ವಿರೋಧವಿದ್ದರೂ ಬೆಂಗಳೂರು-ಮಂಗಳೂರು ರೈಲು ಕೊಯಿಕ್ಕೋಡ್ಗೆ ವಿಸ್ತರಣೆ
ಮಂಗಳೂರು, ಜನವರಿ 31: ಕರ್ನಾಟಕದ ಕರಾವಳಿ ಭಾಗದ ಜನರ ತೀವ್ರ ವಿರೋಧದ ನಡುವೆಯೂ ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ವಿರೋಧಿಸಿ ಪೋಸ್ಟ್ ಹಾಕಲಾಗುತ್ತಿದೆ.
ದಕ್ಷಿಣ ರೈಲ್ವೆ ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಲು ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆದರೆ ಕರ್ನಾಟಕದ ಕರಾವಳಿ ಭಾಗದ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಈಗ ರೈಲ್ವೆ ಇಲಾಖೆ ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ. ಅಲ್ಲದೇ ವೇಳಾಪಟ್ಟಿ ಸಹ ಬದಲಾವಣೆ ಮಾಡಿದೆ. ಹೊಸ ವೇಳಾಪಟ್ಟಿ ಯಾವಾಗಿನಿಂದ ಜಾರಿಯಾಗಲಿದೆ? ಎಂದು ಅಧಿಕೃತವಾಗಿ ತಿಳಿಸಿಲ್ಲ.
ಕರ್ನಾಟಕಕ್ಕೆ ಅನ್ಯಾಯ: ರೈಲ್ವೆ ಇಲಾಖೆ ಕೇರಳದ ಲಾಬಿಗೆ ಮಣಿದು ಕರ್ನಾಟಕದ ಕರಾವಳಿ ಭಾಗಕ್ಕೆ ಅನ್ಯಾಯ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಿರುವುದರಿಂದ ಕರ್ನಾಟಕದ ಭಾಗದ ಜನರಿಗೆ ಸೀಟು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಲಾಗುತ್ತಿದೆ.
2ನೇ ಬಾರಿಗೆ ಬೆಂಗಳೂರು-ಮಂಗಳೂರು ರೈಲನ್ನು ವಿಸ್ತರಣೆ ಮಾಡಲಾಗುತ್ತಿದೆ. ಈ ಹಿಂದೆ ರೈಲು ಸಂಚಾರ ಆರಂಭವಾದ ಕೆಲವೇ ದಿನಗಳಲ್ಲಿ 8 ಬೋಗಿಗಳನ್ನು ಕಣ್ಣೂರು ತನಕ ವಿಸ್ತರಣೆ ಮಾಡಲಾಗಿತ್ತು. ಆಗಲೂ ಕರಾವಳಿ ಭಾಗದ ಜನರು ವಿರೋಧ ವ್ಯಕ್ತಪಡಿಸಿದ್ದರು.
@SWRRLY @GMSRailway, we have got to know that @RailMinIndia has approved the proposal to extend Tr No. 16511/12 KSR Bengaluru-Kannur Express upto Kozhikode. We strongly oppose this proposal! Already Mangaluru is suffering without dedicated trains to Bengaluru!
— Dakshina Kannada District Railway Users (@dkdistrictrail) January 30, 2024
1/3
ಈಗ ರೈಲನ್ನು ಕಣ್ಣೂರಿನಿಂದ ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಲಾಗಿದ್ದು, ಕೇರಳಕ್ಕೆ ಸಂಚಾರ ನಡೆಸುವ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಕರ್ನಾಟಕದ ಕರಾವಳಿ ಭಾಗದ ಜನರಿಗೆ ತೊಂದರೆಯಾಗಲಿದೆ. ಮೊದಲೇ ಬೆಂಗಳೂರು-ಕರಾವಳಿ ಸಂಪರ್ಕಿಸುವ ರೈಲುಗಳು ಕಡಿಮೆ. ಈಗ ಇರುವ ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನಿಂದ ರಾತ್ರಿ 9.35ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 10.55ಕ್ಕೆ ಕಣ್ಣೂರು ತಲುಪಲಿದೆ. ಅಲ್ಲಿಂದ 11 ಗಂಟೆಗೆ ಹೊರಟು ಮಧ್ಯಾಹ್ನ 12.40ಕ್ಕೆ ಕೊಯಿಕ್ಕೋಡ್ ತಲುಪಲಿದೆ. 3.30ಕ್ಕೆ ಕೊಯಿಕ್ಕೋಡ್ನಿಂದ ಹೊರಟು, ಸಂಜೆ 5ಕ್ಕೆ ಕಣ್ಣೂರು ತಲುಪಿ, 5.05ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 6.35ಕ್ಕೆ ಬೆಂಗಳೂರು ತಲುಪಲಿದೆ.
ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಿ, ವೇಳಾಪಟ್ಟಿ ಬದಲಾವಣೆ ಮಾಡುವ ಜೊತೆಗೆ ರೈಲ್ವೆ ಇಲಾಖೆ ತಲಶ್ಯೇರಿ, ವಡಗರ ಮತ್ತು ಕುಯಿಲಾಂಡಿಗಳಲ್ಲಿ ನಿಲುಗಡೆಗೆ ಸಹ ಒಪ್ಪಿಗೆ ನೀಡಿದೆ. ಆದರೆ ಹೊಸ ವೇಳಾಪಟ್ಟಿ ಎಂದಿನಿಂದ ಜಾರಿ? ಎಂದು ಸ್ಪಷ್ಟಪಡಿಸಿಲ್ಲ.
ರೈಲ್ವೆ ಇಲಾಖೆ ಕೇರಳದ ಲಾಬಿಗೆ ಮಣಿದು ಕರ್ನಾಟಕದ ಕರಾವಳಿಗೆ ಅನ್ಯಾಯ ಮಾಡಿದೆ. ರೈಲನ್ನು ಕೊಯಿಕ್ಕೋಡ್ಗೆ ವಿಸ್ತರಣೆ ಮಾಡಿರುವುದರಿಂದ ಕರ್ನಾಟಕದ ಭಾಗದ ಜನರಿಗೆ ಸೀಟು ಸಿಗುವುದಿಲ್ಲ. ಬೆಂಗಳೂರು-ಮಂಗಳೂರು ನಡುವೆ ಹಾಸನ ಮೂಲಕ ಹೊಸ ರೈಲು ಓಡಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವೆ ಈಗಲೇ ರೈಲುಗಳು ಕಡಿಮೆ ಇವೆ. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಬೇಕು ಎಂದು ಬೇಡಿಕೆ ಇಡಲಾಗಿದೆ. ಹಬ್ಬಗಳು, ಸಾಲು ಸಾಲು ರಜೆ ಸಂದರ್ಭದಲ್ಲಿ ಪ್ರಯಾಣಿಕರು ಪರದಾಡುತ್ತಾರೆ. ಬೆಂಗಳೂರು-ಮಂಗಳೂರು ನಡುವೆ ಹೊಸ ರೈಲು ಬೇಕು ಎಂಬ ಬೇಡಿಕೆಯ ನಡುವೆಯೂ ಇರುವ ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಿ ಕರಾವಳಿ ಭಾಗದ ಜನರಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಪಡಿಸಲಾಗುತ್ತಿದೆ.












Click it and Unblock the Notifications