ಕೆಕೆಆರ್ಟಿಸಿ 'ಅಮೋಘವರ್ಷ' ಬಸ್ ಲೋಕಾರ್ಪಣೆ, ವಿಶೇಷತೆಗಳು
ಕಲಬುರಗಿ, ಸೆಪ್ಟೆಂಬರ್ 18; ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)ದ 'ಅಮೋಘವರ್ಷ' ಹೆಸರಿನ ಐಷಾರಾಮಿ ಹವಾನಿಯಂತ್ರಣ ಸಹಿತ ಮತ್ತು ಹವಾನಿಯಂತ್ರಣ ರಹಿತ ಬಸ್ಗಳಿಗೆ ಚಾಲನೆ ನೀಡಿದ್ದಾರೆ.
ಭಾನುವಾರ ಕಲಬುರಗಿ ನಗರದ ಡಿ. ಎ. ಆರ್. ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಬಸ್ ಸೇವೆಗೆ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿಸಿದರು.

ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 206.57 ಕೋಟಿ ರೂ. ಮತ್ತು ಕಲಬುರಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ 242.21 ಕೋಟಿ ರೂ. ಸೇರಿದಂತೆ ಒಟ್ಟು 448.78 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಕಲ್ಯಾಣದ ಪ್ರದೇಶ ಅಭಿವೃದ್ಧಿಯಾಗದ ಹೊರತು ನಾಡಿನ ಸಮಗ್ರ ಪ್ರಗತಿ ಅಸಾಧ್ಯ ಎಂದು ನಂಬಿರುವ ನಮ್ಮ ಸರ್ಕಾರ ಪ್ರಸಕ್ತ 2023-24ನೇ ಸಾಲಿನ ಆಯವ್ವಯದಲ್ಲಿ ದಾಖಲೆ ಪ್ರಮಾಣದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿಗೆ 5,000 ಕೋಟಿ ರೂ. ಘೋಷಿಸಲಾಗಿದೆ" ಎಂದರು.
"ಮಂಡಳಿ ಇನ್ನಷ್ಟು ದಕ್ಷತೆಯಿಂದ, ಪಾರದರ್ಶಕವಾಗಿ ಹಾಗೂ ಅಗತ್ಯತೆಗಳನ್ನು ಆಧರಿಸಿ ಯೋಜನೆಗಳ ಅನುಷ್ಠಾನಗೊಳಿಸುವ ಅಗತ್ಯವನ್ನು ನಮ್ಮ ಸರ್ಕಾರ ಮನಗಂಡಿದೆ. ಇದಕ್ಕಾಗಿ ಡಾ. ಅಜಯ್ ಸಿಂಗ್ ನೇತೃತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಮಂಡಳಿ ಸ್ಥಾಪಿಸಲಾಗಿದೆ. 371ಜೆ ಕಾಯ್ದೆ ಪರಿಣಾಮಕಾರಿಗಳ ಅನುಷ್ಟಾನದ ಮೇಲುಸ್ತುವಾರಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದೆ" ಎಂದು ಹೇಳಿದರು.
ಅಮೋಘವರ್ಷ ಬಸ್ ವಿಶೇಷತೆಗಳು; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 'ಅಮೋಘವರ್ಷ' ಹೆಸರಿನ ಬಸ್ಗೆ ಸಿದ್ದರಾಮಯ್ಯ ಚಾಲನೆ ನೀಡಿದರು. ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ 'ಕವಿರಾಜ ಮಾರ್ಗ' ಕೃತಿ ರಚಿಸಿದ ಕವಿ ಅಮೋಘವರ್ಷ ಹೆಸರಿನ ಈ ಬಸ್ ಜನರ ಸಂಚಾರಕ್ಕೆ ಸಹಕಾರಿಯಾಗಲಿದೆ.
ಕೆ. ಕೆ. ಆರ್. ಟಿ. ಸಿ. ಸಂಸ್ಥೆಯು 1800.35 ಲಕ್ಷ ರೂ. ಮೊತ್ತದಲ್ಲಿ ಈ ಬಸ್ಗಳನ್ನು ಖರೀದಿಸಿದೆ. 'ಅಮೋಘವರ್ಷ' ಬ್ರಾಂಡ್ನ 36 (ನಾನ್ ಎಸಿ) ಸ್ಲೀಪರ್ ಹಾಗೂ 4 (ಎಸಿ) ಸ್ಲೀಪರ್ ಬಸ್ಗಳಿಗೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದರು.
ಈ ಬಸ್ಗಳು 30 ಆಸನಗಳ ಸಾಮರ್ಥ್ಯ ಹೊಂದಿವೆ. ಬಸ್ ಸ್ವಯಂ ಚಾಲಿತ ಅಗ್ನಿ ನಂದಕ ಉಪಕರಣ, ಪ್ರತಿ ಸೀಟಿಗೆ ಕಿರು ಲಗೇಜ್, ಮೊಬೈಲ್/ ಲ್ಯಾಪ್ ಟಾಪ್ ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲ್ಯಾಂಪ್ ವ್ಯವಸ್ಥೆಯನ್ನು ಹೊಂದಿದೆ.
ಅತ್ಯಾಧುನಿಕವಾದ ವಿನ್ಯಾಸಗಳನ್ನು ಈ ಬಸ್ಗಳು ಒಳಗೊಂಡಿವೆ. ಏರ್ ಸಸ್ಪೆಕ್ಷನ್ ಸಿಸ್ಟಮ್, ಪಬ್ಲಿಕ್ ಇನ್ಫಾರ್ಮೇಷನ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಅಲಾರ್ಮ್ ಸೌಲಭ್ಯಗಳನ್ನು ಬಸ್ ಒಳಗೊಂಡಿದೆ. ಈ ಬಸ್ಗಳು ಯಾವ ಮಾರ್ಗದಲ್ಲಿ ಸಂಚಾರ ನಡೆಸಲಿವೆ ಎಂಬುದು ಶೀಘ್ರವೇ ತಿಳಿಯಲಿದೆ.
ಆಗಸ್ಟ್ ತಿಂಗಳಿನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 'ಕಲ್ಯಾಣ ರಥ' ಹೆಸರಿನ ಐಷರಾಮಿ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿತ್ತು. ಬೆಂಗಳೂರು-ಸಿಂಧನೂರು ನಡುವಿನ ಈ ಬಸ್ ಸೇವೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದರು.
'ಕಲ್ಯಾಣ ರಥ' ಬ್ರಾಂಡ್ನ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್ ಅನ್ನು ಹೊಸದಾಗಿ ಸಂಸ್ಥೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ಬಸ್ ಪ್ರತಿದಿನ ಸಿಂಧನೂರಿನಿಂದ ರಾತ್ರಿ 10 ಗಂಟೆಗೆ ಹೊರಟು ಕಾರಟಗಿ-ಗಂಗಾವತಿ- ಬೂದುಗುಂಪ ಕ್ರಾಸ್-ಹೊಸಪೇಟೆ-ಕೂಡ್ಲಿಗಿ-ಹಿರಿಯೂರು-ತುಮಕೂರು ಮಾರ್ಗವಾಗಿ ಮರುದಿನ ಬೆಂಗಳೂರಿಗೆ 5.30ಕ್ಕೆ ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 10.15ಕ್ಕೆ ಹೊರಟು ಮರುದಿನ ಬೆಳಗ್ಗೆ 5.45ಕ್ಕೆ ಸಿಂಧನೂರು ತಲುಪಲಿದೆ.
ಈ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಕ್ಲಾಸ್ ಬಸ್ 40 ಆಸನಗಳ ವ್ಯವಸ್ಥೆ ಹೊಂದಿದೆ. 350 ಬಿ.ಎಸ್-6 ಇಂಜಿನ್ ಹೊಂದಿದ್ದು, ಬಸ್ಸಿಗೆ ವಿಶಿಷ್ಟ ಸಸ್ಪೆಕ್ಷನ್ಗಳನ್ನು ಅಳವಡಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದ್ದು, ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆ ಇದೆ.












Click it and Unblock the Notifications