Kundapur-Talapady Highway: ಕುಂದಾಪುರ-ತಲಪಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾದ ಹಣವೆಷ್ಟು?
Kundapur-Talapady National Highway: ರಾಜ್ಯದಲ್ಲಿ ಈಗಾಗಲೇ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದೀಗ ಕುಂದಾಪುರ-ತಲಪಾಡಿ ವರೆಗೆ ರಾಷ್ಟ್ರೀಯ ಹೆದ್ದಾರಿ 66 ಅನ್ನು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಎನ್ಎಚ್ಎಐ ಮುಂದಾಗಿದೆ. ಹಾಗಾದರೆ, ಎಷ್ಟು ಬಿಡುಗಡೆಯಾಗಿದೆ ಹಾಗೂ ಇದರಿಂದ ಯಾವೆಲ್ಲ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕುಂದಾಪುರ-ತಲಪಾಡಿ ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ 135 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂಪಿಸಿದೆ. ಕುಂದಾಪುರದಿಂದ ಸುರತ್ಕಲ್ ಎನ್ಐಟಿಕೆ ಮತ್ತು ನಂತೂರಿನಿಂದ ತಲಪಾಡಿ ನಡುವೆ ಮಾತ್ರ ಈ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. 13 ಕಡೆಗಳಲ್ಲಿ ಸರ್ವಿಸ್ ರಸ್ತೆಗಳು, 7 ಕಡೆ ಪಾದಚಾರಿ ಮೇಲ್ಸೇತುವೆ ಮತ್ತು ಕಟಪಾಡಿ ಜಂಕ್ಷನ್ನಲ್ಲಿ ವಾಹನ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಈಗಾಗಲೇ ಸಚಿವಾಲಯದಿಂದ ಅನುಮೋದನೆ ದೊರೆತಿದೆ.

2010ರಲ್ಲಿ ಆರಂಭಗೊಂಡು 8 ವರ್ಷಗಳ ಕಾಲ ನಡೆದು, ಪೂರ್ಣಗೊಂಡಿರುವ ಚತುಷ್ಪಥ ಯೋಜನೆ ಕೆಲವೆಡೆ ಇನ್ನೂ ಸರ್ವಿಸ್ ರಸ್ತೆ ಆಗಿಲ್ಲ. ಕೆಲವೆಡೆ ಜಂಕ್ಷನ್ಗಳಿದ್ದು, ಹೆದ್ದಾರಿಯಲ್ಲೇ ಅಕ್ಕಪಕ್ಕದ ಊರಿಂದ ಬರುವ-ಹೋಗುವ ವಾಹನಗಳಿಗೆ ತೊಡಕು ಆಗುತ್ತಿದೆ. ಅಪಘಾತಗಳೂ ಕೂಡ ನಡೆಯುತ್ತಿವೆ. ಮಧ್ಯೆ ಬಿಟ್ಟು ಹೋಗಿರುವ 13 ಕಡೆ ಸುಮಾರು 8 ಕಿ.ಮೀಟರ್ನಷ್ಟು ಹೊಸದಾಗಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ನೀರಿನ ಕೊಳವೆ, ವಿದ್ಯುತ್ ಕಂಬ, ಟೆಲಿಕಾಂ ಕೇಬಲ್, ಮರಗಳು, ಕಟ್ಟಡಗಳ ತೆರವು ಕಾರ್ಯ ಆಗಬೇಕಿದೆ. ಹೆಚ್ಚಿನ ಕಡೆ ಸಾರ್ವಜನಿಕರು ಹೆದ್ದಾರಿ ಜಾಗ ಅತಿಕ್ರಮಣ ಮಾಡಿದ್ದಾರೆ. ಕೆಲವರು ಪರಿಹಾರ ಪಡೆದಿದ್ದರೂ, ಭೂಮಿ ಬಿಟ್ಟು ಕೊಟ್ಟಿಲ್ಲ. ಕೆಲವೆಡೆ ಅಧಿಕಾರಿಗಳು ಪರಿಹಾರ ನೀಡಿಲ್ಲ. ಅಂತಹವರ ದಾಖಲೆ ಪರಿಶೀಲಿಸಲು ಕಚೇರಿಗೆ ಕರೆಸಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಈ ಕಾಮಗಾರಿಗಳನ್ನು ನಡೆಸಲು ಟೆಂಡರ್ ಕರೆಯಲಾಗಿದೆ. ಎಲ್ಲಾ ಭೂಸ್ವಾಧೀನ ನಡೆದ ಬಳಿಕ ಕಾಮಗಾರಿ ಆರಂಭ ಆಗಲಿದೆ. ಭೂಸ್ವಾಧೀನ ನಡೆಸದೆ, ಕೋರ್ಟ್ ತಡೆಯಾಜ್ಞೆ ಮತ್ತಿತರ ವಿವಾದದಿಂದ ಕಾಮಗಾರಿ ವಿಳಂಬ ಆದರೆ, ಗುತ್ತಿಗೆದಾರರು ನಷ್ಟದ ಭಯದಿಂದ ಕಾಮಗಾರಿ ಆರಂಭಿಸುತ್ತಿಲ್ಲ. ಹೆಜಮಾಡಿ ಟೋಲ್ ಪ್ಲಾಝಾ ಬಳಿ ಹೆದ್ದಾರಿ ಜಾಗದಲ್ಲಿ ಅಂಗಡಿ ತೆರೆದು, ಅದನ್ನು ತೆರವು ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ.
ಪಣಂಬೂರು ಆರ್ಒಬಿ ಪಣಂಬೂರು ಎಂಸಿಎಫ್ ಬಳಿ ಗೂಡ್ಸ್ ರೈಲು ಸಂಚಾರದಿಂದ ಹೆದ್ದಾರಿ ಸಂಚಾರಕ್ಕೆ ಸಮಸ್ಯೆ ಆಗುತ್ತಿದ್ದು, ಇಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾಪ ಸಲ್ಲಿಸಿದ್ದು, ಪ್ರಾಥಮಿಕ ಹಂತದಲ್ಲೇ ಇದೆ. ಇದರ ಮೊತ್ತವನ್ನು ಎನ್ಎಂಪಿಎ ಪಾವತಿ ಮಾಡಬೇಕಿದೆ.












Click it and Unblock the Notifications