Bengaluru-Chennai Expressway; ಯಾವ ರಾಜ್ಯದಲ್ಲಿ ಎಷ್ಟು ಪೂರ್ಣ?
ಬೆಂಗಳೂರು, ಫೆಬ್ರವರಿ 15: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ (ಬಿಇಸಿ) ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಯೋಜನೆ. ಭಾರತ್ ಮಾಲಾ ಯೋಜನೆಯಡಿ ಕೇಂದ್ರ ಸರ್ಕಾರ ಈ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡುತ್ತಿದೆ. 2024ರ ಅಂತ್ಯಕ್ಕೆ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ) 258 ಕಿ. ಮೀ. ಉದ್ದದ ಈ ರಸ್ತೆಯನ್ನು ನಿರ್ಮಾಣ ಮಾಡುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಆಗಾಗ ರಸ್ತೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರತಿದಿನ 45 ರಿಂದ 60 ವ ವಾಹನಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕದಲ್ಲಿ ಹೊಸಕೋಟೆ ಮೂಲಕ ಆರಂಭವಾಗುವ ಈ ಉತ್ತಮ ಗುಣಮಟ್ಟದ ನಾಲ್ಕು ಪಥದ ರಸ್ತೆ ಚಿತ್ತೂರು ಮೂಲಕ ಸಾಗಿ ತಮಿಳುನಾಡಿನ ತಿರುವಳ್ಳೂರು ತಲುಪಲಿದೆ. ಮೂರು ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಈ ಯೋಜನೆಯ ಪ್ರಗತಿ ಹೆಚ್ಚಿದೆ.
2023ರ ಜುಲೈನಲ್ಲಿಯೇ ನಿತಿನ್ ಗಡ್ಕರಿ ಕರ್ನಾಟಕದಲ್ಲಿ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇನ ಕಾಮಗಾರಿಯ ಚಿತ್ರಗಳನ್ನು ಟ್ವೀಟ್ ಮಾಡಿದ್ದರು. ಈ ಬಾರಿಯ ಮುಂಗಾರು ಆಗಮನವಾಗುವ ಮೊದಲೇ ಭೂ ಸ್ವಾಧೀನ, ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗಳನ್ನು ಸಂಗ್ರಹ ಮಾಡಿಕೊಂಡು ಕಾಮಗಾರಿ ತ್ವರಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯಾವ ರಾಜ್ಯದಲ್ಲಿ ಎಷ್ಟು ಪ್ರಗತಿ?; ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಮೂರು ರಾಜ್ಯ 7 ಜಿಲ್ಲೆಗಳ ಮೂಲಕ ಹಾದು ಹೋಗುವ ರಸ್ತೆಯಾಗಿದೆ. ಕರ್ನಾಟಕದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳ ಮೂಲಕ ರಸ್ತೆ ಸಾಗುತ್ತದೆ. ರಾಜ್ಯದಲ್ಲಿ 71 ಕಿ. ಮೀ. ರಸ್ತೆ ಇರಲಿದ್ದು, 5,465 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಶೇ 87ರಷ್ಟು ಕಾಮಗಾರಿ ರಾಜ್ಯದಲ್ಲಿ ಪೂರ್ಣಗೊಂಡಿದೆ.
ಆಂಧ್ರ ಪ್ರದೇಶದಲ್ಲಿ ಚಿತ್ತೂರು ಜಿಲ್ಲೆಯಲ್ಲಿ ಮಾತ್ರ ರಸ್ತೆ ಹಾದು ಹೋಗುತ್ತದೆ. ರಾಜ್ಯದಲ್ಲಿ ರಸ್ತೆ ಸಾಗುವ ಉದ್ದ 85 ಕಿ. ಮೀ. ಆಗಿದೆ. 4,259 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಆಂಧ್ರ ಪ್ರದೇಶದಲ್ಲಿ ಶೇ 40ರಷ್ಟು ಕಾಮಗಾರಿ ಮಾತ್ರ ಮುಗಿದಿದೆ.
ತಮಿಳುನಾಡಿನಲ್ಲಿ ಈ ರಸ್ತೆ ವೆಲ್ಲೂರು, ಕಾಂಚಿಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳ ಮೂಲಕ ಸಾಗಲಿದೆ. ಒಟ್ಟು ಉದ್ದ 106 ಕಿ. ಮೀ. ಆಗಿದೆ. ರಾಜ್ಯದಲ್ಲಿ 5,971 ಕೋಟಿ ರೂ. ವೆಚ್ಚದಲ್ಲಿ ರಸ್ತೆಯನ್ನು ನಾಲ್ಕು ಪ್ಯಾಕೇಜ್ಗಳಾಗಿ ವಿಂಗಡನೆ ಮಾಡಿಕೊಂಡು ನಿರ್ಮಾಣ ಮಾಡಲಾಗುತ್ತಿದೆ.
34 ಪ್ರಮುಖ ಸೇತುವೆ, 31 ಕಿರು ಸೇತುವೆ, 3 ರೈಲ್ವೆ ಸೇತುವೆ, ಮೂರು ಇಂಟರ್ ಚೇಂಜ್ಗಳು ನಿರ್ಮಾಣಗೊಳ್ಳುತ್ತಿವೆ. ವಾಲಾಜಪೇಟೆ ಮತ್ತು ಅರಕ್ಕೋಣಂ ನಡುವಿನ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಶೇ 62.22ರಷ್ಟು ಕೆಲಸಗಳು ಪೂರ್ಣಗೊಂಡಿದೆ. ಈ ರಸ್ತೆಗೆ ತಮಿಳುನಾಡಿನಲ್ಲಿಯೇ 4 ಟೋಜ್ ಮತ್ತು ಒಂದು ಟ್ರಕ್-ಲೇನ್ ನಿರ್ಮಾಣವಾಗಲಿದೆ.
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಪೂರ್ಣಗೊಂಡ ಬಳಿಕ ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು, ಸರಕು ಸಾಗಣೆಗೆ ಸಹ ಸಹಾಯಕವಾಗುವ ಮೂಲಕ ಆರ್ಥಿಕವಾಗಿಯೂ ವೆಚ್ಚ ಕಡಿಮೆಯಾಗಲಿದೆ. ಈ ರಸ್ತೆ ಸಂಪೂರ್ಣವಾಗಿ ಮಾನವ ರಹಿತ ಟೋಲ್ ವ್ಯವಸ್ಥೆಯನ್ನು ಹೊಂದಿರುತ್ತದೆ.
ಪ್ರಸ್ತುತ ಎರಡು ಮಾರ್ಗಗಳು ಒಂದು 355 ಕಿ. ಮೀ ಮತ್ತು ಇನ್ನೊಂದು 372 ಕಿ. ಮೀ. ಇದೆ. ಆದರೆ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ 258 ಕಿ. ಮೀ. ಮಾತ್ರ ಇರಲಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿದೆ. ಎಕ್ಸ್ಪ್ರೆಸ್ ವೇ ವೇಗದ ಮಿತಿ 120 ಕಿ. ಮೀ. ಆಗಿರಲಿದೆ. ಅಲ್ಲದೇ ಈ ರಸ್ತೆಯ ಅಕ್ಕಪಕ್ಕದಲ್ಲಿ ಟೌನ್ಶಿಪ್ಗಳನ್ನು ಸಹ ನಿರ್ಮಾಣ ಮಾಡುವ ಉದ್ದೇಶವಿದೆ.












Click it and Unblock the Notifications