ದೀಪಕ್ ಕಂಪನಿಯಲ್ಲಿ ಪವನ್ ಕೆಲಸಕ್ಕೆ ಸೇರಿದ್ದೇಕೆ?
ಇಂಗ್ಲಿಷ್
ಮೂಲ
:
ಅಸಿತ
ಪ್ರಭುಶಂಕರ
ಕನ್ನಡಕ್ಕೆ
:
ರವಿ
ಕೃಷ್ಣಾ
ರೆಡ್ಡಿ
[email protected]
ಅನು ಮನೆ ಒಳಗೆ ಅಡಿಯಿಟ್ಟು ಆಯಾಸದಿಂದ ಸೋಫಾದ ಮೇಲೆ ಬಿದ್ದುಕೊಳ್ಳುತ್ತಿದ್ದಂತೆಯೆ ಫೋನ್ ರಿಂಗುಣಿಸಿತು. ಅದರತ್ತ ನೋಡಿದರೆ ಧ್ವನಿಸಂದೇಶಗಳಿರುವ ಸೂಚನೆಯಾಗಿ ಅದರ ದೀಪ ಖುಷಿಯಿಂದ ಮಿನುಗುತ್ತಿದ್ದಂತೆ ಕಂಡಿತು.
ನಾನು ಇಲ್ಲಿ ಈ ದೇಶದಲ್ಲಿ ಏನು ಮಾಡುತ್ತಾ ಇದ್ದೇನೆ? ಅಮೇರಿಕಾದಲ್ಲಿನ ನನ್ನ ಜೀವನ ಒಂದು ಜೋಕು. ಭಾರತದಲ್ಲಿ ನಾವು ಮನೆಗೆ ಬಂದಾಗ ನಮ್ಮ ಜೊತೆ ಮಾತನಾಡಲು ಜನರಿರುತ್ತಾರೆ; ಫೋನುಗಳಾಗಲಿ, ಧ್ವನಿಸಂದೇಶಗಳಾಗಲಿ ಅಲ್ಲ. ಅವಳು ಮನೆಗೆ ಬಂದರೆ ಆ ಧ್ವನಿಸಂದೇಶದ ಯಂತ್ರದಲ್ಲಿ ಯಾವುದೇ ಸಂದೇಶಗಳಿಲ್ಲದೆ ಅದು ಮಿನುಗದೆ ಇರುತ್ತಿದ್ದ ಹಾಗೂ ಅದರಿಂದ ಅವಳು ನಿರಾಶಳಾಗುತ್ತಿದ್ದ ದಿನಗಳೂ ಇದ್ದವು. ಆದರೆ ಇತ್ತೀಚಿನ ಕೆಲವಾರು ತಿಂಗಳುಗಳಲ್ಲಿ ಅವಳಿಗೆ ಬೇಕಾಗಿದ್ದ ಸ್ನೇಹಿತರನ್ನು ಸಹ ಅವಳ ಕೈಯ್ಯಲ್ಲಿ ಕಾಣಲಾಗಿರಲಿಲ್ಲ. ಅವಳ ಸಂಪೂರ್ಣ ಜೀವನ ಅವಳ ಉದ್ಯೋಗ, ಸಹೋದ್ಯೋಗಿಗಳು, ಹಾಗು ಸ್ನೇಹಿತರಿಂದ ಬರುವ ಇಮೇಯ್ಲ್ಗಳಿಂದ ತುಂಬಿಹೋಗಿತ್ತು. ಈಗ ಪವನ್ ಕೂಡ ಇಮೇಯ್ಲ್ ಮಾಡುತ್ತಿಲ್ಲ.
ಅವಳು ಡ್ಯಾನ್ನ ಹಾಗೂ ಹತಾಶೆಯಿಂದ ಕರೆ ಮಾಡುತ್ತಿದ್ದ ರೂಪಾಳ ಕರೆಗಳಿಗಾಗಿ ಎದುರುನೋಡುತ್ತಿದ್ದಳು. ಈಗ ರೂಪಾಳ ಆ ಆತಂಕಭರಿತ ಕರೆಗಳು ಬರುತ್ತಿಲ್ಲ. ಇನ್ನು ಮೇಲೆ ಅವು ಸಂಪೂರ್ಣವಾಗಿ ನಿಂತು ಹೋದಂತೆ.
ಅನು ಫೋನ್ ಕರೆಯನ್ನು ಸ್ವೀಕರಿಸದೆ, ಅದು ಧ್ವನಿಸಂದೇಶದ ಯಂತ್ರದಲ್ಲಿ ರೆಕಾರ್ಡ್ ಆಗಲಿ ಎಂದು ಹಾಗೆಯೆ ಕುಳಿತಳು. ಆದರೆ ಕರೆ ಮಾಡಿದ್ದವರು ಯಾವುದೆ ಸಂದೇಶವನ್ನು ಬಿಡಲಿಲ್ಲ. ಅದು ರೆಕಾರ್ಡ್ಗೆ ಹೋದ ತಕ್ಷಣ ಅತ್ತಲಿನವರು ಕರೆ ತುಂಡು ಮಾಡಿದ್ದರು. ಅನು ಸೋಫಾದ ಮೇಲೆಯೆ ಕುಳಿತು ಎಲ್ಲವನ್ನೂ ಮನಸ್ಸಿನಲ್ಲಿ ತಿರುವಿ ಹಾಕುತ್ತ ಕುಳಿತಳು. ಮಧ್ಯಾಹ್ನ ಹೋಗಿ ಸಂಜೆಯಾಯಿತು; ನಂತರ ಕತ್ತಲೂ ಆವರಿಸಿತು.
ಆಗ ಅವಳಿಗೆ ಬಾಗಿಲು ತಟ್ಟಿದ ಶಬ್ದ ಕೇಳಿಸಿತು. ಒಂದು ಕ್ಷಣದ ಬಳಿಕ ಬಾಗಿಲಿನ ಬೀಗವನ್ನು ತೆಗೆಯುತ್ತಿರುವುದು ಕೇಳಿಸಿತು.
‘‘ಅನು, ನಾನು ಡ್ಯಾನ್. ಯಾಕೆ ಹೀಗೆ ಕತ್ತಲಲ್ಲಿ ಕುಳಿತಿದ್ದೀಯಾ?’’
‘‘ನನಗೆ ಗೊತ್ತಿಲ್ಲ.’’
‘‘ನಿನ್ನನ್ನು ನೀನೆ ದಂಡಿಸಿಕೊಳ್ಳಬೇಡ.’’ ಅವನ ಸ್ವರ ಸಂತೈಸುವಂತಿತ್ತು. ‘‘ಬಾ, ಈಗಾಗಲೆ ಹೊತ್ತಾಗಿದೆ. ಹೋಗಿ ಏನಾದರು ತಿನ್ನುವುದಕ್ಕೆ ತರೋಣ.’’
‘‘ಪಿಜ್ಜಾ ತರಿಸು. ನಾನು ನನ್ನ ಇಮೇಯ್ಲ್ಗಳನ್ನು ನೋಡಬೇಕು. ದಯವಿಟ್ಟು ಕಂಪ್ಯೂಟರ್ ಅನ್ನು ಆನ್ ಮಾಡುತ್ತೀಯ?’’
ಡ್ಯಾನ್ ಅವಳ ಲ್ಯಾಪ್ಟಾಪನ್ನು ತೆರೆದು, ಅದರ ಪವರ್ ಗುಂಡಿಯನ್ನು ಒತ್ತಿದ. ಆಮೇಲೆ ಅವರ ಇಷ್ಟದ ಪಿಜ್ಜಾ ಅಂಗಡಿಗೆ ಕರೆ ಮಾಡಿದ. ಕಂಪ್ಯೂಟರ್ ಸಂಪೂರ್ಣ ಬೂಟ್ ಆದ ನಂತರ ಬರುವ ಪರಿಚಿತ ಸಂಗೀತ ಅನೂಳ ಕಿವಿಗೆ ಬಿತ್ತು. ಲಾಗಿನ್ ಆಗಿ ತನ್ನ ಇಮೇಯ್ಲ್ಗಳನ್ನು ತೆರೆದಳು.
‘‘ಹೇ, ಅನು, ಒಂದಷ್ಟು ಒಳ್ಳೆಯ ಸುದ್ಧಿಗಳಿವೆ.’’
‘‘ಏನು?’’
‘‘ಅವರಿಗೆ ಟೈರಿನ ಕಬ್ಬಿಣದ ರಾಡಿನ ಮೇಲೆ ಏನೂ ಸಿಗಲಿಲ್ಲ. ಯಾವುದೆ ಹಸ್ತಮುದ್ರೆಗಳಾಗಲಿ, ಕೂದಲು, ರಕ್ತ, ಏನೂ ಸಿಗಲಿಲ್ಲ. ಅದು... ಪರಿಶುದ್ಧವಾಗಿತ್ತು ಎಂದು ಹೇಳಬಹುದು.’’
‘‘ಹೇಗೆ ಇದು ಒಂದು ರೀತಿಯಲ್ಲಿ ಒಳ್ಳೆಯದು?’’
‘‘ಅದರ ಮೇಲೆ ಯಾರ ಮೇಲಾದರೂ ಆಪಾದನೆ ಹೊರಿಸುವಂತಹ ಸಾಕ್ಷಿ ಇರಲಿಲ್ಲ. ಅದು ಯಾಕಿರಬಹುದು ಅಂದರೆ, ಅವರು ಯಾರೆ ಇರಲಿ ಅದನ್ನು ಬಹಳ ಶುಭ್ರವಾಗಿ ಒರೆಸಿರಬಹುದಾದ್ದರಿಂದ.’’
‘‘ಡ್ಯಾನ್, ಬಾ ಇಲ್ಲಿ, ನನಗೆ ಪವನ್ನಿಂದ ಒಂದು ಇಮೇಯ್ಲ್ ಬಂದಿದೆ. ನೀನು ಅದನ್ನು ನೋಡಬೇಕು. ಯಾಕೆಂದರೆ ನಾಳೆ ಯಾರಾದರೂ ನಾನು ಸಾಕ್ಷಿಯನ್ನು ತಿದ್ದಿದೆ ಎಂದು ಹೇಳಬಾರದು.’’
‘‘ಹೌದೌದು, ಈ ಕೇಸಿನಲ್ಲಿ ನಾನು ಒಳ್ಳೆ ಸಾಕ್ಷಿಯಾದಂತೆ!’’ ಹಾಗೆಂದು ಹೇಳಿದರೂ ಬಂದು ಅದನ್ನು ಇಣಿಕಿ ನೋಡಿದ. ಅನೂಳ ಹೃದಯ ನಾಗಾಲೋಟದಲ್ಲಿತ್ತು. ಪವನ್ನ ಪತ್ರ ಓದಲು ಅವಳಿಗೆ ಭಯವಾಗುತ್ತಿತ್ತು. ಯಾಕೆ?
ಪ್ರೀತಿಯ ಅನು,
ನಾನು ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದೆ. ನಿನ್ನನ್ನು ಡ್ಯಾನ್ನ ಜೊತೆ ನೋಡಿದ ಮೇಲೆ ಯಾಕೊ ನನಗೆ ಒಂದು ರೀತಿ ನಿರಾಶೆಯಾಯಿತು. ಹಾಗಾಗಿಯೆ ನಿನಗೆ ಕರೆ ಮಾಡುವ ಮನಸ್ಸಾಗಲಿಲ್ಲ. ಅದಕ್ಕಾಗಿ ಕ್ಷಮಿಸು.
ನಾನು ಹಿಂದಿರುಗಿ ಬಂದ ಮೇಲೆ, ನಮ್ಮ ಸಂಸ್ಥೆಯಲ್ಲಿ ಎಲ್ಲರಿಗೂ ಈ ಇಮೇಯ್ಲ್ ಬಂತು.
ಅದರ ಕೆಳಗೆ, ಅವನು ತನ್ನ ಸಂಸ್ಥೆಯ ಪ್ರಕಟಣೆಯನ್ನು ಪೇಸ್ಟ್ ಮಾಡಿದ್ದ :