ಬೆತ್ತಲೆಯಾದವರ ರಾಜ್ಯದಲ್ಲಿ...
- ಎಚ್.ವಿ. ಸೂರ್ಯನಾರಾಯಣ ಶರ್ಮಾ, ಬೆಂಗಳೂರು
[email protected]
ಇಂದಿನ ಕನ್ನಡ ಚಿತ್ರರಂಗದ ಬಗ್ಗೆ ನನಗೆ ಅಪಾರ ಅಭಿಮಾನವಿದೆ ಹೆಮ್ಮೆಯೂ ಇದೆ? ಯಾಕೆಂದರೆ ಬೇರೆ ಭಾಷೆಗಳಲ್ಲಿ ಬರುತ್ತಿರುವಷ್ಟು ಅಧ್ವಾನದ ಚಿತ್ರಗಳು ಕನ್ನಡದಲ್ಲಿ ಬರುತ್ತಿಲ್ಲ. ನಿಜವಾಗಿಯೂ ಕನ್ನಡಿಗರು ಧನ್ಯರು. ನಾನು ಕ್ರೇಜಿ ಸ್ಟಾರ್ಗಳು ಚಿತ್ರರಂಗ ಪ್ರವೇಶಿಸಿದ ನಂತರ ಚಿತ್ರಗಳನ್ನು ನೋಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈಗ ಅಲ್ಲಿ ಇಲ್ಲಿ ದೂರದರ್ಶನದಲ್ಲಿ ಸಿನಿಮಾಗಳ ತುಣುಕುಗಳನ್ನೂ ಹಾಗೂ ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ಅನಿವಾರ್ಯವಾಗಿ ಕೆಲವು ಚಲನಚಿತ್ರಗಳನ್ನು ನೋಡಿ ವಾಂತಿ ಮಾಡಿಕೊಂಡದ್ದುಂಟು. ಈಗ ವೀಡಿಯೋ ವ್ಯವಸ್ಥೆ ಇರುವ ಬಸ್ಸುಗಳಲ್ಲಿ ಪ್ರಯಾಣಮಾಡುವುದನ್ನೂ ನಿಲ್ಲಿಸಿದ್ದೇನೆ!
ಇತ್ತೀಚೆಗೆ ಸತ್ಯುಅವರ ವಿವಾದಾಸ್ಪದ ಹಾಗೂ ವಿಚಾರಾಸ್ಪದ ಹೇಳಿಕೆಯ ಕುರಿತಾಗಿ ಕನ್ನಡ ಚಲನಚಿತ್ರ ನಿರ್ಮಾಪಕರು ಮತ್ತಿತರರು ಆಕ್ಷೇಪವೆತ್ತಿರುವುದು ಸುಸಮಂಜಸವಾಗಿದೆ. ಚಿತ್ರರಂಗದ ಖಾಸಗಿ ಮಾತುಗಳಲ್ಲಿ ಬರುವ ಆಭಿಪ್ರಾಯಗಳನ್ನು ವೇದಿಕೆಯ ಮೇಲಿಂದ ಬಹಿರಂಗಪಡಿಸುವುದು ಅಪರಾಧವಲ್ಲದೇ ಮತ್ತಿನ್ನೇನು?
ರಾಜ್ತಂಡವನ್ನು ಆಭಿನಂದಿಸುತ್ತೇನೆ, ತಮ್ಮ ಬ್ಯಾನರ್ ಅಡಿಯಲ್ಲಿ ತಯಾರಾದ, ತಯಾರಾಗುತ್ತಿರುವ ಚಿತ್ರಗಳೆಲ್ಲವೂ ಸದಭಿರುಚಿಯವು ಎಂದು ಸಮರ್ಥಿಸಿಕೊಂಡಿರುವ ಧೈರ್ಯವನ್ನು ಕನ್ನಡಿಗರೆಲ್ಲರೂ ಏಕ ಕಂಠದಿಂದ ಕೊಂಡಾಡ ತಕ್ಕದ್ದು. ರಾಜ್ರ ಮುಂದೆ ಸತ್ಯು ಅವರ ಸಾಧನೆ ಏನು? ರಾಜ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ ಹಿನ್ನೆಲೆ ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂಥದ್ದಲ್ಲವೇ? ಕನ್ನಡದ ಇಬ್ಬರು ಪ್ರಮುಖ ಸಾಹಿತಿಗಳು ರಾಜ್ ವಂದಿಮಾಗಧರಾಗಿರುವುದು ಸಾಮಾನ್ಯವೇ ? ರಾಜ್ ಕನ್ನಡಕ್ಕೆ, ಕರ್ನಾಟಕ್ಕೆ ಕೊಟ್ಟ ಕೊಡುಗೆ ವೀರಪ್ಪನ್ ಪ್ರಕರಣದಲ್ಲಿ ಬಹಿರಂಗಗೊಂಡಿಲ್ಲವೇ ? ಇನ್ನು ಕನ್ನಡ ಚಿತ್ರ ರಂಗದ ಅಭಿವೃದ್ಧಿಗೆ ರಾಜ್ರ ಕೊಡುಗೆ ಚಿದಂಬರ ರಹಸ್ಯವಾಗಿರುವುದು ಅವರು ಕೀರ್ತಿ ಪ್ರತಿಷ್ಠೆಗಳನ್ನು ಬಯಸದ ಯೋಗಿರಾಜ್ ಆಗಿರುವುದರಿಂದ ಅಲ್ಲವೇ ?
ಸತ್ಯು ಅವರು ಬೆತ್ತಲೆಯವರ ರಾಜ್ಯದಲ್ಲಿ ಬಟ್ಟೆ ತೊಟ್ಟು ಓಡಾಡುತ್ತಿರುವ ಅಸಭ್ಯರು ಎನ್ನುವುದರಲ್ಲಿ ಸಂದೇಹವಿಲ್ಲ. ಅವರ ಸೇವೆ ಕನ್ನಡ ಚಿತ್ರ ನಿರ್ಮಾಪಕರಿಗೆ ಅಗತ್ಯವಿಲ್ಲ. ಅವರು ಸ್ವಯಂ ಗಡಿಪಾರಾಗಿ ಕನ್ನಡಿಗರ ಅಭಿರುಚಿಯನ್ನು ಪುನರ್ನಿರ್ಮಿಸಬಲ್ಲ ಉಪೇಂದ್ರಾದಿಗಳಂತಹ ಶ್ರೇಷ್ಠ , ಪ್ರತಿಭಾವಂತ, ನಿರ್ಮಾಪಕರ, ನಿರ್ದೇಶಕರ ಹುಲುಸಾದ ಬೆಳೆಯ ಮಧ್ಯದ ಕಳೆಯಾಗಿರುವುದು ಬೇಡ. ಹಟ ಮಾಡಿದರೋ ಅವರಿಗಾಗಿಯೇ ಇದೆ ಕನ್ನಡ ಚಿತ್ರಬ್ರಹ್ಮರ ಸಂದೇಶ -‘ನಾವ್ಸರಿ ಇಲ್ಲ ಸೈಲೆಂಟಾಗ್ ಸೈಡಲ್ಲಿದ್ಬಿಡಿ’.












Click it and Unblock the Notifications