ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಈ ಚರ್ಚೆ ಇಲ್ಲಿಗೆ ಮುಕ್ತಾಯ’ -ಸಂಪಾದಕ, ದಟ್ಸ್‌ಕನ್ನಡ

By Staff
|
Google Oneindia Kannada News


ಭೈರಪ್ಪನವರ ಕಾರ್ಯಕ್ರಮದಲ್ಲಿ ಕನ್ನಡ, ಕನ್ನಡಿಗನಿಗಾದ ಅವಮಾನ ಕುರಿತು ಮಂಜುನಾಥ್‌ ಅಜ್ಜಂಪುರ ಅವರ ಸಮರ್ಥನೆಯ ಬಾಣಕ್ಕೆ ಕಿರಣ್‌ ಅವರ ತಿರುಗುಬಾಣ!

ಮಾನ್ಯರೆ,

ಈ ಕೊಂಡಿಯಲ್ಲಿ ಸೋಮವಾರ ದಟ್ಸ್‌ಕನ್ನಡದಲ್ಲಿ ಪ್ರಕಟವಾದ ಮಂಜುನಾಥ್‌ ಅಜ್ಜಂಪುರ ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಈ ಪತ್ರ.

ಮೊದಲಿಗೆ ಇವರ ಕನ್ನಡಾಭಿಮಾನ, ಅವರು ಬರೆದಿರುವ ಇಂಗ್ಲಿಷ್‌ ಪತ್ರದ ಮೂಲಕ ನಮಗೆ ಅರಿವಾಗಿದೆ! ಅಲ್ಲಿ ನಡೆದ ಅವಹೇಳನ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಬರೆದಿರುತ್ತಾರೆ. ಇದರ ಅರ್ಥ ಅವರೆ ಮತ್ತೊಮ್ಮೆ ಬರೆದು ತಿಳಿಸಬೇಕಾಗಿದೆ.

ಆದರೆ ನಮ್ಮ ಅನಿಸಿಕೆಯಂತೆ ಕೆ. ಟಿ. ಚಂದ್ರಶೇಖರ್‌ ಅಂದು ಅಲ್ಲಿ ನಡೆಸಿದ ಪ್ರತಿಭಟನೆ ಸ್ವಾಭಾವಿಕವಾದದ್ದು. ಹಿಂದೂಸ್ತಾನಿ ಸಂಗೀತ ಎಂದರೆ ಅದು ಬರಿ ಹಿಂದಿಯಲ್ಲಿ ಮಾತ್ರ ಹಾಡಬೇಕು ಮತ್ತು ಹಿಂದಿಯಲ್ಲಿ ಮಾತ್ರ ಅದು ಸಾಧ್ಯ ಎಂಬ ಅಭಿಪ್ರಾಯವಿದೆ. ಈ ಅಭಿಪ್ರಾಯ ತಪ್ಪು ಎಂದು ಕನ್ನಡಿಗರು ಮೊದಲಿಗೆ ಅರಿಯಬೇಕಿದೆ.

ಭೈರಪ್ಪನವರ ಹಿಂದೂಸ್ತಾನಿ ಸಂಗೀತದ ಚಪಲವನ್ನು ಕನ್ನಡದ ವಚನವನ್ನು ಹಿಂದೂಸ್ತಾನಿ ಶೈಲಿಯಲ್ಲಿ ಹಾಡುವುದರ ಮೂಲಕ ಗಾಯಕರು ತಣಿಸಬಹುದಿತ್ತು. ಕನ್ನಡಿಗನಿಗೆ ಕನ್ನಡದ ಬಗೆಗಿನ ವಿಶೇಷವನ್ನು ಯೋಚಿಸುವುದರಲ್ಲಿ ಹಾಗು ತಿಳಿದುಕೊಳ್ಳುವುದರಲ್ಲೇ ತಾತ್ಸಾರವಿರುವಾಗ ಇನ್ನು ಈ ವಿಷಯದ ಬಗ್ಗೆ ಗಾಯಕನಿಗೆ ಅರಿವಿರಲು ಹೇಗೆ ಸಾಧ್ಯ!

ಕೆ. ಟಿ. ಚಂ. ಕನ್ನಡ ಚಳುವಳಿಗಾರರಲ್ಲ! ಹಾಗು ಪ್ರತಿಭಟನೆ ಅವರ ಕಸುಬಲ್ಲ. ಆದರೆ ಅವರು ಅಪ್ಪಟ ಕನ್ನಡ ಪ್ರೇಮಿ ಎಂದು ಆ ಘಟನೆಯಂದು ಅಲ್ಲಿದ್ದವರೆಲ್ಲರೂ - ಈ ಪತ್ರವನ್ನು ಓದುತ್ತಿರುವವರು ಅರಿಯಬೇಕಾಗಿರುವ ಸತ್ಯ. ಕನ್ನಡ ಕಾರ್ಯಕ್ರಮದಲ್ಲಿ ಕನ್ನಡ ಗೀತೆ ಹಾಡುವುದನ್ನು ಬಿಟ್ಟು ಹಿಂದಿ ಹಾಡುವುದನ್ನು ಪ್ರತಿಭಟಿಸಿದರು. ಅದು ಮನಸ್ಸಿನಾಳದಿಂದ ಆ ಕ್ಷಣಾರ್ಧದಲ್ಲಿ ಮೂಡಿ ಬಂದ ಭಾವನೆ. ಆ ಭಾವನೆಯನ್ನು ಮನ್ನಿಸಬೇಕಾಗಿರುವುದು ನಮ್ಮ ಕರ್ತವ್ಯ.

ಹಾಗೆಂದು ಬೆಂಗಳೂರಿನಲ್ಲಿರುವ ಎಲ್ಲಾ ಕ್ಷೌರದಂಗಡಿಗಳಿಗೆ ಅವರು ಮುಖತಃ ಬೇಟಿ ನೀಡಿ ಬೆಳಗಿನ ಹೊತ್ತು ಆ ಅಂಗಡಿಗಳ ರೇಡಿಯೋದಲ್ಲಿ ಹೊರಹೊಮ್ಮುವ ‘ಭೂಲೇ ಬಿಸ್ರೆ ಗೀತ್‌’ ಗಳನ್ನು ಪ್ರತಿಭಟಿಸಬೇಕು ಎನ್ನುವುದು ತಪ್ಪು. ಆ ಕೆಲಸ ನಾವು ಮುಂದೆ ಕ್ಷೌರದಂಗಡಿಗಳಿಗೆ ಭೇಟಿ ನೀಡಿದಾಗ ಮಾಡಬೇಕು ಎಂದು ಅವರು ನಮ್ಮನ್ನು ಎಚ್ಚರಿಸಿದ್ದಾರೆ ಎಂದು ತಿಳಿವಳಿಕೆ ಮೂಡಿಸಿಕೊಳ್ಳುವುದು ಸಮಂಜಸವಾದದ್ದು.

ಕೆ. ಟಿ. ಚಂ. ಅಲ್ಲಿ ಕನ್ನಡ ಕನ್ನಡ ಎಂದು ಕೂಗಿದಾಗ ಅಲ್ಲಿದ್ದ ಕನ್ನಡಿಗರಿಗೆ ಅವರನ್ನು ದಬಾಯಿಸಲು ಮಾತ್ರ ತಿಳಿಯಿತು. ಆದರೆ ಯಾರಾದರು ಒಬ್ಬರು‘ಗಾಯಕರೆ ಏತಕ್ಕಾಗಿ ನೀವು ಹಿಂದಿಯಲ್ಲಿ ಹಾಡುತ್ತಿದ್ದೀರಿ’ ಎಂದು ಕೇಳಬೇಕೆನಿಸಲಿಲ್ಲ.

ಇನ್ನು ಮಂಜುನಾಥ ಬರೆಯುತ್ತಾರೆ, ‘ಆ ಗಾಯಕ ಹಾಡುವುದನ್ನು ನಿಲ್ಲಿಸಿ ಎನ್ನುವುದು ಅವರಿಗೆ ಅವಹೇಳನ ಮಾಡಿದಂತೆ’! ಯಾವುದೇ ಪ್ರತಿಭಟನೆಗಳಿರಲಿ ಮಂಜುನಾಥರಂತಹ ಕೆಲವರು ಇಂತಹ ಸಮಜಾಯಿಷಿಗಳನ್ನು ಕೊಡುತ್ತ ಪ್ರತಿಭಟನಕಾರರ ಮೂಲ ಉದ್ದೇಶವೇನೆಂಬುದನ್ನು ಅರಿಯಲು ಶಕ್ಯವಾಗಿಲ್ಲದಿರುವುದರಿಂದಲೇ ಕನ್ನಡ-ಕನ್ನಡತನಕ್ಕೆ ಈ ಗತಿ ಒದಗಿ ಬಂದಿರುವುದು ಎಂದರೆ ತಪ್ಪಾಗಲಾರದು.

ಅಚ್ಚ ಕನ್ನಡದ ಜಾಗದಲ್ಲಿ, ಅಚ್ಚ ಕನ್ನಡದ ಕಾರ್ಯಾಕ್ರಮದಲ್ಲಿ ಆ ರೀತಿ ಕೂಗುವುದು ತರವಲ್ಲ ಎಂದು ಅವರು ಬರೆದಿದ್ದಾರೆ! ನಾನು ಸ್ವಲ್ಪ ಪನ್‌ ಮಾಡಿ ಬರೆಯುತ್ತಿದ್ದೇನೆ. ಅಚ್ಚ ಕನ್ನಡದ ಜಾಗದಲ್ಲಿ, ಅಚ್ಚ ಕನ್ನಡದ ಕಾರ್ಯಕ್ರಮದಲ್ಲಿ ಹಿಂದಿ ಹಾಡು ಸಹ ಸೂಕ್ತವಲ್ಲ.

ಕೆ. ಟಿ. ಚಂ. ತರಹದ ಕೆಲವರಿಂದ ಕೂಕ್‌ ಟೌನ್‌ ಈ ಹೆಸರು ಈಗಾಗಲೇ ಅಚ್ಚ ಕನ್ನಡದ ಹೆಸರಿನಿಂದ ಬದಲಾಗಿದೆ. ಇದು ಮಂಜುನಾಥ್‌ ಅವರ ಗಮನಕ್ಕೆ ಇನ್ನೂ ಬಂದಿಲ್ಲ!! ಅಲ್ಸೂರ್‌ = ಹಲಸೂರು, ಮತ್ತು ಶಿವಾಜಿ ನಗರ್‌= ಶಿವಾಜಿ ನಗರ ಎಂದು ಕನ್ನಡದಲ್ಲಿ ಹೇಳಬಹುದಲ್ಲ . ಅಲ್ಲಿಯೂ ಸಹ ಕನ್ನಡ ಪರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಜಾಗಗಳಲ್ಲಿ ಈ ಹಿಂದೆ ಇದ್ದ ವಾತಾವರಣ ಯಾವ ಕಾರಣಕ್ಕೂ ಬಸವನಗುಡಿಗೆ ನುಗ್ಗಬಾರದು ಎಂದು ಕೆ. ಟಿ. ಚಂ. ಅಭಿಪ್ರಾಯವಾದ್ದರಿಂದ ಈ ಪ್ರತಿಭಟನೆ ಯಾಕೆ ನಡೆದಿರಬಾರದು ಎಂದು ಯಾರೂ ಯೋಚಿಸುವುದಿಲ್ಲ.

ನಮಗೆ ಬರಹ ವಾಸು ಮತ್ತು ಕೆ. ಟಿ. ಚಂ. ಅವರ ಬಗ್ಗೆ ಗೌರವವಿದೆ ಆದರೆ ಈ ಪ್ರತಿಭಟನೆ ಸಮರ್ಥನೀಯವಾದುದಲ್ಲ ಎನ್ನುತ್ತಾ ಮಂಜುನಾಥ್‌ರವರು ನಿಜವಾದ ಬುದ್ದಿಜೀವಿ ಕನ್ನಡಿಗನನ್ನು ಪರಿಚಯಿಸಿಕೊಂಡಿದ್ದಾರೆ.

ಮಂಜುನಾಥ್‌, ಕೊನೆಯಲ್ಲಿ ನೀವು ತಿಳಿಸಿರುವಂತೆ ಕಾರ್ಯಕ್ರಮದಲ್ಲಿ ಖಂಡಿತ ಕನ್ನಡ ದ್ವೇಷಿಗಳಿರಲಿಲ್ಲ, ನಾನು ಒಪ್ಪುತ್ತೇನೆ ಆದರೆ ಅಲ್ಲಿ ನಿರಭಿಮಾನಿ ಕನ್ನಡಿಗರು ಮಾತ್ರ ಇದ್ದರು. ಅವರನ್ನು ಬಡಿದೆಬ್ಬಿಸಿದ್ದೆ ಕೆ. ಟಿ. ಚ. ಅಲ್ಲಿ ಮಾಡಿದ ಕೆಲಸ.

-ಕಿರಣ್‌, ಬೆಂಗಳೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X