ತುಲಾ ಸಂಕ್ರಮಣದಂದು ಕೊಡಗಿನಲ್ಲಿ ಬೊತ್ತು ನೆಡುವುದೇಕೆ? ಏನಿದರ ವೈಶಿಷ್ಟ್ಯ?
ಮಡಿಕೇರಿ, ಅಕ್ಟೋಬರ್ 16: ಕೊಡಗಿನಲ್ಲಿ ತುಲಾಸಂಕ್ರಮಣದಂದು ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವವಾಗುವುದರ ಜತೆಗೆ ತನ್ನದೇ ಆಚರಣೆಯೂ ಇಲ್ಲಿ ನಡೆಯುತ್ತದೆ. ಹೇಳಿ ಕೇಳಿ ಕೊಡಗಿನ ಮಂದಿ ಕೃಷಿಯೊಂದಿಗೆ ಬದುಕುವವರು ಹೀಗಾಗಿ ಗದ್ದೆ ಭೂಮಿಯನ್ನೇ ಪೂಜಿಸಿಕೊಂಡು ಬರುತ್ತಾರೆ. ಅದರಂತೆ ತೀರ್ಥೋದ್ಭವಕ್ಕೆ ಮೊದಲು ಕಾಡಿನಲ್ಲಿ ಸಿಗುವ ಬೊತ್ತು(ಬೆಚ್ಚು) ಎಂಬ ಸಸ್ಯದ ಕಾಂಡವನ್ನು ತಂದು ಅದಕ್ಕೆ ಕಾಡಿನಲ್ಲೇ ಸಿಗುವ ಬೆಚ್ಚು ಬಳ್ಳಿಯನ್ನು ಸಿಕ್ಕಿಸಿ ಗದ್ದೆಗೆ ನೆಡುವ ಸಂಪ್ರದಾಯ ಇಲ್ಲಿದೆ.
ಇದೊಂದು ಸಂಪ್ರದಾಯ ಅಚ್ಚರಿ ಹುಟ್ಟಿಸಿದರೂ ಇದರ ಹಿಂದೆ ತನ್ನದೇ ಆದ ನಂಬಿಕೆಯೂ ಇಲ್ಲದಿಲ್ಲ. ತೀರ್ಥೋದ್ಭವದ ಬಳಿಕ ಅಂದರೆ ಅ.18 ಮುಂಜಾನೆ ಬ್ರಾಹ್ಮಿ ಮೂಹೂರ್ತದಲ್ಲಿ ಭತ್ತದ ಗದ್ದೆಯಲ್ಲಿ ದೋಸೆಯಿಟ್ಟು ದೀಪಹಚ್ಚಿ ಬೆಳೆಚೆನ್ನಾಗಿ ಬೆಳೆದು ಫಸಲು ಬರಲಿ ಎಂದು ಪ್ರಾರ್ಥಿಸುತ್ತಾ ಕಬ್ಬೆಚ್ಚು ಕಾಯಿಬಳ್ಳಿ ಕಾವೋ ಕಾವೋ ಎಂದು ಜೋರಾಗಿ ಕೂಗುವ ಸಂಪ್ರದಾಯವೂ ಇದೆ. ಇದನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದು ಈಗಲೂ ಮುಂದುವೆರೆಸಿಕೊಂಡು ಹೋಗಲಾಗುತ್ತಿದೆ.

ಏನಿದು ಬೊತ್ತು? ಎಂಬ ಪ್ರಶ್ನೆ ಕಾಡಬಹುದು. ಆದರೆ ಈ ಸಸ್ಯ ಕೊಡಗಿನ ಕಾಡಿನಲ್ಲಿ, ತೋಟದಲ್ಲಿ ಹೇರಳವಾಗಿ ಸಿಗುತ್ತದೆ. ಈ ಬೊತ್ತು ಎಂಬ ಮರದ ಕಾಂಡಗಳನ್ನು ಕಡಿದು ತಂದು ನಾಲ್ಕೈದು ಅಡಿಯಷ್ಟು ಉದ್ದಕ್ಕೆ ಕತ್ತರಿಸಿ ಅದರ ಮೇಲೆ ಮತ್ತು ಕೆಳಭಾಗದ ಸಿಪ್ಪೆಯನ್ನು ತೆಗೆದು ಬಳಿಕ ಕಾಡಿನಲ್ಲೆ ಹಬ್ಬಿ ಬೆಳೆಯುವ ಒಂದು ಬಗೆಯ ಬಳ್ಳಿಯನ್ನು ತಂದು ಸುರುಳಿಯಾಕಾರದಲ್ಲಿ ಸುತ್ತಿ ಕಾಂಡಕ್ಕೆ ಸಿಕ್ಕಿಸಿ ಗದ್ದೆ, ತೋಟ, ಮನೆಯ ಮುಂಭಾಗ, ದನದ ಕೊಟ್ಟಿಗೆ ಹೀಗೆ ಮುಖ್ಯ ಸ್ಥಳಗಳಲ್ಲಿ ನೆಟ್ಟು ಇದಕ್ಕೆ ಹೂವಿನ ಸಿಂಗಾರ ಮಾಡಲಾಗುತ್ತದೆ.
ಸಂಪ್ರದಾಯದ ಹಿಂದಿದೆ ದಂತ ಕಥೆ
ಇನ್ನು ಗದ್ದೆಗಳ ಪೈಕಿ ದೊಡ್ಡ ಗದ್ದೆಯಲ್ಲಿ ಅಕ್ಕಪಕ್ಕದಲ್ಲಿ ಬೊತ್ತನ್ನು ಚುಚ್ಚಿ ಅದಕ್ಕೆ ಬಳ್ಳಿಯನ್ನು ಸುತ್ತಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಬೆಳಗ್ಗಿನ ಜಾವ ದೋಸೆ, ತುಪ್ಪ, ಬೆಲ್ಲ, ಸಕ್ಕರೆ, ಬಾಳೆಹಣ್ಣು ಮೊದಲಾದವುಗಳನ್ನು ಇಟ್ಟು ದೀಪ ಹಚ್ಚಿ ಕಾವೇರಿ ಮಾತೆಯನ್ನು ಪ್ರಾರ್ಥಿಸಿ ಉತ್ತಮ ಬೆಳೆಯಾಗಲಿ ಎಂದು ಬೇಡಿಕೊಳ್ಳಲಾಗುತ್ತದೆ. ಗದ್ದೆಗೆ ಬೊತ್ತು ನೆಡುವ ಸಂಪ್ರದಾಯದ ಬಗ್ಗೆ ಹಿರಿಯರು ಹಲವು ರೀತಿಯ ದಂತಕಥೆಗಳನ್ನು ಹೇಳುತ್ತಾರೆ. ಅದೇನೆಂದರೆ ದ್ವಾಪರಯುಗದಲ್ಲಿ ಪಾಂಡವರು ವನವಾಸಕ್ಕೆ ತೆರಳುವ ಮುನ್ನ ಜಾಗವನ್ನು ಕಾವೇರಮ್ಮನಿಗೆ ನೀಡಿ ಹೋಗಿದ್ದರಂತೆ.
ಆದರೆ ವನವಾಸ ಮುಗಿಸಿ ಮರಳಿ ಬಂದಾಗ ಇಲ್ಲಿನ ಕೊಡವರು ಭತ್ತದ ನಾಟಿ ಮಾಡಿ ಬೊತ್ತು ನೆಟ್ಟಿದ್ದರಂತೆ. ಹೀಗಾಗಿ ಈ ಬಾರಿ ಬೊತ್ತು ನೆಟ್ಟಿದ್ದೇವೆ ಮುಂದಿನ ಬಾರಿ ಬನ್ನಿ ಎಂದು ಕಳುಹಿಸಿದ್ದರೆಂದೂ ಅದೇ ಪ್ರತಿ ಬಾರಿಯೂ ನಡೆಯುತ್ತಾ ಬಂತೆಂದೂ ಹೇಳುತ್ತಾರೆ ಮತ್ತೆ ಕೆಲವರು ವನವಾಸಕ್ಕೆ ತೆರಳುವ ಮುನ್ನ ತಮ್ಮ ಜಾಗದ ಗುರುತಿಗಾಗಿ ಪಾಂಡವರು ಬೊತ್ತು ಚುಚ್ಚಿ ಹೋದರೆಂದೂ ಹೇಳುತ್ತಾರೆ. ಇನ್ನು ಹಬ್ಬದ ದಿನ ಮನೆಗಳಲ್ಲಿ ದೋಸೆ ಮತ್ತು ಸಿಹಿಕುಂಬಳ ಕಾಯಿ ಸಾರು ಮಾಡುವುದು. ಇಲ್ಲಿನ ವಿಶೇಷತೆಯಾಗಿದೆ.

ಎಂದಿಗೂ ಬದಲಾಗದ ಸಂಪ್ರದಾಯ
ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಈ ಸಂದರ್ಭದಲ್ಲಿ ಇಡೀ ಕೊಡಗು ಹಸಿರಿನಿಂದ ಕಂಗೊಳಿಸುತ್ತಾ ನಿಸರ್ಗ ಸುಂದರತೆ ಎಲ್ಲೆಡೆ ಲಾಸ್ಯವಾಡುತ್ತಿರುತ್ತದೆ. ಜತೆಗೆ ಮಳೆಯೂ ಇರುತ್ತದೆ. ಈ ಸಮಯದಲ್ಲಿ ಭತ್ತದ ಬೆಳೆ ಬೆಳವಣಿಗೆಯ ವೇಗ ಪಡೆದುಕೊಂಡು ಭತ್ತದ ಬಯಲು ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇತ್ತೀಚೆಗೆ ಹವಾಮಾನದ ವೈಪರೀತ್ಯದಿಂದಾಗಿ ವಾತಾವರಣದಲ್ಲೊಂದಷ್ಟು ಬದಲಾವಣೆಯಾಗಿದೆ. ಹೀಗಾಗಿ ಮೊದಲಿನಂತಿಲ್ಲ.
ಈಗ ಕಣ್ಣು ಹಾಯಿಸಿದುದ್ದಕ್ಕೂ ಕಾಣುತ್ತಿದ್ದ ಭತ್ತದ ಗದ್ದೆಗಳ ಪೈಕಿ ಕೆಲವು ತೋಟಗಳಾಗಿ ಮಾರ್ಪಟ್ಟರೆ, ಮತ್ತೆ ಕೆಲವು ಕೃಷಿ ಮಾಡಲು ಸಾಧ್ಯವಾಗದೆ ಪಾಳು ಬಿದ್ದಿದೆ. ಅದೇನೆ ಬದಲಾವಣೆಯಾದರೂ ಇಲ್ಲಿನವರು ಹಿಂದಿನವರು ನಡೆಸಿಕೊಂಡು ಬಂದ ಸಂಸ್ಕೃತಿ ಸಂಪ್ರದಾಯವನ್ನು ಮಾತ್ರ ಬಿಟ್ಟಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ.











Click it and Unblock the Notifications