ಯುಗಾದಿ ಹಬ್ಬದಂದು ಎಲ್ಲಾ ಓಕೆ? ಈ ಜೂಜಾಟ ಏಕೆ?
ಜನರು
ಎಲ್ಲೆಂದರಲ್ಲಿ,
ಸಾಮೂಹಿಕವಾಗಿ,
ಕೆಲವೆಡೆ
ಶಾಮಿಯಾನ
ಹಾಕಿ,
ಹಗಲು-ರಾತ್ರಿ,
ಒಂದೆರಡು
ದಿನ
ಜೂಜಾಡುವುದನ್ನೇ
ಯುಗಾದಿಯೆಂದು
ತಿಳಿದು
ಆಚರಿಸುತ್ತಿರುವಂತಿದೆ.
- ವಿ.ಎಸ್.ರಾಮಚಂದ್ರನ್, ಸ್ವಾತಂತ್ರ್ಯ ಹೋರಾಟಗಾರರು, ತುಮಕೂರು.
ಬೇವು-ಬೆಲ್ಲ ಸೇವಿಯುವ ಮೂಲಕ ಸಮಚಿತ್ತದಿಂದ ಬಾಳಬೇಕೆಂಬ ಸಂದೇಶ ಸಾರುವ ಯುಗಾದಿಯನ್ನು ಹೊಸವರ್ಷ ಎನ್ನುತ್ತಾರೆ. ಆದರೆ ಈ ಹೊಸ ವರ್ಷವನ್ನು ಹೇಗೆ ಆಚರಿಸಲಾಗುತ್ತಿದೆ ಎಂಬುದೇ ಈಗ ಚರ್ಚಾಸ್ಪದವಾಗಿದೆ.
ಜನರು ಎಲ್ಲೆಂದರಲ್ಲಿ, ಸಾಮೂಹಿಕವಾಗಿ, ಕೆಲವೆಡೆ ಶಾಮಿಯಾನ ಹಾಕಿ, ಹಗಲು-ರಾತ್ರಿ, ಒಂದೆರಡು ದಿನ ಜೂಜಾಡುವುದನ್ನೇ ಯುಗಾದಿಯೆಂದು ತಿಳಿದು ಆಚರಿಸುತ್ತಿರುವಂತಿದೆ. ಆಬಾಲ ವೃದ್ಧರಾದಿಯಾಗಿ ಎಲ್ಲರೂ ಜೂಜಾಟದಲ್ಲಿ ತೊಡಗುವುದು, ಇದಕ್ಕೆ ಮುಕ್ತ ಅವಕಾಶ ದೊರಕುವುದು ನಿಜವಾಗಿಯೂ ವಿಷಾದಕರ.
ಜೂಜಿನಲ್ಲಿ ಅಪಾರ ಪ್ರಮಾಣದ ಹಣ ಚಲಾವಣೆಗೊಂಡು, ಗೆದ್ದವನು ಹಿಗ್ಗಿದರೆ, ಸೋತವನು ಕುಗ್ಗಿ ಕಲಹಗಳಾಗುವುದೂ ಸಹಜ. ಇವೆಲ್ಲ ನೋಡಿದಾಗ ಇದೆಂಥ ಯುಗಾದಿ ಆಚರಣೆ? ಇದು ಯಾವ ಸಂಸ್ಕೃತಿ?, ಜೂಜಾಡುವಂತೆ ಯಾರು-ಎಲ್ಲಿ ಹೇಳಿದ್ದಾರೆ ? ಎಂಬ ಪ್ರಶ್ನೆ-ಭಾವನೆ ಪ್ರಜ್ಞಾವಂತರಲ್ಲಿ ಬಂದೇ ಬರುತ್ತದೆ.
ಒಂದು ಅಂಶವನ್ನು ನಾವು ಇಲ್ಲಿ ಗಮನಿಸಬೇಕು ; ಅನ್ಯ ಧರ್ಮೀಯರು ಹೊಸವರ್ಷಾಚರಣೆಯಂದು ಅಥವಾ ತಮ್ಮ ಧರ್ಮದ ಹಬ್ಬಗಳಂದು ಸಾಮೂಹಿಕ ಪ್ರಾರ್ಥನೆಯಲ್ಲಿ ಸಂತೋಷದಿಂದ- ಉಲ್ಲಾಸದಿಂದ ಭಾಗವಹಿಸುತ್ತಾರೆ. ಆದರೆ ನಮ್ಮ ಜನರು ಜೂಜಾಟದಲ್ಲಿ ನಿರತರಾಗಿ ಮೈಮರೆಯುತ್ತಾರೆ! ಅತಿ ಅಮೂಲ್ಯವಾದ ಸಮಯವನ್ನು ಜೂಜಿನಮೋಜಿನಲ್ಲಿ ವ್ಯರ್ಥ ಮಾಡುತ್ತಾರೆ!
ಸಮಾಜದ ಮುಖಂಡರು, ಧಾರ್ಮಿಕ ಮುಖಂಡರು, ಸಾಮಾಜಿಕ ಹಿತಚಿಂತಕರು , ಪ್ರಜ್ಞಾವಂತರು ಇದರ ಬಗ್ಗೆ ಗಂಭೀರವಾಗಿ ಆಲೋಚಿಸಿ ಯುಗಾದಿ ಹಬ್ಬದಂದು ಜೂಜಾಟ ನಡೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಜನಪ್ರತಿನಿಧಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸಹಾ ಪ್ರಾಮಾಣಿಕವಾಗಿ ಕಟ್ಟುನಿಟ್ಟಿನ ಕ್ರಮಕೈಗೊಂಡು, ಜೂಜಾಟವನ್ನು ತಡೆಹಿಡಿಯಬೇಕು.