ಆನಂದ್ ಸಿಂಗ್ ಸಂಧಾನ ಸಫಲವಾಗಿದ್ದು ಹೇಗೆ? ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದಿದ್ದೇನು?
ಬೆಂಗಳೂರು, ಆ. 24: ಕೊನೆಗೂ ಸಚಿವ ಆನಂದ್ ಸಿಂಗ್ ಪ್ರವಾಸೋದ್ಯಮ ಸಚಿವರಾಗಿ ಮುಂದುವರೆಯಲು ಒಪ್ಪಿಕೊಂಡಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್, ಬಿಜೆಪಿ ಶಾಸಕ ರಾಜೂಗೌಡ ಅವರು ಆನಂದ್ ಸಿಂಗ್ ಜೊತೆಗೂಡಿ ವಿಧಾನಸೌಧಕ್ಕೆ ಆಗಮಿಸಿ ಸಚಿವರ ಕಚೇರಿ ಪೂಜೆಯಲ್ಲಿ ಭಾಗಿಯಾಗಿದ್ದರು.
ಸಚಿವ ಆನಂದ್ ಸಿಂಗ್ ಮನವೊಲಿಸುವಲ್ಲಿ ಸುರಪುರ ಬಿಜೆಪಿ ಶಾಸಕ ರಾಜೂಗೌಡ ಮಹತ್ವದ ಪಾತ್ರ ನಿರ್ವಹಿಸಿದ್ದರು. ಮುನಿಸಿಕೊಂಡಿದ್ದ ಆನಂದ್ ಸಿಂಗ್ರನ್ನು ಹೊಸಪೇಟೆಯಿಂದ ಬೆಂಗಳೂರಿಗೆ ಕರೆತಂದು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿದ್ದರು. ನಂತರ ಸಿಎಂ ಬೊಮ್ಮಾಯಿ ಅವರನ್ನೂ ಆನಂದ್ ಸಿಂಗ್ ಭೇಟಿ ಮಾಡಿ ಚರ್ಚೆ ಮಾಡುವಂತೆ ರಾಜೂಗೌಡ ಮಾಡಿದ್ದರು.
ಕಳೆದ ಮೂರು ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದರೂ ಆನಂದ್ ಸಿಂಗ್ ಬಿಜೆಪಿ ನಾಯಕರನ್ನು ಭೇಟಿ ಮಾಡಿರಲಿಲ್ಲ, ವಿಧಾನಸೌಧಕ್ಕೂ ಬಂದಿರಲಿಲ್ಲ. ಇವತ್ತು ವಿಧಾನಸೌಧಕ್ಕೆ ಆಗಮಿಸಿ ತಮ್ಮ ಕಚೇರಿ ಪೂಜೆಯನ್ನು ಮಾಡಿದ್ದಾರೆ.
ಆನಂದ್ ಸಿಂಗ್ ಈಗಿರುವ ಖಾತೆಯಲ್ಲಿಯೇ ಮುಂದುವರೆಯಲು ಒಪ್ಪಿಕೊಂಡಿದ್ದಾರಾ? ಹಾಗೆ ಒಪ್ಪಿಕೊಂಡಿದ್ದರೆ ಅದಕ್ಕೆ ಇರುವ ಕಾರಣ ಏನು? ಸಿಎಂ ಬಸವರಾಜ ಬೊಮ್ಮಾಯಿ ಆನಂದ್ ಸಿಂಗ್ಗೆ ಕೊಟ್ಟಿರುವ ಭರವಸೆ ಏನು? ಒಟ್ಟಾರೆ ಆನಂದ್ ಸಿಂಗ್ ಸಂಧಾನಕ್ಕೆ ಸಂಬಂಧಿಸಿದಂತೆ ರವಿವಾರ, ಸೋಮವಾರ ಹಾಗೂ ಮಂಗಳವಾದ ನಡೆದ ಬೆಳವಣಿಗೆಗಳು ಏನು?

ಆನಂದ ಸಿಂಗ್ ಖಾತೆ ಭರವಸೆ ಕೊಟ್ಟ ಸಿಎಂ?
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವರಾಗಿ ಮುಂದುವರೆಯಲು ಆನಂದ ಸಿಂಗ್ ಒಪ್ಪಿಕೊಂಡಿರುವುದರ ಹಿಂದೆ ಬಹಳಷ್ಟು ಬೆಳವಣಿಗೆಗಳು ನಡೆದಿವೆ. ಅವರೊಂದಿಗೆ ಸಂಧಾನ ಸಫಲವಾಗಲು ಪ್ರಮುಖವಾಗಿ ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟಿರುವ ಮಾತು ಕಾರಣ ಹಾಗೂ ಸೂಚನೆ ಎಂಬ ಮಾಹಿತಿಯಿದೆ.
ವಿಧಾನಸೌಧಕ್ಕೆ ತೆರಳಿ ತಮ್ಮ ಕಚೇರಿ ಪೂಜೆ ಮಾಡುವುದಕ್ಕೂ ಮೊದಲು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬೊಮ್ಮಾಯಿ ಭೇಟಿ ಮಾಡಿ ಸಚಿವ ಆನಂದ್ ಸಿಂಗ್ ಅಂತಿಮ ಚರ್ಚೆ ನಡೆಸಿದ್ದರು. ಅಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ಹಾಗೂ ಖಡಕ್ ಸೂಚನೆಯಿಂದ ಸಚಿವ ಆನಂದ್ ಸಿಂಗ್ ತಣ್ಣಗಾಗಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಬೊಮ್ಮಾಯಿ ಖಾತೆ ಬದಲಾವಣೆ ಭರವಸೆ ಕೊಟ್ಟಿದ್ದಾರೆ. ಅದು ಸಾಧ್ಯವಾ?

ಖಾತೆ ಬದಲಾವಣೆ ಆಗುತ್ತದೆ, ಆದರೆ ಈಗಲ್ಲ!
ಹೌದು ಆನಂದ್ ಸಿಂಗ್ಗೆ ಖಾತೆ ಬದಲಾವಣೆ ಭರವಸೆಯನ್ನು ಸಿಎಂ ಬೊಮ್ಮಾಯಿ ಕೊಟ್ಟಿದ್ದಾರೆ. ಆದರೆ ಈಗಲ್ಲ. ಖಾತೆ ಹಂಚಿಕೆ ಬದಲಾವಣೆ ಕಾಲ ಶೀಘ್ರವಾಗಿ ಬರಲಿದೆ. ಅವಕಾಶ ಬಂದಾಗ ಖಾತೆ ಬದಲಾಗುವ ಮೊದಲ ಸಚಿವರು ನೀವಾಗಲಿದ್ದೀರಿ. ಜೊತೆಗೆ ನೂತನ ವಿಜಯನಗರ ಜಿಲ್ಲೆಯ ಆಡಳಿತಾತ್ಮಕ ಅನುಮೋದನೆ ಶೀಘ್ರದಲ್ಲೇ ಜಾರಿಯಾಗಲಿದೆ. ಅಧಿಕಾರಿಗಳು ಮತ್ತು ಜಿಲ್ಲಾ ಯೋಜನೆಗಳಲ್ಲಿ ಅನ್ಯರ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳುತ್ತೇನೆ ಎಂದು ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ಜೊತೆಗೆ ಮತ್ತೊಂದು ಮಾತನ್ನೂ ಬೊಮ್ಮಾಯಿ ಹೇಳಿದ್ದಾರೆ.

ಬೊಮ್ಮಾಯಿ ಮಾತಿಗೆ ಗಲಿಬಿಯಾದ ಆನಂದ್ ಸಿಂಗ್!
"ಖಾತೆ ಹಂಚಿಕೆಯನ್ನು ಹೈಕಮಾಂಡ್ ಅಂತಿಮ ಮಾಡಿದೆ. ಹೀಗಾಗಿ ನಾವೆಲ್ಲರೂ ಪಕ್ಷದ ಆದೇಶ ಪಾಲನೆ ಮಾಡಲೇಬೇಕು. ನೀವು ಸಂಘರ್ಷದ ರಾಜಕಾರಣ ಬಿಡಿ, ಸಹಕಾರದ ರಾಜಕಾರಣ ಮಾಡಿ. ಮೊದಲು ವಿಧಾನಸೌಧದ ಕಚೇರಿಗೆ ತೆರಳಿ, ಅಧಿಕಾರ ಸ್ವೀಕಾರ ಮಾಡಿ. ಮತ್ತೆ ಬನ್ನಿ ಮಾತಾಡೋಣ" ಎಂದು ಸಿಎಂ ಬೊಮ್ಮಾಯಿ ನೇರವಾಗಿ ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಮಾತಾನಾಡಿದ ರೀತಿ ಗಮನಿಸಿದ ಸಚಿವ ಆನಂದ ಸಿಂಗ್ ಗಲಿಬಿಲಿಯಾಗಿದೆ. ಆಗ ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದು ಗೃಹ ಕಚೇರಿ ಕೃಷ್ಣಾದಿಂದ ಆನಂದ್ ಸಿಂಗ್ ಹೊರಗೆ ಬಂದಿದ್ದಾರೆ. ಆಗ ಮತ್ತೆ ಆನಂದ ಸಿಂಗ್ ಸಮಾಧಾನ ಮಾಡಿ ವಿಧಾನಸೌಧಕ್ಕೆ ಶಾಸಕ ರಾಜೂಗೌಡ ಕರೆ ತಂದಿದ್ದಾರೆ ಎನ್ನಲಾಗಿದೆ.

ಆನಂದ್ ಸಿಂಗ್ ಯಾರಿಗೂ ಬ್ಲಾಕ್ ಮೇಲ್ ಮಾಡಿಲ್ಲ!
ಕೊನೆಗೆ ವಿಕಾಸಸೌಧದ ಕೊಠಡಿ ಸಂಖ್ಯೆ 36 ರಲ್ಲಿ ಆನಂದ ಸಿಂಗ್ ಪೂಜೆ ಮಾಡುವ ಮೂಲಕ ತಮ್ಮ ಇಲಾಖೆ ವಹಿಸಿಕೊಂಡು ಕೆಲಸ ಆರಂಭಿಸಿದ್ದಾರೆ. ಆನಂದ್ ಸಿಂಗ್ ಕಚೇರಿ ಪೂಜೆಯಲ್ಲಿ ಭಾವಗಿಸಿದ ಬಳಿಕ ಮಾತನಾಡಿರುವ ಶಾಸಕ ರಾಜೂಗೌಡ, "ಸಚಿವ ಆನಂದ್ ಸಿಂಗ್ ಯಾರಿಗೂ ಬ್ಲಾಕ್ಮೇಲ್ ಮಾಡಿಲ್ಲ. ಸಿಎಂ ಹಾಗೂ ರಾಜ್ಯಾಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದಾರೆ. ನಾಳೆ ಸಿಎಂ ದೆಹಲಿಗೆ ಹೋಗ್ತಾರೆ, ಆನಂದ್ ಸಿಂಗ್ ಹೋಗಲ್ಲ. ಅವರ ಅಸಮಾಧಾನ ಶಮನವಾಗಿದೆ" ಎಂದು ಹೇಳಿಕೆ ನೀಡಿದರು.
ಇದೇ ವೇಳೆ ಮಾತನಾಡಿದ ಆನಂದ್ ಸಿಂಗ್, "ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ನೀವು ಮೊದಲು ಖಾತೆ ಕೆಲಸ ಮಾಡಿ ಎಂದು ಸಿಎಂ ಹೇಳಿದ್ದಾರೆ. ಅಧ್ಯಕ್ಷರು, ಸಿಎಂಗೆ ಮನವಿ ಮಾಡಿದ್ದೇನೆ. ನಾನು ಬಯಸಿದ ಖಾತೆ, ಅಧಿಕಾರ ಪಡೆಯುತ್ತೇನೆ. ಸಿಎಂ ಮೊದಲು ಅಧಿಕಾರ ಸ್ವೀಕಾರ ಮಾಡು, ನಾನು ಹೈಕಮಾಂಡ್ ಜೊತೆ ಮಾತಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಅವರ ಮಾತಿಗೆ ಬೆಲೆ ಕೊಟ್ಟು ಅಧಿಕಾರ ಸ್ವೀಕಾರ ಮಾಡ್ತಿದ್ದೇನೆ" ಎಂದಿದ್ದಾರೆ.












Click it and Unblock the Notifications