ವೋಟಿಗಾಗಿ ನೋಟು : 'ತಪ್ಪೇನಿದೆ, ಎಲ್ಲ ಕಡೆ ಇದು ಕಾಮನ್'!
ಬೆಂಗಳೂರು, ಜೂನ್ 03 : ಜೂನ್ 11ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ಟೈಮ್ಸ್ ನೌ ಕೂಡ ನಡೆಸಿದ ಸ್ಟಿಂಗ್ ಆಪರೇಶನ್ ನಲ್ಲಿ, ಶಾಸಕರ ಮತ ಕೊಳ್ಳಲು ಕೋಟಿ ಕೋಟಿ ಆಮಿಷ ಒಡ್ಡಿರುವುದು ಬಹಿರಂಗವಾಗಿದ್ದು, ರಾಜ್ಯದ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜಾಗಿದೆ. ಇಂಡಿಯಾ ಟುಡೆ ಪತ್ರಿಕೆಯೂ ಕುಟುಕು ಕಾರ್ಯಾಚರಣೆ ನಡೆಸಿ ಶಾಸಕರ 'ಬಂಡವಾಳ' ಬಹಿರಂಗ ಮಾಡಿದೆ.
ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಬಸವಕಲ್ಯಾಣ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಹಲವಾರು ಶಾಸಕರು ಕ್ಷೇತ್ರದ 'ಅಭಿವೃದ್ಧಿ' ನೆಪದಲ್ಲಿ ಹಣ ಕೇಳಿದ್ದಾರೆ ಎಂಬುದು ಈ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.
ಹಿಂದೆ ಕೂಡ ರಾಷ್ಟ್ರಮಟ್ಟದಲ್ಲಿ ವೋಟಿಗಾಗಿ ನೋಟು ಪ್ರಕರಣಗಳು ನಡೆದಿವೆ. ವಿಜಯ್ ಮಲ್ಯ ರಾಜ್ಯಸಭೆಗೆ ಆಯ್ಕೆಯಾದಾಗಲೂ ಶಾಸಕರನ್ನು ಹಣಕೊಟ್ಟು ಕೊಂಡಿರುವ ಬಗ್ಗೆ ವಿಚಾರ ಪ್ರಸ್ತಾಪವಾಗಿತ್ತು. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಕರ್ನಾಟಕದ ಮಾನವನ್ನು ಶಾಸಕರು ಹರಾಜು ಹಾಕಿರಲಿಲ್ಲ. [ಸ್ಟಿಂಗ್ ಆಪರೇಷನ್: 3 ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!]
ಪ್ರತಿ ವೋಟಿಗೆ 5ರಿಂದ 10 ಕೋಟಿ ರು.ವರೆಗೆ ಶಾಸಕರು ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಇದೇ ಕುಟುಕು ಕಾರ್ಯಾಚರಣೆಯಲ್ಲಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕರು ಕೂಡ ತನ್ನ ಮತಕ್ಕಾಗಿ ಹಣದ ಆಮಿಷ ಒಡ್ಡಿದ್ದು ನಿಜ ಎಂದು ದಕ್ಷಿಣ ಬೀದರ್ ಶಾಸಕ ಅಶೋಕ್ ಖೇಣಿ ಎಂದು ಒಪ್ಪಿಕೊಂಡಿದ್ದಾರೆ. ಇವರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. [ಸಚಿವ ಆಂಜನೇಯ ಪತ್ನಿಯಿಂದಲೇ ಅಕ್ಕಿ ಕಮಿಷನ್ ಡೀಲ್?]
ನೋಟಿಗಾಗಿ ವೋಟನ್ನು ಶಾಸಕರು ಮಾರಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೂನ್ 11ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯನ್ನು ರದ್ದುಪಡಿಸಬೇಕೆಂಬ ಕೂಗು ಎದ್ದಿದೆ. ಇದು ಪ್ರಜಾಪ್ರಭುತ್ವಕ್ಕೆ ಇಟ್ಟ ಕಪ್ಪುಚುಕ್ಕೆ. ಜನರ ಹಣವನ್ನು ಭ್ರಷ್ಟಾಚಾರಕ್ಕೆ ಬಳಸಿ ಮತ ಹಾಕಿದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.
ಪ್ರತಿ ವೋಟು ಮಾತ್ರವಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ 100 ಕೋಟಿ ರು. ಅನುದಾನ ನೀಡುವುದಾಗಿ ಆಮಿಷ ಒಡ್ಡುತ್ತಿರುವುದು ಈ ಕುಟುಕು ಕಾರ್ಯಾಚರಣೆಯಿಂದ ಬಯಲಾಗಿದೆ. ಇದು ಇಂದು ಮಾತ್ರವಲ್ಲ, ಎಂದೆಂದಿಗೂ ನಡೆಯುತ್ತಿರುವ ವಿದ್ಯಮಾನ. ಕ್ಷೇತ್ರದ ಅಭಿವೃದ್ಧಿಗೆ ಹಣ ಪಡೆದರೆ ತಪ್ಪೇನು ಎಂದು ಕೂಡ ಕೆಲವರು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳಾಗಿ ಜೈರಾಮ್ ರಮೇಶ್, ಆಸ್ಕರ್ ಫರ್ನಾಂಡೀಸ್ ಮತ್ತು ಕೆ.ಸಿ.ರಾಮಮೂರ್ತಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ನಿಂದ ಬಿ.ಎಂ.ಫಾರೂಕ್ ಅವರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಅವರು ಕಣದಲ್ಲಿದ್ದಾರೆ. ಕರ್ನಾಟಕದಿಂದ ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. [ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಗಾಳ : ಗುಪ್ತಚರ ವರದಿ]