Psychology: ಚಲನಚಿತ್ರಗಳು ಬಿಂಬಿಸುವ ನೈತಿಕ ಸಂಘರ್ಷಗಳು
ಆಕೆಯೊಬ್ಬ ವಿದ್ಯಾವಂತ, ಜವಾಬ್ದಾರಿ ಸ್ಥಾನದಲ್ಲಿರುವ ದೊಡ್ಡ ವ್ಯಕ್ತಿ. ಸಮಾಜದ ಹುಳುಕುಗಳನ್ನು ಎತ್ತಿ ಹಿಡಿಯುವ ವೃತ್ತಿ- ಸುದ್ಧಿ ಮಾಧ್ಯಮದಲ್ಲಿ ಕೀರ್ತಿಗಳಿಸಿರುವ ಮಯಾ(ವಿದ್ಯಾ ಬಾಲನ್). ಅಂದು ಕೆಲಸಗಳನ್ನು ಮುಗಿಸಿ ಮನೆ ಸೇರುವ ಸಮಯವು ಮಧ್ಯ ರಾತ್ರಿಯನ್ನು ಮೀರಿದ್ದು ತಡ ರಾತ್ರಿಯಲ್ಲಿ ಆಕೆಯೇ ಕಾರು ಚಲಾಯಿಸುವಂತಹ ಪರಿಸ್ಥಿತಿ. ತಲೆಯ ಭರ್ತಿ ಆಲೋಚನೆಗಳು, ಮನೆಯಲ್ಲಿ ವಯಸ್ಸಾದ ತಾಯಿ, ಮಿದುಳಿನ ಕಾರ್ಯಕ್ಷಮತೆಯ ತೊಂದರೆಯಿಂದ ಬಳಲುತ್ತಿರುವ ಹದಿಹರೆಯದ ಮಗ. ಅವನ ಅಗತ್ಯಗಳನ್ನು ನಿಷ್ಠೆ, ವಾತ್ಸಲ್ಯದಿಂದ ನಿರ್ವಹಿಸುತ್ತಿರುವ ಸಹಾಯಕಿ ರುಕ್ಸಾನ(ಶೆಫಾಲಿ ಶಾ).
ದೂರದ ಕೇರಿಯಲ್ಲಿರುವ ಅವಳ ಮನೆಯಲ್ಲಿ ಸಣ್ಣ ವಯಸಿನ ಮಗ, ಹದಿಹರೆಯದ ಮಗಳು ಗಂಡ ಇದ್ದಾರೆ. ದುಡಿಯತ್ತಿದ್ದರೇ ಜೀವನ ಸಾಗದು ಎನ್ನುವ ಕಾರಣದಿಂದ ಇಲ್ಲಿಯ ದಿನವಿಡೀ ಕೆಲಸ.
ಆಗೊಂದು ಆಕಸ್ಮಿಕ ಸಂಭವಿಸುತ್ತದೆ. ಚಲಿಸುತ್ತಿದ್ದ ಕಾರಿಗೆ ಅಡ್ಡಬಂದ ವ್ಯಕ್ತಿಗೆ ಕಾರು ಗುದ್ದುತ್ತದೆ. ಹೊಡೆತದ ರಭಸಕ್ಕೆ ವ್ಯಕ್ತಿ ತೀವ್ರವಾಗಿ ಗಾಯಗೊಂಡು ರಸ್ತೆಯ ಬದಿಗೆ ಬೀಳುತ್ತಾರೆ.
ಗಾಡಿ ನಿಲ್ಲಿಸದೇ ಅವಸರ, ಭಯದಿಂದ ಮನೆ ತಲುಪುತ್ತಾಳೆ. ಗಾಯಾಳುವಿನ ಬಗ್ಗೆ ಯೋಚಿಸುವುದಕ್ಕಿಂತಲೂ ಹೆಚ್ಚಾಗಿ ಕಾರಿಗೆ ಅಂಟಿರುವ ಗುರುತು, ಕುರುಹುಗಳನ್ನು ಮುಚ್ಚುವ ಪ್ರಯತ್ನದಲ್ಲಿರುತ್ತದೆ ಅವಳ ಮನಸು. ಹೀಗೇನು ದೌಡಾಯಸಿ ಬಂದಿದ್ದರೂ ಅಪಘಾತದ ಸನ್ನಿವೇಶಗಳನ್ನು ಮರೆಯದ ಮನಸು ಕಾಡುತ್ತಲೇ ಇರುತ್ತದೆ. ಸಂಸ್ಥೆಯ ಪ್ರತಿಷ್ಠೆ, ಮಾಧ್ಯಮದ ಸಂಪರ್ಕಗಳ ಮೂಲಕ ಅಪರಾಧವನ್ನು ಮುಚ್ಚಿಡುವ ಪ್ರಯತ್ನಗಳು ಪರಿಣಾಮಕಾರಿಯಾಗಿ ಶುರುವಾಗುತ್ತವೆ.
ಇದೊಂದು ಗುದ್ದೋಡಿದ ಪ್ರಸಂಗವಾದುದರಿಂದ ಅಪರಾಧಿಯನ್ನು ಕಂಡು ಹಿಡಿಯುವ ಪ್ರಯತ್ನಗಳೂ ಮುಂದುವರೆಯುತ್ತವೆ. ಇದರಲ್ಲಿ ಪೋಲಿಸರಿಗಿಂತ ಪತ್ರಕರ್ತೆಯೊಬ್ಬಳ ಕಾಳಜಿ, ಆಸಕ್ತಿ ತೀವ್ರವಾಗಿರುತ್ತದೆ. ಸತ್ಯಶೋಧನೆಯನ್ನು ಕೈಗೊಳ್ಳುವ ಯುವತಿ ರೋಹಿಣಿ ಜಾರ್ಜ್ (ವಿದತ್ರಿ ಬಂಡಿ) ಮಾಯಾ ಕೆಲಸ ಮಾಡುವ ವಾಹಿನಿಯಲ್ಲಿಯೇ ಹೊಸದಾಗಿ ಸೇರಿದ್ದ ವ್ಯಕ್ತಿ. ಸಾಕಷ್ಟು ಖಚಿತ ಮಾಹಿತಿಗಳೊಂದಿಗೆ ಮಾಯಾಗೆ ಪ್ರಕರಣವನ್ನು ವಿವರಿಸುತ್ತಾಳೆ.
ಮೊದಲಿಗೆ ಹಿಂಜರಿತವಿದ್ದ ಮಾಯಾ ಒಂದು ಹಂತದಲ್ಲಿ ಅವಳ ಬಳಿ ಇರುವ ಮಾಹಿತಿಗಳೆಲ್ಲವೂ ಸುಳ್ಳು, ಶೋಧನೆ ಕೈಬಿಡುವಂತೆ ಆಗ್ರಹಿಸುತ್ತಾಳೆ. ಇದೇ ಮಾದರಿಯ ಪ್ರತಿಕ್ರಿಯೆಯು ಕಾನೂನು ಪಾಲಕರಿಂದಲೂ ಬಂದಿರುತ್ತದೆ. ಕೊನೆಯಲ್ಲಿ ಆಮಿಷಕ್ಕೆ ಸಿಕ್ಕಿಕೊಂಡು ಕತೆಯ ಮಾಹಿತಿಗಳ ದಾಖಲೆಗಳನ್ನು ವಾಹಿನಿಯ ಮುಖ್ಯಸ್ತರಿಗೆ ಕೊಟ್ಟುಬಿಡುತ್ತಾಳೆ.
ಆದರೆ ಇವೆಲ್ಲ ಘಟನೆಯ ನಡುವೆ ಮಾಯಾ ಮನಸು ಮಾತ್ರ ಸ್ಥಿಮಿತವನ್ನು ಕಳೆದುಕೊಳ್ಳುತ್ತಲೇ ಇರುತ್ತದೆ. ರುಕ್ಸಾನ ಮಹಮದ್ಳ ಮಗಳಿಗೆ ತನ್ನ ಕಾರು ಗುದ್ದಿದ್ದು ಎನ್ನುವುದು ಅವಳ ಮನಸನ್ನು ಕಾಡಿಸುತ್ತಲೇ ಇರುವುದು.ವೃತ್ತಿಯಲ್ಲಿಯೂ, ಎಡವಟ್ಟು ನಿರಾಸಕ್ತಿ, ಮನೆಮಂದಿಯೊಂದಿಗೆ ಜಗಳಗಳು ಪದೇಪದೇ ಮನಸನ್ನು ಹಿಂಸಿಸುತ್ತಿರುತ್ತದೆ. ಈ ಮಾನಸಿಕ ಸ್ಥಿತಿಯನ್ನು ಅತ್ಯಂತ ತೆಳುವಾಗಿ ಚಿತ್ರ ನಿರೂಪಿಸುತ್ತದೆ.
ಮಾಧ್ಯಮ ಜಗತ್ತಿನ ಮೂಲಕ ಗಳಿಸಿದ ಸತ್ಯಸಂಧತೆಯನ್ನು ಬುಡಸಹಿತ ಅಲ್ಲಾಡಿಸುವ ಸಮಯ ಎದುರಾದಾಗ ವ್ಯಕ್ತಿತ್ವದ ರೀತಿಗಳು ಆತಂಕವನ್ನು ನಿರ್ವಹಿಸಬಲ್ಲದೆ? ತಾನು ಮಾಡಿದ್ದು ತಪ್ಪೆ? ಈಗ ಮಾಡುತ್ತಿರುವುದು ಸರಿಯೆ? ಎನ್ನುವಂತಹ ಜಂಜಾಟದಲ್ಲಿ, ಮನಸು ಮತ್ತು ವ್ಯಕ್ತಿತ್ವನ್ನು ಕಾಪಾಡುವುದು ಯಾವುದು? ಪಾಪಪ್ರಜ್ಞೆ ಕಾಡಾಡಿಸಿದ ನಂತರ ತಪ್ಪಿನ ಅರಿವು ಬರುವುದೆ? ಮಾನವೀಯತೆಯು ಅಂತಸ್ತು, ಅವಕಾಶ, ಅಹಂಕಾರಕ್ಕೆ ಅನುಗುಣವಾಗಿ ಇರುವುದೇ ಎನ್ನುವಂತಹ ಪ್ರಶ್ನೆಗಳು ರುಕ್ಸಾನ ಕುಟುಂಬ ಹಣದ ಆಮಿಷಕ್ಕೆ ಸಿಕ್ಕಿಕೊಳ್ಳುವುದು, ಕಾನೂನು ಪರಿಪಾಲಕರ ವೃತ್ತಿಧರ್ಮ ಮತ್ತು ನ್ಯಾಯಕ್ಕೆ ತಲೆಬಾಗದೇ ಆಮೀಷಗಳಿಗೆ ಶರಣಾಗುವುದು, ಸುದ್ಧಿ ಸಂಸ್ಥೆಯ ಮುಖ್ಯಸ್ತನ ನೈತಿಕ ನಿಲುವುಗಳು ಜಾಳುಜಾಳಾಗಿದ್ದರೂ, ಬಹುಶಃ, ಇಂದಿನ ದಿನಗಳಲ್ಲಿ ಇಂತಹದೊಂದು ವಾತಾವರಣ ಗಟ್ಟಿಯಾಗುತ್ತಿದೆ ಎನ್ನುವುದನ್ನು ಸಂಕೇತಿಸುತ್ತದೆ.
ಕೊನೆಯಲ್ಲಿ ಹುಟ್ಟಿನಿಂದ ಬಂದ ಮಿದುಳಿನ ನ್ಯೂನತೆ ಮತ್ತು ಅಪಘಾತದಿಂದ ಉಂಟಾದ ನ್ಯೂನತೆಯನ್ನು ಎದುರಿಸುಲೇ ಬೇಕಾಗಿರುವ ತಾಯಿಂದರ ಮನದಾವರಣವು ಕರಾವಳಿಯ ಕಗ್ಗತ್ತಲಿನ ಕಾರ್ಮೋಡಗಳ ನಡುವೆ ಸಿಕ್ಕಿಕೊಂಡಿರುವಂತೆ ಕಂಡುಬರುತ್ತದೆ. ಅಂತಸ್ತು, ಖ್ಯಾತಿ, ಸಾಧನೆಗಳು ಮನದ ತಲ್ಲಣಗಳನ್ನು ನಿರ್ವಹಿಸದು. ಪಾಪಪ್ರಜ್ಞೆಯಿಂದ ಪಾರಾಗಲು ಮಾನವಿಯತೆಯ ಗುಣಗಳನ್ನು ಅವಲಂಬಿಸಲೇ ಬೇಕು ಎನ್ನುವ ಸಂದೇಶವೂ ಕೂಡ ಕೊನೆಯಲ್ಲಿ ಕಂಡುಬರುತ್ತದೆ.