ಮತ್ತೂರಲ್ಲಿ ಸೋಮಯಾಗ : ದುರುದ್ದೇಶಪೂರಿತ ಅಪಪ್ರಚಾರ
ಇತ್ತೀಚಿಗೆ ಮತ್ತೂರಿನಲ್ಲಿ ನಡೆದ ಸೋಮಯಾಗದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಪ್ರಾಣಿಬಲಿಯ ವಿಷಯ ರಾತ್ರೋ ರಾತ್ರಿ 'ರಾಜ್ಯದ ಸಮಸ್ಯೆ' ಎಂಬಂತೆ ವೈಭವದ ಪ್ರಚಾರ ಪಡೆಯುತ್ತಿರುವುದು ದುರಾದೃಷ್ಟಕರ ಮತ್ತು ವಿಷಾದನೀಯ.
ಮೀರ್ ಸಾಧಕ್ ನಂತಹವರ ಕೆಲಸವೂ ಇದರಲ್ಲಿ ಅಡಗಿರುವುದರಲ್ಲಿ ಅನುಮಾನವಿದೆ. ಇನ್ನೊಂದು ವಿಷಯ, ಇಲ್ಲಿರುವುದು ಬ್ರಾಹ್ಮಣರೆಂದರೆ ಯಾವುದೇ ವಿವಾದಕ್ಕೀಡುವಂತಹ ಕೆಲಸಗಳನ್ನು ಮಾಡದವರು, ಒಳ್ಳೆಯ ಕೆಲಸಗಳನ್ನೇ ಮಾಡುತ್ತಾರೆ ಎಂದು ಸಮಾಜದ ಒಂದು ದೊಡ್ಡ ಗುಂಪು ಅಪೇಕ್ಷಿಸುತ್ತಿರುವುದು ಒಳ್ಳೆಯ ವಿಚಾರ.
ಪ್ರತಿಯೊಂದು ವಿಷಯಕ್ಕೂ ಅದರದ್ದೇ ಆದ ದೃಷ್ಟಿಕೋನವಿರುತ್ತದೆ. ರಾಜ್ಯದ ಹಲವಾರು ಕಡೆ ಪ್ರತಿ 3 ವರ್ಷಕ್ಕೊಮ್ಮೆ ನಡೆಯುವ ಮಾರಿ ಹಬ್ಬವಾಗಲೀ ಅಥವಾ ಕೋಳಿಗಳ ಬಲಿಗಳಾಗಲೀ, ಅವುಗಳ ಹಿಂದೆ ಯಾವುದೊ ಒಂದು ನಂಬಿಕೆ ಮನೆ ಮಾಡಿರುತ್ತದೆ. ನಮ್ಮ ನಂಬಿಕೆಗಳ ವಿರುದ್ಧ ನಮ್ಮ ಚಿಂತನೆಗಳು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಕೆಲವು ಸಂದರ್ಭಗಳಲ್ಲಿ ಒಲ್ಲದ ಮನಸ್ಸಿನಿಂದಲೇ ಕೆಲವು ಪದ್ದತಿಗಳನ್ನು ಅನುಸರಿಸಬೇಕಿರುತ್ತದೆ. [ಶಿವಮೊಗ್ಗದ ಸುಸಂಸ್ಕೃತ ಗ್ರಾಮ ಮತ್ತೂರಲ್ಲಿ ಇದೆಂಥ ಅನಿಷ್ಟ!]
ಇಲ್ಲಿರುವ ಇನ್ನೊಂದು ವಿಚಾರ ಏನೆಂದರೆ, ಒಂದು ನಿರ್ದಿಷ್ಟ ನಂಬಿಕೆಯುಳ್ಳ ಜನರು ಅವರ ನಂಬಿಕೆ ಆಧಾರದ ಮೇಲೆ ಮಾಡಿದ ಯಾಗವನ್ನು, ಇಡೀ ಮತ್ತೂರಿನ ಕಾರ್ಯಕ್ರಮವೆಂದು ತೋರಿಸಿ, ಸಿಕ್ಕಿದ ಅವಕಾಶವೆಂದು ಸಂಸ್ಕೃತ, ವೇದ ಇನ್ನೂ ಮುಂತಾದ ವಿಷಯಗಳಿಗೆ ಹೆಸರುವಾಸಿಯಾದ ಮತ್ತೂರಿಗೆ, ಇಡೀ ಸಂಕೇತಿ ಜನಾಂಗದ ಹೆಸರಿಗೆ ಮಸಿ ಬಳಿಯುವ ದುರ್ಬುದ್ಧಿ ಯಾಕೆ?
ಇದಕ್ಕೂ ಮಿಗಿಲಾದ ವಿಷಯವೆಂದರೆ, ಯಾಗದ ಸಮಯದಲ್ಲಿ ತುಪ್ಪವನ್ನು ಅಗ್ನಿಗೆ ಅರ್ಪಿಸಲು ಬಳಸುವ ಸೃಕ್ - ಸೃವದ ಚಿತ್ರಗಳನ್ನು ಮಾಂಸ ಎಂದು ಅಪಪ್ರಚಾರ ಮಾಡುವುದು ಏನನ್ನು ಬಿಂಬಿಸುತ್ತದೆ? ಒಳ್ಳೊಳ್ಳೆಯ ಹಣ್ಣುಗಳಿರುವ ಮರಗಳಿಗೇ ಜನ ಕಲ್ಲು ಹೊಡೆಯುವುದು ನಿಜವಾದರೂ ಮರವನ್ನೇ ಬೋಳಿಸುವ ದುರುದ್ದೇಶದ ಕೆಲಸ ಖಂಡಿತ ಸರಿಯಲ್ಲ. [ಬೈಗುಳಕ್ಕೆ ಬ್ರಾಹ್ಮಣ ಮಾತ್ರ ಗುರಿ, ಇದ್ಯಾವ ನ್ಯಾಯರಿ?]
ಅಕಸ್ಮಾತ್, ಯಾಗದಲ್ಲಿ ಮಾಂಸದ ಬಳಕೆಯಾಗಿದ್ದೇ ಆದಲ್ಲಿ, ಹವಿಸ್ಸಿನ ರೂಪದಲ್ಲಿ ಸಣ್ಣ ತುಣುಕನ್ನು ಅರ್ಪಿಸಿರಬಹುದು. ಆದರೆ ಈ ಸುದ್ದಿಗೆ ನೀಡಿರುವ ಮಹತ್ವ, ಲಕ್ಷಾಂತರ ಗೋಹತ್ಯೆಗಳ ವಿಷಯದಲ್ಲಿ ನೀಡದಿರುವುದು ಹಾಸ್ಯಾಸ್ಪದ. ಹಾಗೇನಾದರೂ ಪ್ರಾಣಿ ಹತ್ಯೆಯೇ ಪ್ರಮುಖವಾಗಿದ್ದಲ್ಲಿ ಪ್ರತಿವರ್ಷವೂ ಸೋಮಯಾಗವೇ ನಡೆಯಬಹುದಾದ ಹೊಮವಾಗಬೇಕಿತ್ತು. ಆದರೆ ಕಳೆದ 15-20 ವರ್ಷಗಳಲ್ಲಿ ನನಗೆ ತಿಳಿದ ಮಟ್ಟಿಗೆ ನಡೆದಿರುವುದು ಇದು ಎರಡನೇ ಸಲವಷ್ಟೇ.
ಯಾವುದೇ ವಿಷಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ನೀಡುವುದು, ಜನರ ವೈಯಕ್ತಿಕ ನಂಬಿಕೆಗಳನ್ನು ಒಂದು ಜನಾಂಗದ ಅಥವಾ ಇಡೀ ಊರಿನ ವಿಷಯಗಳ ರೀತಿಯಲ್ಲಿ ಬಿಂಬಿಸುವುದು ಅಕ್ಷಮ್ಯ. ಈ ವಿಷಯದಲ್ಲಿ ಮುಕ್ತ ಚರ್ಚೆಗೆ ಖಂಡಿತ ಅವಕಾಶವಿದೆ.