ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಚಿಕ್ಕದೇವಮ್ಮನ ಬೆಟ್ಟ
ಮೈಸೂರು ಯದುವಂಶದ ಆರಾಧ್ಯ ದೇವತೆ, ತಾಯಿ ಚಾಮುಂಡೇಶ್ವರಿಯ ಏಳು ಜನ ಸಹೋದರಿಯರಲ್ಲಿ ಒಬ್ಬಳಾಗಿ, ಎಚ್.ಡಿ.ಕೋಟೆ ತಾಲೂಕಿನ ಪುರದಕಟ್ಟೆ ಬಳಿಯ ಚಿಕ್ಕದೇವಮ್ಮನವರ ಬೆಟ್ಟದಲ್ಲಿ ನೆಲೆನಿಂತಿರುವ ಚಿಕ್ಕದೇವಮ್ಮ, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬರುತ್ತಿದ್ದರೂ, ಅಭಿವೃದ್ಧಿಯ ಕೊರತೆಯಿಂದಾಗಿ ಭಕ್ತರು ತೊಂದರೆ ಅನುಭವಿಸುವಂತಾಗಿದೆ.
ಬೆಟ್ಟಗುಡ್ಡಗಳ ಹಸಿರು ಹಚ್ಚಡದ ಸುಂದರ ಪರಿಸರದಲ್ಲಿ ನೆಲೆನಿಂತಿರುವ ಚಿಕ್ಕದೇವಮ್ಮ ತಾಯಿ ಸುತ್ತಮುತ್ತಲ ಊರಿನವರ ಆರಾಧ್ಯದೇವತೆಯೂ ಹೌದು. ಹೀಗಾಗಿ ಆಗಾಗ್ಗೆ ಬೆಟ್ಟವನ್ನೇರಿ ಬರುವ ಭಕ್ತರು ದೇವಿಯ ದರ್ಶನ ಪಡೆದು ಹಿಂತಿರುಗುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.[ಎಚ್ಡಿಕೋಟೆ ಹಳ್ಳಿಗಳಲ್ಲಿ 'ಸೌರ ಬೆಳಕು' ಆದರ್ಶ ಯೋಜನೆ]
ಚಾಮುಂಡೇಶ್ವರಿಯನ್ನು ಹೇಗೆ ಪೂಜಿಸುತ್ತಾರೆಯೋ ಹಾಗೆಯೇ ಹಿಂದೆ ಯದುವಂಶದ ಮಹಾರಾಜರು ಚಿಕ್ಕಮ್ಮದೇವಿಯನ್ನು ಪೂಜಿಸುತ್ತಿದ್ದರಂತೆ. ಪರಿವಾರ ಸಹಿತ ಬಂದು ದೇವಿಗೆ ಪೂಜಾಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು.[ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ]
ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಸೆಳೆಯುತ್ತಿರುವ ಇಂಥ ಪವಿತ್ರವಾದ ಕ್ಷೇತ್ರ ಇಂದು ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ದಿನವೂ ಸಾವಿರಾರು ಭಕ್ತರು ಬರುತ್ತಿದ್ದರೂ ಜನರಿಗಾಗಿ ಯಾವುದೇ ವ್ಯವಸ್ಥೆಯಿಲ್ಲ. ಬಸ್, ವಸತಿ, ನೀರು, ಊಟ ಯಾವುದೂ ಸರಿಯಾಗಿಲ್ಲ. ಶೌಚಾಲಯಕ್ಕೂ ಜನರು ಪರದಾಡುವಂತಾಗಿದೆ.[ಗುಂಡ್ರೆ ಅರಣ್ಯದಲ್ಲಿ ಹಸಿವು ತಾಳಲಾರದೆ ಹುಲಿ ಸಾವು]
ಚಿಕ್ಕದೇವಮ್ಮನ ಬೆಟ್ಟದ ಪೌರಾಣಿಕ ಹಿನ್ನೆಲೆ
ಪೌರಾಣಿಕ ಯುಗದಲ್ಲಿ ರಾಕ್ಷಸರು ಅಟ್ಟಹಾಸಗೈಯ್ಯುತ್ತಾ ದೇವತೆಗಳಿಗೆ ಉಪಟಳ ನೀಡುತ್ತಿದ್ದಾಗ ಶ್ರೀ ಚಿಕ್ಕದೇವಮ್ಮ ತಾಯಿಯ ಅವತಾರ ತಾಳಿ ಬಂದು ರಾಕ್ಷಸರನ್ನು ಸಂಹರಿಸಿದಳಂತೆ. ಇಂದಿಗೂ ಶಕ್ತಿದೇವತೆಯಾಗಿರುವ ದೇವಿಯ ದರ್ಶನ ಮಾಡಿ ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಜನತೆಯಲ್ಲಿದೆ. ಹೀಗಾಗಿಯೇ ಜನ ಕಷ್ಟ ಬಂದಾಗ ತಾಯಿಗೆ ಹರಕೆ ಹೊತ್ತು ಬಳಿಕ ಶ್ರೀ ಚಿಕ್ಕದೇವಮ್ಮದೇವಿಯ ಸನ್ನಿಧಿಗೆ ಆಗಮಿಸಿ ತೀರಿಸುತ್ತಾರೆ.
ಆಕ್ಷೇಪವಿದ್ದರೂ ನಿಲ್ಲದ ಕುರಿ, ಕೋಳಿ ಬಲಿ
ಇತ್ತೀಚಿಗಿನ ವರ್ಷಗಳಲ್ಲಿ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ದಿನಗಳಲ್ಲದೆ, ವಾರದ ಏಳು ದಿನವೂ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಮೊದಲೆಲ್ಲ ಇಲ್ಲಿ ಪ್ರಾಣಿ ಬಲಿ ನೀಡಲಾಗುತ್ತಿತ್ತಾದರೂ, ಈಗ ಪ್ರಾಣಿ ದಯಾಸಂಘದ ಆಕ್ಷೇಪದ ಮೇರೆಗೆ ನಿಲ್ಲಿಸಲಾಗಿದೆ. ಆದರೂ ಕೆಲವರು ಶ್ರೀ ಚಿಕ್ಕದೇವಮ್ಮತಾಯಿ ಮೊದಲಿಗೆ ಕಾಲಿರಿಸಿದ ಸ್ಥಳ ಎನ್ನಲಾದ ಕಪಿಲಾ ನದಿ ತೀರದಲ್ಲಿ ಕುರಿ, ಮೇಕೆ, ಕೋಳಿ ಬಲಿ ನೀಡಿ ಸಂಬಂಧಿಕರಿಗೆ, ಸ್ನೇಹಿತರಿಗೆ ಊಟ ಹಾಕಿ ಹರಕೆ ತೀರಿಸುತ್ತಾರೆ.
ಚಾಮುಂಡಿ ಬೆಟ್ಟಕ್ಕೆ ಸುರಂಗವಿದೆ, ಸುರಂಗದಲ್ಲಿ ಹಾವಿದೆ
ಹಿರಿಯರು ಹೇಳುವ ಪ್ರಕಾರ, ಶ್ರೀ ಚಿಕ್ಕದೇವಮ್ಮತಾಯಿ ಬೆಟ್ಟಕ್ಕೂ ಮೈಸೂರಿನ ಚಾಮುಂಡಿಬೆಟ್ಟಕ್ಕೂ ಸುರಂಗ ಮಾರ್ಗವಿದೆಯಂತೆ! ಇದಕ್ಕೆ ಸಾಕ್ಷಿ ಎನ್ನುವಂತೆ ಸುರಂಗ ಮಾರ್ಗ ಈಗಲೂ ಕಾಣಿಸುತ್ತಿದ್ದು, ಗಿಡಗಂಟಿಗಳು ಆವರಿಸಿ ಮುಚ್ಚಿ ಹೋಗಿದೆ. ಈ ಸುರಂಗದಲ್ಲಿ ಸರ್ಪ ನೆಲೆನಿಂತಿದೆ ಎಂದೂ ಹೇಳಲಾಗುತ್ತಿದ್ದು, ಆ ಕಡೆ ಹೋಗಲು ಯಾರೂ ಪ್ರಯತ್ನ ಮಾಡುವುದಿಲ್ಲ.
ನಿಂತಲ್ಲಿಯೇ ನಿಂತ ಜೀರ್ಣೋದ್ಧಾರ ಕಾರ್ಯ
ಚಿಕ್ಕದೇವಮ್ಮತಾಯಿ ಕ್ಷೇತ್ರ ಪವಿತ್ರ ತಾಣವಾಗಿದ್ದು, ಇದು ಮುಜರಾಯಿ ಇಲಾಖೆಗೆ ಒಳಪಡುತ್ತಿರುವುದರಿಂದ ಇಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಆರಂಭಿಸಲಾಗಿತ್ತು. ಆದರೆ, ಅದು ಇದುವರೆಗೆ ಪೂರ್ಣವಾಗಿಲ್ಲ ಎಂಬುದು ಭಕ್ತರ ಆರೋಪ.
ಊಟ ನೀರಿಗಾಗಿಯೂ ಪರದಾಟ ತಪ್ಪಿಲ್ಲ
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದರೂ ಯಾವುದೂ ಸಂಪೂರ್ಣವಾಗಿಲ್ಲ. ಇದರಿಂದ ಇಲ್ಲಿಗೆ ಬರುವ ಭಕ್ತರು ಬಸ್ ವ್ಯವಸ್ಥೆ, ಊಟದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆಗೆ ಪರದಾಡುವಂತಾಗಿದೆ.
ಉತ್ಸವ ಮೂರ್ತಿಗೆ ಬೇರೆಡೆ ಪೂಜೆ
ದೇವಸ್ಥಾನದ ಕೆಲಸ ಪೂರ್ಣವಾಗದ ಕಾರಣ ಉತ್ಸವ ಮೂರ್ತಿಯನ್ನು ಬೇರೆಡೆಯಿಟ್ಟು ಪೂಜಿಸಲಾಗುತ್ತಿದೆ. ಇಲ್ಲಿ ಸ್ಥಳಾವಕಾಶದ ತೊಂದರೆಯಿಂದಾಗಿ ಭಕ್ತರಿಗೆ ಪೂಜಾ ಕೈಂಕರ್ಯ ನೆರವೇರಿಸಲು ಕಷ್ಟವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸಲಿ
ಹೆಗ್ಗಡೆದೇವನ ಕೋಟೆಯ ಎನ್ ಬೇಗೂರಿನಿಂದ 17 ಕಿ.ಮೀ. ದೂರದಲ್ಲಿರುವ, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಚಿಕ್ಕದೇವಮ್ಮನ ಕ್ಷೇತ್ರದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇ ಆದರೆ ಭಕ್ತರಿಗೆ ಅನುಕೂಲವಾಗಲಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸಲಿ