ಸ್ಟಿಂಗ್ ಆಪರೇಶನ್: ವರದಿ ಕೇಳಿದ ಕೇಂದ್ರ ಚುನಾವಣಾ ಆಯೋಗ
ನವದೆಹಲಿ, ಜೂನ್, 03: ಸ್ಟಿಂಗ್ ಆಪರೇಶನ್ ಬಿಸಿ ಕೇಂದ್ರ ಚುನಾವಣಾ ಆಯೋಗದವರೆಗೂ ತಲುಪಿದೆ. ಶಾಸಕರು ಹಣದ ಬೇಡಿಕೆ ಇಟ್ಟಿರುವ ವಿಷಯದ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.
ನವದೆಹಲಿಯಲ್ಲಿ ಶುಕ್ರವಾರ ಮುಖ್ಯ ಚುನಾವಣಾ ಆಯುಕ್ತ ಡಾ.ನಸಿಮ್ ಜೈದಿ ನೇತೃತ್ವದಲ್ಲಿ ಸಭೆ ನಡೆಯಿತು. ಕುಟುಕು ಕಾರ್ಯಾಚರಣೆ ಬಗ್ಗೆ ವರದಿ ನೀಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಅನಿಲ್ಕುಮಾರ್ ಕುಮಾರ್ ಝಾ ಅವರಿಗೆ ಸಭೆ ನಂತರ ಸೂಚನೆ ನೀಡಲಾಗಿದೆ.[ವೋಟಿಗಾಗಿ ನೋಟು: ಯಾರು, ಏನು ಹೇಳಿದರು?]
ರಾಜ್ಯಕ್ಕೆ ಸಂಬಂಧಿಸಿದ ರಾಜ್ಯಸಭಾ ಚುನಾವಣೆಯನ್ನು ಮುಂದೂಡಬೇಕೋ? ಬೇಡವೋ? ಎಂಬ ವಿಚಾರದ ಮೇಲೆ ಚರ್ಚೆ ನಡೆಯಿತು. ಅಕ್ರಮದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಸ್ಪಷ್ಟನೆ ಇಲ್ಲದ ಕಾರಣ ವರದಿ ನೀಡುವಂತೆ ತಿಳಿಸಲಾಯಿತು.
ರಾಜ್ಯ ವಿಧಾನಸಭೆಯಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್ 11ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಜೆಡಿಎಸ್, ಬಿಜೆಪಿ ತಲಾ ಒಂದು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ.[ಮೂರು ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!]
ಕರ್ನಾಟಕದ ಶಾಸಕರಾದ ಜಿ ಟಿ ದೇವೇಗೌಡ, ಮಲ್ಲಿಕಾರ್ಜುನ ಖೂಬಾ, ವರ್ತೂರು ಪ್ರಕಾಶ್ ಮತ್ತು ಬಿ ಆರ್ ಪಾಟೀಲ್ ರಾಜ್ಯಸಭೆ ಮತ ನೀಡಲು ಐದರಿಂದ ಹತ್ತು ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎಂದು ಕುಟುಕು ಕಾರ್ಯಾಚರಣೆಯಲ್ಲಿ ಹೇಳಲಾಗಿದ್ದು ವಾಹಿನಿಗಳು ನಿರಂತರವಾಗಿ ಸುದ್ದಿ ಬಿತ್ತರಿಸಿದ್ದವು.