ಹುಬ್ಬಳ್ಳಿ-ಪಂಢರಪುರಕ್ಕೆ ನೇರ ರೈಲು; ವಿವರಗಳು
ಹುಬ್ಬಳ್ಳಿ, ಆಗಸ್ಟ್ 17: ಭಾರತೀಯ ರೈಲ್ವೆ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಪಂಢರಪುರದ ಪ್ರಸಿದ್ಧ ವಿಠ್ಠಲ ದೇವಾಲಯಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗುವಂತೆ ಹುಬ್ಬಳ್ಳಿ-ಪಂಢರಪುರದ ನಡುವೆ ನೇರ ರೈಲು ಸಂಪರ್ಕಕ್ಕೆ ಒಪ್ಪಿಗೆ ನೀಡಿದೆ.
ಧಾರವಾಡದ ಬಿಜೆಪಿ ಸಂಸದ, ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ನೇರ ರೈಲು ಸಂಪರ್ಕಕ್ಕೆ ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಹುಬ್ಬಳ್ಳಿ-ಪಂಢರಪುರ ನೇರ ರೈಲು ಸಂಪರ್ಕದಿಂದಾಗಿ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಿದೆ. ಜನರು ಸುಲಭವಾಗಿ ಪಂಢರಪುರಕ್ಕೆ ತೆರಳಿ ವಿಠ್ಠಲನ ದರ್ಶನವನ್ನು ಪಡೆಯಬಹುದಾಗಿದೆ.
ಸಚಿವರ ಟ್ವೀಟ್; ಸಚಿವ ಪ್ರಹ್ಲಾದ್ ಜೋಶಿ ತಮ್ಮ ಟ್ವೀಟ್ನಲ್ಲಿ, 'ಮೈಸೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಸೋಲಾಪುರಕ್ಕೆ ಸಂಚರಿಸುತ್ತಿದ್ದ ಗೋಲ್ಗುಂಬಜ್ ಎಕ್ಸ್ಪ್ರೆಸ್ ರೈಲನ್ನು ಪಂಢರಪುರಕ್ಕೆ ಸಂಪರ್ಕಿಸಲು ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ಇದೀಗ ಅನುಮೋದನೆ ದೊರೆತಿದೆ' ಎಂದು ಹೇಳಿದ್ದಾರೆ.
ಪಂಢರಪುರ ವಿಠಲನ ದರ್ಶನಕ್ಕೆ ಹುಬ್ಬಳ್ಳಿಯಿಂದ ನೇರ ರೈಲು ಸಂಪರ್ಕ ಆರಂಭ.
— Pralhad Joshi (@JoshiPralhad) August 16, 2023
ಮೈಸೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಸೋಲಾಪುರಕ್ಕೆ ಸಂಚರಿಸುತ್ತಿದ್ದ ಗೋಲ್ಗುಂಬಜ್ ಎಕ್ಸ್ಪ್ರೆಸ್ ರೈಲನ್ನು ಪಂಢರಪುರಕ್ಕೆ ಸಂಪರ್ಕಿಸಲು ರೈಲ್ವೆ ಸಚಿವರಾದ ಶ್ರೀ @AshwiniVaishnaw ಅವರಿಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ಇದೀಗ ಅನುಮೋದನೆ ದೊರೆತಿದೆ. pic.twitter.com/t2eS3j2K5H
"ನಮ್ಮ ಪ್ರಸ್ತಾವನೆಗೆ ಸ್ಪಂದಿಸಿ ವಿಠಲನ ಭಕ್ತರ ಬೇಡಿಕೆಗೆ ಅನುಗುಣವಾಗಿ ರೈಲು ಸೇವೆ ಒಗದಿಸಿಕೊಟ್ಟ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ.
'ಮೈಸೂರಿನಿಂದ ಹೊರಡುವ ಗಾಡಿ ಸಂಖ್ಯೆ 16535/ 36 ಹುಬ್ಬಳ್ಳಿ, ಗದಗ, ಬಾಗಲಕೋಟೆ ಮೂಲಕ ಸೋಲಾಪುರಕ್ಕೆ ಸಂಪರ್ಕಿಸುವ ರೈಲು ಇನ್ನು ಮುಂದೆ ನೇರವಾಗಿ ಪಂಢರಪುರಕ್ಕೆ ಸಂಪರ್ಕ ಕಲ್ಪಿಸಿ, ವಿಠಲನ ದರ್ಶನಕ್ಕೆ ತೆರಳುವ ಭಕ್ತರಿಗೆ ಸುಲಭ ಪ್ರಯಾಣ ವ್ಯವಸ್ಥೆ ಮಾಡಿಕೊಡಲಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ರಾಜ್ಯದಲ್ಲಿರುವ ಪಂಢರಪುರ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಪ್ರತಿನಿತ್ಯ ಸಾವಿರಾರು ಜನರು ವಿಠ್ಠಲ ದೇವಾಲಯಕ್ಕೆ ತೆರಳುತ್ತಾರೆ. ರೈಲು, ರಸ್ತೆ ಮಾರ್ಗದ ಮೂಲಕ ಭಕ್ತಾದಿಗಳು ವಿಠ್ಠಲನ ದರ್ಶನಕ್ಕಾಗಿ ಸಾಗುತ್ತಾರೆ.
ಪಂಢರಪುರದ ವಿಠ್ಠಲ ಎಂದು ಕರೆಯಲ್ಪಡುವ ಶ್ರೀ ಪಾಂಡುರಂಗ ದೇವಾಲಯಕ್ಕೆ ದೇಶಾದ್ಯಂತ ಅಪಾರ ಭಕ್ತರಿದ್ದಾರೆ. ಇಟ್ಟಿಗೆ ಮೇಲೆ ನಿಂತಿರುವ ಶ್ರೀ ಪಾಂಡುರಂಗನು ದರ್ಶನ ನೀಡಿದ ಸ್ಥಳ ಎಂದು ಈ ಪ್ರದೇಶ ಪುರಾಣದೊಂದಿಗೆ ಬೆಸೆದುಕೊಂಡಿದೆ.











Click it and Unblock the Notifications