ಕರ್ನಾಟಕದ ಆಸ್ತಿ ಕನ್ನಡ ಅನುಷ್ಠಾನಕ್ಕೆ ನಿರಾಸಕ್ತಿ

ನಮ್ಮ ಕರ್ನಾಟಕ ಸರ್ಕಾರ ಈ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದ್ದನ್ನು ಮರೆತಂತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಈ ಸಲದ ಆಸ್ತಿ ತೆರಿಗೆ ಅರ್ಜಿಗಳನ್ನು ಆಂಗ್ಲ ಭಾಷೆಯಲ್ಲಿ ಮಾತ್ರ ಹೊರತಂದಿರುವುದು ಇದಕ್ಕೆ ಒಂದು ಉದಾಹರಣೆ. ಕರ್ನಾಟಕ ಸರ್ಕಾರದ ಕಣ್ಣಿಗೆ ಅಥವಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪಾಲಿಕೆಯವರ ಕನ್ನಡದ ಬಗೆಗಿನ ಅಸಡ್ಡೆ ಗಮನಕ್ಕೆ ಬಂದಿಲ್ಲವೇ?
ಈ ವರ್ಷದಿಂದ ನಾಮಫಲಕಗಳಲ್ಲಿ ಕಡ್ಡಾಯವಾಗಿ ಹಾಗೂ ಅಗ್ರ ಸ್ಥಾನದಲ್ಲಿ ಕನ್ನಡದಲ್ಲಿ ಇರಬೇಕೆಂಬ ಸರ್ಕಾರದ ಆದೇಶ ಜಾರಿಯಾದಂತೆ ಕಾಣಿಸುತ್ತಿಲ್ಲ. ನಮ್ಮ ಕನ್ನಡ ನೆಲದಲ್ಲೇ ಹುಟ್ಟಿದ ಕೆನರಾ ಬ್ಯಾಂಕಿನ ಎ.ಟಿ.ಎಂಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಸ್ಥಾನವಿಲ್ಲದಿರುವುದು ನೋಡಿ ತುಂಬ ಸಂಕಟವಾಗುತ್ತದೆ. ನಮ್ಮದೇ ನೆಲದ ಸಂಸ್ಥೆಗಳು ಹಾಗೂ ನಮ್ಮ ಸರ್ಕಾರದ ಅಂಗ ಸಂಸ್ಥೆಗಳೇ ಕನ್ನಡವನ್ನು ಅನುಷ್ಠಾನ ಮಾಡದಿರುವಾಗ ಇತರೇ ಖಾಸಗಿ ಸಂಸ್ಥೆಗಳನ್ನು ದೂರುವುದು ಹೇಗೆ?
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಅಧ್ಯಕ್ಷರು ಇದರ ಬಗ್ಗೆ ಗಮನಹರಿಸಿ ಕೆನರಾ ಬ್ಯಾಂಕ್ ಹಾಗೂ ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸುತ್ತೇನೆ. ಕರ್ನಾಟಕ ಸರ್ಕಾರ ಬರಿ ಕಾಗದದ ಮೇಲೆ ಅಥವಾ ಭಾಷಣಗಳಲ್ಲಿ ಕನ್ನಡ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರೆ ಸಾಲದು. ಈ ಆದೇಶವನ್ನು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸಬೇಕಾಗಿದೆ.
ವಂದನೆಗಳು
ಸಂಪಿಗೆ ಶ್ರೀನಿವಾಸ, ಬೆಂಗಳೂರು.












Click it and Unblock the Notifications