ಸ್ಟಿಂಗ್ ಆಪರೇಷನ್ ಪ್ರಕರಣ: ರಾಜ್ಯಸಭಾ ಚುನಾವಣೆ ಮುಂದೂಡಿಕೆ?
ಬೆಂಗಳೂರು, ಜೂ 3: ಇಡೀ ರಾಜ್ಯವೇ ತಲೆ ತಗ್ಗಿಸುವುಂತಹ ಕುಟುಕು ಕಾರ್ಯಾಚರಣೆಯಲ್ಲಿ ಕೆಲವು ಶಾಸಕರು ಹಣದ ಬೇಡಿಕೆಯಿಟ್ಟ ವಿಚಾರವನ್ನು ಕೇಂದ್ರ ಚುನಾವಣಾ ಆಯೋಗ ಗಂಭೀರವಾಗಿ ತೆಗೆದುಕೊಂಡಿದೆ.
ಈ ಡೀಲ್ ಹಗರಣದ ಕುರಿತು ವಿಸ್ಕೃತ ವರದಿ ನೀಡುವಂತೆ ಚುನಾವಣಾ ಆಯೋಗ ಕೇಳಿದ್ದು, ಮೂಲಗಳ ಪ್ರಕಾರ ರಾಜ್ಯಸಭಾ ಚುನಾವಣೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. (ಸ್ಟಿಂಗ್ ಆಪರೇಷನ್, 3ಕಾಸಿಗೆ ಹರಾಜಾದ ಶಾಸಕರ ಮರ್ಯಾದೆ)
ಸ್ಟಿಂಗ್ ಆಪರೇಷನ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ಈ ಪ್ರಕರಣದ ಸಂಬಂಧ ಕೇಂದ್ರ ಚುನಾವಣಾ ಆಯೋಗ ವರದಿ ಕೇಳಿದೆ.
ಹಾಗಾಗಿ, ರಾಜ್ಯಸಭಾ ಚುನಾವಣೆ ಮುಂದೂಡುವ ಸಾಧ್ಯತೆ ಇದೆ. ಜೊತೆಗೆ, ರಾಜ್ಯ ಚುನಾವಣಾ ಆಯೋಗದ ವರದಿ ಬಳಿಕ ಚುನಾವಣಾ ಮುಂದೂಡಿಕೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಝಾ ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಯ ಹೊಸ್ತಿಲಲ್ಲಿ ಇಂಡಿಯಾ ಟುಡೇ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ರಾಜ್ಯದ ನಾಲ್ವರು ಶಾಸಕರು ಮತಕ್ಕಾಗಿ ಕೋಟಿ ಕೋಟಿ ಹಣದ ಆಮಿಷವೊಡ್ಡಿರುವ 'ದುರಂತಕಾರಿ' ದೃಶ್ಯಾವಳಿಗಳು ರೆಕಾರ್ಡ್ ಆಗಿದ್ದವು. (ವೋಟಿಗಾಗಿ ನೋಟು, ತಪ್ಪೇನಿದೆ)
ಕರ್ನಾಟಕದ ಶಾಸಕರಾದ ಜಿ ಟಿ ದೇವೇಗೌಡ, ಮಲ್ಲಿಕಾರ್ಜುನ ಖೂಬಾ, ವರ್ತೂರು ಪ್ರಕಾಶ್ ಮತ್ತು ಬಿ ಆರ್ ಪಾಟೀಲ್ ತಮ್ಮ ಮತಕ್ಕಾಗಿ ಐದರಿಂದ ಹತ್ತು ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆಂದು ವರದಿಯಾಗಿತ್ತು.
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ಕು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜೂನ್ 11ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಶುಕ್ರವಾರ (ಜೂ 3) ಕೊನೆಯ ದಿನವಾಗಿದೆ.