'ರಾಹುಲ್ ವಿಫಲ, ದೀದಿ ಮೋದಿಗೆ ಪರ್ಯಾಯ' ಎಂದ ಟಿಎಂಸಿ
ಕೋಲ್ಕತ್ತಾ, ಸೆಪ್ಟೆಂಬರ್ 18: ಪಶ್ಚಿಮ ಬಂಗಾಳದಲ್ಲಿ ಮುಂದಿನ ಉಪಚುನಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಒಪ್ಪಂದವನ್ನು ಮಾಡಿಕೊಂಡಿದೆ. ಕಾಂಗ್ರೆಸ್ ಹೈಕಮಾಂಡ್ ಆಜ್ಞೆಯಂತೆ ಪಶ್ಚಿಮ ಬಂಗಾಳ ಟಿಎಂಸಿ ಎದುರು ಯಾವುದೇ ಅಭ್ಯರ್ಥಿಯನ್ನು ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರದಲ್ಲಿ ನಾವು ಕಣಕ್ಕೆ ಇಳಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಇಷ್ಟೆಲ್ಲಾ ಒಪ್ಪಂದವನ್ನು ಮಾಡಿಕೊಂಡು ಸ್ನೇಹಪರವಾಗಿರುವ ಟಿಎಂಸಿ ಹಾಗೂ ಕಾಂಗ್ರೆಸ್ ನಡುವೆ ಈಗ ವೈಮನಸ್ಸು ಹುಟ್ಟಿಕೊಂಡಿದೆ.
ತೃಣಮೂಲ ಕಾಂಗ್ರೆಸ್ನ ತನ್ನ ಮುಖವಾಣಿಯಲ್ಲಿ, ಭವಿಷ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ವಿರುದ್ದವಾಗಿ ಉತ್ತಮ ನಾಯಕತ್ವ ಮಮತಾ ಬ್ಯಾನರ್ಜಿಯದ್ದು ರಾಹುಲ್ ಗಾಂಧಿಯದ್ದು ಅಲ್ಲ ಎಂದು ಹೇಳಲಾಗಿದೆ. ಈ ವಿಚಾರವು ಈಗ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ವಿವಾದಕ್ಕೆ ಕಾರಣವಾಗಿದೆ.
ಉಪಚುನಾವಣೆ: 'ಮಮತಾ ನಾಮಪತ್ರದಲ್ಲಿ 5 ಪ್ರಕರಣಗಳನ್ನು ಬಹಿರಂಗಪಡಿಸಿಲ್ಲ': ಬಿಜೆಪಿ ಆರೋಪ
ಕಾಂಗ್ರೆಸ್ ಮಾತ್ರ ತೃಣಮೂಲ ಕಾಂಗ್ರೆಸ್ನ ಈ ವಾದವನ್ನು ಖಂಡಿಸಿದೆ ಹಾಗೂ ತಿರಸ್ಕರಿಸಿದೆ. ಹಾಗೆಯೇ ಈ ವಿಚಾರದಲ್ಲಿ ಅಧಿಕ ಮಹತ್ವವನ್ನು ಕೂಡಾ ಕಾಂಗ್ರೆಸ್ ನೀಡಲು ಬಯಸುತ್ತಿಲ್ಲ, ಆದರೆ ಒಳಗೊಳಗೆ ಟಿಎಂಸಿ ವಿರುದ್ದ ಅಸಮಾಧಾನ ವ್ಯಕ್ತವಾಗಿದೆ ಎಂದು ಹೇಳಬಹುದು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, "ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಎದುರಾಳಿ ಯಾರು ಎಂದು ಈಗಲೇ ನಿರ್ಧಾರ ಮಾಡುವುದು ಸರಿಯಲ್ಲ, ಆ ಊಹೆಯನ್ನು ಮಾಡುವುದು ಸಮಯ ಇದಲ್ಲ," ಎಂದು ಹೇಳಿದೆ. ತೃಣಮೂಲ ಕಾಂಗ್ರೆಸ್ನ ಮುಖವಾಣಿ "ಜಾಗೋ ಬಂಗಾಳ" ದಲ್ಲಿ ಈ ಬಗ್ಗೆ ಲೇಖನವೊಂದು ಪ್ರಕಟವಾಗಿದೆ. ಈ ಲೇಖನಕ್ಕೆ "ರಾಹುಲ್ ಗಾಂಧಿ ವಿಫಲವಾಗಿದ್ದಾರೆ, ಮಮತಾ ಬ್ಯಾನರ್ಜಿ ಮುಂದಿನ ಪರ್ಯಾಯ ಮುಖ" ಎಂದು ತಲೆ ಬರಹ ನೀಡಲಾಗಿದೆ.
ಉಪಚುನಾವಣೆ: ಇಂದಿನಿಂದ ದೀದಿ ಪ್ರಚಾರ, ಅಭ್ಯರ್ಥಿ ಕಣಕ್ಕಿಳಿಸದ ಕಾಂಗ್ರೆಸ್
ಮೋದಿಗೆ ಪರ್ಯಾಯವಾಗುವಲ್ಲಿ ರಾಹುಲ್ ಗಾಂಧಿ ವಿಫಲ
"ದೇಶವು ಪರ್ಯಾಯವನ್ನು ಬಯಸುತ್ತಿದೆ. ನಾನು ರಾಹುಲ್ ಗಾಂಧಿಯನ್ನು ಬಹಳ ಹಿಂದಿನ ಕಾಲದಿಂದ ತಿಳಿದಿದ್ದೇನೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪರ್ಯಾಯವಾಗುವಲ್ಲಿ ರಾಹುಲ್ ಗಾಂಧಿ ವಿಫಲವಾಗಿದ್ದಾರೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಶಸ್ವಿಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪರ್ಯಾಯ ಮುಖವಾಗಿ ಹೊರಹೊಮ್ಮುತ್ತಿದ್ದಾರೆ," ಎಂದು ಟಿಎಂಸಿಯ ಮುಖವಾಣಿ "ಜಾಗೋ ಬಂಗಾಳ" ದಲ್ಲಿ ಲೇಖನವು ಪ್ರಕಟವಾಗಿದ್ದು, ಈ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ನ ಲೋಕ ಸಭಾ ನಾಯಕ ಸುದೀಪ್ ಭಂಡೋಪಾಧ್ಯಾಯ ಹೇಳಿದ್ದಾರೆ.
ದೀದಿ ಕ್ಷೇತ್ರದಲ್ಲಿ ಬೆಂಗಾಳಿಯೇತರರ ಬೆಂಬಲಕ್ಕಾಗಿ ಟಿಎಂಸಿ ಮಾಸ್ಟರ್ ಪ್ಲ್ಯಾನ್
ಕಾಂಗ್ರೆಸ್ ಪಕ್ಷಕ್ಕೆ ಅಗೌರವ ತೋರಿಸುವ ಯಾವುದೇ ಉದ್ದೇಶವಿಲ್ಲ ಎಂದ ಟಿಎಂಸಿ
ಈ ಬಗ್ಗೆ ಶುಕ್ರವಾರ ಮಾತನಾಡಿದ ಟಿಎಂಸಿ ನಾಯಕ ಕುನಾಲ್ ಘೋಷ್, "ಕಾಂಗ್ರೆಸ್ ಪಕ್ಷಕ್ಕೆ ಅಗೌರವ ತೋರಿಸುವ ಯಾವುದೇ ಉದ್ದೇಶವನ್ನು ನಮ್ಮ ಪಕ್ಷವು ಹೊಂದಿಲ್ಲ ಹಾಗೂ ಹಾಗೆಯೇ ಕಾಂಗ್ರೆಸ್ ಇಲ್ಲದೆಯೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಪರ್ಯಾಯ ರಾಜಕಾರಣದ ಬಗ್ಗೆ ಮಾತನಾಡಲು ಕೂಡಾ ಟಿಎಂಸಿ ಬಯಸುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ. "ಸುದೀಪ್ ಭಂಡೋಪಾಧ್ಯಾಯ ಕಾಂಗ್ರೆಸ್ಗೆ ಇಲ್ಲದ ಬಿಜೆಪಿಗೆ ಪರ್ಯಾಯವಾದ ವಿರೋಧ ಪಕ್ಷಗಳ ಕೂಟಗಳ ಬಗ್ಗೆ ಮಾತನಾಡಿಲ್ಲ. ಸುದೀಪ್ ಭಂಡೋಪಾಧ್ಯಾಯ ತನ್ನ ಅಭಿಪ್ರಾಯವನ್ನಷ್ಟೇ ಹೇಳಿದ್ದಾರೆ. ಜನರು ನರೇಂದ್ರ ಮೋದಿಗೆ ಪರ್ಯಾಯವಾಗಿ ರಾಹುಲ್ ಗಾಂಧಿಯನ್ನು ಒಪ್ಪುತ್ತಿಲ್ಲ ಎಂಬುವುದು ಸುದೀಪ್ ಭಂಡೋಪಾಧ್ಯಾಯರ ಅಭಿಪ್ರಾಯವಾಗಿದೆ. ಯಾಕೆಂದರೆ ರಾಹುಲ್ ಗಾಂಧಿ ಇನ್ನೂ ಕೂಡಾ ಪ್ರಧಾನಿ ಮೋದಿಗೆ ಪರ್ಯಾಯವಾಗಲು ಸಿದ್ದವಾಗಿಲ್ಲ," ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ. "ಕಾಂಗ್ರೆಸ್ ಕಳೆದ ಲೋಕ ಸಭೆ ಚುನಾವಣೆ ಅಂದರೆ 2014 ಹಾಗೂ 2019 ರಲ್ಲಿ ತನ್ನ ಬಲವನ್ನು ಸಾಬೀತುಪಡಿಸಿಕೊಂಡಿಲ್ಲ," ಎಂದು ಟಿಎಂಸಿ ವಕ್ತಾರ ಹೇಳಿದ್ದಾರೆ. "ಆದರೆ 2021 ರ ವಿಧಾನ ಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪರ್ಯಾಯವಾಗಿ ಹೊರಹೊಮ್ಮಿದ್ದಾರೆ," ಎಂದು ಕೂಡಾ ತಿಳಿಸಿದ್ದಾರೆ.
ಅಭಿಪ್ರಾಯಗಳು ಇರುತ್ತದೆ, ಆದರೆ ಇದು ಕೊನೆಯ ನಿರ್ಧಾರವಲ್ಲ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಶ್ಚಿಮ ಬಂಗಾಳ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ, "ಯಾರು ಯಶಸ್ವಿ, ಯಾರು ಯಶಸ್ವಿ ಆಗಿಲ್ಲ ಎಂಬ ಬಗ್ಗೆ ನಾವು ಯಾವುದೇ ಚರ್ಚೆಯನ್ನು ಮಾಡುವುದಿಲ್ಲ. ಇದು 2021 ಆಗಿದೆ ಹಾಗೂ ಲೋಕ ಸಭಾ ಚುನಾವಣೆಯು 2024 ರಲ್ಲಿ ನಡೆಯಲಿದೆ. ರಾಹುಲ್ ಗಾಂಧಿ ಸ್ಥಿರವಾಗಿ 2014 ರಿಂದಲೇ ಮೋದಿ ಸರ್ಕಾರಕ್ಕೆ ವಿರೋಧ ನಾಯಕರಾಗಿ ಇದ್ದಾರೆ," ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ನಾಯಕ, ಸಂಸದ ಪ್ರದೀದ್ ಭಟ್ಟಾಚಾರ್ಯ, "ವಿರೋಧ ಪಕ್ಷದ ಮಿತ್ರರು ತಮ್ಮ ಸಾಮಾನ್ಯ ನಾಯಕ ಯಾರೆಂದು ಸರ್ವಾನುಮತದಿಂದ ನಿರ್ಧರಿಸಬೇಕು," ಎಂದು ಅಭಿಪ್ರಾಯಿಸಿದ್ದಾರೆ. "ಯಾವಾಗ ಮೈತ್ರಿಯನ್ನು ಮಾಡಲಾಗುತ್ತದೆಯೋ, ಆಗ ಮೈತ್ರಿ ಪಕ್ಷಗಳೇ ತಮ್ಮ ಈ ಮಿತ್ರಕೂಟದ ನಾಯಕರು ಯಾರು ಎಂದು ನಿರ್ಧಾರ ಮಾಡುತ್ತಾರೆ, ಇದನ್ನು ನಾವು ಭಾರತದ ಇತಿಹಾಸದಲ್ಲಿ ನೋಡಿದ್ದೇವೆ. ಹಾಗಾಗಿ ಅಲ್ಲಿ ನೂರಾರು ಅಭಿಪ್ರಾಯಗಳು ಇರುತ್ತದೆ. ಆದರೆ ಇದು ಕೊನೆಯ ನಿರ್ಧಾರವಲ್ಲ," ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆಯಲ್ಲಿ ದೀದಿ ಸ್ಪರ್ಧೆ
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿಗೆ ಪ್ರಬಲವಾದ ಎದುರಾಳಿಯಾಗಿ ಹೊರಹೊಮ್ಮಿದ್ದಾರೆ. ಟಿಎಂಸಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಭರ್ಜರಿಯಾಗಿ ಜಯ ಸಾಧಿಸುವ ಮೂಲಕ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ಸೇರಿದಂತೆ ಹಲವಾರು ನಾಯಕರುಗಳಿಂದ ಪ್ರಚಾರ ಮಾಡಿಸಿಕೊಂಡಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗುವಂತೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭರ್ಜರಿ ಜಯ ಗಳಿಸಿದ್ದರೂ ಕೂಡಾ ಮಮತಾ ಬ್ಯಾನರ್ಜಿ ಮಾತ್ರ ಬಿಜೆಪಿ ಸುವೆಂದು ಅಧಿಕಾರಿಯ ಎದುರು ಕೆಲವೇ ಓಟುಗಳ ಅಂತರದಲ್ಲಿ ಸೋತಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ಪಕ್ಷದ ನಿರ್ಧಾರದಂತೆ ಮುಖ್ಯಮಂತ್ರಿ ಆಗಿ ಮುಂದುವರಿಯಲು ಶಾಸಕ ಸ್ಥಾನದಲ್ಲಿ ಇರುವುದು ಮುಖ್ಯ. ಈ ಹಿನ್ನೆಲೆ ಮಮತಾ ಬ್ಯಾನರ್ಜಿಯು ಸ್ವ ಕ್ಷೇತ್ರ ಭವಾನಿಪುರದ ಶಾಸಕ ರಾಜೀನಾಮೆ ನೀಡಿ ಮಮತಾ ಬ್ಯಾನರ್ಜಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗೆಯೇ ಕಾಂಗ್ರೆಸ್ ಕೂಡಾ ಟಿಎಂಸಿ ಯ ಎದುರು ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಈ ನಡುವೆ ನೂರು ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ ಪ್ರಧಾನ ಮಂತ್ರಿ ಮೋದಿ ಹೆಸರು ಮಾತ್ರವಲ್ಲದೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಸರು ಕೂಡಾ ಇದೆ.
(ಒನ್ ಇಂಡಿಯಾ ಸುದ್ದಿ)