Shakti Yojana: ಮಂಗಳೂರಿನಲ್ಲಿ ಟ್ರೈನ್ಗೆ ಕೈಕೊಟ್ಟು, KSRTC ಬಸ್ ಏರಿದ ಮಹಿಳಾ ಮಣಿಗಳು
ಮಂಗಳೂರು, ಜೂನ್, 12: ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಭಾನುವಾರ (ಜೂನ್ 11) ಚಾಲನೆ ದೊರೆತಿದೆ. ಅದೇ ರೀತಿ ಮಂಗಳೂರಿನಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಕ್ತಿಯೋಜನೆಗೆ ಚಾಲನೆ ನೀಡಿದ್ದರು. ಉಚಿತ ಪ್ರಯಾಣದ ಕಾರಣಕ್ಕಾಗಿ ಮಹಿಳೆಯರು ಖುಷಿಯಿಂದ ಬಸ್ ಪ್ರಯಾಣ ಮಾಡಿದ್ದಾರೆ. ಇಂದು ಕೂಡ ಬೆಂಗಳೂರಿಗೆ ರೈಲಿನಲ್ಲಿ ಹೋಗೋಕೆ ಸಿದ್ಧರಾಗಿ ರೈಲ್ವೇ ನಿಲ್ದಾಣಕ್ಕೆ ತೆರಳಿದ್ದ ತುಂಬಾ ಜನ ಮಹಿಳೆಯರು ಮತ್ತೇ ಸರ್ಕಾರಿ ಬಸ್ ನಿಲ್ದಾಣದ ಕಡೆ ಮುಖ ಮಾಡಿದ್ದಾರೆ.
KSRTC ಬಸ್ ನಿಲ್ದಾಣದಲ್ಲಿ ಮಹಿಳೆಯರ ದಂಡು
ಹಾಗೆಯೇ ಬೆಂಗಳೂರಿನ ನೆಲಮಂಗಲ ಮೂಲದ ಮಹಿಳೆಯರು ಪ್ರವಾಸಕ್ಕಾಗಿ ಮಂಗಳೂರಿಗೆ ಬಂದಿದ್ದರು. ಮಂಗಳೂರು ಸುತ್ತಾಡಿ ನಿನ್ನೆ ಮಧ್ಯಾಹ್ನದ ರೈಲು ಹತ್ತಿ ಬೆಂಗಳೂರು ತೆರಳುವರಿದ್ದರು. ಆದರೆ ರೈಲ್ವೆ ನಿಲ್ದಾಣದಲ್ಲಿ ಉಚಿತ ಬಸ್ ವಿಚಾರ ಮಹಿಳೆಯರ ಕಿವಿಗೆ ಬಿದ್ದಿದೆ. ತಡಮಾಡದೇ ನೇರ ನಗರದ ಲಾಲ್ಬಾಗ್ನಲ್ಲಿರುವ KSRTC ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಶಕ್ತಿ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆಯೇ ಮೊದಲ ಉಚಿತ ಬಸ್ನಲ್ಲಿ ಫ್ರೀ ಟಿಕೆಟ್ ಪಡೆದು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಮಹಿಳಾ ಪ್ರಯಾಣಿಕರು ಹೇಳಿದ್ದೇನು?
ಈ ಕುರಿತು ಮಾತನಾಡಿದ ಮಹಿಳಾ ಪ್ರಯಾಣಿಕರಾದ ಮುಬಿನ್ತಾಜ್, ಮಂಗಳೂರಿಗೆ ಬರುವಾಗ ಹಣ ಕೊಟ್ಟು ಟಿಕೆಟ್ ಪಡೆದು ಬಂದಿದ್ದೆವು. ಆದರೆ ಈಗ ಉಚುತವಾಗಿ ಬಸ್ನಲ್ಲಿ ಹೋಗುತ್ತಿದ್ದೇವೆ. ಇದರಿಂದ ತುಂಬಾ ಖುಷಿಯಾಗಿದೆ. ಉಚಿತ ಪ್ರಯಾಣದ ವ್ಯವಸ್ಥೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇನ್ನು ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಪ್ರಥಮ ಬಾರಿಗೆ ಭೇಟಿ ನೀಡಿದ ಸಂಧರ್ಭದಲ್ಲೇ ಐತಿಹಾಸಿಕ ಯೋಜನೆಗೆ ಚಾಲನೆ ನೀಡಿದ್ದು ಬಹಳ ಖುಷಿಯಾಗಿದೆ. ಬಹಳಷ್ಟು ಜನ ಕಾಂಗ್ರೆಸ್ ವೋಟ್ಗೋಸ್ಕರ ಈ ಯೋಜನೆ ಮಾಡಿದೆ. ಇದು ಜಾರಿಯಾಗಲ್ಲ ಎಂದು ಟೀಕೆ ಮಾಡಿದ್ದರು.
3ನೇ ಕ್ಯಾಬಿನೆಟ್ ಮೀಟಿಂಗ್ನಲ್ಲೇ ನಿರ್ಧಾರ
3ನೇ ಕ್ಯಾಬಿನೆಟ್ ಮೀಟಿಂಗ್ನಲ್ಲೇ 5 ಗ್ಯಾರೆಂಟಿಗಳ ಅನುಷ್ಠಾನದ ಬಗ್ಗೆ ನಿರ್ಧಾರ ಮಾಡಿದ್ದೆವು. ಇದು ಐತಿಹಾಸಿಕ ತೀರ್ಮಾನ, ಇದನ್ನು ಜಾರಿ ಮಾಡಲು ಧೈರ್ಯ ಬದ್ಧತೆ ಬೇಕು. ಇದರಿಂದ ಏನು ಪ್ರಯೋಜನೆ ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು ಎಂಬುವುದೇ ನಮ್ಮ ಉದ್ದೇಶವಾಗಿದೆ. ವಿಧಾನಸಭೆ, ಪಾರ್ಲಿಮೆಂಟ್ನಲ್ಲೂ ಮಹಿಳಾ ಮೀಸಲಾತಿ ಬರಬೇಕು.
ಸಾಮಾನ್ಯ ಮಹಿಳೆಯರು ಕೆಲಸಕ್ಕಾಗಿ ಬಸ್ನಲ್ಲಿ ಪ್ರಯಾಣಿಸುತ್ತಾರೆ. ಮಹಿಳೆಯರಿಗೆ ಉಳಿತಾಯವಾಗಲಿ ಎಂದು ಈ ಯೋಜನೇ ಜಾರಿ ಮಾಡಿದ್ದೇವೆ. ಇಲ್ಲಿನ ಸ್ಥಳೀಯ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮಕ್ಕೆ ಬಂದಿಲ್ಲ. ಅವರು ಮಹಿಳಾ ಪರ ಯೋಜನೆ ವಿರೋಧಿಸಲು ಸಾಧ್ಯವಿಲ್ಲ. ಆದರೆ ಇಲ್ಲಿಗೆ ಬಂದರೆ ಕಾಂಗ್ರೆಸ್ ಯೋಜನೆ ಹೊಗಳಬೇಕು ಅಂತಾ ಬಂದಿಲ್ಲ ಅನಿಸುತ್ತದೆ ಎಂದು ವ್ಯಂಗ್ಯವಾಡಿದರು.
ನಮ್ಮ ಯೋಜನೆಗಳನ್ನು ಹೊಗಳಲು ಇಷ್ಟವಿಲ್ಲದೇ ವೇದವ್ಯಾಸ ಕಾಮತ್ ಇಲ್ಲಿಗೆ ಬಂದಿಲ್ಲ. ಆದರೆ ಇದು ಸರ್ಕಾರದ ಯೋಜನೆ, ಎಲ್ಲರೂ ಒಟ್ಟಾಗಿ ಇರಬೇಕು. ಮುಂದಿನ ದಿನಗಳಲ್ಲಿ ಬೆಂಬಲ ಸಿಗಲಿದೆ ಅನ್ನುವ ವಿಶ್ವಾಸವಿದೆ ಎಂದು ಹೇಳಿದರು.












Click it and Unblock the Notifications