ವಿಸ್ಟ್ರಾನ್ ಹಿಂಸಾಚಾರ: ಕಾರ್ಮಿಕ ಗುತ್ತಿಗೆ ಕಂಪನಿಯ ಒಳ ಒಪ್ಪಂದ ಕಾರಣ?
ಬೆಂಗಳೂರು, ಡಿಸೆಂಬರ್ 26: ನರಸಾಪುರದಲ್ಲಿ ಕಾರ್ಮಿಕರ ಧ್ವಂಸಕ್ಕೆ ಬಲಿಯಾದ ಆಪಲ್ ಐ ಫೋನ್ ತಯಾರಿಕಾ ಘಟಕ ಕೆಲಸ ಆರಂಭಿಸಿದೆ. ಕಂಪನಿಯಿಂದ ನೇಮಕಗೊಂಡಿರುವ ಉದ್ಯೋಗಿಗಳಷ್ಟೇ ಕೆಲಸ ಮಾಡುತ್ತಿದ್ದಾರೆ. ಗಲಾಟೆಗೆ ಕಾರಣವಾದ ಆರೋಪಿತ ನೂರಾರು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ಸಾವಿರಾರು ಕಾರ್ಮಿಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಬಂಧಿತರ ಬಿಡುಗಡೆಗಾಗಿ ಕಾರ್ಮಿಕ ಸಂಘಟನೆಗಳು ಕಾನೂನು ಸಮರವೂ ನಡೆಸುತ್ತಿವೆ. ಘಟನೆಗೆ ಮೂಲ ಕಾರಣ ಏನು ಎಂಬುದನ್ನು ಆಪಲ್ ಕಂಪನಿಗೆ ಅರ್ಥವಾಗಿದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಪೊಲೀಸರು ವಿಫಲರಾದರೇ ಎಂಬ ಪ್ರಶ್ನೆ ಉದ್ಭವಿಸಿದೆ. ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚು ಮಾಡಿ ಮನಸೋ ಇಚ್ಛೆ ವೇತನ ಕಡಿತ ಮಾಡಿರುವ ಹಿಂದಿನ ರಹಸ್ಯ ಭೇಧಿಸಿ ತಪ್ಪಿತಸ್ಥರನ್ನು ಪೊಲೀಸರು ಪತ್ತೆ ಮಾಡಿ ಅವರ ವಿರುದ್ಧವೂ ಕ್ರಮ ಜರುಗಿಸುತ್ತಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಐಫೋನ್ ಕಂಪೆನಿ ಧ್ವಂಸ: ತಪ್ಪೊಪ್ಪಿಕೊಂಡು ಕಾರ್ಮಿಕರ ಕ್ಷಮೆ ಕೋರಿದ ವಿಸ್ಟ್ರಾನ್
ಒಳ ಒಪ್ಪಂದ: ವಿಸ್ಟ್ರಾನ್ ಕಂಪನಿಗೆ ಕಾರ್ಮಿಕರನ್ನು ಪೂರೈಸುವ ಹೊರ ಗುತ್ತಿಗೆಯನ್ನು ನಾಲ್ಕು ಕಂಪನಿಗಳಿಗೆ ನೀಡಲಾಗಿತ್ತು. ಅವುಗಳ ಜವಾಬ್ಧಾರಿ ವಿಸ್ಟ್ರಾನ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ವಹಿಸಲಾಗಿತ್ತು. ಈ ವಿಭಾಗದ ಮುಖ್ಯಸ್ಥ ಅಧಿಕಾರಿ ತಮ್ಮ ಕಾರ್ಯ ಚಟುವಟಿಕೆಯನ್ನು ಬೆಂಗಳೂರಿಗೆ ಸೀಮಿತಗೊಳಿಸಿಕೊಂಡಿದ್ದರು. ಮತ್ತೊಬ್ಬ ಅಧಿಕಾರಿ ವೀರಭದ್ರಯ್ಯ, ಇವರು ತಮಿಳುನಾಡು ಮೂಲದ ಕಂಪನಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂಬ ಆರೋಪ ಇದೀಗ ಕಾರ್ಮಿಕ ವಲಯದಿಂದ ಕೇಳಿ ಬಂದಿದೆ.
ಕರೋನಾ ನೆಪ ನೀಡಿ ಕೆಲಸದ ಅವಧಿಯನ್ನು ಎಂಟು ತಾಸಿನ ಬದಲಿಗೆ ಹನ್ನೆರಡು ತಾಸಿಗೆ ಹೆಚ್ಚಿಸಿದ್ದರು. ಕಾರ್ಮಿಕರನ್ನು ನಿರ್ವಹಿಸುತ್ತಿದ್ದು ವಿಸ್ಟ್ರಾನ್ ಕಂಪನಿ ಸಿಬ್ಬಂದಿ. ಆದರೆ ವೇತನ ಪಾವತಿ ಗತ್ತಿಗೆ ಕಂಪನಿಗಳಿಂದ ಬಿಡುಗಡೆಯಾಗುತ್ತಿತ್ತು. ಕರೋನಾ ನೆಪ ನೀಡಿ ಕಾರ್ಮಿಕರ ವೇತನದಲ್ಲಿ ಗುತ್ತಿಗೆ ಕಂಪನಿಗಳು ವೇತನ ಕಡಿತ ಮಾಡಿತ್ತು. ಈ ವೇತನ ಕಡಿತದ ಹಿಂದೆ ವಿಸ್ಟ್ರಾನ್ ಕಂಪನಿ ಮಾನವ ಸಂಪನ್ಮೂಲ ಅಧಿಕಾರಿ ಮತ್ತು ತಮಿಳುನಾಡು ಮೂಲದ ಹೊರ ಗುತ್ತಿಗ ಕಂಪನಿ ಒಳಗೊಳಗೆ ನಡೆಸಿದ್ದ ಪಿತೂರಿಯೇ ಈ ದುರ್ಘಟನೆಗೆ ಕಾರಣವಾಯಿತು ಎಂಬ ಮಾತು ಕೇಳಿ ಬರುತ್ತಿವೆ.
ಕೋಲಾರ ವಿಸ್ಟ್ರಾನ್ ಗಲಭೆ; ಉಪಾಧ್ಯಕ್ಷನನ್ನು ವಜಾ ಮಾಡಿದ ಆ್ಯಪಲ್
ಕಾರ್ಮಿಕರಿಗೆ ಪಾವತಿಸಬೇಕಿದ್ದ ವೇತನವನ್ನು ವಿಸ್ಟ್ರಾನ್ ಕಂಪನಿ ಪಾವತಿ ಮಾಡಿತ್ತು. ಆದರೆ, ಹೊರ ಗುತ್ತಿಗೆ ಕಂಪನಿ ಕರೋನಾ ನೆಪದಲ್ಲಿ ಹಣ ನೀಡಿರಲಿಲ್ಲ. ಹೀಗೆ ಉಳಿಸಿಕೊಂಡಿದ್ದ ಹಣದಲ್ಲಿ ಹೊರ ಗುತ್ತಿಗೆ ಕಂಪನಿ ಮತ್ತು ವಿಸ್ಟ್ರಾನ್ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಪಾಲು ಪಡೆದಿದ್ದರೇ ಎಂಬ ಅನಮಾನ ವ್ಯಕ್ತವಾಗಿದೆ. ವೇತನ ಕಡಿತ ಕ್ಕೆ ಮೂಲ ಕಾರಣವಾದವರ ವಿರುದ್ಧ ಈವರೆಗೂ ಯಾವುದೇ ರೀತಿಯ ತನಿಖೆ ನಡೆಸಿಲ್ಲ. ಕಂಪನಿಯ ಆಂತರಿಕ ತನಿಖೆಯಲ್ಲಿ ಕಂಡು ಬಂದ ಕೆಲ ಸತ್ಯಾಂಶಗಳನ್ನು ಆಧರಿಸಿ ವಿಸ್ಟ್ರಾನ್ ಕಂಪನಿಯ ಭಾರತದ ಉಪಾಧ್ಯಕ್ಷರನ್ನ ವಜಾ ಮಾಡಿತ್ತು. ಕಾರ್ಮಿಕರಿಗೆ ಆಗಿರುವ ತೊಂದರ ಬಗ್ಗೆ ಆಪಲ್ ಫೋನ್ ಕಂಪನಿಯೇ ಕ್ಷಮೆ ಕೇಳಿತ್ತು.
ನರಸಾಪುರದಲ್ಲಿರುವ ವಿಸ್ಟ್ರಾನ್ ಕಂಪನಿ ಮೇಲೆ ಏಕಾಏಕಿ ಕಾರ್ಮಿಕರು ತಿರುಗಿ ಬೀಳುವ ಹಿಂದೆ ಮಾನವ ಸಂಪನ್ಮೂಲ ಅಧಿಕಾರಿಯೊಬ್ಬರ ಕೈವಾಡ ವಿದೆ ಎಂದು ಹೇಳಲಾಗುತ್ತಿದೆ. ನ್ಯಾಯ ಕೇಳಲು ಬಂದ ಕಾರ್ಮಿಕರ ಎದುರಲ್ಲೇ ಉದ್ಧಟನತನ ಉತ್ತರ ಕೊಟ್ಟು ರೊಚ್ಚಿಗೆಬ್ಬಿಸಿದ್ದರು. ಅವರು ಹೊರ ಗುತ್ತಿಗೆ ಕಂಪನಿಯಿಂದ ಶಾಮೀಲಾಗಿ ಮಾಡಿರುವ ಎಡವಟ್ಟಿನಿಂದ ಈ ರದ್ದಾಂತಕ್ಕೆಕಾರಣಾಯಿತೇ? ಕಾರ್ಮಿಕರ ವೇತನ, ಕೆಲಸದ ಅವಧಿ ಹೆಚ್ಚಳ ಕುರಿತು ಕಾರ್ಮಿಕ ಕಾನೂನು ಸ್ಪಷ್ಟ ಉಲ್ಲಂಘನೆ ಎದ್ದು ಕಾಣುತ್ತಿತ್ತು. ಕಂಪನಿಗೆ ಅರ್ಥವಾಗಿದ್ದು ಪೊಲೀಸರಿಗೆ ಯಾಕೆ ಅರ್ಥವಾಗಿಲ್ಲ. ವಿಸ್ಟ್ರಾನ್ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಮತ್ತು ಕಾರ್ಮಿಕ ಹೊರ ಗತ್ತಿಗೆ ಕಂಪನಿಗಳ ನಡುವಿನ ಅನಧಿಕೃತ ವ್ಯವಹಾರದ ಬಗ್ಗೆ ಪೊಲೀಸರು ಯಾಕೆ ಮೌನ ವಹಿಸಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಕೋಕ್: ಕ್ರಿಯೇಟೀವ್ ಇಂಜಿನಿಯರ್ಸ್, ನೀಡ್ಸ್ ಐಕ್ಯಾ ಸೇರಿದಂತೆ ಆರು ಕಾರ್ಮಿಕ ಹೊರ ಗುತ್ತಿಗೆ ಕಂಪನಿಗಳ ನಡುವಿನ ಒಡಂಡಿಕೆಯನ್ನು ವಿಸ್ಟ್ರಾನ್ ರದ್ದು ಪಡಿಸಿದೆ ಎಂಬ ಮಾಹಿತಿ ಕೇಳಿ ಬಂದಿದೆ. ಹೊರ ಗೊತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಕಾರ್ಯವನ್ನು ಸ್ಥಗಿತಗೊಳಿಸಲು ತೀರ್ಮಾನಿಸಿರುವ ಕಂಪನಿ, ನೇರವಾಗಿ ಟ್ರೈನಿಗಳನ್ನು ಕಂಪನಿ ವತಿಯಿಂದಲೇ ನೇಮಿಸಿಕೊಳ್ಳಲು ಮುಂದಾಗಿದೆ. ಸದ್ಯ ಕಂಪನಿಯಲ್ಲಿ ಯಂತ್ರೋಪರಕಣ ಸರಿ ಪಡಿಸುವ ಮತ್ತು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಜನವರಿಂದ ಐಪೋನ್ ಉತ್ಪಾದನಾ ಕಾರ್ಯ ಆರಂಭವಾಗಲಿದೆ. ಸದ್ಯ ಕಂಪನಿಯಿಂದ ನೇರವಾಗಿ ಆಯ್ಕೆಗೊಂಡಿರುವ ಸಿಬ್ಬಂದಿಯಷ್ಟೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕೆಲಸ ಮಾಡುವ ಸಿಬ್ಬಂದಿ ವಿವರಿಸಿದ್ದಾರೆ.