ಸಿಂಗಪುರದಲ್ಲಿ ಸಡಗರದ ಸಂಕ್ರಾಂತಿ ಆಚರಣೆ

ಮುಂಜಾನೆಯ ರಂಗೋಲಿಯಿಂದ ಶುರುವಾದ ಕಾರ್ಯಕ್ರಮಗಳು, ಹಸು-ಕರುವಿನ (ಗೋಮಾತೆ) ಪೂಜೆ ಮತ್ತು ಪೊಂಗಲ್ ಮಾಡಿ, ಎಳ್ಳು-ಬೆಲ್ಲವನ್ನು ವಿತರಿಸಿದ್ದು ವಿಶೇಷವಾಗಿತ್ತು. ನಂತರ ಶರತ್ ಮತ್ತು ಶ್ರವಣ್ ಶ್ಲೋಕ ಹಾಡಿದರೆ, ವಾದ್ಯಗಳನ್ನು ನಿಶಾಂತ್(ತಬಲ), ಮೃಣಾಲ್ ಗಣೇಶ್(ವಯಲಿನ್) ಮತ್ತು ಕುಮಾರಿ ಸಮನ ಶ್ರೀಧರ್ (ಕೀ-ಬೋರ್ಡ್) ನುಡಿಸಿ ರಂಜಿಸಿದರು. ನಡುನಡುವೆ ಹೆಂಗಳೆಯರು ಬಿಸಿಬಿಸಿಯಾದ ಪೊಂಗಲ್ ಎಲ್ಲರಿಗೂ ಹಂಚುತ್ತಿದ್ದರು. ನವ್ಯಶ್ರೀ ವೆಂಕಟ್ ಮತ್ತು ಸುನೀಕ್ಷ ಶ್ರೀರಾಮ್ ನೃತ್ಯ ಪ್ರದರ್ಶಿಸಿ ಸಭಾಂಗಣವನ್ನು ಕೇಕೆ, ಚಪ್ಪಾಳೆ ಮತ್ತು ಸಿಳ್ಳುಗಳಿಂದ ತುಂಬುವಂತೆ ಮಾಡುದರು. ಕನ್ನಡಿಗರಲ್ಲದೆ ಇತರೆ ಭಾಷೆಯ ಜನರ ಸಂಗಮ ಮತ್ತು ಸ್ಥಳೀಯ ಚೀನಿಯರು ಭಾಗವಹಿಸಿ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಪಡೆದರು. ಕಾರ್ಯಕ್ರಮದ ನಿರ್ವಹಣೆಯನ್ನು ಸ್ಥಳೀಯ ಚೀನಿ ಮಹಿಳೆಯೊಬ್ಬರು ನಡೆಸಿಕೊಟ್ಟಿದ್ದು ವಿಶೇಷ.
ಮಧ್ಯಾಹ್ನದ ಕಾರ್ಯಕ್ರಮ ಕುಮಾರಿ ಚೈತ್ರ ಅರ್ಚಕ್ ಅವರು ಮಹಾನವಮಿ ಧಾರವಾಹಿಯ ಶೀರ್ಷಿಕೆಯ ಗಾಯನ "ನಡೆದಾಡು ಎರಡಾಗಿ ಒಡಲೊಂದು ತುಂಗೆಗೆ"ಯ ಹಾಡನ್ನು ಸೊಗಸಾಗಿ ಹಾಡಿವುದರೊಂದಿಗೆ ಶುರುವಾಯಿತು. ಸದಸ್ಯತ್ವದ ನೊಂದಾವಣೆ, ನವೀಕರಣ ಮತ್ತು ಕನ್ನಡ ಸಂಘದ ವತಿಯಿಂದ ಕ್ಯಾಲೆಂಡರ್ ಹಾಗು ಪಾಕೆಟ್ ಕ್ಯಾಲೆಂಡರ್ಗಳನ್ನು ವಿತರಿಸಲಾಯಿತು.
ಕನ್ನಡ ಕಲಿ : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲದಡಿಯಲ್ಲಿ ಕನ್ನಡ ಸಂಘ (ಸಿಂಗಪುರ)ವು ವುಡ್ಲ್ಯಾಂಡ್ಸ್ ಸಮುದಾಯ ಭವನದಲ್ಲಿ "ಕನ್ನಡ ಕಲಿ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹೊರನಾಡ ಕನ್ನಡಿಗರ ಮನೆಗಳಲ್ಲಿ ಕನ್ನಡದ ಬಳಕೆ ಮತ್ತು ಮಕ್ಕಳಲ್ಲಿ ಕನ್ನಡ ಕಲಿಯುವ ಆಸಕ್ತಿಯನ್ನು ಹುರಿದುಂಬಿಸಿ, ಮಕ್ಕಳು ಸ್ಪಷ್ಟವಾಗಿ ಕನ್ನಡ ಮಾತನಾಡಿ ಅವರ ಪೋಷಕರು ಸಹ ಅವರೊಂದಿಗೆ ಕನ್ನಡದಲ್ಲಿ ಮಾತನಾಡುವಂತೆ ಪ್ರೇರೇಪಿಸಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ.
ಕತೆ ಹೇಳುವ ಸ್ಪರ್ಧೆ : ಈ ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿ ಇಲ್ಲಿಯ ಮಕ್ಕಳಿಂದ ಕನ್ನಡದಲ್ಲಿ ಕತೆ ಹೇಳುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 3ರಿಂದ 7 ವರ್ಷ ವಯಸ್ಸಿನ ಮಕ್ಕಳ ಸ್ಪರ್ಧೆಯಲ್ಲಿ ಕುಮಾರಿ ಭಾನುಶ್ರೀ ಜೈಸಿಂಹ (ಮೊದಲನೆ), ಜೀವನ್ ಗೋಪಾಲ್ಕೃಷ್ಣ (ಎರಡನೆ) ಮತ್ತು ನವ್ಯ ಶ್ರೀ ವೆಂಕಟ್ (ಮೂರನೆಯ) ಬಹುಮಾನವನ್ನು ಪಡೆದರೆ, 3 ವರ್ಷದ ಸ್ಮೃತಿ ಮಂಜುನಾಥ ರಾವ್ ತನ್ನ ಅದ್ಭುತ "ರಾಮಾಯಣ" ಕತೆಯಿಂದ ಇಡೀ ಸಭಾಂಗಣವೇ ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವಂತೆ ಮಾಡಿದ್ದಕ್ಕಾಗಿ ತೀರ್ಪುಗಾರರಿಂದ ವಿಶೇಷ ಬಹುಮಾನವನ್ನು ಪಡೆದಳು. 8ರಿಂದ 12 ವರ್ಷ ವಯಸ್ಸಿನ ಮಕ್ಕಳ ವಿಭಾಗದಲ್ಲಿ ಮನೋಜ್ಞ ನರಸಿಂಹ (ಮೊದಲನೆ), ಪ್ರಜ್ವಲ ಕನಕೇಶ್(ಎರಡನೆ) ಮತ್ತು ಶಶಾಂಕ್ ಕೊಲ್ಲಾಪುರ್(ಮೂರನೆಯ) ಬಹುಮಾನವನ್ನು ಪಡೆದರು.
ಹೊಸ ವರ್ಷದ ಸಂಕಲ್ಪದ ಸ್ಪರ್ಧೆ : ಹಾಸ್ಯದ ಹೊಸ ವರ್ಷದ ಸಂಕಲ್ಪವನ್ನು ಅನೇಕರು ಹಂಚಿಕೊಂಡು, ಗಂಭೀರ ಚರ್ಚೆಯಲ್ಲಿ ಮುಳುಗಿದ್ದ ಸಭೆಯನ್ನು ನಗೆಗಡಲಿಗೆ ತಳ್ಳುವಲ್ಲಿ ಯಶಸ್ವಿಯಾದರು. ತೂಕ ಕಡಿಮೆ ಮಾಡುವ ಸಂಕಲ್ಪ ಕೆಲವರದಾದರೆ, ತೂಕ ಹೆಚ್ಚಿಸುಕೊಳ್ಳುವ ಸಂಕಲ್ಪವನ್ನು ಸಹ ಕೆಲವರು ಮಾಡಿದರು. ಇದರಲ್ಲಿ ಕನಕೇಶ್ (ಮೊದಲನೆ), ರಾಮಪ್ರಸಾದ್(ಎರಡನೆ) ಮತ್ತು ಸುಧೀಂದ್ರ(ಮೂರನೆಯ) ಬಹುಮಾನವನ್ನು ಪಡೆದರು. ಕಾರ್ಯಕ್ರಮದ ಕೊನೆಯಲ್ಲಿ, ಅಧ್ಯಕ್ಷರಾದ ಡಾ.ವಿಜಯಕುಮಾರ್ ಅವರು ಕತೆ ಹೇಳುವ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ "ಕನ್ನಡ ಅಭಿವೃದ್ಧಿ ಪ್ರಾಧಿಕಾರ" ಮತ್ತು ಕನ್ನಡ ಸಂಘ (ಸಿಂಗಪುರ)ದ ಲಾಂಛನದಡಿಯಲ್ಲಿ ಮುದ್ರಿತವಾಗಿ ಮುಖ್ಯಮಂತ್ರಿ ಚಂದ್ರು ಅವರಿಂದ ಅಂಗೀಕೃತವಾದ ಪ್ರಮಾಣ ಪತ್ರ ಮತ್ತು ಪ್ರಶಸ್ತಿಗಳನ್ನು ವಿತರಿಸಿದರು.












Click it and Unblock the Notifications