ಮೀರಾ ಕುಮಾರ್ ಬಗ್ಗೆ ನೀವು ತಿಳಿಯಲೇಬೇಕಾದ 5 ವಿಚಾರ
ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ವತಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಮೀರಾ ಕುಮಾರ್ ಅವರು ರಾಜಕೀಯ ಜೀವನದಲ್ಲಿ ಉತ್ತಮ ಅನುಭವ ಹೊಂದಿರುವವರು. ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಪುತ್ರಿ.
ಬೆಂಗಳೂರು, ಜೂನ್ 22: ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಪಕ್ಷವು, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಗುರುವಾರ ಮಧ್ಯಾಹ್ನ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ತನ್ನ ಮಿತ್ರ ಪಕ್ಷಗಳೊಂದಿಗೆ ಭಾನುವಾರ ಚರ್ಚೆ ನಡೆಸಿದ ನಂತರ ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೀರಾ ಕುಮಾರ್
ಸ್ವತಂತ್ರ ಹೋರಾಟಗಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಮಗಳಾಗಿರುವ ಮೀರಾ, ರಾಜಕೀಯ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿರುವವರು.
ಬಿಜೆಪಿಗೆ ಭರ್ಜರಿ ತಿರುಗೇಟು ನೀಡಲು ಕಾಂಗ್ರೆಸ್ ಅಚ್ಚರಿಯ ಆಯ್ಕೆ?
72 ವರ್ಷದ ಈ ಹಿರಿಯ ನಾಯಕಿ, ಈವರೆಗೆ ಕೇಂದ್ರ ಸರ್ಕಾರದ ಸಚಿವೆಯಾಗಿ, ಲೋಕಸಭೆಯ ಮಾಜಿ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಈವರೆಗಿನ ರಾಜಕೀಯ ಸಾಧನೆಯ ಬಗ್ಗೆ ನೀವು ತಿಳಿಯಬೇಕಾದ ಐದು ವಿಚಾರಗಳು ಇಲ್ಲಿವೆ.
ಎಂಎ, ಎಲ್ಎಲ್ ಬಿ ಪದವೀಧರೆ
1945ರ ಮಾರ್ಚ್ 31ರಂದು ಜನನ. ಬಿಹಾರದ ಅರಾ ಜಿಲ್ಲೆಯಲ್ಲಿ ಜನನ. ಡೆಹ್ರಾಡೂನ್ ನ ವೆಲ್ಹಾಮ್ ಬಾಲಕಿಯರ ಶಾಲೆ ಹಾಗೂ ಮಹಾರಾಣಿ ಗಾಯತ್ರಿದೇವಿ ಬಾಲಕಿಯರ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಎಂ.ಎಂ., ಎಲ್.ಎಲ್. ಬಿ. ಪದವೀಧರೆ. ಬನಶ್ತಾಲಿ ವಿದ್ಯಾಪೀಠದಿಂದ 2010ರಲ್ಲಿ ಗೌರವ ಡಾಕ್ಟರೇಟ್ ಸಿಕ್ಕಿದೆ.
ನಾನಾ ದೇಶಗಳಲ್ಲಿ ಭಾರತದ ರಾಯಭಾರಿಯಾಗಿದ್ದರು
1970ರಲ್ಲಿ ಇವರು ಭಾರತೀಯ ವಿದೇಶ ಸೇವೆಗೆ ಸೇರ್ಪಡೆಗೊಂಡಿದ್ದರು. ಹಲವಾರು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪಾಸ್ವಾನ್, ಮಾಯಾವತಿಯಂಥವರಿಗೇ ಬಿಸಿ ಮುಟ್ಟಿಸಿದ್ದವರು!
1985ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಅವರು, ಆ ವರ್ಷ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಬಿಜ್ನೋರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಘಟಾನುಘಟಿಗಳಾದ ಇತರ ದಲಿತ ನಾಯಕರಾದ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಮಾಯಾವತಿಯಂಥವರನ್ನೇ ಸೋಲಿಸಿ ಆಯ್ಕೆಯಾಗಿದ್ದರು.
ಬಿಹಾರದ ಸಸಾರಾಮ್ ಕ್ಷೇತ್ರದಿಂದಲೂ ಆಯ್ಕೆ
8, 11 ಹಾಗೂ 12ನೇ ಲೋಕಸಭೆಗಳಿಗೆ ದೆಹಲಿಯ ಕರ್ನೊಲ್ ಭಾಗ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1999ರ ಮಹಾ ಚುನಾವಣೆಯಲ್ಲಿ ಸೋತರೂ, ಪುನಃ 2004ರಲ್ಲಿ ಬಿಹಾರದ ಸಸಾರಾಮ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. 2009ರ ಚುನಾವಣೆಯಲ್ಲಿ ಪುನಃ ಅದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
2014ರಲ್ಲಿ ಸೋತರೂ ಹೊಸ ಅವಕಾಶ
2004ರಿಂದ 2009ರವರೆಗೆ ಕೇಂದ್ರದ ಕಾಂಗ್ರೆಸ್ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಸಚಿವೆಯಾಗಿದ್ದರು. 2009ರಲ್ಲಿ ಲೋಕಸಭೆಯ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು. ಹೀಗೆ, ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು. 2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಸಸಾರಾಮ್ ಕ್ಷೇತ್ರದಲ್ಲಿ ಬಿಜೆಪಿಯ ಛೆಡ್ಡಿ ಪಾಸ್ವಾನ್ ವಿರುದ್ಧ 63,327 ಮತಗಳ ಅಂತರದಲ್ಲಿ ಸೋತಿದ್ದರು. ಆದರೀಗ, ಅವರಿಗೆ ದೇಶದ ಮಹೋನ್ನತ ಹುದ್ದೆಗೆ ಹೋಗುವ ಅವಕಾಶ ಒದಗಿಬಂದಿದೆ.