ಸಿಂಗಪುರದಲ್ಲಿ 'ಕನ್ನಡ ಕಲಿ'ಯುತ್ತಿರುವ ಮಕ್ಕಳಿಗೆ ಅಭಿನಂದನೆ
ಕನ್ನಡ ಸಂಘ (ಸಿಂಗಪುರ)ದ ಕನ್ನಡ ಕಲಿಕಾ ಕೇಂದ್ರದಿಂದ ಸತತವಾಗಿ ನಾಲ್ಕು ವರ್ಷಗಳಿಂದ ಸಿಂಗಪುರದಲ್ಲಿನ ಕನ್ನಡ ಸಂಘದ ಸಿಂಗನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನ ಸಫಲವಾಗಿ ನಡೆಯುತ್ತಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆಯುತ್ತಿರುವ "ಕನ್ನಡ ಕಲಿ" ಚಟುವಟಿಕೆಗಳು, ಹೊರದೇಶದಲ್ಲಿನ ಕನ್ನಡ ಮಕ್ಕಳಿಗೆ ಕನ್ನಡ ಭಾಷೆಯ ಕಂಪನ್ನು ಹರಡಿ ತಮ್ಮ ನಾಡಭಾಷೆಯ ಸೊಬಗು ಹಾಗೂ ಮಹತ್ವವನ್ನು ತಿಳಿಯಪಡಿಸುವ ಒಂದು ಅಳಿಲು ಸೇವೆ ಎನ್ನಬಹುದು.
ಪ್ರಾರಂಭದಲ್ಲಿ ವರ್ಣಮಾಲೆಯ ಪರಿಚಯ, ಕನ್ನಡದಲ್ಲಿ ಕತೆಗಳನ್ನು ಹೇಳುವುದರ ಮೂಲಕ ಶುಭಾರಂಭಗೊಂಡ ಈ ಚಟುವಟಿಕೆಗಳು ಈ ವರ್ಷ 'ಪ್ರಥಮ' ಹಾಗೂ 'ಮಧ್ಯಮ' ಎಂಬ ಎರಡು ವಿಭಾಗಗಳಲ್ಲಿ ತರಗತಿಗಳು ನಡೆದಿವೆ. [ಸಿಂಗಪುರದಲ್ಲಿ ಬಾರಿಸಿದ 'ಕನ್ನಡ ಕಲಿ' ಡಿಂಡಿಮ]
ಕಳೆದ ವರ್ಷಗಳಲ್ಲಿ ವರ್ಣಮಾಲೆಯನ್ನು ಕಲಿತ 10 ಮಕ್ಕಳು ಈ ಬಾರಿ 'ಮಧ್ಯಮ' ವಿಭಾಗದ ತರಗತಿಗಳಲ್ಲಿ 'ಕಾಗುಣಿತ', ಒತ್ತಕ್ಷರಗಳ ಅಭ್ಯಾಸದ ಜೊತೆಗೆ ಅವುಗಳನ್ನೊಳಗೊಂಡ ಸರಳ ಹಾಗೂ ಕಠಿಣ ಪದಗಳನ್ನು ಸ್ವಂತವಾಗಿ ಬರೆಯುವಷ್ಟು ಕಲಿತಿರುವುದು ಮಕ್ಕಳ ಆಸಕ್ತಿ ಹಾಗೂ ಪೋಷಕರ ನಿರೀಕ್ಷೆಯನ್ನು ಪೂರೈಸಿದೆ.
ಪ್ರಥಮ ವಿಭಾಗದಲ್ಲಿ ಸುಮಾರು 22 ಮಕ್ಕಳು ಹೊಸದಾಗಿ ಸೇರ್ಪಡೆಗೊಂಡು ವರ್ಣಮಾಲೆ, ಸರಳಪದಗಳು ಹಾಗೂ ಕನ್ನಡದ ಶಿಶುಗೀತೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. 17 ಜನವರಿ 2016ರಿಂದ 28 ಫೆಬ್ರವರಿ 2016ರವರೆಗೆ ಮಕ್ಕಳು ತಮ್ಮ ವಾರಾಂತ್ಯದ ಬಿರುಸಿನ ಚಟುವಟಿಕೆಗಳ ನಡುವೆ 'ಕನ್ನಡ ಕಲಿ' ತರಗತಿಗಳಿಗೆ ಬಹು ಉತ್ಸುಕತೆಯಲ್ಲಿ ಭಾಗವಹಿಸುತ್ತಿರುವುದು ಕನ್ನಡ ಶಿಕ್ಷಕರಾದ ರಾಮನಾಥ್, ವೆಂಕಟ್, ಶ್ರೀನಿವಾಸ್ ಕೆ.ಜೆ, ವಿನಾಯಕ ನಾಡಿಗೇರ ಹಾಗೂ ಶ್ರೀವಿದ್ಯಾ ಅವರ ಕನ್ನಡ ಕಲಿಸುವ ಕೈಂಕರ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಿದೆ. [ಆನ್ ಲೈನ್ ಮೂಲಕ ಉಚಿತವಾಗಿ ಕನ್ನಡ ಕಲಿಯಿರಿ]
ಎಲ್ಲಾ ಕನ್ನಡ ಕಲಿ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮವನ್ನು 6 ಮಾರ್ಚ್ 2016ರಂದು SINDA ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ, ಮಕ್ಕಳು ತಾವು ಕಲಿತ ಅಕ್ಷರಮಾಲೆ, ಕಾಗುಣಿತ, ಒತ್ತಕ್ಷರ, ಸರಳಪದಗಳು, ಸರಳವಾಕ್ಯ ರಚನೆ, ಕತೆಯನ್ನು ಓದುವುದು ಹಾಗೂ ಸರಳ ವ್ಯಾಕರಣವನ್ನು ನೆರೆದಿದ್ದ ಪೋಷಕರಿಗೆ ಪ್ರದರ್ಶಿಸಿದರು.
ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷರಾದ ವಿಜಯ ರಂಗ ಪ್ರಸಾದ ಅವರ ಸಾನ್ನಿಧ್ಯದಲ್ಲಿ ಎಲ್ಲಾ ಮಕ್ಕಳಿಗೆ ಅಭಿನಂದನಾ ಪತ್ರ ಹಾಗೂ ತರಗತಿಗಳನ್ನು ನಡೆಸಿಕೊಟ್ಟ ಶಿಕ್ಷಕರಿಗೆ ಸಂಘದ ಪರವಾಗಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. [ಎದೆ ಉಬ್ಬಿಸಿ ಹೇಳುತ್ತೇನೆ 'ನಾನು ಕನ್ನಡಿಗ']
ಮಕ್ಕಳು ತಮ್ಮ ಅಭ್ಯಾಸವನ್ನು ಮನೆಯಲ್ಲಿ ಮುಂದುವರೆಸುವಂತೆ ಪೋಷಕರು ಮಾಡಿದ್ದಲ್ಲಿ ಸಂಘದ ಈ ಶ್ರಮ ಸಾರ್ಥಕ. ಮುಂಬರುವ 'ಕನ್ನಡ ಕಲಿ' ತರಗತಿಗಳನ್ನು ಹೆಚ್ಚಿನ ಮಟ್ಟಕ್ಕೆ ಕರೆದ್ಯೊಯ್ದು, ಕರ್ನಾಟಕದಲ್ಲಿನ ಪ್ರಾಥಮಿಕ ಶಿಕ್ಷಣದಲ್ಲಿನ ಪಠ್ಯಕ್ರಮವನ್ನು ಪಾಲಿಸುವ ಆಶಯವನ್ನು ಕನ್ನಡ ಸಂಘ (ಸಿಂಗಪುರ)ವು ಹೊಂದಿದೆಂಬುದು ಹೆಮ್ಮೆಯ ವಿಷಯ.
ವರದಿ
-
ವೆಂಕಟ್
ಛಾಯಾಚಿತ್ರ
-
ಗಿರೀಶ್
ಜಮದಗ್ನಿ