ಚಿಕ್ಕಮಗಳೂರು-ಬೆಂಗಳೂರು ನಡುವೆ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಮಂಜೂರು ಮಾಡಿಸಿ: ಶೋಭಾ ಕರಂದ್ಲಾಜೆಗೆ ಮನವಿ
ಚಿಕ್ಕಮಗಳೂರು, ಅಕ್ಟೋಬರ್, 02: ಚಿಕ್ಕಮಗಳೂರು, ಬೆಂಗಳೂರು ನಗರದ ನಡುವೆ ಪ್ರತಿನಿತ್ಯ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಸಂಚಾರ ಮಂಜೂರು ಮಾಡಿಸಿಕೊಡುವಂತೆ ವರ್ತಕರ ಸಂಘ ಮತ್ತು ವಾಸವಿ ಯುವ ಫೆಡರೇಶನ್ ವತಿಯಿಂದ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭೆ ಸದಸ್ಯರಾದ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದರು.
ವರ್ತಕರ ಸಂಘದ ನಿರ್ದೇಶಕರಾದ ಎಚ್.ಎನ್.ನಾಗಸೋಮೇಶ್ ಮನವಿ ಪತ್ರ ನೀಡಿ ಮಾತನಾಡಿ, ಚಿಕ್ಕಮಗಳೂರು ಜನತೆಯ ಬಹು ದಿನಗಳ ಕೋರಿಕೆಯಾಗಿದ್ದ ಕಡೂರು-ಚಿಕ್ಕಮಗಳೂರು ರೈಲ್ವೆ ಸಂಪರ್ಕವನ್ನು ಡಿ.ವಿ.ಸದಾನಂದ ಗೌಡ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ 2012ನೇ ಸಾಲಿನಲ್ಲಿ ಉದ್ಘಾಟನೆಯಾಗಿ ಸಾರ್ವಜನಿಕರ ಬಳಕೆಗೆ ಸಮರ್ಪಣೆ ಮಾಡಿರುವುದಕ್ಕೆ ಅಭಿನಂದನೆಗಳು ಎಂದರು.

ಚಿಕ್ಕಮಗಳೂರು ನಗರಕ್ಕೆ ಕೇವಲ ಎರಡು ರೈಲುಗಳು ಮಾತ್ರ ಮಂಜೂರಾಗಿದ್ದು, ಅವುಗಳಲ್ಲಿ 1 ಶಿವಮೋಗ್ಗ-ಚಿಕ್ಕಮಗಳೂರು ಇನ್ನೊಂದು ಚಿಕ್ಕಮಗಳೂರಿನಿಂದ-ಬೆಂಗಳೂರು ಪ್ಯಾಸೆಂಜರ್ ರೈಲು ಸಂಪರ್ಕ ಇರುತ್ತದೆ. ಈ ಎರಡು ರೈಲ್ವೆ ಸಂಪರ್ಕವನ್ನು ಸಾರ್ವಜನಿಕರು ಬಳಸುತ್ತಿದ್ದು, ಪ್ರಯಾಣದ ಸಮಯ ಅತ್ಯಂತ ಹೆಚ್ಚಿನ ಅವಧಿ ತೆಗೆದುಕೊಳ್ಳುತ್ತಿದ್ದು, ಪ್ರಯಾಣಿಕರಿಗೆ ಯಾವುದೇ ಅನುಕೂಲವಾಗುತ್ತಿಲ್ಲ. ಸಾರ್ವಜನಿಕರು ಪುನಃ ರೈಲು ಸಂಚಾರ ಬಿಟ್ಟು ರಸ್ತೆ ಸಾರಿಗೆ ಸಂಪರ್ಕಕ್ಕೆ ಮೊರೆ ಹೋಗುತ್ತಿದ್ದಾರೆ ಎಂದರು.
ಆದ್ದರಿಂದ ಬೆಂಗಳೂರು ನಗರ ಹಾಗೂ ಚಿಕ್ಕಮಗಳೂರು ನಡುವೆ ಇಂಟರ್ ಸಿಟಿ ರೈಲ್ವೆ ಸೇವೆಯನ್ನು ಮಂಜೂರು ಮಾಡಿಸಿಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ-ಪುಟ್ಟಪರ್ತಿ ರೈಲ್ವೆ ಯೋಜನೆ ಪೂರ್ಣ ಯಾವಾಗ?
ಚಿಕ್ಕಬಳ್ಳಾಪುರದಿಂದ ಗುಡಿಬಂಡೆ ತಾಲೂಕಿನ ಮೂಲಕ ಬಾಗೇಪಲ್ಲಿ ಮಾರ್ಗವಾಗಿ ಆಂಧ್ರಪ್ರದೇಶದ ಗೋರಂಟ್ಲ-ಪುಟ್ಟಪರ್ತಿಗೆ ಸಂಪರ್ಕ ಕಲ್ಪಿಸುವ ರೈಲು ಸಂಚಾರ ಕಾಮಗಾರಿ ಹಲವು ವರ್ಷಗಳಿಂದ ಸರ್ವೇ ಹಂತದಲ್ಲಿಯೇ ಕುಂಟುತ್ತಾ ಸಾಗಿದ್ದು, ಈ ಯೋಜನೆಯನ್ನು ಕೂಡಲೇ ಆರಂಭಿಸಬೇಕೆಂಬ ಕೂಗು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿ ಭಾಗದ ರೈತರು, ಜನ ಸಾಮಾನ್ಯರು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
2009ರಲ್ಲಿ ಯಶವಂತಪುರ- ಸತ್ಯಸಾಯಿ ಎಕ್ಸ್ಪ್ರೆಸ್ ರೈಲಿನ ಮಾರ್ಗ ಯೋಜನೆ ಮಾಡಲು ಅಂದಿನ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಎಂ.ವೀರಪ್ಪ ಮೊಯಿಲಿ, ಮಾಜಿ ಶಾಸಕ ಎನ್.ಸಂಪಂಗಿ ಅವರು ಅಂದಿನ ರೈಲ್ವೆ ಇಲಾಖೆಯ ಸಚಿವ ಮಮತಾ ಬ್ಯಾನರ್ಜಿ ಅವರ ಮೇಲೆ ಒತ್ತಡ ಹಾಕಿದ್ದರು. ಅವರು ಮಂಡಿಸಿದ ಬಜೆಟ್ನಲ್ಲಿ ಈ ರೈಲು ಯೋಜನೆ ಕಾಮಗಾರಿಗೆ 7480 ಕೋಟಿ ರೂಪಾಯಿ ಮೀಸಲಿಟ್ಟು, ಅನುದಾನ ಬಿಡುಗಡೆ ಮಾಡಿದ್ದರು.
ಇದರಿಂದಾಗಿ ಚಿಕ್ಕಬಳ್ಳಾಪುರದಿಂದ ಪುಟ್ಟಪರ್ತಿವರೆಗೆ ರೈಲ್ವೆ ಕಾಮಗಾರಿಗೆ ಸಮೀಕ್ಷೆ ಕೈಗೊಳ್ಳಲಾಗಿದೆ. ಆದರೆ, ರೈಲು ಮಾರ್ಗ ಹೋಗುವ ಜಾಗದ ರೈತರಿಗೆ ಪರಿಹಾರ ಕಲ್ಪಿಸಲು ಅನುದಾನದ ಕೊರತೆ ಇದೆ. ಅಂದಿನ ಸರ್ಕಾರ ಅರ್ಹ ರೈತ ಫಲಾನುಭವಿಗೆ ಒಂದು ಹೆಕ್ಟೇರ್ ಜಮೀನಿಗೆ 16 ಲಕ್ಷ ಹಾಗೂ ಕುಟುಂಬದಲ್ಲಿನ ಒಬ್ಬರಿಗೆ ಉದ್ಯೋಗ ಕಲ್ಪಿಸಲು ಒಪ್ಪಿತ್ತು. ಆದರೆ, ಆ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದ್ದರಿಂದಾಗಿ ಈ ಯೋಜನೆ ಕಾಮಗಾರಿಯು ಈಗಲೂ ನನೆಗುದಿಗೆ ಬಿದ್ದಿದೆ.
ಸಾವಿರಾರು ಭಕ್ತರನ್ನು ಹೊಂದಿರುವ ಸತ್ಯಸಾಯಿಬಾಬಾ ಅಶ್ರಮಕ್ಕೆ ದೇಶ, ವಿದೇಶಗಳಿಂದ ಬರುತ್ತಾರೆ. ಬೆಂಗಳೂರಿನಿಂದ 200ಕಿಲೋ ಮೀಟರ್ ದೂರವಿರುವ ಪುಟ್ಟಪರ್ತಿಗೆ ಸಾರಿಗೆ ಹಾಗೂ ರೈಲು ಸೇವೆಗಳಿವೆ. ಆದರೆ, ಬಾಗೇಪಲ್ಲಿಯಿಂದ ಗೋರಂಟ್ಲಿ, ಪುಟ್ಟಪರ್ತಿವರೆಗೆ ರೈಲು ಮಾರ್ಗವಿಲ್ಲ. ಇದರಿಂದಾಗಿ ಈ ಭಾಗಗಳಿಂದ ಸಾಯಿಬಾಬಾ ಭಕ್ತರಿಗೆ ಸಮಸ್ಯೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂತ ಕೃಷಿಕೂಲಿಕಾರ ಸಂಘಟನೆಯ ರಾಜ್ಯ ಅಧ್ಯಕ್ಷ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ, 'ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜನಪ್ರತಿನಿದಿಗಳ ನಿರ್ಲಕ್ಷದಿಂದ ಚಿಕ್ಕಬಳ್ಳಾಪುರ ಹಾಗೂ ಪುಟ್ಟಪರ್ತಿ ರೈಲು ಮಾರ್ಗದ ಯೋಜನೆ ನನೆಗುದಿಗೆ ಬಿದ್ದಿದೆ. ಆಂಧ್ರಪ್ರದೇಶದ ರೈಲ್ವೆ ಅಧಿಕಾರಿಗಳು ಪುಟ್ಟಪರ್ತಿಯಿಂದ ಬಾಗೇಪಲ್ಲಿ ಮಾರ್ಗವಾಗಿ ಚಿಕ್ಕಬಳ್ಳಾಪುರದವರಿಗೆ ರೈಲು ಯೋಜನೆಗೆ ಸಮೀಕ್ಷೆ ನಡೆಸಿ, ಕಾಮಗಾರಿಯ ವೆಚ್ಚದ ಹಣ ಬಿಡುಗಡೆಗೆ ಮನವಿ ಮಾಡಿದ್ದಾರೆ. ಆರು ತಿಂಗಳ ಒಳಗೆ ಚಿಕ್ಕಬಳ್ಳಾಪುರದಿಂದ ಪುಟ್ಟಪರ್ತಿಗೆ ರೈಲು ಸಂಚಾರ ಕಾಮಗಾರಿ ಪೂರ್ಣಗೊಳಿಸಬೇಕು' ಎಂದು ಒತ್ತಾಯಿಸಿದ್ದಾರೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮಾರ್ಗವಾಗಿ ಗೋರಂಟ್ಲಿ, ಪುಟ್ಟಪರ್ತಿ ಕಡೆಗೆ ಹೋಗುವ ಈ ರೈಲು ಯೋಜನೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಅಧಿಕಾರಿಗಳು ಸಮೀಕ್ಷೆ ನಡೆಸಿ ರೈಲ್ವೆ ಮಂಡಳಿಗೆ ಸಲ್ಲಿಸಿದ್ದಾರೆ. ಈ ಮಾರ್ಗದಿಂದ ಅಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ 12 ಗ್ರಾಮಗಳ ಜನರ ಪ್ರಯಾಣಕ್ಕೆ ಅನುಕೂಲವಾಗಲಿದೆ. ಅಲ್ಲದೆ ಅಂಧ್ರಪ್ರದೇಶ, ಕರ್ನಾಟಕ ರಾಜ್ಯಗಳಿಗೆ ಸಂಪರ್ಕ ಸಿಗಲಿದೆ. ಒಂದು ಕಿ.ಮೀ. ರೈಲು ಮಾರ್ಗ ನಿರ್ಮಾಣಕ್ಕೆ 112 ಕೋಟಿಗಳಷ್ಟು ವೆಚ್ಚವಾಗಬಹುದು ಎಂದು ಅಂದಾಜು ವೆಚ್ಚ ಸಲ್ಲಿಸಲಾಗಿದೆ.
ರೈಲು ಯೋಜನೆಯಲ್ಲಿ ವಿದ್ಯುತ್ ಕೆಲಸಗಳಿಗೆ ಸಹ ಅನುಕೂಲ ಆಗಿದೆ. ಈ ಮಾರ್ಗದ ರೈಲಿನ ಯೋಜನೆಯಿಂದ ಪುಟ್ಟಪರ್ತಿ, ಗುಂತಕಲ್ಲು, ತಿರುಪತಿ, ಹೈದರಾಬಾದ್ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ರೈಲ್ವೆ ಮಂಡಳಿಗೆ ಅಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯ ಬಾಗೇಪಲ್ಲಿ ತಾಲೂಕು ಮತ್ತು ಆಂಧ್ರಪ್ರದೇಶದ ಪುಟ್ಟಪರ್ತಿ, ಮುದಿಗುಬ್ಬ, ಗುಂತಕಲ್ಲು ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರು ಹೆಚ್ಚಾಗಿ ಕೃಷಿ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ಬಾಗೇಪಲ್ಲಿ, ಗುಡಿಬಂಡೆಯಿಂದ ರೈಲ್ವೆ ಮಾರ್ಗ ಇಲ್ಲದಿರುವ ಕಾರಣ ಈ ಭಾಗದ ರೈತರು ತಾವು ಬೆಳೆದ ತರಕಾರಿಗಳನ್ನು ಬೆಂಗಳೂರು ಮತ್ತು ಪುಟ್ಟಪರ್ತಿಗೆ ಸೇರಿದಂತೆ ವಿವಿಧ ಕಡೆಗಳಿಗೆ ಸಾಗಿಸಲು ಆಗುತ್ತಿಲ್ಲ ಎಂಬುದು ರೈತರ ಅಳಲು.
ಕರ್ನಾಟಕದ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ರೈತರು ಮತ್ತು ವ್ಯಾಪಾರಸ್ಥರು ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಬೆಂಗಳೂರು ಕಡೆಗಳಿಗೆ ವಿವಿಧ ವ್ಯಾಪಾರ ವಹಿವಾಟು ನಡೆಸಲು ಸದಾ ಬರುತ್ತಾರೆ. ತರಕಾರಿಗಳು ಹಾಗೂ ದವಸ, ಧಾನ್ಯಗಳನ್ನು ಖರೀದಿ ಮಾಡಿ, ಸಾಗಿಸಲು ಹರಸಾಹಸ ಪಡುವಂತಾಗಿದೆ. ಹೀಗಾಗಿ ರೈಲು ಸಂಚಾರ ಯೋಜನೆ ಶೀಘ್ರವೇ ಪೂರ್ಣಗೊಳ್ಳಬೇಕು ಎಂಬುದು ಈ ಭಾಗದ ರೈತರು ಮತ್ತು ವ್ಯಾಪಾರಸ್ತರ ಕೂಗು ಆಗಿದೆ.












Click it and Unblock the Notifications