ಸಾಹಿತಿಗಳ ಬೆನ್ನ ಹಿಂದೆ ಬಿದ್ದರೆ ಅರ್ಥವಾಗದ ಕಂದಪದ್ಯಗಳೇ ಗತಿ!
ಕನ್ನಡಾಭಿಮಾನ, ನೌಕರಿ, ಉತ್ಪಾದನೆ ಹಾಗೂ ಗಳಿಕೆಯನ್ನು ಬೇರೇಬೇರೇ ದೃಷ್ಟಿಕೋನಗಳಿಂದ ನೋಡಬೇಕೇ ಹೊರತು. ವೃಥಾ ನಿಂದಿಸಿದರೆ ಏನು ಪ್ರಯೋಜನ? ಯಾರಿಗೆ ಲಾಭ?ಯೋಚಿಸಿ.
ಪ್ರಿಯ ಶ್ಯಾಂ,
ಕೆಲವು ದಿನಗಳಿಂದ ದಟ್ಸ್ ಕನ್ನಡದಲ್ಲಿ ರವಾನೆಯಾಗುತ್ತಿರುವ ಕನ್ನಡಾಭಿಮಾನಿ ಪತ್ರಗಳ ಬಗ್ಗೆ ನನ್ನ ಅನಿಸಿಕೆ:
ಕೆಲವು ಕನ್ನಡಿಗರು ಮಾತೆತ್ತಿದರೆ ಕನ್ನಡಕ್ಕೆ ಸಂದಿರುವ ಏಳು ಜ್ಞಾನಪೀಠ ಪ್ರಶಸ್ತಿಗಳ ಬಗ್ಗೆ ಮಾತನಾಡಿ ನಾವೇನೂ ಯಾರಿಗೂ ಕಡಿಮೆಯಿಲ್ಲವೆಂಬಂತೆ ಬಿಂಬಿಸುತ್ತಾರೆ. ವಾಸ್ತವವಾಗಿ ಈ ಪ್ರಶಸ್ತಿ ವಿಜೇತ ಕೃತಿಗಳಲ್ಲಿ ಒಂದನ್ನಾದರೂ ಇವರು ಓದಿದ್ದಾರೆಯೇ ಎಂದು ಇಲ್ಲಿ ಅಪ್ರಸ್ತುತವಾದರೂ ಕೇಳಬೇಕೆನಿಸುತ್ತದೆ.
ಈ ಸಾಹಿತಿಗಳೂ, ಅವರ ಕೃತಿಗಳೂ ಶ್ರೇಷ್ಠ, ಈ ಬಗ್ಗೆ ಎರಡು ಮಾತಿಲ್ಲ. ಆದರೆ ಸಾಹಿತ್ಯಕ್ಕೂ, ಬೆಂಗಳೂರಿನಲ್ಲಿ ಕನ್ನಡ ಮಾಯವಾಗುತ್ತಿರುವುದಕ್ಕೂ, ಕನ್ನಡಿಗರು ಐ.ಟಿ. ಪ್ರಪಂಚದಲ್ಲಿ ಹೆಚ್ಚಿನ ಏಳಿಗೆ ಕಾಣದೆ ಇರುವುದಕ್ಕೂ ಎನು ಸಂಬಂಧ? ಐ.ಟಿ. ಕಂಪೆನಿಗಳು ಸಾಹಿತ್ಯವನ್ನು ಓದಿಸುವುದಿಲ್ಲ, ಬರೆಸುವುದಿಲ್ಲ. ಅಲ್ಲಿ ಬೇಕಾಗಿರುವುದು ಮಾರ್ಮಿಕ ಪದ್ಯಗಳಿಗಿಂತ ಸುಸ್ಪಷ್ಟವಾದ ಪ್ರೋಗ್ರಾಮುಗಳು, ದುಡಿತ, ಸಮಯಕ್ಕೆ ಸರಿಯಾಗಿ ಹೇಳಿದ ಕೆಲಸವನ್ನು ಮುಗಿಸುವುದು.
ಐ.ಟಿ. ಪ್ರಪಂಚದಲ್ಲಿ ಕನ್ನಡಿಗನ ಹಿರಿಮೆ, ಮರ್ಯಾದೆ ಹೆಚ್ಚಿಸಲು ಬೇಕಾಗಿರುವುದು ನಾರಾಯಣ ಮೂರ್ತಿಗಳು, ನಂದನ್ ನಿಲೇಕಣಿಗಳು, ಯು.ಆರ್. ರಾವ್ಗಳು, ಸಿ.ಎನ್. ಆರ್. ರಾವ್ಗಳು, ಶೇಷಾದ್ರಿ ವಾಸುಗಳು. ಇನ್ಫೋಸಿಸ್ಸಿನಲ್ಲಿ ಸಂಕ್ರಾಂತಿಗೆ ರಜ ಕೊಡದೆ ಇದ್ದರೆ ನಾರಾಯಣಮೂರ್ತಿಗಳನ್ನು ಹೀಗಳೆದರೆ ಏನು ಲಾಭ? ಸಣ್ಣ ಸಣ್ಣ ವಿಷಯಗಳಿಗೆಲ್ಲ ಅವರಾಗಲೀ, ಸುಧಾ ಅವರಾಗಲೀ ಮೂಗು ತೂರಿಸಲಾಗುವುದಿಲ್ಲ.
ಇಂದು ನಾರಾಯಣಮೂರ್ತಿಯವರಂತಹವರಿಂದ ಕನ್ನಡಿಗರ ಮಾನ ಉಳಿದಿದೆ. ಅವರಿಂದ ಮತ್ತು ಅವರ ಮೇಲ್ಪಂಕ್ತಿಯನ್ನು ಅನುಸರಿಸಿದ ಎಷ್ಟೋ ಉದ್ಯಮಿಗಳಿಂದ ಕನ್ನಡಿಗರಿಗೆ ಕೆಲಸ ದೊರೆತಿದೆ. ಅವರನ್ನು ಬೆಂಬಲಿಸದೆ ಬಿಟ್ಟು ಸಾಹಿತಿಗಳ ಬೆನ್ನ ಹಿಂದೆ ಬಿದ್ದರೆ ಅರ್ಥವಾಗದ ಕಂದ ಪದ್ಯಗಳೇ ಗತಿ.












Click it and Unblock the Notifications