ಅನು ಪತ್ರದಲ್ಲಿ ಭಯ, ಆತಂಕ ಮತ್ತು ಗೊಂದಲ!
ಇಂಗ್ಲಿಷ್ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ
[email protected]
ಪ್ರೀತಿಯ ಅಪ್ಪ,
ನೀವು ಕ್ಷೇಮವಾಗಿ ಆರೋಗ್ಯದಿಂದ ಮತ್ತು ಹುಮ್ಮಸ್ಸಿನಿಂದ ಇದ್ದೀರೆಂದು ಆಶಿಸುತ್ತೇನೆ. ಈಗ ತಂತ್ರಜ್ಞಾನ ಐ.ಎಸ್.ಡಿ ಕರೆಗಳನ್ನು ಎಷ್ಟು ಅಗ್ಗ ಮಾಡಿದೆ ಅಂದರೆ, ಅದು ಕಾಗದ ಬರೆಯುವ ಕಲೆಯನ್ನೆ ಮೂಲೆಗುಂಪು ಮಾಡುತ್ತಿದೆ. ನಾನು ಅದನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಇವೆಲ್ಲ ನಾವು ನಮ್ಮ ಅನುಕೂಲಗಳಿಗೆ ತೆರುವ ಬೆಲೆ.
ನನ್ನ ಜೀವನದಲ್ಲಿ ಇತ್ತೀಚಿನ ಎರಡು ವರ್ಷಗಳಿಗಿಂತ ಕಮ್ಮಿ ಸಮಯದಲ್ಲಿ ಆಗಿಹೋದದ್ದರ ಬಗ್ಗೆ ನಾನು ಬಹಳ ಆಲೋಚಿಸುತ್ತಿದ್ದೇನೆ. ಇದನ್ನೆಲ್ಲ ವಿವರಿಸಲು ನಾನು ವಿಜ್ಞಾನದ ಕಡೆ ತಿರುಗಿದಷ್ಟೂ, ಈ ಘಟನೆಗಳು ನಾನು ನನ್ನ ಆಂತರ್ಯದಲ್ಲಿಯೇ ಇನ್ನೂ ಆಳವಾಗಿ ಗಮನಿಸಿಕೊಳ್ಳುುವಂತೆ ಮಾಡಿವೆ. ಬಹುಶಃ ನನಗೆ ತರ್ಕಕ್ಕಿಂತ ಆಚೆ ಇರುವ ಉತ್ತರಗಳು ಬೇಕು ಎನ್ನಿಸುತ್ತದೆ.
ನಾನು ಒಳ್ಳೆಯ ಮನುಷ್ಯಳಾಗಿರಬೇಕು ಎನ್ನುವ ವಿಷಯದಲ್ಲಿ ಎಂದೂ ರಾಜಿಯಾಗದಂತೆ ನಾನು ಇಲ್ಲಿಯವರೆಗೂ ಬಹಳ ಪ್ರಯತ್ನಿಸಿದ್ದೇನೆ. ಆದರೆ ಈಗ, ನನಗೆ ಸಂಬಂಧಿಸಿದ ಎಲ್ಲರ ನೋವಿಗೂ ನಾನು ಜವಾಬ್ದಾರಳಾಗಿದ್ದೇನೆ ಎಂದು ಬಹಳ ವೇದನೆ ಅನುಭವಿಸುತ್ತಿದ್ದೇನೆ.
ನಾವೆಲ್ಲರೂ ಅವನನ್ನು ನೋಡಿದಾಗ ಪವನ್ 10 ವರ್ಷದ ಹುಡುಗನಾಗಿದ್ದ. ಒಂದು ದಶಕಕ್ಕೂ ಹೆಚ್ಚು ಕಾಲ ನಾನು ಅವನನ್ನು ನೋಡೇ ಇರಲಿಲ್ಲ. ಈಗ ಏನೋ ಒಂದು ವಿಚಿತ್ರ ರೀತಿಯಲ್ಲಿ ಅವನು ನನ್ನನ್ನು ಒತ್ತೆಯಾಳುವಾಗಿ ಇಟ್ಟುಕೊಂಡ ಹಾಗೆ ಭಾಸವಾಗುತ್ತದೆ. ಅವನಿದ್ದ ಪರಿಸ್ಥಿತಿಯಿಂದ ಅವನನ್ನು ಪಾರು ಮಾಡಲು ನಾನು ಪ್ರಯತ್ನಿಸಲಿಲ್ಲ ಎಂದು ಅವನ ತಾಯಿ ಸತ್ತಾಗಿನಿಂದ ನನಗೆ ಪಾಪಪ್ರಜ್ಞೆ ಕಾಡಲಾರಂಭಿಸಿದೆ. ಅವನ ತಾಯಿ ಅತ್ಮಹತ್ಯೆ ಮಾಡಿಕೊಂಡದ್ದು ಗೊತ್ತಾದ ನಂತರ ಅವನು ಎರಡು ದೇಶಗಳ ನಡುವೆ ದಿಕ್ಕಿಲ್ಲದೆ ಅಲೆದಾಡುತ್ತಿರುವ ಅನಾಥನಂತೆ ಕಾಣಿಸುತ್ತಿದೆ. ನಾನು ಅವನನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟುಬರಲು ಹೋದಾಗ ಅಲ್ಲಿ ಅವನು ಹೇಳಿದ್ದು ಏನೆಂದರೆ, ‘‘ ಇನ್ನು ಇಲ್ಲಾಗಲಿ, ಭಾರತದಲ್ಲಾಗಲಿ, ನಾನು ಎದುರು ನೋಡುವಂತಹುದು ಏನೂ ಇಲ್ಲ.’’ ನಾನೂ ಸಹ ಅವನಿಗೆ ದ್ರೋಹ ಮಾಡಿದ್ದೇನೆ ಎಂದು ಅವನು ಅಂದುಕೊಂಡಂತಿತ್ತು.
ದೀಪಕ್ ಭಾರತದಲ್ಲಿ ಎಲ್ಲರಿಗೂ ನಾನು ಮಗುವನ್ನು ಹಡೆಯಲು ಸಾಧ್ಯವಿಲ್ಲದರ ಬಗ್ಗೆ ಸುಳ್ಳು ಹೇಳಿದ್ದೇನೆ ಎಂದು ಹೇಳಿಕೊಂಡು ಬಂದಿದ್ದಾನೆ. ಅದೂ, ನನ್ನ ಮೇಲೆ ಅವನು ದೌರ್ಜನ್ಯ ಎಸಗಿದ್ದಕ್ಕೆ ನನಗೆ ಗರ್ಭಪಾತವಾದ ನಂತರ! ನಾನು ಅವನ ಬಗ್ಗೆ ಕೆಟ್ಟದ್ದು ಮಾತನಾಡದೆ ಇರುವುದರಿಂದ ನಾನು ಅವನಿಗೆ ಹಿಂಸಿಸಲು ಇನ್ನೊಂದು ಬಲಿಪಶುವನ್ನು ಕೊಡಮಾಡುತ್ತಿದ್ದೇನೆ ಎಂದು ನನಗೆ ಆಗ ಅರಿವಾಗಲಿಲ್ಲ. ಈಗ, ಅವನ ಹೊಸ ಹೆಂಡತಿ ರೂಪ ನನಗೆ ಪ್ರತಿದಿನವೂ ಪ್ರಾಣಭೀತಿಯಿಂದ ಕರೆ ಮಾಡುತ್ತಿದ್ದಾಳೆ!
ಡ್ಯಾನ್ ಸಹಾಯ ಹಸ್ತ ಚಾಚಲು ಯಾವಾಗಲು ಹತ್ತಿರವೆ ಇರುತ್ತಾನೆ. ಆದರೆ ನಾನು ಮಾತ್ರ ಅವನನ್ನು ದೂರ ತಳ್ಳುತ್ತಲೆ ಇದ್ದೇನೆ. ನನ್ನಲ್ಲಿ ಈಗ ಉಳಿದಿರುವ ಭಾರತೀಯತೆ ಏನೆಂದು ನನಗೆ ಈ ಮಧ್ಯೆ ಗೊತ್ತಾಗದಿದ್ದರೂ ಪಾಶ್ಚಾತ್ಯ ಜೀವನಶೈಲಿಗೆ ನಾನು ನಿಧಾನವಾಗಿ ಶರಣಾಗಿತ್ತಿದ್ದೇನೆ ಎನ್ನುವ ಭಯದಿಂದ ಆ ಭಾರತೀಯತೆಗೆ ಅಂಟಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಡ್ಯಾನ್ನನ್ನು ನಾನು ನಡೆಸಿಕೊಳ್ಳುವ ರೀತಿಯಿಂದ ಕೆಲವು ಸಲ ನಾನೊಬ್ಬಳು ಕಪಟಿ ಎಂದು ಭಾಸವಾಗುತ್ತದೆ ನನಗೆ. ಅವನು ಏಕಕಾಲದಲ್ಲಿ ನಾನು ಬಯಸುವ ಎಲ್ಲವೂ ಹೌದು ಹಾಗೂ ನಾನು ಭಯಪಡುವ ಎಲ್ಲವೂ ಹೌದು.
ನಾನು ಈಗ ಹಿಂದೂಗಳ ಕರ್ಮ ಸಿದ್ಧಾಂತವನ್ನು ನಂಬಲು ಪ್ರಾರಂಭಿಸಿದ್ದೇನೆ. ಇದೆಲ್ಲ ಸಾಮಾನ್ಯರಾದ ನಾವು ಬದಲಾಯಿಸಲು ಸಾಧ್ಯವಾಗದ ವಿಧಿಯೇ ಏನು? ನಾವು ಈ ಭೂಮಿಯ ಮೇಲೆ ಕೇವಲ ನಮ್ಮ ಸಮಯ ತೀರಿಸಲು ಬಂದಿರುವೆವೇನು? ಬಹುಶಃ ಪುನರ್ಜನ್ಮ ಇಲ್ಲದ ಮೋಕ್ಷ ಸಿಗುತ್ತದೆ ಎಂದೇನು ಜನ ಕಾಶಿಯಲ್ಲಿ ಸಾಯಲು ಬಯಸುವುದು?
ಅಥವ, ಉತ್ತರಗಳಿಗೆ ನಾನು ಆಧ್ಯಾತ್ಮದ ಕಡೆ ತಿರುಗುತ್ತಿರುವುದು ಕೇವಲ ಪಲಾಯನವಾದವೆ? ನನ್ನನ್ನು ನಾನು ಯಾವಾಗಲೂ ನಾಸ್ತಿಕಳೆಂದು ಪರಿಗಣಿಸಿದ್ದೆ. ಎಲ್ಲಾ ವಿಷಯಗಳಿಗೂ ತರ್ಕಬದ್ದವಾದ ಉತ್ತರಗಳಿಗೆ ಹುಡುಕುವ ನನ್ನ ಬಗ್ಗೆ ನನಗೆ ಹೆಮ್ಮೆಯಿತ್ತು. ಆದರೆ ಈಗ ನನಗೆ ಜೀವನದ ಉದ್ದೇಶದ ಬಗ್ಗೆ ಸಂಪೂರ್ಣವಾಗಿ ಗೊಂದಲವಾಗಿದೆ. ನಾನು ಇಂತಹ ಪರಿಸ್ಥಿತಿಯಲ್ಲಿ ಇರಲು ಏನೋ ಕಾರಣವಿದೆ ಎಂದು ಯಾಕೆ ನನಗನ್ನಿಸುತ್ತಿದೆ? ಈ ವಿಚಾರದಲ್ಲಿ ನಿಮ್ಮಿಂದ ಬರುವ ಕೆಲವು ಉತ್ತರಗಳನ್ನು ನಾನು ಪ್ರಶಂಸಿಸುತ್ತೇನೆ.
ಪ್ರೀತಿಯಿಂದ,
ಅನು
*
ಕೆಲವು ದಿನಗಳ ನಂತರ ಅವಳಿಗೆ ಅವಳ ತಂದೆಯಿಂದ ಉತ್ತರಗಳು ಬಂದವು:
25 ಆಗಸ್ಟ್
ಮೈಸೂರು, ಭಾರತ
ಪ್ರೀತಿಯ ಅನು,
ಅಧುನಿಕ ತಂತ್ರಜ್ಞಾನ ಎರಡು ಕಾರ್ಯಗಳನ್ನು ಮಾಡಿದೆ: ಪ್ರಕೃತಿಯಿಂದ ಸೌಂದರ್ಯದ ವಿಹಂಗಮ ನೋಟವಾಗಿ, ಕಲಾತ್ಮಕವಾಗಿ ವಿನ್ಯಾಸ ಮಾಡಲ್ಪಟ್ಟಿರುವ ಈ ಭೂಮಿಯನ್ನು ಅದು ಕಿರಿದು ಮಾಡಿದೆ ಹಾಗೂ ಕಾಗದ ಬರೆಯುವ ಕಲೆಯ ಕತ್ತು ಹಿಸುಕಿದೆ!
ಬೇರೆ ಯಾರಿಗೂ ಇಲ್ಲದ ದು:ಖ ತನಗೆ ಮಾತ್ರ ಇದೆ ಎಂದು ನಂಬುವ ಗೊಂದಲಗೊಂಡ ಮನಸ್ಸು ಸಹಜವಾಗಿಯೆ ತನ್ನ ಸಮಸ್ಯೆಗಳ ಪರಿಹಾರವನ್ನು ಬೇರೆಡೆ ಹುಡುಕಬೇಕು ಎನ್ನುವ ತೀರ್ಮಾನಕ್ಕೆ ಬಂದುಬಿಡುತ್ತದೆ. ಆದರೆ, ಇವೆಲ್ಲದರಿಂದ ಕಳಚಿಕೊಂಡು ದೂರ ನಿಂತು ಪರಿಸ್ಥಿತಿಯನ್ನು ಅವಲೋಕಿಸಿದರೆ, ಸಮಸ್ಯೆಗಳು ಆಕಾಶದಿಂದ ಉದುರುವುದಿಲ್ಲ, ಬದಲಿಗೆ ತಾವು ಮಾಡುವ ಕೃತ್ಯದಿಂದಲೆ ಉದ್ಭವವಾಗಿವೆ ಎಂದು ಸುಲಭವಾಗಿ ಕಾಣಿಸುತ್ತದೆ. ಗೊಂದಲಗಳು ಮನಸ್ಸನ್ನು ಪರಿಹಾರಗಳಿಗೆ ಕಗ್ಗತ್ತಲ ಆವರಣದಲ್ಲಿ, ಉದಾಹರಣೆಗೆ, ಕರ್ಮ, ವಿಧಿ, ಇತ್ಯಾದಿ ಎಡೆಗಳಲ್ಲಿ ಹುಡುಕಲು ಪ್ರೇರೇಪಿಸುತ್ತವೆ.
ಹಿಂದೂ ಧರ್ಮ, ಬೌದ್ಧ ಧರ್ಮ, ಮತ್ತು ಜೈನ ಧರ್ಮ ಕರ್ಮವನ್ನು ನಂಬುವ ಮೂರು ಪ್ರಮುಖ ಧರ್ಮಗಳು. ಆದರೆ ವರ್ಷಗಟ್ಟಲೆ ತೆಗೆದುಕೊಳ್ಳುವ ಆ ಸಿದ್ಧಾಂತದ ಬಗೆಗಿನ ಅಧ್ಯಯನ ಕಡೆಗೂ ಏನನ್ನು ಮನದಟ್ಟು ಮಾಡುತ್ತದೆ ಎಂದರೆ, ಈ ಕರ್ಮ ಸಿದ್ಧಾಂತ ಸುಲಭವಾಗಿ ಸಾಬೀತು ಮಾಡಲು ಆಗದ ಸಿದ್ಧಾಂತ, ಎಂದು. ಆದುದರಿಂದ, ನಮ್ಮ ಸ್ವಕೃತ್ಯಗಳಿಗೆ ಮತ್ತು ಅವು ತರುವ ಪರಿಣಾಮಗಳಿಗೆ ನಾವು ಧೈರ್ಯವಾಗಿ ಜವಾಬ್ದಾರಿಯನ್ನು ಹೊರಬೇಕು.
ಜೀವನದ ಉದ್ದೇಶ ಏನೆಂದರೆ ಅದನ್ನು ಜೀವಿಸುವುದು ಮಾತ್ರವೆ. ಯಾವುದೇ ಮಾನಸಿಕ ಒತ್ತಡಗಳಿಂದ ನರಳಬೇಡ. ವೈಚಾರಿಕತೆಯ ಬೆಳಕಿನಲ್ಲಿ ಬದುಕು. ಪರಿಣಾಮಗಳ ಬಗ್ಗೆ ಅರಿವಿರಲಿ. ಹಾಗು ನೀನು ಮಾಡುವ ಕೃತ್ಯದ ಪೂರ್ತಿ ಜವಾಬ್ದಾರಿಯನ್ನು ಹೊರು.
ಇವನ್ನು ಮಾಡುವುದಕ್ಕಿಂತ ಹೇಳುವುದು ಸುಲಭ ಎಂದು ನನಗೆ ಗೊತ್ತು. ಆದರೆ ಉತ್ತಮವಾಗಿ ಬದುಕುವ ರೀತಿ ಇದೊಂದೆ.
ಶುಭಾಕಾಂಕ್ಷೆಗಳು.
ಪ್ರೀತಿಯಿಂದ,
ಅಪ್ಪ












Click it and Unblock the Notifications