ಈ ಪತ್ರಕ್ಕೆ ನಂದನ್ ನಿಲೇಕಣಿ ಉತ್ತರ ಕೊಡುವರೆ?
ಯುಐಡಿಎಐನ ಅಧ್ಯಕ್ಷರಾಗಿ, ಇನ್ಫೋಸಿಸ್ನ ಮಾಜಿ ಉದ್ಯೋಗಿ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಳಿದಿರುವ ನಂದನ್ ನಿಲೇಕಣಿ ಅವರ ಕನಸಿನ ಕೂಸು 'ಆಧಾರ್' ವಿಶಿಷ್ಟ ಗುರುತಿನ ಚೀಟಿಯ ಪ್ರಯೋಜನ ಇನ್ನೂ ಸಾಬೀತಾಗಬೇಕಿದೆ. ಆಧಾರ್ ಕಾರ್ಡ್ ದೇಶದ ಜನರ ಅನೇಕ ಸಮಸ್ಯೆಗಳನ್ನು ಪರಿಹರಿಸಬಲ್ಲದು, ಭ್ರಷ್ಟಾಚಾರ ನಿಗ್ರಹಿಸಲು ಅನುಕೂಲವಾಗಬಲ್ಲದು ಎಂದು ನಂದನ್ ಹೇಳುತ್ತಿದ್ದರೆ, ಆಧಾರ್ ಕಸದ ಬುಟ್ಟಿಗೆ ಹಾಕಬೇಕಾದ ಚೀಟಿ ಎಂದು ಅವರ ವಿರೋಧಿಗಳು ಟೀಕಿಸುತ್ತಿದ್ದಾರೆ.
ಅದರ ಲಾಭ ಅಥವಾ ದುರ್ಲಾಭಗಳೇನೇ ಇರಲಿ, ದೇಶದ ಕೋಟ್ಯಂತರ ಜನರ ಕೈಯನ್ನು ಆಧಾರ್ ಕಾರ್ಡ್ ಈಗಾಗಲೆ ಸೇರಿಯಾಗಿದೆ. ಕೆಲವರು ಇದನ್ನು ಸ್ವಾಗತಿಸಿದ್ದರೆ, ಕೆಲವರಿಗೆ (ಎಲ್ಪಿಜಿ ಗ್ರಾಹಕರಿಗೆ) ಸಾಕಷ್ಟು ಸಂಕಷ್ಟವನ್ನೂ ತಂದಿಟ್ಟಿದೆ. ಇದು ಒಂದು ರೀತಿಯದಾದರೆ, ಆಧಾರ್ ಕಾರ್ಡ್ ನಲ್ಲಿ ಹುದುಗಿರುವ ಅತ್ಯಂತ ಮಹತ್ವದ ಮಾಹಿತಿಗಳು ದುಷ್ಟ ಜೀವಿಗಳ ಕೈಸೇರಿದರೆ ಗತಿಯೇನು ಎಂದು ಮೈಸೂರಿನ ನಿವೃತ್ತ ಮೇಜರ್ ಜನರಲ್ ವೊಬ್ಬರು ಆಂತಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರವನ್ನೂ ನಿಲೇಕಣಿ ಅವರಿಗೆ 2011ರಲ್ಲಿ ಬರೆದಿದ್ದರು. ಅದಕ್ಕಿನ್ನೂ ಉತ್ತರ ಬಂದಿಲ್ಲವಂತೆ. ಆ ಪತ್ರವನ್ನು ಒನ್ಇಂಡಿಯಾ ಕನ್ನಡದ ಪ್ರಿಯ ಓದುಗರಾದ ಭರತ್ ಶಾಸ್ತ್ರಿ ಅವರು ಅನುವಾದಿಸಿದ್ದಾರೆ. ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.

ಮಾನ್ಯ ಶ್ರೀ ನಂದನ್ ನಿಲೇಕಣಿಯವರೆ,
ನಾನು ಈ-ಮೇಯ್ಲ್ ಮೂಲಕ 'ಆಧಾರ್' ಯೋಜನೆಯ ಭದ್ರತೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ಕೋರಿ ಒಂದು ಲೇಖನವನ್ನು ನಿಮಗೆ ಕಳುಹಿಸಿದ್ದೆ. ಆದರೆ ನಿಮ್ಮಿಂದ ಯಾವುದೇ ಉತ್ತರ ಪಡೆಯುವ ಸೌಭಾಗ್ಯ ನನಗಿನ್ನೂ ದೊರಕಿಲ್ಲ. ನೀವು ಉತ್ತರ ಕೊಡಲಾರದೇ ಹೋದರೂ, ನನ್ನ ಪತ್ರ ನಿಮಗೆ ತಲುಪಿದೆ ಎಂದಾದರೂ ನೀವು ತಿಳಿಸುವ ಸೌಜನ್ಯವನ್ನು ತೋರುತ್ತೀರಿ ಎಂದು ನಂಬಿದ್ದೇನೆ. ನಿಮ್ಮ ಅನುಕೂಲಕ್ಕೆಂದು ಅದೇ ಲೇಖನವನ್ನು ಲಗತ್ತಿಸಿದ್ದೇನೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ನನ್ನ ಹಿಂದಿನ ಪತ್ರದಲ್ಲಿ ಹೇಳಿದ್ದನ್ನು ಮುಂದುವರಿಸುತ್ತಾ, ಗೂಗಲ್ ಸಂಸ್ಥೆ ತನ್ನ ಯೂರೋಪಿಯನ್ ಡೇಟಾ ಕೇಂದ್ರಗಳಲ್ಲಿ ಸಂಗ್ರಹವಾದ ಬಳಕೆದಾರರ ಮಾಹಿತಿಯನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳ ಇಂಟೆಲಿಜೆನ್ಸ್ ಸಂಸ್ಥೆಗಳಿಗೆ ಕೊಟ್ಟಿರುವುದನ್ನು ಒಪ್ಪಿಕೊಂಡಿದೆ, ಎನ್ನುವ ವಿಷಯವನ್ನು ಕಳವಳದಿಂದ ಹೇಳುತ್ತಿದ್ದೇನೆ. ಏಕೆಂದರೆ ಗೂಗಲ್ ಕಂಪನಿಯು ಅಮೆರಿಕದಲ್ಲಿ ದಾಖಲಾಗಿರುವ ಕಂಪನಿ, ಮತ್ತು ಯು ಎಸ್ ಪೇಟ್ರಿಯಟ್ ಆಕ್ಟ್ ಅನುಸಾರವಾಗಿ, ಹಾಗೆ ಮಾಹಿತಿಯನ್ನು ಯು ಎಸ್ ನ ಇಂಟೆಲಿಜೆನ್ಸ್ ಸಂಸ್ಥೆಗಳು ಕೇಳಿದಲ್ಲಿ, ಕೊಡುವುದು ಅವರ ಕರ್ತವ್ಯ.
ನಿಮಗೆ ಬಹುಶಃ ತಿಳಿದಿರಬಹುದು, ಗೋರ್ಡನ್ ಫ಼್ರೇಜ಼ರ್, ಮೈಕ್ರೋಸಾಫ಼್ಟ್ ನ ಬ್ರಿಟನ್ನಿನ ನಿರ್ದೇಶಕ, ಇತ್ತೀಚೆಗೆ, ಮೈಕ್ರೋಸಾಫ಼್ಟ್ ಸಹ ಹಾಗೆ ಮಾಹಿತಿಯನ್ನು ಅಮೆರಿಕದ ಸರ್ಕಾರಕ್ಕೆ ಕೊಡಲು ಬದ್ಧವಾಗಿದೆ. ಹಾಗೂ ಪ್ರಪಂಚದ ಯಾವುದೇ ದೇಶದಲ್ಲಿ ಅದರ ಕಚೇರಿ ಇದ್ದರೂ ಇದಕ್ಕೆ ವಿನಾಯ್ತಿ ಇಲ್ಲವೆಂದು ಹೇಳಿ, ಸುದ್ದಿಯ ತಲೆಬರಹಗಳಲ್ಲಿ ಇದ್ದರು ಕೂಡ. ಇಷ್ಟೇ ಅಲ್ಲ, ಒಂದುವೇಳೆ ಮಾಹಿತಿಯನ್ನು ಅಮೆರಿಕದ ಸರ್ಕಾರಕ್ಕೆ ಕೊಟ್ಟರೂ ಅದರ ಬಗ್ಗೆ ಮತ್ಯಾವ ಸರ್ಕಾರಕ್ಕೂ ಹೇಳದಂತೆ ಕೂಡಾ ಅವರ ಬಾಯಿ ಮುಚ್ಚಿಸಬಹುದು. [ನಂದನ್ ನಿಲೇಕಣಿ ವ್ಯಕ್ತಿಚಿತ್ರ]
ಯುಐಡಿಎಐನ ಜಾಲತಾಣದಲ್ಲಿ ತಿಳಿಸಿದಂತೆ ಸಹಕಾರದ ಕಾಂಟ್ರಾಕ್ಟುಗಳನ್ನು ಹಲವು ಸಂಸ್ಥೆಗಳಿಗೆ ನೀಡಲಾಗಿದೆ, ಹಾಗೂ ಇವುಗಳಲ್ಲಿ ಕೆಲವು ವಿದೇಶಿ ಕಂಪನಿಗಳು. ಇವುಗಳಲ್ಲಿ ಮುಖ್ಯತಃ ನಾನು ಹೇಳಬಯಸುವುದು ಮೆ. ಅರ್ನ್ಸ್ಟ್ ಽ ಯಂಗ್, ಈ ಕಂಪನಿಯನ್ನು ಸೆಂಟ್ರಲ್ ಐಡಿ ಡಾಟಾ ರೆಪೊಸಿಟರಿ (ಎಲ್ಲ ಆಧಾರ್ ಕಾರ್ಡುದಾರರ ಕೈಬೆರಳಚ್ಚು ಮತ್ತು ಇತರ ವೈಯುಕ್ತಿಕ ವಿಷಯಗಳನ್ನು ಸಂಗ್ರಹಿಸುವ ಕೇಂದ್ರ) ಹಾಗೂ ತತ್ಸಂಬಂಧಿ ಸೇವೆಗಳನ್ನು ಪೂರೈಸುವ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ. ಮತ್ತೆರಡು ಕಂಪನಿಗಳು ಮೆ. ಎಲ್ 1 ಐಡೆಂಟಿಟಿ ಸಲ್ಯುಷನ್ಸ್, ಹಾಗೂ ಮೆ. ಆಕ್ಸೆಂಚರ್ ಸರ್ವೀಸಸ್. ಮೊದಲ ಎರಡು ಕಂಪನಿಗಳು ಅಮೆರಿಕದ ಗುಪ್ತಚರ ಸಂಸ್ಥೆಯ ಜತೆ ವ್ಯಾವಹಾರಿಕ ಸಂಬಂಧವಿಟ್ಟುಕೊಂಡಿವೆ.
ನನ್ನ ಹೆದರಿಕೆಯೇನೆಂದರೆ, ಈ ಸಂಸ್ಥೆಯಲ್ಲಿ ಕೆಲಸಮಾಡುವ ಇಂಟೆಲಿಜೆನ್ಸ್ ನಲ್ಲಿ ತರಬೇತಿ ಪಡೆದ ಯಾವುದೇ ವ್ಯಕ್ತಿ, ನಮ್ಮ ದೇಶದ ವ್ಯಕ್ತಿಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕಬಹುದು. ಇದರಿಂದ ಯಾವುದೇ ವೈರಿ ದೇಶ, ಅಥವಾ ಭಯೋತ್ಪಾದಕ ಸಂಘಟನೆ ನಮ್ಮ ದೇಶದ ವಿರುದ್ಧ 'ಸೈಬರ್ ಸಮರ'ವನ್ನೇ ಪ್ರಾರಂಭಿಸಬಹುದು. ಹಾಗೆಲ್ಲ ಆಗುವುದಿಲ್ಲ, ನಮ್ಮಲ್ಲಿ ನಮ್ಮಲ್ಲಿ ಸೈಬರ್ ಸುರಕ್ಷೆ ಭದ್ರವಾಗಿದೆ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ (ಪ್ರಾಯಶಃ) ಚೀನಾ ಮೂಲದ ಹ್ಯಾಕರ್ ಗಳು ನಮ್ಮ ಪ್ರಧಾನಮಂತ್ರಿ ಕಚೇರಿಯ ಕಂಪ್ಯೂಟರ್ ವ್ಯೂಹಕ್ಕೆ ಲಗ್ಗೆ ಹಾಕಿದ್ದರು. ತೀರ ಇತ್ತೀಚೆಗೆ ಕೇಂದ್ರ ಅರ್ಥಮಂತ್ರಿ(ಯಾಗಿದ್ದಾಗ) ಪ್ರಣಬ್ ಮುಖರ್ಜಿಯವರ ಕಚೇರಿಗೂ ಹ್ಯಾಕರ್ ಗಳು ದಾಳಿಯಿಟ್ಟಿದ್ದರು.
ಸೈಬರ್ ಸುರಕ್ಷೆ ಇಷ್ಟು ದುರ್ಬಲವಿರುವಾಗ 'ಎಲ್ಲ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿಡುವ' ಸೆಂಟ್ರಲ್ ಐಡಿ ಡಾಟಾ ರೆಪೊಸಿಟರಿಯನ್ನು ನಿರ್ಮಾಣ ಮಾಡುವುದೇ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಯೋಜನೆಯಲ್ಲಿ ದೇಶದ ಭದ್ರತೆಯ ದೃಷ್ಟಿಯಿಂದ ಇಷ್ಟು ಅಪಾಯಗಳಿದ್ದರೂ ಯಾರೂ ಅದನ್ನು ಪರಿಗಣಿಸಿಲ್ಲದೆ ಹೋಗಿರುವುದು ಒಂದು ಒಗಟಿನಂತೆ ಆಗಿದೆ. ಈ ಯೋಜನೆಯನ್ನು ಪರಿಶೀಲಿಸಲು ಇರುವ ಸಂಸದೀಯ ಸ್ಥಾಯಿ ಸಮಿತಿಯ ಕೆಲವು ಸದಸ್ಯರು ಕೇವಲ ಇದಕ್ಕೆ ಖರ್ಚಾಗುತ್ತಿರುವ ಬೃಹತ್ ಮೊತ್ತದ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ. ದೇಶದ ಸುರಕ್ಷೆಗೆ ಇದರಿಂದ ಬರುವ ಧಕ್ಕೆಯನ್ನು ಚರ್ಚಿಸಲು ಸೈಬರ್ ಸುರಕ್ಷೆಯ ಬಗ್ಗೆ ಅನುಭವವಿರುವ ಸಂಸ್ಥೆಯೊಂದನ್ನು ಇದರಲ್ಲಿ ತೊಡಗಿಸಬೇಕಾದ ಜರೂರತ್ತು ಇದೆ.
ನಿಮಗೆ ತಿಳಿದಿರಬಹುದು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ಼್ ಸೈನ್ಸ್ ಟೆಲಿಕಾಮ್ ಪ್ರಯೋಗಾಲಯವೊಂದನ್ನು ನಿರ್ಮಿಸಲು ಚೀನಾ ಸರ್ಕಾರ ಮತ್ತು 'ಪೀಪಲ್ಸ್ ಲಿಬರೇಷನ್ ಆರ್ಮಿ'(ಪಿ ಎಲ್ ಎ) ಯ ಜತೆ ಸಂಬಂಧವಿರುವ ಹ್ಯುವೈ ಟೆಕ್ನಾಲಜೀಸ್ ಒಟ್ಟಿಗೆ ಕರಾರೊಂದನ್ನು ಮಾಡಿಕೊಳ್ಳಲು ಪ್ರಸ್ತಾಪಿಸಿತ್ತು. ಮಾಧ್ಯಮಗಳಲ್ಲಿ ಪ್ರಕಟವಾದಂತೆ, ಈ ಕರಾರಿಗೆ ಭಾರತೀಯ ಇಂಟೆಲಿಜೆನ್ಸ್ ಸಮೂಹ ತನ್ನ ಆಕ್ಷೇಪಣೆಯನ್ನು ವ್ಯಕ್ತಪಡಿಸಿತ್ತು. ಇದೇ ಸಮೂಹ ಅಮೆರಿಕದ ಭದ್ರತಾಸಂಸ್ಥೆಗಳ ಜತೆ ಅತ್ಯಂತ ಹತ್ತಿರದ ಸಂಬಂಧವಿಟ್ಟುಕೊಂಡಿರುವ ಕಂಪನಿಗಳಿಗೆ ಪ್ರಜೆಗಳ ವೈಯುಕ್ತಿಕ ಮಾಹಿತಿಗಳನ್ನು ಸಂಗ್ರಹಿಸುವ ಕಾಂಟ್ರಾಕ್ಟುಗಳನ್ನು ಕೊಡುವುದರ ಬಗ್ಗೆ ಮೌನವಾಗಿರುವುದು ಯಾರಿಗೇ ಆದರೂ ಸೋಜಿಗವೆನ್ನಿಸುತ್ತದೆ.
ನಾನು ಈ ಮಾತನ್ನು ಮತ್ತೆ ಹೇಳುತ್ತಿದ್ದೇನೆ, ಈ ಕಂಪನಿಗಳು ಕಾನೂನಿನ ಮಿತಿಯೊಳಗೆ, ಅಥವಾ ಕಾನೂನುಬಾಹಿರವಾಗಿ ಸಂಗ್ರಹಿಸುವ ನಮ್ಮ ದೇಶದ ಪ್ರಜೆಗಳ ಮಾಹಿತಿಯನ್ನು ಅಮೆರಿಕದ ಭದ್ರತಾ ಸಂಸ್ಥೆಗಳಿಗೆ 'ಪೇಟ್ರಿಯಟ್ ಆಕ್ಟ್' ಅಡಿಯಲ್ಲಿ ಕೊಡಲು ಬದ್ಧವಾಗಿವೆ. ಮತ್ತೂ ಘೋರವೆಂದರೆ, ಹೀಗೆ ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ ಎನ್ನುವುದರ ಬಗ್ಗೆಯೂ ಈ ಕಂಪನಿಗಳು ಇದೇ 'ಪೇಟ್ರಿಯಟ್ ಆಕ್ಟ್' ನ ಅಡಿಯಲ್ಲಿ ಬಾಯಿ ಮುಚ್ಚಿಕೊಂಡಿರಬೇಕಾಗುತ್ತದೆ. ದೇಶದ ಸುರಕ್ಷೆ ಹಾಗೂ ಭದ್ರತೆಯ ಬಗ್ಗೆ ನನಗಿರುವ ನೈಜ ಕಳಕಳಿಯ ಈ ಪ್ರಶ್ನೆಗಳಿಗೆ ನೀವು ಉತ್ತರ ಕೊಡಬೇಕೆಂದು ಆಗ್ರಹಪೂರ್ವಕವಾಗಿ ಪ್ರಾರ್ಥಿಸುತ್ತೇನೆ.
ತಮ್ಮ ವಿಶ್ವಾಸಿ,
ಸುಧೀರ್ ವೊಂಬತ್ಕೆರೆ
ನಿವೃತ್ತ ಮೇಜರ್ ಜನರಲ್
ವಿಜಯನಗರ ಮೊದಲನೆ ಹಂತ
ಮೈಸೂರು












Click it and Unblock the Notifications