ವೋಟಿಗಾಗಿ ನೋಟು: ಯಾರು, ಏನು ಹೇಳಿದರು?
ಬೆಂಗಳೂರು, ಜೂನ್ 03: ರಾಜ್ಯಸಭೆ ವೋಟಿಗಾಗಿ ನೋಟು ಪ್ರಕರಣಕ್ಕೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ. ಇಂಡಿಯಾ ಟುಡೇ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ರಾಜ್ಯದ ಶಾಸಕರ ಮಾನ ಹರಾಜಾಗಿದ್ದು ರಾಜಕೀಯ ಪಕ್ಷಗಳು ಅವರದ್ದೇ ಆದ ದೃಷ್ಟಿಕೋನದಲ್ಲಿ ವಿವರಣೆ ನೀಡುತ್ತಿದ್ದಾರೆ.
ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಬಸವಕಲ್ಯಾಣ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದವರು ಎಂಬ ಮಾಹಿತಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದು ಸಾವರ್ಜನಿಕರು ಸತ್ಯಾಸತ್ಯತೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.[ಸ್ಟಿಂಗ್ ಆಪರೇಷನ್: ಮೂರು ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!]
ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸೇರಿದಂತೆ ಅನೇಕರು ನೀಡಿರುವ ಪ್ರತಿಕ್ರಿಯೆಯನ್ನು ಮುಂದಕ್ಕೆ ನೋಡಿ...
ಬಣ್ಣ ಬಯಲಾಗಲಿದೆ
ಕಾಂಗ್ರೆಸ್ ಪಕ್ಷದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಮುಂದಿನ ದಿನಗಳಲ್ಲಿ ಇದರ ನಿಜವಾದ ಸತ್ಯ ಹೊರಬೀಳಲಿದ್ದು ಮಾಧ್ಯಯಮಗಳ ಮೂಲಕ ಸುದ್ದಿ ನನಗೆ ಗೊತ್ತಾಯಿತು.-ಬಿ ಎಸ್ ಯಡಿಯೂರಪ್ಪ
ಜೆಡಿಎಸ್ ಮುಗಿಸುವ ಕುತಂತ್ರ
ಜೆಡಿಎಸ್ ಮುಗಿಸಲು ಈ ಬಗೆಯ ನಾಟಕವನ್ನು ಮಾಡಲಾಗಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತೇನೆ. ಡಿಕೆ ಶಿವಕುಮಾರ್ ಅಂಥವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಬೇಕಂತಲೇ ಹೀಗೆ ಮಾಡಿದ್ದಾರೆ
ವರದಿಗಾರರು ಎಂದು ಹೇಳಿದ ಮೇಲೂ ಶಾಸಕರು ಹಣದ ಬಗ್ಗೆ ಮಾತನಾಡಿದ್ದಾರೆ ಎಂಬ ಹೇಳಿಕೆಗಳು ಬರುತ್ತಿವೆ. ಇದಕ್ಕೆ ಮೂಲ ಕಾರಣ ಯಾರೂ ಎಂಬುದನ್ನು ಬಹಿರಂಗವಾಗಿ ಹೇಳಬೇಕಿಲ್ಲ. ಕಾಂಗ್ರೆಸ್ ನಾಯಕರು ಮೊದಲು ಪ್ರಜಾಪ್ರಭುತ್ವವನ್ನು ಅರ್ಥ ಮಾಡಿಕೊಳ್ಳಬೇಕು- ಎಚ್ ಡಿ ಕುಮಾರಸ್ವಾಮಿ
ಗಾಂಧೀಜಿ ಇದ್ದರೂ ಹಣ ಹಂಚುತ್ತಿದ್ದರು!
ಮಹಾತ್ಮ ಗಾಂಧೀಜಿ ಇಂದು ಇದ್ದರೆ ಚುನಾವಣೆಯಲ್ಲಿ ಗೆಲ್ಲಲು ಹಣ ಹಂಚುತ್ತಿದ್ದರು. ರಾಜಕೀಯ ವಾತಾವರಣವೇ ಬದಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಎಸ್ ಆರ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾಖಲೆ ಇಲ್ಲ
ಕೇವಲ ಮಾಧ್ಯಮಗಳ ಮಾತನ್ನೇ ನಾವು ನಂಬಿ ನಡೆಯುತ್ತಿದ್ದೇವೆ. ಶಾಸಕರು ಅಕ್ರಮದಲ್ಲಿ ತೊಡಗಿಕೊಂಡಿರುವ ಬಗ್ಗೆ ಯಾವುದೇ ಸ್ಪಷ್ಟ ಸಾಕ್ಷಿ ಇಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಲು ತಿಳಿಸುತ್ತೇನೆ- ಕಾಗೋಡು ತಿಮ್ಮಪ್ಪ, ಸ್ಪೀಕರ್