ಸಿಂಗಪುರದಲ್ಲೂ ವಿಶ್ವ ಕನ್ನಡ ಸಮ್ಮೇಳನ
ಬೆಂಗಳೂರು, ಜು. 16 : ಸಿಂಗಪುರದ ಕನ್ನಡಿಗರ ಸಂಸ್ಥೆ ಸಿಂಗಾರ ಕನ್ನಡ ಸಂಘದ ಆಶ್ರಯದಲ್ಲಿ ಅದರ ಎರಡನೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗಿದೆ. 2010ರ ನವೆಂಬರ್ 26-27ರಂದು ಎರಡು ದಿನಗಳ ಸಮ್ಮೇಳನ ಸಿಂಗಪುರದಲ್ಲಿ ನಡೆಯಲಿದೆ. ಮೊದಲ ಸಮ್ಮೇಳನ 2005ರಲ್ಲಿ ಜರುಗಿತ್ತು.
ಈ ವಿಷಯವನ್ನು ಸಿಂಗಾರ ಕನ್ನಡ ಸಂಘದ ಅಧ್ಯಕ್ಷ ಡಾ. ಎಸ್. ವಿಜಯ್ ಕುಮಾರ್ ಅವರು ಲಾಸ್ ಏಂಜಲಿಸ್ ನ ಪಸಡೀನ ಪ್ರದೇಶದಲ್ಲಿರುವ ಕೋರ್ಟ್ ಯಾರ್ಡ್ ಮ್ಯಾರಿಯಟ್ ಹೋಟೆಲ್ ಮೊಗಸಾಲೆಯಲ್ಲಿ ದಟ್ಸ್ ಕನ್ನಡಕ್ಕೆ ತಿಳಿಸಿದರು. ಅಲ್ಲಿ ಇತ್ತೀಚೆಗೆ ಜರುಗಿದ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದ ಅವರು ಅಮೆರಿಕ ಕನ್ನಡಿಗರು ಏರ್ಪಡಿಸುವ ಕನ್ನಡಿಗರ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದರು.
ಸಿಂಗಪುರ ಸಮ್ಮೇಳನಕ್ಕೆ ಭಾರತ, ಇಂಡೋನೇಷಿಯ, ಮಲೇಷಿಯ, ಎಮಿರೇಟ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮುಂತಾದೆಡೆಯಿಂದ ಸುಮಾರು 2000 ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ಸಿಂಗಾರ ಕನ್ನಡ ಸಂಘದ ಸಮ್ಮೇಳನ ಸಮಿತಿ ಪದಾಧಿಕಾರಿಗಳು ಇಟ್ಟುಕೊಂಡಿದ್ದಾರೆ.
ಕನ್ನಡಿಗರ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳು ಸಿಂಗಾರ ಸಮ್ಮೇಳನದಲ್ಲೂ ಇರುತ್ತವೆ. ಆದರೂ, ಕರ್ನಾಟಕ ಜಾನಪದದ ಸೊಗಡು, ಯಕ್ಷಗಾನವೇ ಮೊದಲಾದ ಭಾರತೀಯ ಪ್ರದರ್ಶನ ಕಲೆಗಳ ಪ್ರಸ್ತುತಿಗೆ ಸಮ್ಮೇಳನ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಎಂದು ವಿಜಯ್ ಕುಮಾರ್ ಹೇಳಿದರು. ವಾಣಿಜ್ಯ ಹಾಗೂ ವೈದ್ಯಕೀಯ ಕ್ಷೇತ್ರದ ನವೀನ ಫಲಗಳ ವಿನಿಮಯ ಮತ್ತು ವಿಸ್ತರಣೆಯ ಸಾಧ್ಯತೆಗಳನ್ನು ಸಮ್ಮೇಳನ ಅರಸುತ್ತದೆ.
ಸಿಂಗಾಪುರಕ್ಕೆ ಕನ್ನಡ ಕುಟುಂಬಗಳ ವಲಸೆ 80ರ ದಶಕದಲ್ಲೇ ಆರಂಭವಾಯಿತು. ಮೊದಮೊದಲು ಕೆಲವು ಕನ್ನಡ ಕುಟುಂಬಗಳು ಕಲೆತು ಯುಗಾದಿ, ದೀಪಾವಳಿ ಹಬ್ಬಾಚರಣೆ ಮತ್ತು ಕನ್ನಡ ನಾಟಕ ಪ್ರದರ್ಶನಗಳಿಗಷ್ಟೆ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸಿಕೊಂಡಿತ್ತು. ಕನ್ನಡ ಕುಟುಂಬಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಾ ಬಂದಂತೆ ವ್ಯವಸ್ಥಿತ ಸಂಘದ ಅವಶ್ಯಕತೆ ತಲೆದೋರಿತು. ಹಾಗಾಗಿ, 1996ರಲ್ಲಿ ಸಹಕಾರ ಸಂಘಗಳ ನೊಂದಾವಣೆ ಅಡಿಯಲ್ಲಿ ಸಿಂಗಾರ ಕನ್ನಡ ಸಂಘ ಅಧಿಕೃತವಾಗಿ ಜನ್ಮತಾಳಿತು.
90ರ ದಶಕದ ಆರಂಭದಲ್ಲಿ ಇಪ್ಪತ್ತೋ ಇಪ್ಪತ್ತೈದೋ ಕನ್ನಡ ಕುಟುಂಬಗಳಿಗೆ ಆಶ್ರಯ ನೀಡಿದ್ದ ಸಿಂಗಾಪುರ ಇವತ್ತು 600ಕ್ಕೂ ಹೆಚ್ಚು ಕನ್ನಡ ಮನಸ್ಸುಗಳಿಗೆ ತನ್ನನ್ನು ತಾನು ತೆರೆದುಕೊಂಡಿದೆ. ಸಾಫ್ಟ್ ವೇರ್, ಶಿಕ್ಷಣ, ವಾಣಿಜ್ಯ ಕ್ಷೇತ್ರಗಳಲ್ಲಿ ಬದುಕನ್ನು ಹುಡುಕಿಕೊಂಡು ಹೊರಟ ಕನ್ನಡಿಗರು ಆಗ್ನೇಯ ಏಷಿಯಾ ಪ್ರಾಂತ್ಯಗಳಲ್ಲಿ ಸಾಕಷ್ಟು ಮಂದಿ ಇದ್ದಾರೆ. ಕೆಲವರು ಬಿಡುವಾದಾಗ ಕನ್ನಡಕ್ಕೆ ಮುಖಮಾಡಿದರೆ ಇನ್ನು ಕೆಲವರು ಬಿಡುವು ಮಾಡಿಕೊಂಡು ಕನ್ನಡ ಭಾಷೆ ಸಂಸ್ಕೃತಿಯೊಂದಿಗೆ ಸಂಪರ್ಕ ಸಾಧಿಸಲು ಆಸೆ ಪಡುತ್ತಾರೆ. ಅಂತರ್ಜಾಲದಲ್ಲಿ ಕನ್ನಡದ ಓದು, ಬರವಣಿಗೆ ಮತ್ತು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಾಖಲಿಸುತ್ತಾರೆ ಕೂಡ.