ಕರ್ನಾಟಕ ಕರಾವಳಿ: ವಂದೇ ಭಾರತ್ ಸೇರಿ ಇತರ ರೈಲು ಬೇಡಿಕೆಗಳು
ಮಂಗಳೂರು, ಜುಲೈ 04: ಕರ್ನಾಟಕದ ಕರಾವಳಿ ಭಾಗಕ್ಕೆ ವಂದೇ ಭಾರತ್ ರೈಲು ಸಂಪರ್ಕ ಸೇರಿದಂತೆ ವಿವಿಧ ಬೇಡಿಕೆಗಳಿವೆ. ಈ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದರು.
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ ಅವರನ್ನು ಭೇಟಿಯಾದ ಕೋಟ ಶ್ರೀನಿವಾಸ ಪೂಜಾರಿ ಕರಾವಳಿಯ ರೈಲ್ವೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು, ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.

ಯಾವ-ಯಾವ ಯೋಜನೆಗಳು
* ಈಗಾಗಲೇ ಇರುವ ಮಂಗಳೂರು-ಮಡಗಾಂವ್ (ಗೋವಾ) ಸೂಪರ್ ಫಾಸ್ಟ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಮುಂಬೈಯವರೆಗೆ ವಿಸ್ತರಿಸಬೇಕು ಮತ್ತು ಈ ರೈಲಿನಲ್ಲಿ ಸ್ಲೀಪರ್ ಕೋಚ್ ವ್ಯವಸ್ಥೆಯನ್ನು ಅಳವಡಿಸಬೇಕು. ಇದು ಕರಾವಳಿ ಭಾಗದಿಂದ ಮುಂಬೈಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಮತ್ತು ವಂದೇ ಭಾರತ್ ರೈಲಿಗೂ ಬೇಡಿಕೆ ಹೆಚ್ಚಾಗಲಿದೆ.
* ಈಗಾಗಲೇ ಕಾರ್ಯಾಚರಿಸುತ್ತಿರುವ ಕೊಂಕಣ ರೈಲ್ವೆ ವಿಭಾಗವನ್ನು ಭಾರತೀಯ ರೈಲ್ವೆ ಇಲಾಖೆಯೊಂದಿಗೆ ವಿಲೀನಗೊಳಿಸಬೇಕು. ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಕೊಂಕಣ ರೈಲ್ವೆ ಸುಧಾರಿಸಿಕೊಂಡು ಭಾರತೀಯ ರೈಲ್ವೆ ಮೂಲಕ ಎಲ್ಲಾ ನಿಲ್ದಾಣಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಹೊಸ ಹಳಿಗಳ ನಿರ್ಮಾಣಕ್ಕೆ ಹಾಗೂ ಹೊಸ ರೈಲುಗಳ ಜೋಡಣೆಗೆ ಅನುಕೂಲ ಆಗುತ್ತದೆ.
* ಎರ್ನಾಕುಲಂ-ನಿಜಾಮುದ್ದೀನ್ ಹಾಗೂ ತ್ರಿವೇಂಡ್ರಂ-ನಿಜಾಮುದ್ದೀನ್ ವರೆಗೆ ಸಂಚರಿಸುತ್ತಿರುವ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಉಡುಪಿ ಜಿಲ್ಲೆಯ ಕುಂದಾಪುರದ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು.
* ವಿವಿಧ ರೈಲುಗಳನ್ನು ಕುಂದಾಪುರದಲ್ಲಿ ನಿಲುಗಡೆ ಮಾಡುವುದರಿಂದ ಉಡುಪಿ ಅಥವಾ ಕಾರವಾರಕ್ಕೆ ತೆರಳುವ ಹೊರೆ ತಪ್ಪಲಿದೆ. ಪ್ರಸಿದ್ಧ ಶಕ್ತಿಪೀಠ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಮತ್ತು ಈ ನಡುವೆ ಇರುವ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಲಾಭವಾಗಲಿದೆ.
ಪ್ರತ್ಯೇಕ ರೈಲ್ವೆ ವಿಭಾಗಕ್ಕಾಗಿ ಅಭಿಯಾನ: ಕೇಂದ್ರದ ಹೊಸ ಸರ್ಕಾರ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈ 22ರಂದು ಮಂಡಿಸುವ ನಿರೀಕ್ಷೆ ಇದೆ. ಸಾಮಾನ್ಯ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಮಂಡನೆ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿಯೇ ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗಕ್ಕಾಗಿ ಧ್ವನಿ ಎತ್ತಲಾಗಿದೆ. ಆನ್ಲೈನ್ ಮೂಲಕ ಸಹಿ ಅಭಿಯಾನವನ್ನು ಸಹ ಕೈಗೊಳ್ಳಲಾಗಿದೆ.
ಮಂಗಳೂರು ಸದ್ಯ ಕೊಂಕಣ, ಪಾಲಕ್ಕಾಡ್ ಮತ್ತು ನೈಋತ್ಯ ರೈಲ್ವೆ ವಲಯಗಳಿಂದ ಕೂಡಿದೆ. ಆದರೆ ರೈಲು ಸೇವೆ ಉತ್ತಮವಾಗಬೇಕು. ರೈಲು ನಿಲ್ದಾಣ ಅಭಿವೃದ್ಧಿಗೊಳ್ಳಬೇಕಾದರೆ ಪ್ರತ್ಯೇಕ ರೈಲ್ವೆ ವಿಭಾಗಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಮಂಗಳೂರು ರೈಲು ನಿಲ್ದಾಣ ಪ್ರಸ್ತುತ ಪಾಲಕ್ಕಾಡ್ ವಿಭಾಗಕ್ಕೆ ಸೇರುತ್ತದೆ. ಆದ್ದರಿಂದ ಪ್ರತ್ಯೇಕ ರೈಲು ವಿಭಾಗಕ್ಕಾಗಿ ದಕ್ಷಿಣ ಕನ್ನಡ ರೈಲ್ವೆ ಬಳಕೆದಾರರ ಸಮಿತಿ ಸಹಿ ಅಭಿಯಾನವನ್ನು ಕೈಗೊಂಡಿದೆ. ಮಂಗಳೂರು-ಮಡಗಾಂವ್, ಮಂಗಳೂರು-ಸಕಲೇಶಪುರ ತನಕದ ರೈಲು ಜಾಲವನ್ನು ಸೇರಿಸಿ ಮಂಗಳೂರು ಸೆಂಟ್ರಲ್ ಅನ್ನು ಕೇಂದ್ರವಾಗಿ ಮಾಡಿ ಪ್ರತ್ಯೇಕ ರೈಲ್ವೆ ವಿಭಾಗ ಮಾಡಬೇಕು ಎಂದು ಅಭಿಮಾನದ ಮೂಲಕ ಬೇಡಿಕೆ ಮುಂದಿಡಲಾಗಿದೆ.
ಜುಲೈ 2ರಂದು ದಕ್ಷಿಣ ಕನ್ನಡ ರೈಲ್ವೆ ಬಳಕೆದಾರರ ಸಮಿತಿ ಈ ಅಭಿಯಾನಕ್ಕೆ ಚಾಲನೆ ನೀಡಿದೆ. ಆಗಸ್ಟ್ 2ರ ತನಕ ಅಂದರೆ ಒಂದು ತಿಂಗಳ ಕಾಲ ಈ ಅಭಿಯಾನ ನಡೆಯಲಿದೆ. ಈ ಅಭಿಯಾನ ಯಶ್ವಸ್ವಿಯಾಗಿಸುವಂತೆ ಕರೆ ನೀಡಿದ್ದು, ಬಳಿಕ ಅಭಿಯಾನವನ್ನು ಮುಂದಿಟ್ಟುಕೊಂಡು ರೈಲ್ವೆ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗುತ್ತದೆ.











Click it and Unblock the Notifications