ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ಸಮರ!
ಲಕ್ನೋ, ಆಗಸ್ಟ್ 1: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷಗಳು ಅಣಿಯಾಗುತ್ತಿವೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದಿಂದ ಅಧಿಕಾರದ ಗದ್ದುಗೆಯನ್ನು ಕಿತ್ತುಕೊಳ್ಳುವುದಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಮಾಜವಾದಿ ಪಕ್ಷವು ಮೊದಲ ಹೆಜ್ಜೆ ಇಟ್ಟಿರುವುದು ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ.
ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಬಯಸುವ ಎಲ್ಲ ಸ್ಥಳೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ಸಮಾಜವಾದಿ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕರೆ ನೀಡಿದ್ದಾರೆ.
ಯುಪಿಯಲ್ಲಿ ಬ್ರಾಹ್ಮಣರ ಮತಕ್ಕೆ ಬಲೆ: ವಿಪಕ್ಷದ ಓಲೈಕೆ, ಬಿಜೆಪಿಯಿಂದ ಉಳಿಸಿಕೊಳ್ಳುವ ಪ್ರಯತ್ನ
ಸಮಾಜವಾದಿ ಪಕ್ಷವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಮತ್ತು ಬಹುಜನ ಸಮಾಜವಾದಿ ಪಕ್ಷಕ್ಕೆ ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದಾರೆ. "ಆ ಪಕ್ಷದವರು ಬಿಜೆಪಿ ವಿರುದ್ಧ ಹೋರಾಡುತ್ತಿವೆಯೋ ಅಥವಾ ಸಮಾಜವಾದಿ ಪಕ್ಷದ ವಿರುದ್ಧ ಹೋರಾಡುತ್ತಿವೆಯೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಿ," ಎಂದು ಹೇಳಿದ್ದಾರೆ.
ಸ್ಥಳೀಯ ಮತ್ತು ಸಣ್ಣ ಪಕ್ಷಗಳಿಗೂ ಆಹ್ವಾನ:
"ರಾಜ್ಯದಲ್ಲಿ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಎದುರಿಸುವುದಕ್ಕೆ ಸಿದ್ಧರಾದ ಎಲ್ಲ ಸಣ್ಣ ಮತ್ತು ಅತಿಸಣ್ಣ ಪಕ್ಷಗಳಿಗೂ ಕೂಡಾ ಸಮಾಜವಾದಿ ಪಕ್ಷದ ಬಾಗಿಲು ತೆರದಿರುತ್ತದೆ. ಯಾವಾಗ ಬೇಕಿದ್ದರೂ ನೀವು ನಮ್ಮೊಂದಿಗೆ ಕೈಜೋಡಿಸಲು ಬರಬಹುದು. ಈಗಾಗಲೇ ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷಗಳ ಜೊತೆಗೂ ನಾವು ಒಂದಾಗಿ ಮುಂದೆ ಸಾಗುತ್ತೇವೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಪೆಗಾಸಸ್ ಬಗ್ಗೆ ಅಖಿಲೇಶ್ ಉಲ್ಲೇಖ:
"ಲೋಕಸಭೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು 350ಕ್ಕೂ ಹೆಚ್ಚು ಸಂಸದರನ್ನು ಹೊಂದಿದೆ. ದೇಶದ ಹಲವು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವು ಆಡಳಿತ ನಡೆಸುತ್ತಿದೆ. ಹಾಗಿದ್ದರೂ ನುಸುಳುವಿಕೆ ಮೂಲಕ ಏನನ್ನು ಮತ್ತು ಏಕೆ ಹುಡುಕುವುದಕ್ಕೆ ಹೊರಟಿದೆ. ಅದಕ್ಕಾಗಿ ವಿದೇಶಿ ತಂತ್ರಜ್ಞಾನದ ಸಹಾಯವನ್ನು ಪಡೆದುಕೊಳ್ಳುತ್ತಿರುವುದು ಏಕೆ," ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಗರು ತಮ್ಮನ್ನು ತಾವು ರಾಷ್ಟ್ರೀಯತಾವಾದಿಗಳು ಎಂದು ಹೇಳಿಕೊಳ್ಳುತ್ತಾರೆ. ಪೆಗಾಸಸ್ ಬೇಹುಗಾರಿಕೆ ವಿಷಯವು ರಾಷ್ಟ್ರದ ಭದ್ರತೆಗೆ ಸಂಬಂಧಿಸಿಲ್ಲವೇ, ಕಣ್ಗಾವಲಿಗೆ ಒಳಗಾದವರು ನಮ್ಮ ಗಡಿಗೆ ಸಂಬಂಧಿಸಿದವರಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸ್ವತಃ ಸರ್ಕಾರವೇ ನುಸುಳುವಿಕೆಯ ಪ್ರಯತ್ನದಲ್ಲಿದ್ದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆಯೂ ಬೇಹುಗಾರಿಕೆ ನಡೆಸಲಾಗಿದೆ. ಇದು ಎಂಥಾ ಪ್ರಜಾಪ್ರಭುತ್ವ ವ್ಯವಸ್ಥೆಯ ಪಾಲನೆಯಾಗುತ್ತದೆ. ಕೇಂದ್ರ ಸರ್ಕಾರವು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಈ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ," ಎಂದು ಅಖಿಲೇಶ್ ಯಾದವ್ ದೂಷಿಸಿದ್ದಾರೆ.
ಬಿಜೆಪಿ ವಿರುದ್ಧ ಒಗ್ಗಟ್ಟಿನ ಮಂತ್ರ:
ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಯಾದವ್ ನೇತೃತ್ವದ ಪ್ರಗತಿಶೀಲ ಸಮಾಜವಾದಿ ಪಕ್ಷ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಬಿಜೆಪಿಯನ್ನು ಸೋಲಿಸುವುದಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡುತ್ತೇವೆ. ಓಂಪ್ರಕಾಶ್ ರಾಜಭಾರ್ ನೇತೃತ್ವದ ಸುಹೇಲ್ದೇವ್ ಭಾರತೀಯ ಸಮಾಜವಾದಿ ಪಕ್ಷ(ಎಸ್ ಬಿಎಸ್ ಪಿ) ನಡೆಸುತ್ತಿರುವ ಭಾಗಿದಾರ್ ಮೋರ್ಚಾದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡಾ ಭಾಗಿಯಾಗಿದ್ದರು. ಈವರೆಗೂ ಎರಡು ಪಕ್ಷಗಳ ಜೊತೆಗೆ ಯಾವುದೇ ರೀತಿ ಮಾತುಕತೆ ನಡೆಸಿಲ್ಲ. ಇದರ ಹೊರತಾಗಿ ಕಾಂಗ್ರೆಸ್ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಯಾವ ಪಕ್ಷದ ವಿರುದ್ಧ ಹೋರಾಟಬೇಕು ಎಂಬುದನ್ನು ಮೊದಲು ನಿರ್ಧರಿಸಲಿ ಎಂದಿದ್ದಾರೆ.
ಸಮಾಜವಾದಿ ಪಕ್ಷದ ವಿರುದ್ಧ ಬಿಎಸ್ ಪಿ ಟ್ವೀಟ್:
ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ತನ್ನ ಗೆಲುವಿಗಾಗಿ ಸರ್ಕಾರಿ ಯಂತ್ರಗಳನ್ನು ಬಳಸಲಾಗಿದೆ ಎಂಬ ಆರೋಪವಿದೆ. ಸಮಾಜವಾದಿ ಸರ್ಕಾರ ಈ ಹಿಂದೆ ಇದೇ ತಂತ್ರವನ್ನು ಬಳಸಿತ್ತು ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಕೂಡ ಸಮಾಜವಾದಿ ಪಕ್ಷದ ವಿರುದ್ಧ ಕಿಡಿ ಕಾರಿದ್ದರು. ಈ ಹಿಂದಿನ ಎಸ್ ಪಿ ಸರ್ಕಾರವನ್ನು ಪ್ರಜೆಗಳು ಹತಾಶೆ ಮತ್ತು ನಿರಾಸೆಯಿಂದಾಗಿ ಸೋಲಿಸಿದ್ದಾರೆ ಎಂದು ದೂಷಿಸಿದ್ದಾರೆ.
150 ಕ್ಷೇತ್ರಗಳಲ್ಲಿ ಮೂರು ದಿನಗಳ ಶಿಬಿರ:
ಉತ್ತರ ಪ್ರದೇಶದಲ್ಲಿ ಜಾತಿ ಆಧಾರದ ಮೇಲಿನ ರಾಜಕಾರಣವನ್ನು ಅವಲೋಕಿಸಿದಾಗ ಬಹುಜನ ಸಮಾಜವಾದಿ ಪಕ್ಷವು ಬ್ರಾಹ್ಮಣ ಸಮ್ಮೇಳವನ್ನು ನಡೆಸಿದೆ. ಅದೇ ರೀತಿ ಸಮಾಜವಾದಿ ಪಕ್ಷ ಸಹ ಅಂಥ ಸಮ್ಮೇಳನಗಳನ್ನು ಆಯೋಜಿಸಲಿದೆ. ನಮ್ಮ ಹಿಂದುಳಿದ ವರ್ಗಗಳ ಸಮ್ಮೇಳನದ ರೀತಿಯಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ. ಕೊರೊನಾವೈರಸ್ ಎರಡನೇ ಅಲೆ ಆರಂಭಕ್ಕೂ ಮೊದಲು ಪಕ್ಷದ ವತಿಯಿಂದ 150 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೂರು ದಿನಗಳ ಶಿಬಿರವನ್ನು ನಡೆಸಲಾಗಿತ್ತು," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಆಗಸ್ಟ್ 5ರಂದು ಸಮಾಜವಾದಿ ಪಕ್ಷದ ಯಾತ್ರೆ:
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ವಿಚಾರವಾದಿ ಜಾನೇಶ್ವರ ಮಿಶ್ರಾ ಜನ್ಮ ದಿನಾಚರಣೆ ಹಿನ್ನೆಲೆ ಯಾತ್ರೆ ಆರಂಭಿಸಲು ನಿರ್ಧರಿಸಲಾಗಿದೆ. ಆಗಸ್ಟ್ 5 ರಿಂದ 15ರವರೆಗೂ ಯಾತ್ರೆ ನಡೆಸಲಿದ್ದು, ಭಾರತೀಯ ಜನತಾ ಪಕ್ಷದ ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೊವಿಡ್-19 ನಿರ್ವಹಣೆಯಲ್ಲಿ ಯೋಗಿ ವೈಫಲ್ಯ:
ರಾಜ್ಯದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಸಮರ್ಥವಾಗಿ ನಿರ್ವಹಿಸುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಸಂಪೂರ್ಣ ವೈಫಲ್ಯ ಅನುಭವಿಸಿದೆ. ಸರ್ಕಾರವು ಕೊವಿಡ್-19 ನಿಯಂತ್ರಿಸುವಲ್ಲಿ ಸೋತಿದ್ದು, ವೈದ್ಯಕೀಯ ಆಮ್ಲಜನಕ, ಹಾಸಿಗೆ ಮತ್ತು ಔಷಧಿ ವೈವಸ್ಥೆಯಿಲ್ಲದೇ ಸಾವಿರಾರು ಜನರು ಪ್ರಾಣ ಬಿಟ್ಟಿದ್ದಾರೆ. ರಾಜ್ಯದ ಆಸ್ಪತ್ರೆ ಮತ್ತು ಸ್ಮಶಾನಗಳಲ್ಲಿ ಎಂಥಾ ಚಿತ್ರಣ ಸೃಷ್ಟಿಯಾಗಿತ್ತು ಎಂಬುದನ್ನು ಜನರೇ ಕಣ್ಣಾರೆ ಕಂಡಿದ್ದಾರೆ, ಇದು ಎಂಥಾ ಮಾದರಿಯಾಗಿದೆ. ಬಿಜೆಪಿಗೆ ಅಧಿಕಾರ ನೀಡಿದ ಸಂದರ್ಭದಲ್ಲಿ ಯಾವ ರೀತಿ ಆಡಳಿತ ನೀಡಿದ್ದಾರೆ ಎಂಬುದನ್ನು ಜನರೇ ಹತ್ತಿರದಿಂದ ನೋಡಿದ್ದು, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ಆರೋಪ:
ಕಳೆದ 2017ರಲ್ಲಿ ಭಾರತೀಯ ಜನತಾ ಪಕ್ಷ ಹೊರಡಿಸಿದ ಚುನಾವಣಾ ಪ್ರಣಾಳಿಕೆಯನ್ನು ಬಿಜೆಪಿಗರೇ ನೋಡಿದಂತಿಲ್ಲ. ರೈತರ ಆದಾಯ ಇಮ್ಮಡಿಯಾಗಿಲ್ಲ. ಗಂಗಾನದಿ ಶುದ್ಧೀಕರಣ ಮತ್ತು ತೈಲ ಬೆಲೆ ಏರಿಕೆ ಬಗ್ಗೆ ಸ್ವತಃ ಬಿಜೆಪಿಗರಿಗೇ ತೃಪ್ತಿಯಿಲ್ಲ. ಕೊವಿಡ್-19 ಕಾಲದಲ್ಲಿ ಸರ್ಕಾರದಿಂದ ಯಾವುದೇ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಆಗಲಿಲ್ಲ. ಬದಲಿಗೆ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಸ್ಥಾಪಿಸಿದ ಮೂಲಭೂತ ಸೌಕರ್ಯಗಳನ್ನೇ ಬಳಸಿಕೊಳ್ಳಲಾಯಿತು. ಅವರು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಆರಂಭಿಸಿದರು, ಆದರೆ ಅದರ ಪೈಕಿ 9ನೇ ಮಹಡಿಯ ರಾಮಮನೋಹರ್ ಲೋಹಿಯಾ ವೈದ್ಯಕೀಯ ಸಂಸ್ಥೆ ಮಾತ್ರ ಕಾರ್ಯೋನ್ಮುಖವಾಗಿದ್ದು, ಅದನ್ನು ಎಸ್ ಪಿ ಸರ್ಕಾರದ ಅವಧಿಯಲ್ಲೇ ಸ್ಥಾಪಿಸಲಾಗಿತ್ತು," ಎಂದು ಅಖಿಲೇಶ್ ಯಾದವ್ ದೂರಿದ್ದಾರೆ.
ರಾಜ್ಯದಲ್ಲಿ ಜನರು ಅಸಮಾಧಾನಗೊಂಡಿದ್ದು, ಬಿಜೆಪಿ ಸರ್ಕಾರವನ್ನು ಬುಡಮೇಲು ಮಾಡುವುದಕ್ಕೆ ಕಾತುರರಾಗಿ ಎದುರು ನೋಡುತ್ತಿದ್ದಾರೆ. 350 ಎನ್ನುವುದು ಕೇವಲ ಒಂದು ಅಂಕಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ನಮ್ಮ ಸರ್ಕಾರದ ಅವಧಿಯಲ್ಲೇ ಹೆಚ್ಚಾಗಿ ನಡೆದಿವೆ. 2017ರಲ್ಲಿ ಬಿಜೆಪಿ ಮತ್ತು ಸುಳ್ಳು ಭರವಸೆಗಳನ್ನು ನಂಬಿ ತಾವು ಮೂರ್ಖರಾದೆವು ಎಂಬುದರ ಬಗ್ಗೆ ಜನರಿಗೆ ಜ್ಞಾನೋದಯವಾಗಿದೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.