ಸವಿಯಾದ ಮಾತು ಸೊಗಸಾದ ನೋಟ
ಮೊದಲ ದಿನ ತೀರ ಅಸಂಪ್ರದಾಯಿಕವಾಗೇನು ಇರಲಿಲ್ಲ. ಚಂದ್ರಶೇಖರ್ ಮತ್ತು ತಂಡದವರಿಂದ ನಾದಸ್ವರ ಇತ್ತು. ಬಳಿಕ ಶೀಲಾ ಪ್ರಭಾಕರ್ ತಂಡದವರು ವೇದಘೋಷ ಮಾಡಿದರು. ಮಧ್ಯಾಹ್ನ ಅಥರ್ವಶೀರ್ಷದ ಧ್ವನಿ ಕೇಳಿದಾಗ ಕುತೂಹಲದಿಂದ ಅತ್ತ ಹೋದವರಿಗೆ ಈ ತಂಡ ಅಭ್ಯಾಸ ನಡೆಸುತ್ತಿದ್ದ ಅಂಶ ಗಮನಕ್ಕೆ ಬಂತು. ಪ್ರಾರ್ಥನಾ ಮಂತ್ರ, ಮಂತ್ರಪುಷ್ಟ, ಶ್ರೀಸೂಕ್ತ, ನಾರಾಯಣ ಸೂಕ್ತ- ಇವು ವೇದ ಘೋಷದಲ್ಲಿ ಸೇರಿವೆ.
***
ಸವಿಯಾದ ಮಾತು, ಸಿಹಿಯಾದ ಊಟ, ಸೊಗಸಾದ ನೋಟ- ಮೊದಲ ದಿನ ಸಂಜೆಯ ಕಾರ್ಯಕ್ರಮವನ್ನು ಹೀಗೆ ಬಣ್ಣಿಸಲು ಅಡ್ಡಿ ಇಲ್ಲ. ಅನ್ನ-ಸಾಂಬಾರ್, ಪಲಾವ್, ಪಾಯಸ, ರಾಗಿ ಮುದ್ದೆ ಊಟ ಎಲ್ಲರ ಹೊಟ್ಟೆ ತಣಿಸಿತು. ಅದರಂತೆ ಮುಂದೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನವನ್ನು ಮುದಗೊಳಿಸಿತು.
***
ರಂಗಕರ್ಮಿ ಯಶವಂತ ಸರದೇಶಪಾಂಡೆಯವರ ಖದರೇ ಭಿನ್ನವಾಗಿತ್ತು. ಅವರು ಕಚ್ಚೆ ಪಂಚೆ, ಅಂಗಿ, ಟೋಪಿ, ಕೊಲ್ಲಾಪುರಿ ಚಪ್ಪಲಿ ಧರಿಸಿ ಅಪ್ಪಟ ಉತ್ತರ ಕರ್ನಾಟಕ ಶೈಲಿಯಲ್ಲಿ ಬಂದು ಗಮನ ಸೆಳೆದರು.
***
ಕಿಕ್ಕೇರಿ ಕೃಷ್ಣಮೂರ್ತಿಯವರ ಜನಪದ ಸಂಗೀತ; ಪುತ್ತೂರಾಯ, ಕೃಷ್ಣೇಗೌಡರ ನಗೆ ರಸಾಯನ ಇತ್ತು. ಆದರೆ ಇವರೆಲ್ಲರ ಇಂದಿನ ಕಾರ್ಯಕ್ರಮ ಕೇವಲ ಝಲಕ್ ಅಂತೆ. ಮುಂದೈತೆ ಖಡಕ್ ಕಾರ್ಯಕ್ರಮ. ನಾವಿಕದ ಕೆಲವು ಕಲಾವಿದರೂ ಕಲಾಪ್ರದರ್ಶನ ಮಾಡಿದರು.
***
ಬದರಿ ಪ್ರಸಾದ್ ಹಾಗೂ ಅಜಯ್ ವಾರಿಯರ್-ದಿವ್ಯಾ ರಘುರಾಮ್ ಅವರು ಕನ್ನಡ ಚಿತ್ರಗೀತೆಗಳನ್ನು ಹಾಡಿ ನೆರೆದಿದ್ದ ಸಹಸ್ರಾರು ಪ್ರತಿನಿಧಿಗಳನ್ನು ರಂಜಿಸಿದರು. ಆದರೆ ಎಲ್ಲರದೂ ಮಧುರ ಮಧುರವೀ ಮಂಜುಳಗಾನ. ಹೊಸ ಹಾಡುಗಳ ಸುಳಿವಿರಲಿಲ್ಲ. ಬದರಿಪ್ರಸಾದ್ ಅವರು ನಿನ್ನ ಮನೆತನಕ... ಹಾಡು ಪ್ರಸ್ತುತಪಡಿಸಲು ಮುಂದಾದರೂ ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಲಿಲ್ಲ.
***
ನಾವಿಕದ ಆಹ್ವಾನಿತರಾಗಿ ಶಿವರಾಜ್ ಕುಮಾರ್, ಜೆನ್ನಿಫರ್ ಕೊತ್ವಾಲ್, ಶರ್ಮಿಳಾ ಮಾಂಡ್ರೆ ಆಗಮಿಸಿದ್ದು ತಾರಾ ಮೆರಗು ನೀಡಿದ್ದಾರೆ. (ಸ್ನೇಹಸೇತು : ವಿಜಯ ಕರ್ನಾಟಕ)












Click it and Unblock the Notifications