ಕರ್ನಾಟಕದಲ್ಲಿ ಗ್ಯಾರಂಟಿ ಸರ್ಕಾರದ ಯಶಸ್ವಿ 1000 ದಿನಗಳು: 5 ಗ್ಯಾರಂಟಿಗಳಿಂದ ನನಸಾದ ಕೋಟಿ ಕನಸುಗಳು
ಕರ್ನಾಟಕದಲ್ಲಿ ನವ ನಿರ್ಮಾಣದ ಸಂಕಲ್ಪದೊಂದಿಗೆ ಅಸ್ತಿತ್ವಕ್ಕೆ ಬಂದ ಗ್ಯಾರಂಟಿ ಸರ್ಕಾರವು ಇದೀಗ ಯಶಸ್ವಿ 1000 ದಿನಗಳನ್ನು ಪೂರೈಸಿದೆ. 'ನಾವು ನುಡಿದಂತೆ ನಡೆದಿದ್ದೇವೆ, ನಿಮ್ಮ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ' ಎಂಬ ಮುಖ್ಯಮಂತ್ರಿಗಳ ಮಾತಿನಂತೆ, ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿವೆ.
ಗೃಹಲಕ್ಷ್ಮಿ: ಯಜಮಾನಿಯರಿಗೆ ಆರ್ಥಿಕ ಸ್ವಾತಂತ್ರ್ಯ
ರಾಜ್ಯದ 1.24 ಕೋಟಿ ಕುಟುಂಬಗಳ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ನೇರವಾಗಿ ಜಮೆಯಾಗುವ 'ಗೃಹಲಕ್ಷ್ಮಿ' ಯೋಜನೆಯು ಮಹಿಳೆಯರಿಗೆ ನಿಜವಾದ ಆರ್ಥಿಕ ಸ್ವಾತಂತ್ರ್ಯ ತಂದುಕೊಟ್ಟಿದೆ. ಈ ಹಣವು ಮಗುವಿನ ಶಿಕ್ಷಣಕ್ಕೆ ನೆರವಾಗುತ್ತಿದ್ದು, ಅನಾರೋಗ್ಯದ ಸಮಯದಲ್ಲಿ ಆಪದ್ಬಾಂಧವನಂತೆ ಕೆಲಸ ಮಾಡುತ್ತಿದೆ. ಈ ಬೃಹತ್ ಯೋಜನೆಗಾಗಿ ಇಲ್ಲಿಯವರೆಗೆ 59,863 ಕೋಟಿ ರೂಪಾಯಿ ವ್ಯಯಿಸಲಾಗಿದೆ.

ಅನ್ನಭಾಗ್ಯ: ಹಸಿವು ಮುಕ್ತ ಕರ್ನಾಟಕದ ಸಂಕಲ್ಪ
ಬಡವರ ಪಾಲಿನ ಅಕ್ಷಯ ಪಾತ್ರೆಯಾಗಿರುವ 'ಅನ್ನಭಾಗ್ಯ' ಯೋಜನೆಯಿಂದ 5 ಕೋಟಿಗೂ ಅಧಿಕ ಜನರಿಗೆ ಅನುಕೂಲವಾಗುತ್ತಿದೆ. ವಾರ್ಷಿಕ 25 ಲಕ್ಷ ಮೆಟ್ರಿಕ್ ಟನ್ಗೂ ಅಧಿಕ ಆಹಾರಧಾನ್ಯವನ್ನು ವಿತರಿಸಲಾಗುತ್ತಿದ್ದು, ತಲಾ 10 ಕೆಜಿ ಆಹಾರದ ಮೂಲಕ ಪ್ರತಿಯೊಬ್ಬರಿಗೂ ಪೌಷ್ಟಿಕಾಂಶಯುಕ್ತ ಆಹಾರದ ಭರವಸೆ ನೀಡಲಾಗಿದೆ. 17,495 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಮುನ್ನುಡಿ ಬರೆದಿದೆ.
ಗೃಹಜ್ಯೋತಿ: ಮನೆ-ಮನಗಳಲ್ಲಿ ಬೆಳಕಿನ ಭರವಸೆ
ರಾಜ್ಯದ ಮನೆಗಳಲ್ಲಿ ನೆಮ್ಮದಿಯ ಬೆಳಕು ಮೂಡಿಸಿರುವ 'ಗೃಹಜ್ಯೋತಿ' ಯೋಜನೆಯು 1.65 ಕೋಟಿಗೂ ಅಧಿಕ ಕುಟುಂಬಗಳಿಗೆ ವರದಾನವಾಗಿದೆ. ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಈ ಯೋಜನೆಯಿಂದಾಗಿ ಗ್ರಾಹಕರ ವಿದ್ಯುತ್ ಬಿಲ್ ಹೊರೆ ತಪ್ಪಿದೆ ಹಾಗೂ ಆ ಉಳಿತಾಯದ ಹಣದಲ್ಲಿ ಅವರು ಮನೆ ಮಾಡುತ್ತಿದ್ದಾರೆ. ಇದು ನಾಡಿನ ಮನೆ-ಮನಗಳಲ್ಲಿ ಭರವಸೆ ಬೆಳಗುತ್ತಿದ್ದು, ಸರ್ಕಾರವು ಈವರೆಗೆ 22,839 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಇದಕ್ಕಾಗಿ ವ್ಯಯಿಸಿದೆ.
ಶಕ್ತಿ: ಮಹಿಳಾ ಸಬಲೀಕರಣದ ಐತಿಹಾಸಿಕ ಹೆಜ್ಜೆ
ಮಹಿಳೆಯರು ಇಂದು ಹಣದ ಹಂಗಿಲ್ಲದೆ, ಸಂಕೋಚದ ಬೇಲಿ ಸರಿಸಿ ಸ್ವತಂತ್ರವಾಗಿ ಸಂಚರಿಸುತ್ತಿದ್ದರೆ ಅದಕ್ಕೆ 'ಶಕ್ತಿ' ಯೋಜನೆಯೇ ಕಾರಣ. ಮಹಿಳೆಯರು ಈವರೆಗೆ 668 ಕೋಟಿಗೂ ಅಧಿಕ ಉಚಿತ ಪ್ರಯಾಣ ಮಾಡುವ ಮೂಲಕ ಇತಿಹಾಸವನ್ನೇ ಬರೆದಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗಳ ಆದಾಯ ಹೆಚ್ಚಿರುವುದು ಮಾತ್ರವಲ್ಲದೆ, ದೇಶದಾದ್ಯಂತ ಮಹಿಳಾ ಸಬಲೀಕರಣದ ಸ್ಪಷ್ಟ ಸಂದೇಶ ರವಾನೆಯಾಗಿದೆ. ಇದಕ್ಕಾಗಿ ಸರ್ಕಾರ 17,303 ಕೋಟಿ ರೂಪಾಯಿ ವೆಚ್ಚ ಮಾಡಿದೆ.
ಯುವನಿಧಿ: ಯುವಜನರ ಉದ್ಯೋಗದ ಕನಸಿಗೆ ನೀರೆರೆದ ಯೋಜನೆ
ಪದವಿ ಮತ್ತು ಡಿಪ್ಲೊಮಾ ಮುಗಿಸಿರುವ ಯುವಜನರ ಪಾಲಿಗೆ 'ಯುವನಿಧಿ' ಯೋಜನೆಯು ಬಹುದೊಡ್ಡ ಬಲ ತುಂಬಿದೆ. ಈವರೆಗೆ ಸುಮಾರು 3,08,000 ಕ್ಕೂ ಅಧಿಕ ಯುವ ಫಲಾನುಭವಿಗಳಿಗೆ ಇದು ನೆರವಾಗಿದೆ. ಯುವಕ-ಯುವತಿಯರ ಕೌಶಲ್ಯ ವೃದ್ಧಿಗೆ ಹಾಗೂ ಉದ್ಯೋಗ ಹುಡುಕಿಕೊಳ್ಳಲು ಹೊಸ ಆಶಾವಾದ ಮತ್ತು ಆತ್ಮಸ್ಥೈರ್ಯವನ್ನು ಈ ಯೋಜನೆ ಬಿತ್ತುತ್ತಿದೆ. ಇದಕ್ಕಾಗಿ ಒಟ್ಟು 912 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ.
ರಾಜ್ಯದಲ್ಲಿ ಹೊಸ ಗ್ಯಾರಂಟಿ ಯೋಜನೆಯಡಿ 1,00,000 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ಒಟ್ಟಾರೆಯಾಗಿ, ಈ 1000 ದಿನಗಳಲ್ಲಿ ಗ್ಯಾರಂಟಿ ಸರ್ಕಾರವು ಕೋಟಿ ಕನಸುಗಳನ್ನು ನನಸಾಗಿಸುವ ಮೂಲಕ ಸಾರ್ಥಕತೆ ಮೆರೆದಿದೆ.












Click it and Unblock the Notifications