ಇಚ್ಛಾಶಕ್ತಿಯ ಕೊರತೆಯೇ ಕಾವೇರಿ ಸಮಸ್ಯೆಯ ಮೂಲ!
ಎರಡೂ
ರಾಜ್ಯಗಳು
ನೀರನ್ನು
ಸರಿಸಮನಾಗಿ
ಹಂಚಿಕೊಳ್ಳಬೇಕು
ಎಂಬ
‘ರಾಜೀ’ನಿರ್ಣಯವೇ
ಸಮಂಜಸವಲ್ಲ.
ಅಂಥದ್ದರಲ್ಲಿ
ತಮಿಳುನಾಡಿಗೆ
ಹೆಚ್ಚಿನ
ನೀರು
ವರ್ಗಾಯಿಸಬೇಕು
ಎನ್ನುವ
ನ್ಯಾಯಾಲಯದ
ಈ
ತೀರ್ಪು
ಕನ್ನಡನಾಡಿನ
ಹಿತಕ್ಕೆ
ಖಂಡಿತ
ಮಾರಕವಾಗಿದೆ.
- ಚಂದ್ರಶೇಖರನ್ ಕಲ್ಯಾಣರಾಮನ್, ಬೆಂಗಳೂರು
ನಮ್ಮ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾವೇರಿ (ಕರ್ನಾಟಕದ ಇತರ ಎಲ್ಲಾ ) ಸಮಸ್ಯೆಯ ಮೂಲ!. ಶತಮಾನದಷ್ಟು ಹಳೆಯದಾದ ಕಾವೇರಿ ನದಿ ನೀರಿನ ವಿವಾದ ಮತ್ತು ನ್ಯಾಯಾಧಿಕರಣದ ತೀರ್ಪು ಕನ್ನಡ ನಾಡಿನ ರೈತರ ಹಿತಕ್ಕೆ, ನಮ್ಮ ರಾಜ್ಯದ ಕೃಷಿ ಭೂಮಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕೆನ್ನುವ ನಡೆಗೆ ಮತ್ತು ರಾಜ್ಯದ ಕುಡಿಯುವ ನೀರಿನ ಬವಣೆಯನ್ನು ತೊಡೆಯುವ ನಿಲುವಿಗೆ ಭಾರೀ ಹೊಡೆತ ಬಿದ್ದಿದೆ. ನಮ್ಮ ನೆಲದಲ್ಲಿ ಉಗಮವಾಗುವ ಜಲದಿಂದ ನಮ್ಮ ರಾಜ್ಯದ ಅಗತ್ಯ ಮತ್ತು ಆಶೋತ್ತರಗಳನ್ನು ಸ್ವತಂತ್ರವಾಗಿ ಪೂರೈಸಿಕೊಳ್ಳವ ಅವಕಾಶದಿಂದ ನಾವು ವಂಚಿತರಾಗಿರುವುದು ವಿಷಾದಕರ.
ಕಾವೇರಿ ನದಿ ನೀರಿನ ವಿಷಯವಾಗಿ ಹಿಂದಿನ ಕಾಲದಿಂದಲೂ ಕರ್ನಾಟಕ ತಮಿಳುನಾಡಿಗೆ ಅನ್ಯಾಯವೆಸಗಿರುವ ಸಂದರ್ಭ ಕಂಡುಬಂದಿಲ್ಲ. ತಮಿಳುನಾಡಿನ ರೈತರ ಹಿತಕಾಯುವ ಔದಾರ್ಯದಿಂದ, ತನ್ನ ಜಲದ ಹಕ್ಕನ್ನು ಕರ್ನಾಟಕ, ತನ್ನ ರಾಜ್ಯದ ಇತರ ಭಾಗಗಳ ಅಭಿವೃದ್ಧಿಗೆ ತೊಡಗಿಸಿಕೊಳ್ಳಲಾಗದ ವಂಚನೆಗೆ ಒಳಗಾಗಿದೆ. ಇಂದಿನ ಕರ್ನಾಟಕದ ನೀರಿನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು, ಈಗ ವರ್ಷ ವರ್ಷವೂ ಲಭ್ಯವಾಗುವ ನೀರನ್ನು ಸರಿಸಮವಾಗಿ ಎರಡು ರಾಜ್ಯಗಳು ಹಂಚಿಕೊಳ್ಳಬೇಕು ಎಂಬ ತಮ್ಮ ತಮ್ಮಲ್ಲಿನ ‘ರಾಜೀ’ ನಿರ್ಣಯವೇ ಸಮಂಜಸವಲ್ಲದ ಈ ಸಂದರ್ಭದಲ್ಲಿ ತಮಿಳುನಾಡಿಗೆ ಹೆಚ್ಚಿನ ನೀರು ವರ್ಗಾಯಿಸಬೇಕು ಎನ್ನುವ ನ್ಯಾಯಾಲಯದ ಈ ತೀರ್ಪು ಖಂಡಿತ ಕರ್ನಾಟಕ ರಾಜ್ಯದ ಹಿತಕ್ಕೆ ಮತ್ತಷ್ಟು ಮಾರಕವಾಗಿದೆ.
ಕಾವೇರಿ ನೀರನ್ನು ಈ ಹಿಂದೆ ತಮಿಳುನಾಡು ಬಳಸಿಕೊಂಡಿರುವ ಆಧಾರದ ಮೇಲೆ, ಅಲ್ಲಿನ ಕೃಷಿ ಭೂಮಿಯನ್ನು ಲೆಕ್ಕಕ್ಕಿಟ್ಟು ತಮಿಳುನಾಡಿಗೆ ಇಂತಿಷ್ಟು ನೀರನ್ನು ಹರಿಯಬಿಡಬೇಕು ಎನ್ನುವ ನ್ಯಾಯಮಂಡಳಿಯ ನಿರ್ಧಾರ ಎಷ್ಟು ಸೂಕ್ತ ಎಂದು ನಮ್ಮ ಸರ್ಕಾರ ಪ್ರಶ್ನಿಸಬೇಕಿದೆ ಹಾಗೂ ನ್ಯಾಯ ಮಂಡಳಿಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಮತ್ತು ಸುಪ್ರೀಂ ಕೋರ್ಟ್ನಲ್ಲಿ ಹೋರಾಟಕ್ಕೆ ಮುಂದಿನ ರೂಪುರೇಷೆ ಸಿದ್ಧಪಡಿಸಲು ಮುಂದಾಗಬೇಕಿದೆ.
ಇದಕ್ಕಿಂತ ಹೆಚ್ಚಾಗಿ ನಾಲಿಗೆಯ ಚಪಲಕ್ಕಾಗಿ ಬರಿಯ ಬೊಗಳೆ ಮಾತುಗಳನ್ನಾಡುವುದನ್ನು ಬದಿಗೊತ್ತಿ, ನ್ಯಾಯಾಧಿಕರಣದ ತೀರ್ಪನ್ನು ಖಂಡಿಸಿ, ಕನ್ನಡ ಜನತೆಗೆ ನ್ಯಾಯ ದೊರಕಿಸಿಕೊಡುವಲ್ಲಿ ಪಕ್ಷಭೇದ ತೊರೆದು ತಂತ್ರ ರೂಪಿಸುವ, ಹೋರಾಡುವ ಮನೋಭಾವವನ್ನು ನಮ್ಮ ರಾಜಕೀಯ ನಾಯಕರು ಪ್ರದರ್ಶಿಸಬೇಕಿದೆ. ಈ ಇಚ್ಛಾಶಕ್ತಿಯ ಕೊರತೆಯೇ ಕರ್ನಾಟಕದ ಎಲ್ಲಾ ಸಮಸ್ಯೆಗಳ ಮೂಲ ಮತ್ತು ಆ ಇಚ್ಛಾಶಕ್ತಿಯ ಸಂಘಟನೆಯೇ ತಮಿಳುನಾಡಿನ ಎಲ್ಲಾ ವಿಜಯಕ್ಕೂ ಕಾರಣ ಎಂದು ನಮ್ಮ ನಾಯಕರು ಅರಿಯಬೇಕಿದೆ.
ಸಮಸ್ತ ಕನ್ನಡಿಗರು, ಕನ್ನಡದ ಹಿತ ಕಾಯುವ ವೇದಿಕೆಗಳ ಈ ಹೋರಾಟದಲ್ಲಿ ಕೈ ಜೋಡಿಸಬೇಕಿದೆ.