ರಮ್ಮನಹಳ್ಳಿ ಜಾತ್ರೆಯಲ್ಲಿ ಹುಡ್ಗರು ಹುಡ್ಗೀರು ಆಗ್ತಾರೆ..ಹೀಗೇಕೆ ಮಾಡ್ತಾರೆ ಗೊತ್ತಾ?
ಮೈಸೂರು, ಮಾರ್ಚ್ 31: ಪ್ರತಿ ವರ್ಷವೂ ಬೇಸಿಗೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯ ವ್ಯಾಪ್ತಿಯಲ್ಲಿ ಗ್ರಾಮ ದೇವತೆಯಾದ ಮಾರಮ್ಮನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಆಚರಣೆ ಊರಿನಿಂದ ಊರಿಗೆ ವಿಭಿನ್ನವಾಗಿರುತ್ತದೆ. ಅದರಲ್ಲೂ ಮೈಸೂರು ನಗರಕ್ಕೆ ಸಮೀಪವಿರುವ ರಮ್ಮನಹಳ್ಳಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವತೆ ಲಕ್ಷ್ಮಿದೇವಿ ಮಾರಮ್ಮನ ಜಾತ್ರೆ ವಿಭಿನ್ನ, ವಿಶಿಷ್ಟವಾಗಿರುತ್ತದೆ.
ಇಲ್ಲಿ ಸುಮಾರು 15 ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಹಲವು ಕಟ್ಟು, ಕಟ್ಟಳೆಗಳಿದ್ದು ಅದೆಲ್ಲವನ್ನೂ ಅಂದಿನಿಂದ ಇಂದಿನವರೆಗೆ ಎಲ್ಲರೂ ಸೇರಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಹಬ್ಬಕ್ಕೆ ಮುನ್ನ ಹದಿನಾಲ್ಕು ಯಜಮಾನರು ಸೇರಿದಂತೆ ಊರಿನ ಮುಖಂಡರು ಸೇರಿ ಹಬ್ಬದ ಆಚರಣೆಯ ತೀರ್ಮಾನ ಮಾಡುತ್ತಾರೆ. ಬಳಿಕ ಗ್ರಾಮಸ್ಥರೆಲ್ಲರೂ ಜಾತಿ, ಧರ್ಮ ಮರೆತು ಒಂದಾಗಿ ಆಚರಣೆ ಮಾಡಿ ಗ್ರಾಮದೇವತೆ ಲಕ್ಷ್ಮಿದೇವಿ ಮಾರಮ್ಮನ ಸಂತುಷ್ಠಗೊಳಿಸುತ್ತಾರೆ.

ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯ ಪ್ರಮುಖ ವಿಶೇಷತೆಗಳೇನು ಎನ್ನುವುದನ್ನು ನೋಡಿದ್ದೇ ಆದರೆ ಈ ಹಬ್ಬದಲ್ಲಿ ಪುರುಷರು ಮಹಿಳೆಯರ ವೇಷ ಧರಿಸಿ ಕೈನಲ್ಲಿ ದೊಣ್ಣೆ ಹಿಡಿದು ತಮಟೆಗೆ ತಕ್ಕಂತೆ ಕುಣಿಯುವುದು ಇಲ್ಲಿನ ಸಂಪ್ರದಾಯವಾಗಿದೆ. ಆ ಮೂಲಕ ಮಾರಮ್ಮನನ್ನು ಸಂತೃಪ್ತಗೊಳಿಸುವುದು ಈ ಆಚರಣೆಯ ಉದ್ದೇಶವಾಗಿದೆ. ಹಬ್ಬದ ಸಂದರ್ಭ ಇಡೀ ರಮ್ಮನಹಳ್ಳಿ ತಳಿರು ತೋರಣ, ವಿದ್ಯುದ್ದೀಪಗಳಿಂದ ಕಂಗೊಳಿಸುತ್ತದೆ.
15 ದಿನ ನಡೆಯುವ ವಿಶಿಷ್ಟ ಜಾತ್ರೆ
ಹಬ್ಬದ ಪ್ರಯುಕ್ತ ಸುಮಾರು ಹದಿನೈದು ದಿನಗಳ ಕಾಲ ಯುವಕರು ಯುವತಿಯರಂತೆ ಸೀರೆ, ಚೂಡಿದಾರ್, ಜೀನ್ಸ್, ಮಿಡಿ ಹೀಗೆ ವಿವಿಧ ಬಗೆಯ ವೇಷ, ಭೂಷಣಗಳನ್ನು ಧರಿಸಿ ಕುಣಿಯುತ್ತಾ ಹಬ್ಬಕ್ಕೆ ತಯಾರಿ ನಡೆಸುತ್ತಾರೆ. ಹಬ್ಬದ ದಿನ ಮುಂಜಾನೆ 5.30ರಿಂದ ಹಬ್ಬದ ಆಚರಣೆ ಆರಂಭವಾಗಿ ಗ್ರಾಮದ ದೇವಸ್ಥಾನದಲ್ಲಿ ಗ್ರಾಮಸ್ಥರೆಲ್ಲ ನೆರೆದು ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಹಬ್ಬದ ವಿಧಿವಿಧಾನಗಳು ಆರಂಭಗೊಳ್ಳುತ್ತವೆ.

ಹರಕೆ ಹೊತ್ತವರು ಗ್ರಾಮದ ಸಮೀಪವಿರುವ ಕೊಳದಲ್ಲಿ ಬಾಯಿಬೀಗ ಹಾಕಿದರೆ, ಯುವಕರು ಯುವತಿಯರ ವೇಷ ಧರಿಸಿ ಕುಣಿದರೆ, ವಯಸ್ಕರು ದೊಣ್ಣೆ ಹಿಡಿದು ವರಸೆ ನಡೆಸುತ್ತಾರೆ. ಇದೇ ವೇಳೆ ದೇವಿಗೆ ಹೂ, ಕುಂಕುಮಾರ್ಚನೆ ನಡೆಸುತ್ತಾರೆ. ನಂತರ ದೇವರ ಅಲಂಕೃತಗೊಂಡ ಕಳಸಗಳನ್ನು ಹೆಂಗಳೆಯರು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಾರೆ. ಈ ಸಂದರ್ಭ ಮನೆಮನೆಗಳಲ್ಲಿ ಕಳಸಕ್ಕೆ ಪೂಜೆ ಸಲ್ಲಿಸಲಾಗುತ್ತದೆ.
ತಮಟೆ ಸದ್ದಿಗೆ ದೊಣ್ಣೆ ಬೀಸುತ್ತಾ ನೃತ್ಯ
ಜಾತ್ರೆಗೆ ಕಳೆಕಟ್ಟುವುದು ಮಧ್ಯಾಹ್ನ ಮೂರರ ನಂತರವೇ.. ಈ ವೇಳೆ ದೊಣ್ಣೆಗಳನ್ನು ಹಿಡಿದ ಪೌರಾಣಿಕ ನಾಟಕಧಾರಿಗಳ ವೇಷ ಸೇರಿದಂತೆ ನಾನಾ ವೇಷಗಳ ತೊಟ್ಟ ಯುವ ಸಮುದಾಯ ತಮಟೆಯ ಸದ್ದಿಗೆ ದೊಣ್ಣೆಗಳನ್ನು ಬೀಸುತ್ತಾ ನರ್ತಿಸುತ್ತಾರೆ. ಈ ಸುಂದರ ದೃಶ್ಯಗಳನ್ನು ನೋಡಲೆಂದೇ ಸುತ್ತಮುತ್ತಲಿನ ಗ್ರಾಮದ ಜನರು ಅಪಾರ ಜನಸಂಖ್ಯೆಯಲ್ಲಿ ನೆರೆಯುತ್ತಾರೆ. ಹತ್ತು ದಿನಗಳಿಂದಲೂ ಪುರುಷರು ನೃತ್ಯ ಮಾಡಿದರೆ ಜಾತ್ರೆಯ ಕೊನೆಯ ದಿನ ಮಹಿಳೆಯರು ಕೂಡ ಹೆಜ್ಜೆ ಹಾಕುವುದು ವಿಶೇಷವಾಗಿದೆ. ಇದೇ ವೇಳೆ ಗ್ರಾಮದಲ್ಲಿ ನಾಟಕ ಪ್ರದರ್ಶನವೂ ನಡೆಯುತ್ತದೆ.

ಉತ್ಸವದ ಆಚರಣೆಯ ಸಂಪ್ರದಾಯವನ್ನು ನೋಡುವುದಾದರೆ ಗ್ರಾಮ ದೇವತೆ ಲಕ್ಷ್ಮೀ ದೇವಿಯ ಉತ್ಸವ ಮೂರ್ತಿಯನ್ನು ಶ್ರೀರಂಗಪಟ್ಟಣದ ಚಂದಗಾಲು ಗ್ರಾಮದ ಹೊಳೆಯಲ್ಲಿ ಶುಚಿಗೊಳಿಸಿ ಮೆರವಣಿಗೆ ಮೂಲಕ ಗ್ರಾಮಕ್ಕೆ ತಂದು ಸಂಜೆ ಮೆರವಣಿಗೆ ನಡೆಸಲಾಗುತ್ತದೆ. ಹಬ್ಬದ ಹಿನ್ನಲೆಯಲ್ಲಿ 15 ದಿನಗಳ ಕಾಲ ಗ್ರಾಮದ ಸುತ್ತಮುತ್ತ ಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗುತ್ತದೆ.
ಶತಮಾನಗಳ ಇತಿಹಾಸದ ಜಾತ್ರೆ
ಇನ್ನು ಮನೆಯಲ್ಲಿ ಮೆಣಸಿನಕಾಯಿ ಸುಡುವುದಾಗಲೀ, ಒಗ್ಗರಣೆ ಹಾಕುವುದಾಗಲೀ, ದೇವಸ್ಥಾನದ ಆವರಣದಲ್ಲಿ ಪಾದರಕ್ಷೆಗಳನ್ನು ಹಾಕಿ ಓಡಾಡುವುದಾಗಲೀ ಮಾಡುವಂತಿಲ್ಲ. ಇದನ್ನು ಹಿಂದಿನಿಂದಲೂ ಗ್ರಾಮಸ್ಥರು ಆಚರಿಸಿಕೊಂಡು ಬಂದಿದ್ದಾರೆ. ಗ್ರಾಮಸ್ಥರು ಹೇಳುವಂತೆ ಈ ಹಬ್ಬದ ಆಚರಣೆ ಇಂದು ನಿನ್ನೆಯದಾಗಿರದೆ, ಶತಮಾನಗಳ ಇತಿಹಾಸವಿದೆಯಂತೆ. ಹಿರಿಯರು ಆಚರಣೆ ಮಾಡಿಕೊಂಡು ಬಂದಿದ್ದನ್ನು ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ












Click it and Unblock the Notifications