ವಿಜಯಪುರ-ಮಂಗಳೂರು ರೈಲು; ಪ್ರಯಾಣಿಕರ ಒತ್ತಾಯಕ್ಕೆ ಮಣಿದ ಇಲಾಖೆ
ವಿಜಯಪುರ, ಜನವರಿ 10: ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರ ಒತ್ತಾಯಕ್ಕೆ ರೈಲ್ವೆ ಇಲಾಖೆ ಮಣಿದಿದೆ. ವಿಜಯಪುರ-ಮಂಗಳೂರು ನಡುವಿನ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲು ವಿಸ್ತರಣೆ ಮಾಡಲು ಒಪ್ಪಿಗೆ ದೊರೆತಿದ್ದು, ಶೀಘ್ರವೇ ಆದೇಶ ಪ್ರಕಟವಾಗಲಿದೆ.
ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ವಿಜಯಪುರ-ಮಂಗಳೂರು ನಡುವಿನ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಮಂಗಳೂರು ಜಂಕ್ಷನ್ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ. ಆದರೆ ಈ ರೈಲನ್ನು ಕಾಯಂಗೊಳಿಸಬೇಕು ಎನ್ನುವ ಬೇಡಿಕೆ ಈಡೇರಿಲ್ಲ.

ಡಿಸೆಂಬರ್ 27ರಂದು ನೈಋತ್ಯ ರೈಲ್ವೆ ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ವಿಜಯಪುರ-ಮಂಗಳೂರು ಜಂಕ್ಷನ್ (07377) ರೈಲು ಸೇವೆ 1/1/2024 ರಿಂದ 31/3/2024ರ ತನಕ ವಿಸ್ತರಿಸಲಾಗಿದೆ. ಮಂಗಳೂರು ಜಂಕ್ಷನ್-ವಿಜಯಪುರ (07378) ರೈಲು 2/1/2024 ರಿಂದ 1/4/2024ರ ತನಕ ವಿಸ್ತರಣೆಯಾಗಿದೆ.
ವೇಳಾಪಟ್ಟಿಯಲ್ಲಿ ಬದಲಾವಣೆ ಇಲ್ಲ; ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಿದರೂ ಸಹ ಈಗಿರುವ ವೇಳಾಪಟ್ಟಿಯ ಅನ್ವಯವೇ ರೈಲು ಸಂಚಾರ ನಡೆಸಲಿದೆ ಎಂಬ ಮಾಹಿತಿ ಇದೆ. ಆದರೆ ಅಧಿಕೃತ ಆದೇಶ ಪ್ರಕಟವಾದ ಬಳಿಕ ಮಾಹಿತಿ ತಿಳಿಯಲಿದೆ.
ವಿಜಯಪುರ-ಮಂಗಳೂರು ಜಂಕ್ಷನ್ (07377) ರೈಲು ಸಂಜೆ 4 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ಜಂಕ್ಷನ್ಗೆ ಬರಲಿದೆ. ಮಂಗಳೂರು ಜಂಕ್ಷನ್ನಿಂದ 9.32ಕ್ಕೆ ಹೊರಟು 9.50ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.
ಮಂಗಳೂರು ಜಂಕ್ಷನ್-ವಿಜಯಪುರ (07378) ರೈಲಿನ ವೇಳಾಪಟ್ಟಿಯಲ್ಲಿಯೂ ಯಾವುದೇ ಬದಲಾವಣೆ ಇಲ್ಲ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ರೈಲು ಮಧ್ಯಾಹ್ನ 2.35ಕ್ಕೆ ಹೊರಟು, 2.45ಕ್ಕೆ ಮಂಗಳೂರು ಜಂಕ್ಷನ್ಗೆ ಆಗಮಿಸಲಿದೆ. ಮರುದಿನ ನಿಗದಿತ ಸಮಯಕ್ಕೆ ವಿಜಯಪುರ ನಿಲ್ದಾಣಕ್ಕೆ ತಲುಪಲಿದೆ.
ವಿಜಯಪುರ-ಮಂಗಳೂರು ನಡುವಿನ ರೈಲನ್ನು ಮಂಗಳೂರು ಜಂಕ್ಷನ್ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಪ್ರಯಾಣಿಕರು, ಜನಪ್ರತಿನಿಧಿಗಳು, ಬೇಡಿಕೆ ಇಟ್ಟಿದ್ದರು. ರೈಲನ್ನು ಕಾಯಂಗೊಳಿಸಬೇಕು, ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಆನ್ಲೈನ್ ಸಹಿ ಅಭಿಯಾನವೂ ನಡೆದಿತ್ತು.
ಕೆಲವು ದಿನಗಳ ಹಿಂದೆ ಪಾಲಕ್ಕಾಡ್ ವಿಭಾಗ ಮಟ್ಟದ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಮಂಗಳೂರು-ಮುಂಬೈ ಸಿಎಸ್ಟಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್, ಮಂಗಳೂರು-ಬೆಂಗಳೂರು ಎಕ್ಸ್ಪ್ರೆಸ್, ವಿಜಯಪುರ-ಮಂಗಳೂರು ಪ್ರತಿದಿನದ ಎಕ್ಸ್ಪ್ರೆಸ್ ರೈಲನ್ನು ಮಂಗಳೂರು ಜಂಕ್ಷನ್ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು.
ಆದರೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ಲಭ್ಯತೆಯನ್ನು ಮುಂದಿಟ್ಟುಕೊಂಡು ರೈಲ್ವೆ ಇಲಾಖೆ ಅಧಿಕಾರಿಗಳು ಈ ಪ್ರಸ್ತಾವನೆಯನ್ನು ತಳ್ಳಿ ಹಾಕಿದ್ದರು. ಮಂಗಳೂರು ಜಂಕ್ಷನ್ ತನಕ ಸಾಗುವ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
2021ರಿಂದ ಮಂಗಳೂರು ಮತ್ತು ವಿಜಯಪುರ ನಡುವೆ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಡಿಸೆಂಬರ್ 1, 2021ರಂದು ವಿಜಯಪುರದಿಂದ ಮತ್ತು ಡಿಸೆಂಬರ್ 2ರಿಂದ ಮಂಗಳೂರಿನಿಂದ ಈ ರೈಲು ಸೇವೆ ಆರಂಭವಾಗಿದೆ. ಆದರೆ ರೈಲು ಇನ್ನೂ ತತ್ಕಾಲ್ ಮಾದರಿಯಲ್ಲಿಯೇ ಇದೆ. ಈ ರೈಲನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ತತ್ಕಾಲ್ ಮಾದರಿ ರೈಲಾದ ಕಾರಣ ದರಗಳು ಹೆಚ್ಚಿವೆ.
ರೈಲು ತತ್ಕಾಲ್ ಮಾದರಿಯಲ್ಲಿ ಇರುವುದರಿಂದ ರೈಲಿನ ದರಗಳು ಹೆಚ್ಚಿದೆ, ಇದರಿಂದ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ. ಈ ರೈಲಿನಲ್ಲಿ ಮಂಗಳೂರು, ಉಡುಪಿ, ಮಣಿಪಾಲಕ್ಕೆ ಆರೋಗ್ಯ ಸೇವೆ ಪಡೆಯಲು, ವ್ಯಾಸಂಗಕ್ಕಾಗಿ ಹಲವಾರು ಜನರು ಪ್ರಯಾಣಿಸುತ್ತಾರೆ. ಅಲ್ಲದೇ ಕುಕ್ಕೆ ಸುಬ್ರಮಣ್ಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಭಕ್ತರು ಆಗಮಿಸುತ್ತಾರೆ. ಈ ರೈಲನ್ನು ಕಾಯಂಗೊಳಿಸಿದರೆ ದರಗಳು ಕಡಿಮೆಯಾಗಲಿದೆ. ಆಗ ಹೆಚ್ಚಿನ ಜನರು ಸಂಚಾರ ನಡೆಸಲು ಅನುಕೂಲವಾಗಲಿದೆ.












Click it and Unblock the Notifications