ಎಲ್ಲೋ ಇಲ್ಲ... ಇಲ್ಲೇ ಇದೆ ; ಜಾನಪದ ಲೋಕ!
ಬೆಂಗಳೂರನ್ನು ಕವಿ ನಿಸಾರ್ ‘ಬೆರಕೆ ನಗರ’ ಎಂದು ಗುರ್ತಿಸಿದ್ದಾರೆ. ಈ ಬೆರಕೆ ನಗರದ ಗಲಿಬಿಲಿ, ಟ್ರಾಫಿಕ್ ಕಿರಿಕಿರಿ, ಕಚೇರಿಯಲ್ಲಿನ ಏಕತಾನತೆಯಿಂದ ತಪ್ಪಿಸಿಕೊಂಡು ಜಾನಪದ ಲೋಕಕ್ಕೆ ಬನ್ನಿ... ನೀವು ನೋಡದ ಜಗತ್ತುಅಲ್ಲಿದೆ!
- ಅಂಜಲಿ ರಾಮಣ್ಣ, ಬೆಂಗಳೂರು.
ನಾನು ‘ಜಾನಪದ ಲೋಕ’ಕ್ಕೆ ಎರಡೂ ಬದಿಯಿಂದಲೂ ಹತ್ತಿರದಲ್ಲೇ ಇದ್ದೇನೆ. ಒಂದೊಮ್ಮೆ ಜಾನಪದ ಸಂಸ್ಕೃತಿಯ ವಿದ್ಯಾರ್ಥಿಯೂ ಆಗಿದ್ದೆ. ಅದು ನನ್ನ ನೆಚ್ಚಿನ ವಿಷಯಗಳಲ್ಲೊಂದಾದರೂ, ಯಾವುದೇ ನಿಗದಿತ ಕಾರಣವಿಲ್ಲ, ನಾನು ನಮ್ಮ ಮನೆಯಂಗಳದಲ್ಲೇ ಇರುವ ‘ಜಾನಪದ ಲೋಕ’ಕ್ಕೆ ಭೇಟಿಯೇ ನೀಡಿರಲಿಲ್ಲ.
ರಾಜ್ಯೋತ್ಸವದ ಸಂದರ್ಭದಲ್ಲಿ ದಟ್ಸ್ ಕನ್ನಡದ ಓದುಗರಿಗಾಗಿ ವಿಚಿತ್ರಾನ್ನದಲ್ಲಿ ಬಡಿಸಿದ್ದ ರಸ(ಪ್ರಶ್ನೆ)ಗವಳದಲ್ಲಿ ನನ್ನ ಗಮನಸೆಳೆದದ್ದು ನಮ್ಮವರೇ ಆದ ದಿವಂಗತ ಎಚ್.ಎಲ್.ನಾಗೇಗೌಡರ ಬಗ್ಗೆ ಇದ್ದ ಒಂದು ಎಳೆ. ಛೇ, ಹಿತ್ತಲ ಗಿಡದ ಮದ್ದಿನ ಗುಣವನ್ನು ಮನಗಾಣಲೇಯಿಲ್ಲವಲ್ಲ ಎನ್ನುವ ಬೇಸರ ವಿಚಿತ್ರಾನ್ನದ ರುಚಿಯನ್ನು ಪೂರ್ತಿಯಾಗಿ ಸವಿಯಲು ಬಿಡಲಿಲ್ಲ. ಬರಲಿರುವ ವಾರಾಂತ್ಯದಲ್ಲಿ ಜಾನಪದ ಲೋಕಕ್ಕೆ ಹೋಗಲೇ ಬೇಕೆಂದುಕೊಂಡ ಮೇಲೆ ಮನಸ್ಸಿಗೆ ಸ್ವಲ್ಪ ನೆಮ್ಮದಿ. ಅಂತರ್ಜಾಲದಲ್ಲಿ ಒಂದಿಷ್ಟು ಮಾಹಿತಿ ಸಂಗ್ರಸಿಕೊಂಡೆ.


ಅಲ್ಲಿಗೆ ಹೋದಾಗ ಗೊತ್ತಾಯ್ತು ಅಂತರ್ಜಾಲದಲ್ಲಿ ಪ್ರಸ್ತುತ ಇರುವ ಮಾಹಿತಿಗಳು ಪಳಿಯುಳಿಕೆಯಂತೆ ಅಂತ! ಬಿದಿರಮ್ಮನ ಗಾಥೆ ಹಾಡುತ್ತಾ ನಮ್ಮನ್ನು ಸ್ವಾಗತಿಸಿದ ನಿಯೋಜಿತ ಗೈಡ್ ಮಲ್ಲಯ್ಯ ಅವರ ಸಹಾಯದಿಂದ, ನನಗೆ ಗ್ಲೋಬಲ್ ಕುಟುಂಬ ಒದಗಿಸಿಕೊಟ್ಟ ‘ದಟ್ಸ್ ಕನ್ನಡ ’ಕ್ಕಾಗಿ ಜಾನಪದ ಲೋಕದಿಂದ ಹೊರಗೆಲ್ಲಿಯೂ ಸಿಗದ ಕೆಲವಾದರೂ ವಿಷಯಗಳನ್ನು ಕಲೆಹಾಕಬೇಕೆಂದುಕೊಂಡೆ.
ಅಪರೂಪದ ಕೆಲವು ಕಲೆಗಳ, ಶಿಲೆಗಳ ಫೋಟೋ ದಾಖಲಿಸಿಕೊಂಡೆ. ಜಾನಪದ ಕಲೆಗಳ ಬಗ್ಗೆ ಒಂದೇ ಸಮನೆ 1800 ಗಂಟೆಗಳ ಕಾಲ ಕುಳಿತು ನೋಡಬಹುದಾದಷ್ಟು ವೀಡಿಯೋ ಸಂಗ್ರಹವಿದೆ, ಸುಮಾರು 800 ಗಂಟೆಗಳಷ್ಟು ಬಿಡುವಿಲ್ಲದೆ ಕೇಳಬಹುದಾದಷ್ಟು ಧ್ವನಿಮುದ್ರಿಕೆಗಳಿವೆ ಎಂದು ಕೇಳಿದಾಗ ಅಚ್ಚರಿಪಟ್ಟೆ.
ಪ್ರತೀ ತಿಂಗಳ ಕೊನೆಯ ಭಾನುವಾರದಂದು ಸಂಜೆ 4 ಗಂಟೆಗೆ ಒಂದು ಕಲೆಯ ಪ್ರದರ್ಶನವಿರುತ್ತದೆ ಎಂದು ತಿಳಿದಾಗ ಮತ್ತೊಮ್ಮೆ ಹೋಗಿ ನೋಡಲೇಬೇಕು ಅಂದುಕೊಂಡೆ. ಅದಕ್ಕಾಗಿ ಫೋನ್ ನಂಬರ್ +91-08113-71555 ಬರೆದುಕೊಂಡು ಬಂದೆ. ಮಾರ್ಗಸೂಚಿಯಾಗಿ ಸಾಮಾನ್ಯವಾಗಿ ಬಳಸುವ ಬಾಣದ ಗುರ್ತಿಗೆ ಬದಲಾಗಿ, ಗೋಕುಲಾಷ್ಟಮಿಯ ಕೃಷ್ಣನ ನೆನಪು ಮಾಡುವ ಹೆಜ್ಜೆಗುರುತುಗಳನ್ನು ಬಳಸಿರುವುದು ಬಹಳ ಹಿತವೆನಿಸಿತು.
‘ಜನಪದವೇ ಇಲ್ಲದ ನಾಡಿನವರು ಮ್ಯೂಸಿಯಂ ಮಾಡುವುದರಲ್ಲಿ ಸಿದ್ಧಹಸ್ತರು, ಆದರೇ ಸಮಸ್ತ ಸೊಗಡಿರುವ ನಾವು ಕಲೆಹಾಕಿ ಬೆಳೆಸುವುದರಲ್ಲಿ ಸೋಲುತ್ತೇವೆ ’ ಎನ್ನುವ ಅಪವಾದ ನಮ್ಮ ಮೇಲಿದೆ. ಅದನ್ನು ಸುಳ್ಳುಮಾಡಲು ಮಹನೀಯರೊಬ್ಬರು ಜಾನಪದ ಲೋಕ ಹುಟ್ಟುಹಾಕಿದ್ದಾರೆ. ನಮ್ಮೆಲ್ಲರ ಕನಸಿನಂತೆ ಅದನ್ನು ಬೆಳೆಸಿ ಸಾಕಾರಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಜಾನಪದ ಲೋಕದಲ್ಲಿ ನನಗೆ ಜನಪದ ಯಾತ್ರೆ ಮಾಡಿಸಿದ ಜಾನಪದ ರಸಪ್ರಶ್ನೆ ರೂವಾರಿ ವಿಚಿತ್ರಾನ್ನದ ಶ್ರೀವತ್ಸ ಜೋಶಿಯರಿಗೆ ಮತ್ತು ಮನಸ್ಸು-ಮೆದುಳುಗಳ ಸಮ್ಮಿಳಿತ ದಟ್ಸ್ ಕನ್ನಡಕ್ಕೆ ನನ್ನದೊಂದು ಥ್ಯಾಂಕ್ಸ್.












Click it and Unblock the Notifications