ನೆರೆರಾಜ್ಯ ಆಂಧ್ರದ ಕಡಪದಲ್ಲಿ ಕೋವಿಡ್ಗೆ ವ್ಯಕ್ತಿ ಸಾವು, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೆಚ್ಚಿದ ಆತಂಕ
ಬೆಂಗಳೂರು: ದೇಶದಲ್ಲಿ ಸದ್ಯಕ್ಕೆ ತಣ್ಣಗಾಗಿದ್ದ ಕೊರೊನಾ ವೈರಸ್ ಮಹಾಮಾರಿ ನೆರೆರಾಜ್ಯವಾದ ಆಂಧ್ರಪ್ರದೇಶದಲ್ಲಿ ಮತ್ತೆ ವಕ್ಕರಿಸಿದೆ. ಆಂಧ್ರದ ಕಡಪ ಜಿಲ್ಲೆಯಲ್ಲಿ ಹೊಸದಾಗಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಸೋಂಕಿಗೆ ಒಬ್ಬರು ಸಾವನ್ನಪ್ಪಿದ್ದಾರೆ. ಕರ್ನಾಟಕದ ಗಡಿಯನ್ನ ಹಂಚಿಕೊಂಡಿರುವ ಆಂಧ್ರದಲ್ಲಿ ನಡೆದಿರುವ ಈ ಬೆಳವಣಿಗೆಯು ಸದ್ಯ ಇಡೀ ದಕ್ಷಿಣ ಭಾರತದಲ್ಲಿ ಸಂಚಲನ ಮೂಡಿಸಿದ್ದು, ನೆರೆರಾಜ್ಯಗಳ ಆರೋಗ್ಯ ಇಲಾಖೆಗಳು ಅಲರ್ಟ್ ಆಗುವಂತೆ ಮಾಡಿದೆ.
ಕಡಪದಲ್ಲಿ ಆತಂಕ ಮೂಡಿಸಿದ ಸಾವು
ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಜುಲೈ 9ರಂದು 46 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆ ಮತ್ತು ನಿರಂತರ ಕೆಮ್ಮಿನಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ್ಯಂಟಿಬಯೋಟಿಕ್ಸ್ ಚಿಕಿತ್ಸೆ ನೀಡಿದರೂ ಯಾವುದೇ ಗುಣಮುಖ ಲಕ್ಷಣಗಳು ಕಾಣಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರವಿಬಾಬು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಮೃತ ವ್ಯಕ್ತಿ ತೀವ್ರ ಮದ್ಯದ ವ್ಯಸನಿಯಾಗಿದ್ದರು ಎನ್ನಲಾಗಿದೆ. ಕೆಲವು ಮಾಧ್ಯಮಗಳ ಪ್ರಕಾರ ರಾಜ್ಯದಲ್ಲಿ ಈಗಾಗಲೇ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.

ಕಡಪ ಸೇರಿದಂತೆ ಆಂಧ್ರದ ಹಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಮರುಕಳಿಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಲ್ಲಿನ ಸರ್ಕಾರ, ವೈರಸ್ ಹರಡುವಿಕೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಸೋಂಕು ಪೀಡಿತ ಪ್ರದೇಶಗಳಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಲು ವಿಶೇಷ ತ್ವರಿತ ಸ್ಪಂದನಾ ತಂಡಗಳನ್ನು (RRT) ರಚಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದ್ದು, ಪ್ರತ್ಯೇಕ ಐಸೊಲೇಷನ್ ಸೌಲಭ್ಯಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಆದೇಶಿಸಲಾಗಿದೆ. ಗಂಟಲು ದ್ರವದ ಮಾದರಿಗಳ (Testing) ಸಂಗ್ರಹಣೆಯನ್ನು ತೀವ್ರಗೊಳಿಸಲಾಗಿದ್ದು, ನಿರಂತರ ನಿಗಾ ಇಡಲಾಗಿದೆ.
ಒಡಿಶಾದಲ್ಲೂ ಹೈ ಅಲರ್ಟ್
ಆಂಧ್ರಪ್ರದೇಶದಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಅಲರ್ಟ್ ಆಗಿರುವ ಮತ್ತೊಂದು ನೆರೆರಾಜ್ಯವಾದ ಒಡಿಶಾ, ತನ್ನ ಗಡಿ ಭಾಗಗಳಲ್ಲಿ ಕಣ್ಗಾವಲನ್ನು ತೀವ್ರಗೊಳಿಸಿದೆ. ಒಡಿಶಾದ ಸಾರ್ವಜನಿಕ ಆರೋಗ್ಯ ನಿರ್ದೇಶಕ ರವೀಂದ್ರನಾಥ ಮಿಶ್ರಾ ಮಾತನಾಡಿ, ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲ. ಆದರೂ ಆಂಧ್ರದಿಂದ ಬರುವ ಜನರ ಸಂಚಾರ ಹೆಚ್ಚಿರುವುದರಿಂದ ನಿರಂತರ ತಪಾಸಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಕರ್ನಾಟಕಕ್ಕೆ ಏಕೆ ಆತಂಕ?
ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ನಿತ್ಯ ಸಾವಿರಾರು ಜನರ ಒಡನಾಟವಿದೆ. ವ್ಯಾಪಾರ, ಉದ್ಯೋಗ ಹಾಗೂ ಧಾರ್ಮಿಕ ಪ್ರವಾಸಗಳಿಗಾಗಿ ಉಭಯ ರಾಜ್ಯಗಳ ನಡುವೆ ಜನರು ಸದಾ ಸಂಚರಿಸುತ್ತಿರುತ್ತಾರೆ. ಅದರಲ್ಲೂ ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗದಂತಹ ಗಡಿ ಜಿಲ್ಲೆಗಳಿಗೆ ಆಂಧ್ರದ ನಂಟು ಹತ್ತಿರದ್ದು. ಹೀಗಾಗಿ ನೆರೆರಾಜ್ಯದ ಕೋವಿಡ್ ಹರಡುವಿಕೆ ಕರ್ನಾಟಕದ ಗಡಿ ಭಾಗಗಳಲ್ಲೂ ತಪಾಸಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಯನ್ನ ಸೃಷ್ಟಿಸಿದೆ. ಸದ್ಯಕ್ಕೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲದಿದ್ದರೂ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವುದು ಒಳ್ಳೆಯದು ಎಂದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications