ಸ್ಟಿಂಗ್ ಆಪರೇಶನ್: ಜಿಟಿ ದೇವೇಗೌಡ ಹೇಳುವುದೇನು?
ಬೆಂಗಳೂರು, ಜೂನ್ 03: ರಾಜ್ಯಸಭೆ ವೋಟಿಗಾಗಿ ನೋಟು ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಆರೋಪ ಎದುರಿಸುತ್ತಿರುವ ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಒನ್ ಇಂಡಿಯಾದೊಂದಿಗೆ ಮಾತನಾಡಿದ್ದಾರೆ.
ನಾನು ಹಣದ ಬಗ್ಗೆ ಯಾವ ಬಗೆಯ ಆಮಿಷ ಇಟ್ಟಿಲ್ಲ. ರಾಷ್ಟ್ರೀಯ ವಾಹಿನಿಯೊಂದರ ವರದಿಗಾರರು ತಾವು ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಗಳು ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಬಗ್ಗೆ ಮಾತನಾಡಿದ್ದರು ಎಂದು ಹೇಳಿದ್ದಾರೆ.[ಸ್ಟಿಂಗ್ ಆಪರೇಷನ್: ಮೂರು ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!]
ವರದಿಗಾರರು ನನ್ನನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು. ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆ ನಡೆಯಬೇಕಿದೆ ಎಂದು ತಿಳಿಸಿದ್ದೆ. ಇದಾದ ಮೇಲೆ ನಾನು ನನ್ನ ಕೆಲಸದ ನಿಮಿತ್ತ ತೆರಳಿದೆ. ಪುನಃ ಅದೇ ವ್ಯಕ್ತಿಗಳು ಕರೆ ಮಾಡಿ ಅಭ್ಯರ್ಥಿ ಬಗ್ಗೆ ವಿಚಾರ ಮಾಡಲು ಆರಂಭಿಸಿದರು. ನಾನು ಹಿಂದೆ ಹೇಳಿದ ಮಾತನ್ನೇ ಹೇಳಿದೆ.[ವೋಟಿಗಾಗಿ ನೋಟು: ಯಾರು, ಏನು ಹೇಳಿದರು?]
ಬೆಂಗಳೂರಿನ ಹೋಟೇಲ್ ಅಶೋಕದಲ್ಲಿ ಮಾಜಿ ಪ್ರಧಾನಿ, ವರಿಷ್ಠ ದೇವೇಗೌಡ ಅವರೊಂದಿಗೆ ಸಭೆಗೆಂದು ತೆರಳಿದ್ದೆ. ಆಗ ಮತ್ತೆ ಕರೆ ಮಾಡಿದ್ದರು. ಇದನ್ನೆ ಸ್ಟಿಂಗ್ ಆಪರೇಶನ್ ಎಂದು ತೋರಿಸಲಾಗುತ್ತಿದೆ ಎಂದು ಜಿಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಇದಾದ ಮೇಲೆ ವ್ಯಕ್ತಿಗಳು ನನ್ನ ಅಳಿಯ ರಾಮ್ ಅವರನ್ನು ಗುರಿಯಾಗಿರಿಸಿಕೊಳ್ಳುತ್ತಾರೆ. ಅಲ್ಲಿ ಅವರು ನಾವು ಕಾಂಗ್ರೆಸ್ ಅಭ್ಯರ್ಥಿ ಕೆಸಿ ರಾಮಮೂರ್ತಿ ಪರವಾಗಿ ಮಾತನಾಡಲು ಬಂದಿದ್ದೇವೆ ಎಂದು ಹೇಳಿದ್ದಾರೆ.[ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ? ಮತ ಲೆಕ್ಕಾಚಾರ ಹೇಗಿರುತ್ತೆ?]
ರಾಮ್ ಜತೆ ಮಾತನಾಡುತ್ತಾ ನಾವು ಹಣ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಈ ವೇಳೆ ರಾಮ್ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನಾನು ಅವರನ್ನು ಅಲ್ಲಿಂದ ಕಳಿಸುವಂತೆ ತಿಳಿಸಿದ್ದೆ. ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೂ ಮಾತುಕತೆ ಮಾಡಿದ್ದೆ. ಇದನ್ನೇ ಆಧಾರವಾಗಿ ಇಟ್ಟುಕೊಂಡು ಸ್ಟಿಂಗ್ ಆಪರೇಶನ್ ಎಂದು ತೋರಿಸಲಾಗುತ್ತಿದೆ ಎಂದು ದೇವೇಗೌಡ ಹೇಳಿದ್ದಾರೆ.