Vande Bharat; ಬೆಂಗಳೂರು-ಧಾರವಾಡ ರೈಲು ಶೇ 85ರಷ್ಟು ಭರ್ತಿ
ಬೆಂಗಳೂರು, ಜುಲೈ 18; ಕರ್ನಾಟಕದ 2ನೇ ವಂದೇ ಭಾರತ್ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಈ ರೈಲು ಸಂಚಾರ ನಡೆಸುತ್ತಿದ್ದು, ಶೇ 85ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. 8 ಬೋಗಿಗಳ ರೈಲುಗಳನ್ನು ಓಡಿಸಲಾಗುತ್ತಿದೆ.
ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ವಂದೇ ಭಾರತ್ ರೈಲು ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ದಿನಕ್ಕೆ ಒಂದು ಟ್ರಿಪ್ ಈ ರೈಲು ಸದ್ಯ ಸಂಚಾರ ನಡೆಸುತ್ತಿದೆ. ಜೂನ್ 28ರಂದು ಪ್ರಧಾನಿ ನರೇಂದ್ರ ಮೋದಿ ರೈಲು ಸಂಚಾರಕ್ಕೆ ಚಾಲನೆ ನೀಡಿದರು.

ಈ ರೈಲಿಗೆ ಪ್ರಯಾಣಿಕರಿಂದ ಸಿಗುವ ಪ್ರತಿಕ್ರಿಯೆಯನ್ನು ನಿರೀಕ್ಷೆ ಮಾಡದಿದ್ದ ನೈಋತ್ಯ ರೈಲ್ವೆ 8 ಬೋಗಿಗಳ ರೈಲುಗಳನ್ನು ಓಡಿಸುತ್ತಿದೆ. ದೇಶದ ಬೇರೆ-ಬೇರೆ ರಾಜ್ಯಗಳಲ್ಲಿ 12 ಮತ್ತು 16 ಬೋಗಿಯ ರೈಲುಗಳನ್ನು ಓಡಿಸಲಾಗುತ್ತಿದೆ. 8 ಬೋಗಿಯ ರೈಲುಗಳೇ ಶೇ 85ರಷ್ಟು ಭರ್ತಿಯಾಗುತ್ತಿದೆ.
ಎಷ್ಟು ಜನರ ಪ್ರಯಾಣ?; ಜೂನ್ 28 ರಿಂದ ಜುಲೈ 17ರ ತನಕ ರೈಲು ನಂಬರ್ 20661 ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲಿನ ಚೇರ್ಕಾರ್ನಲ್ಲಿ ಶೇ 79ರಷ್ಟು, ಎಕ್ಸಿಕ್ಯುಟಿವ್ ಕಾರ್ನಲ್ಲಿ ಶೇ 82ರಷ್ಟು ಜನರು ಸಂಚಾರ ನಡೆಸಿದ್ದಾರೆ. ರೈಲು ನಂಬರ್ 20662 ಧಾರವಾಡ, ಕೆಎಸ್ಆರ್ ಬೆಂಗಳೂರು ರೈಲಿನ ಚೇರ್ಕಾರ್ನಲ್ಲಿ ಶೇ 92 ಮತ್ತು ಎಕ್ಸಿಕ್ಯುಟಿವ್ ಕಾರ್ನಲ್ಲಿ ಶೇ 89ರಷ್ಟು ಜನರು ಸಂಚಾರ ನಡೆಸಿದ್ದಾರೆ.
ಎರಡೂ ಮಾರ್ಗದಲ್ಲಿ ರೈಲಿನ ಸರಾಸರಿ ಪ್ರಯಾಣಿಕರ ಸಂಖ್ಯೆ ಚೇರ್ಕಾರ್ನಲ್ಲಿ ಶೇ 85.5 ಮತ್ತು ಎಕ್ಸಿಕ್ಯುಟಿವ್ ಕಾರ್ನಲ್ಲಿ ಶೇ 85.5 ಆಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು-ಧಾರವಾಡ ಮಾರ್ಗಕ್ಕೆ ಹೋಲಿಕೆ ಮಾಡಿದರೆ ಧಾರವಾಡ-ಬೆಂಗಳೂರು ನಡುವೆಯೇ ಹೆಚ್ಚು ಜನರು ಸಂಚಾರ ನಡೆಸುತ್ತಿದ್ದಾರೆ.
ವಂದೇ ಭಾರತ್ ರೈಲಿನ ಪ್ರಯಾಣ ದರ ದುಬಾರಿ ಎಂಬ ಮಾತಿನ ನಡುವೆಯೇ ಹೆಚ್ಚು ಜನರು ರೈಲಿನಲ್ಲಿ ಸಂಚಾರ ನಡೆಸುತ್ತಿದ್ದಾರೆ. ನೋವಿನ ವಿಷಯ ಎಂದರೆ ಭಾರತೀಯ ರೈಲ್ವೆ ಹವಾನಿಯಂತ್ರಿತ ರೈಲುಗಳ ದರಗಳಲ್ಲಿ ಶೇ 25ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಆದರೆ ಇದು ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲಿಗೆ ಅನ್ವಯ ಆಗಿಲ್ಲ.
ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲಿಗೆ ಸದ್ಯ ಯಶವಂತಪುರ, ದಾವಣಗೆರೆ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿಯಲ್ಲಿ ಮಾತ್ರ ನಿಲುಗಡೆ ಇದೆ. ಈ ರೈಲಿಗೆ ಒಟ್ಟು 6 ನಿಲುಗಡೆ ನೀಡಬೇಕು ಎಂಬ ಬೇಡಿಕೆ ಇದೆ. ಹೆಚ್ಚು ನಿಲುಗಡೆ ನೀಡಬೇಕು, ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಇಲಾಖೆಯನ್ನು ಒತ್ತಾಯಿಸಲಾಗುತ್ತಿದೆ.
ಕಳೆದ 30 ದಿನಗಳಲ್ಲಿ ಶೇ 50ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚಾರ ನಡೆಸಿದ ರೈಲುಗಳ ದರಗಳಲ್ಲಿ ಶೇ 25ರಷ್ಟು ರಿಯಾಯಿತಿಯನ್ನು ಭಾರತೀಯ ರೈಲ್ವೆ ಜುಲೈ 8ರಂದು ಘೋಷಣೆ ಮಾಡಿತು. ಆದರೆ ಶೇ 85ರಷ್ಟು ಪ್ರಯಾಣಿಕರು ಸಂಚಾರ ನಡೆಸುವ ಕಾರಣ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿಗೆ ಈ ಆದೇಶ ಅನ್ವಯವಾಗಿಲ್ಲ.
ಪ್ರಯಾಣ ದರದ ಮಾಹಿತಿ; ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲಿನ ಚೇರ್ ಕಾರ್ ಪ್ರಯಾಣ ದರ 1,185 ರೂ.ಗಳು ಮತ್ತು ಎಕ್ಸಿಕ್ಯುಟಿವ್ ಕಾರ್ ಸೀಟು ದರ 2,265 ರೂ.ಗಳು. ಧಾರವಾಡ-ಕೆಎಸ್ಆರ್ ಬೆಂಗಳೂರು ನಡುವೆ ಚೇರ್ ಕಾರ್ ದರ 1,350 ರೂ.ಗಳು ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್ ದರ 2,460 ರೂ.ಗಳು.
ಬೆಂಗಳೂರು-ಉತ್ತರ ಕರ್ನಾಟಕ ಸಂಪರ್ಕಿಸುವ ಈ ರೈಲು ಧಾರವಾಡದಿಂದ ಮುಂಜಾನೆ ಹೊರಟು ಕಚೇರಿ ಸಮಯಕ್ಕೆ ಬೆಂಗಳೂರು ತಲುಪುವಂತೆ ಆಗಬೇಕು ಎಂದು ಬೇಡಿಕೆ ಇಡಲಾಗಿದೆ. ಸದ್ಯ ಮಧ್ಯಾಹ್ನ 1.15ಕ್ಕೆ ಹೊರಡುವ ರೈಲು ಸಂಜೆ ಬೆಂಗಳೂರು ನಗರ ತಲುಪುತ್ತಿದೆ.












Click it and Unblock the Notifications