧಿಪತ್ಯವನ್ನು ಸ್ಥಾಪಿಸುವ ದಿನ. ಹಿಂದೂ ಧಾರ್ಮಿಕರಲ್ಲಿ ಭಾರೀ ಸಡಗರದ ಸಂಭ್ರಮದ ದಿನ. ಮನೆಮನೆಗಳಲ್ಲಿ ದೇವರ ಪೂಜೆ ಇತ್ಯಾದಿ ಮುಗಿಸಿ ಭರ್ಜರಿಯಾಗಿ ಹುಗ್ಗಿಯ ಊಟ ಹೊಡೆದು ಪುಟಾಣಿ ಹೆಣ್ಣುಮಕ್ಕಳಿಗೆ ಜರಿ ಲಂಗ ತೊಡಿಸಿ ಸಡಗರದಿಂದ ಎಳ್ಳು ಬೆಲ್ಲ ಬೀರಲು ಕಳಿಸುವ ತವಕ. ಅಂಗಡಿಯಿಂದ ತಂದ ಕಬ್ಬಿನ ಜಲ್ಲೆ, ಬೆಂಡು ಬತ್ತಾಸು, ಚುರುಮುರಿ, ಕುಸುರೆಳ್ಳು, ಸಕ್ಕರೆ ಅಚ್ಚು ಬಂಧುಬಾಂಧವರಿಗೆ ನೀಡುತ್ತ 'ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ' ಎಂದು ಹೇಳುವುದು ಹೇಳಿಸಿಕೊಳ್ಳುವುದು ಅಚ್ಚುಮೆಚ್ಚು.
ನಗರಗಳಲ್ಲಿನ ಆಚರಣೆ ಇಷ್ಟಕ್ಕೆ ಮುಗಿದೇ ಹೋಗಿಬಿಡುತ್ತದೆ. ಇನ್ಮೇಲಿಂದ ಬಿಸಿಲು ಶುರುವಪ್ಪಾ ಅಂತ ಗೊಣಗಾಡುತ್ತ ಫ್ಯಾನು ತಿರುವಿಕೊಳ್ಳುವರೇ ಎಲ್ಲ. ಅವರೆ ಹುಗ್ಗಿ ಸಖತ್ತಾಗಿತ್ತಪ್ಪ ಬ್ಯಾಡ ಅಂದ್ರೂ ಹೆಂಡತಿ ಎರಡು ತುತ್ತು ಜಾಸ್ತಿನೇ ಹಾಕಿದಳು ಅನ್ನುತ್ತಾ ನಿಬ್ಬರಾದ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡು ಬನೀನಿಲ್ಲದ ಮೈಯನ್ನು ತಂಪು ನೆಲಹಾಸಿನ ಮೇಲೆ ಚೆಲ್ಲುವವರೇ ಜಾಸ್ತಿ. ಸಂಕ್ರಾಂತಿ ದಿನ ಎಂತೆಂಥಾ ಸಿನೆಮಾ ಹಾಕಿದ್ದಾರೆ ಗೊತ್ತಾ... ರಜೆ ಹಾಕಿದ್ದೂ ಚೆನ್ನಾಗಾಯ್ತು... ಹೆಂಗಳೆಯರಿಗೆ ಅದೇ ಧ್ಯಾನ. ತಾವೂ ಊಟ ಮುಗಿಸಿ ಎಲೆ ಬಿಸಾಕಿ, ಅಡುಗೆ ಮನೆ ಈಗ್ಯಾವಳು ಕ್ಲೀನ್ ಮಾಡ್ತಾಳೆ ಅಂತ ಉಸ್ಸಂತ ಪಿಚ್ಚರು ನೋಡಲು ಕುಳಿತುಕೊಳ್ಳುವವರೇ.
ಇರಲಿ, ರಜೆಗಳಿರುವುದೇ ಸಖತ್ತಾಗಿ ದೇವರ ಪೂಜೆ ಮಾಡಿ, ಊಟ ಜಡಿದು, ನೆಂಟರಿಷ್ಟರೊಡನೆ ನಲಿದು ಕಾಲಕಳೆಯೋದಕ್ಕೇ. ರೇಷ್ಮೆ ಸೀರೆ ಹಬ್ಬಕ್ಕೆ ತೊಗೊಂಡ್ಯಾ? ಚೆನ್ನಾಗಿದೆ ಕಣೆ... ಇಲ್ಲ ಕಣೆ ಕಳೆದ ಬಾರಿ ತೊಗೊಂಡಿದ್ದು... ಈ ಸತಿ ತೊಗೊಳ್ಳೋದು ಯಜಮಾನ್ರು ಬ್ಯಾಡಂದ್ರು ಅಂತ ಉಭಯ ಕುಶಲೋಪರಿ ಮಾತನಾಡುತ್ತಾ ಕಾಲ ಕಳೆಯೋರೆ ಎಲ್ಲಾ.

ಇದೆಲ್ಲಾ ಸರಿ. ಆದರೆ, ಇಳೆ ತುಂಬ ನಳನಳಿಸುವ ಬತ್ತದ ಹೊದಿಕೆಯನ್ನು ತುಂಬಿಸುವ, ಗಿಡಮರಗಳಿಗೆಲ್ಲಾ ಕೆಂಜಿಗುರು ಬಣ್ಣದ ಓಕುಳಿ ತುಂಬಿಸುವ ಭೂತಾಯಿಯನ್ನು, ಬೀಸುವ ಗಾಳಿಗೆ ತೂಗಾಡುತ್ತಾ ನಲಿದಾಡುವ ತೆನೆಗಳಿಗೆ ಹೊಂಬಣ್ಣದ ರಂಗನ್ನು ತುಂಬುವ ನೇಸರನನ್ನು, ಚಳಿ ಗಾಳಿಯನ್ನು ಲೆಕ್ಕಿಸದೆ ನೇಗಿಲನ್ನು ಎಳೆದೆಳೆದು ಜಗತ್ತಿಗೆ ತುತ್ತನ್ನು ನೀಡುವ ನೇಗಿಯ ಯೋಗಿಯನ್ನು, ನೇಗಿಲ ಯೋಗಿಗೆ ಹೆಗಲನ್ನು ನೀಡುವ ಎತ್ತುಗಳನ್ನು ಪೂಜಿಸುವವರು ಯಾರು? ಏನನ್ನೂ ಬೇಡದ ಅವುಗಳಿಗೆ ಅರಿಷಿಣ ಕುಂಕುಮ ಏರಿಸಿ, ನಾವೆಂದಿಗೂ ನಿಮ್ಮ ಜೊತೆಗಿದ್ದೇವೆ ಅಂತ ಭಕ್ತಿಯಿಂದ ಕೈಮುಗಿಯುವವರು ಯಾರು?
ಹಳ್ಳಿಗಳು ಇಂದು ಹಳ್ಳಿಗಳಾಗಿ ಉಳಿದಿಲ್ಲ. 'ಉಳುವ ಯೋಗಿಯ ನೋಡಲ್ಲಿ ಉಳುವ ಯೋಗಿಯ ನೋಡಲ್ಲಿ' ಅಂದವರು, ಇಂದು ನಗರಗಳಲ್ಲಿ ಮನೆ ತಾರಸಿಗೆ ಸಿಮೆಂಟು ಕಲಸಿ ಹಾಕುವ, ಮನೆ ಚಾಕರಿಗಳಲ್ಲಿ ನಿರತರಾಗಿರುವ, ರಸ್ತೆ ಡಿವೈಡರುಗಳಿಗೆ ಹಳದಿ ಕಪ್ಪು ಬಣ್ಣ ಬಳಿಯುವ, ಸೆಕ್ಯುರಿಟಿ ಗಾರ್ಡ್ ಆಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ ದುಡಿಯುವ, ಯಾವುದೋ ಕಂಪನಿಗೆ ಪ್ಯೂನ್ ಆಗಿರುವ ಯೋಗಿಯನ್ನು ತೋರಿಸುವ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲಂತೂ ಇದು ಅಕ್ಷರಶಃ ಸತ್ಯ. ಉತ್ತರ ಕರ್ನಾಟಕದ ಅನೇಕ ರೈತ ಕುಟುಂಬಗಳು ಗುಳೆಎದ್ದು ಬೆಂಗಳೂರಿಗೆ ಬಂದಿವೆ. 'ದುಡಿಮೆಯೆ ಬಡತನ ಅಳಿಸಲು ಸಾಧನ' ಅಂತ ಹಾಡಿದ ರೈತ ಹಳ್ಳಿಯಲ್ಲಿ ಅನುಭವಿಸಿದ ಬಡತನ ಅಳಿಸಿಹಾಕಲು ನಗರಕ್ಕೆ ಬಂದು ಕುಳಿತಿದ್ದಾನೆ. ಹೆಂಡತಿ ಮನೆಗೆಲಸ ಮಾಡಿ ಸಾವಿರದೈನೂರು ಎರಡುಸಾವಿರ ಗಳಿಸುತ್ತಾಳೆ. ಗಂಡ ಅದೂ ಇದೂ ಚಾಕರಿ ಮಾಡಿ ಏನಿಲ್ಲವೆಂದರೂ ಐದಾರು ಸಾವಿರ ಗಳಿಸುತ್ತಾನೆ. ಹಳ್ಳಿಯಲ್ಲಿದ್ದರೆ ಇದು ಸಾಧ್ಯವಿತ್ತಾ? ಮಕ್ಕಳನ್ನು ಶಾಲೆಗೆ ಕಳಿಸುವುದು ಶಕ್ಯವಿತ್ತಾ? ಗದ್ದೆಗಳಲ್ಲಿ ದುಡಿಯದಿದ್ದರೇನಾಯಿತು ನಗರ ಕೈತುಂಬ ಕಾಸು ನೀಡಿದೆ ಎಂದು ತರ್ಕಬದ್ಧವಾಗಿ ಮಾತಾಡಲು ಶುರು ಮಾಡಿದ್ದಾನೆ ರೈತ.
ರೈತನ ಜೀವನ ಹೇಗೋ ಏನೋ ಒತ್ತಟ್ಟಿಗಿರಲಿ, ಇಂದಿನ ಪೀಳಿಗೆಯ ನಗರದ ಮಕ್ಕಳಿಗೆ, ನಗರದಲ್ಲೇ ಬೆಳೆದು ದೊಡ್ಡವರಾದ ದೊಡ್ಡವರಿಗೆ ನಾಡಿನ ಜೀವನಾಡಿಯಾಗಿರುವ ಉಳುಮೆ, ಬಿತ್ತನೆ, ರೈತನ ದುಡಿಮೆ, ಹೊಲ-ಗದ್ದೆ ಇವುಗಳ ಬಗ್ಗೆ ಕಲ್ಪನೆಯಾದರೂ ಎಷ್ಟಿದೆ? ಬಸ್ಸಿನಲ್ಲೋ ರೈಲಿನಲ್ಲೋ ಹೋಗುವಾಗ ಮತ್ತು ಟಿವಿಗಳಲ್ಲಿ ನೋಡಿದ್ದೆಷ್ಟೋ ಅಷ್ಟು. ಹಳ್ಳಿಯಲ್ಲಿದ್ದ ಅಜ್ಜ ಅಜ್ಜಿಯರೇ ಪಟ್ಟಣ ಬಂದು ಸೇರಿಯಾದ ಮೇಲೆ ಮೊಮ್ಮಕ್ಕಳು ಹಳ್ಳಿಗೆ ಹೋಗಿಯಾದರೂ ಏನು ಮಾಡುತ್ತವೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಬಲು ಕಷ್ಟ.
ನಗರದ ಮಕ್ಕಳಿಗೆ ಶಾಲಾ ಅಧ್ಯಯನ ಪ್ರವಾಸ ಕೈಗೊಳ್ಳುವ ಶಿಕ್ಷಕರು ಯಾವುದೋ ಊರು, ಯಾವುದೋ ಫ್ಯಾಕ್ಟರಿ, ಯಾವುದೋ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗುವ ಬದಲು ಹಳ್ಳಿಗಳಿಗೆ ಏಕೆ ಕರೆದುಕೊಂಡು ಹೋಗಬಾರದು? ಅಲ್ಲಿನ ಹೊಲಗಳು, ರೈತರು, ಅವರ ಜೀವನ, ಗದ್ದೆಯ ಮೊಣಕಾಲುದ್ದ ಕೆಸರಿನಲ್ಲಿ ನಾಟಿ ಮಾಡುವುದನ್ನು, ಬೆಳೆದ ಬೆಳೆ ಸಂಸ್ಕರಿಸುವುದನ್ನು, ಹಳ್ಳಿಯ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯ ಏಕೆ ಮಾಡಿಕೊಡಬಾರದು? ಇಂಥದೊಂದು ಪ್ರಯೋಗವನ್ನು ಸರ್ಕಾರವೇ ಮಾಡಬೇಕು. ನಗರದ ಟೆಕ್ಕಿಗಳಾದರೂ ಅಷ್ಟೇ, ವೀಕೆಂಡು ಬಂದರೆ ಟ್ರೆಕ್ಕಿಂಗು, ಸರ್ಫೀಂಗು, ಸೈಟ್ ಸೀಯಿಂಗು ಅಂತ ಹೆಂಡತಿ ಮಕ್ಕಳೊಡನೆ ತಿರುಗಾಡುವ ಬದಲು ಹಳ್ಳಿ ಜೀವನದ ಪರಿಚಯ ಮಾಡಿಕೊಳ್ಳಬಾರದೇಕೆ? ಮಡಿಕೇರಿಗಳಲ್ಲಿನ ಹೋಂಸ್ಟೇ ತರಹ ಹಳ್ಳಿಜೀವನದ ಪರಿಕಲ್ಪನೆಗೆ ಮುನ್ನುಡಿ ಹಾಡಬಾರದೇಕೆ?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications