ಕನ್ನಡ ಅನುಷ್ಠಾನಕ್ಕೆ ಕಟಿ ಬದ್ಧ: ಯಡಿಯೂರಪ್ಪ

ಗೃಹ ಕಚೇರಿ ಕೃಷ್ಣ ದಲ್ಲಿ ಕನ್ನಡ ಪ್ರಾಧಿಕಾರವು 2009 ರ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವೆಂದು ಘೋಷಿಸಿ ಅನುಷ್ಠಾನಗೊಳಿಸುವ ಬಗ್ಗೆ ಹೊರತಂದಿರುವ 'ದಾರಿ ದೀವಿಗೆ' ಎಂಬ ಕೈಪಿಡಿ, ಭಿತ್ತಿಪತ್ರ ಹಾಗೂ ಅಂಟುಚೀಟಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ನಾಮಫಲಕ ಕನ್ನಡದಲ್ಲಿ ಹಾಕುವುದು ಕಡ್ಡಾಯವಿದ್ದರೂ ಪೂರ್ಣ ರೀತಿಯಲ್ಲಿ ಅನುಷ್ಠಾನವಾಗಿಲ್ಲದ ಕಾರಣ ಇನ್ನು ಮುಂದೆ ಕಾನೂನು ಉಲ್ಲಂಘಿಸಿದವರ ವಿರುದ್ಧ ರೂ 10 ಸಾವಿರ ರುಪಾಯಿ ದಂಡ ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಮತ್ತು ಹೊರರಾಜ್ಯಕ್ಕೆ ಹೊರತುಪಡಿಸಿ ಸರ್ಕಾರದ ಮಿಕ್ಕ ಎಲ್ಲಾ ವ್ಯವಹಾರಗಳು ಕನ್ನಡದಲ್ಲೇ ಆಗಲು, ಎಲ್ಲಾ ಸರ್ಕಾರಿ ವಾಹನಗಳಲ್ಲಿ ಕನ್ನಡ ಸಂಖ್ಯೆ ಕಡ್ಡಾಯವಾಗಿ ನಮೂದಿಸಲು ಇಲಾಖಾಧಿಕಾರಿಗಳಿಗೆ ಆದೇಶಿಸಲಾಗುವುದು. ಇದರಲ್ಲಿ ಸಾರ್ವಜನಿಕರು ಸಹಭಾಗಿಗಳಾಗಿ ಕನ್ನಡ ಅಂಕಿಗಳನ್ನು ಬಳಸಿ ಭಾಷಾಭಿಮಾನವನ್ನು ವ್ಯಕ್ತಪಡಿಸಬೇಕೆಂದು ತಿಳಿಸಿದರಲ್ಲದೆ ಇಲಾಖಾ ಮುಖ್ಯಸ್ಥರು ಈ ಬಗ್ಗೆ ಆಸಕ್ತಿವಹಿಸಿ ನಿರ್ದೇಶನ ನೀಡಿ ಭಾಷಾ ನೀತಿ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕೆಂದು ಯಡಿಯೂರಪ್ಪ ತಿಳಿಸಿದರು.
ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರ ಒಪ್ಪಿಕೊಂಡು ಹಲವಾರು ವರ್ಷಗಳಾಗಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನವಾಗಿರುವುದಿಲ್ಲ. ಎಲ್ಲಾ ಉದ್ದಿಮೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ಮೇಲೆ ನೇಮಕಾತಿಯಾಗುವಂತೆ ಆಯ್ಕೆ ಸಮಿತಿಗಳಲ್ಲಿ ಕಡ್ಡಾಯವಾಗಿ ಕನ್ನಡದ ಪ್ರತಿನಿಧಿಗಳನ್ನು ನಿಯೋಜಿಸಲಾಗುವುದೆಂದು ಅವರು ತಿಳಿಸಿದರು.
ಕನ್ನಡ ಭಾಷೆಗೆ ಶಾಸ್ತೀಯ ಸ್ಥಾನಮಾನದ ಬಗ್ಗೆ ಕೇಂದ್ರ ಸರ್ಕಾರ ಘೋಷಿಸಿದ್ದರೂ ಸಹ ಕಾನೂನು ತೊಡಕಿರುವುದರಿಂದ ಕಾನೂನು ತಜ್ಞರ ಜೊತೆಯಲ್ಲಿ ಚಿರ್ಚಿಸಿ ಇರಬಹುದಾದ ತೊಡಕುಗಳನ್ನು ಜರೂರಾಗಿ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ವಿಶ್ವ ಕನ್ನಡ ಸಮ್ಮೇಳನ ನಡೆಸುವ ದಿನಾಂಕವನ್ನು ಶೀಘ್ರದಲ್ಲಿ ನಿರ್ಧರಿಸಲಾಗುವುದು, ಭಾರತ ರತ್ನ ಭೀಮಸೇನ್ ಜೋಶಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications