ಕರಿಬಿಳಿ ಅಧ್ಯಕ್ಷರ ಕೊನೆಯ ಸಂಭಾಷಣೆ
ಕರ್ನಾಟಕದಲ್ಲಿ ನಡೆಯುವ ರಾಜಕೀಯ ಮೇಳಗಳಿಗೆ, ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಲಾರಿ, ಮೆಟಡೋರ್, ಮತ್ತಿತರ ಸರಕು ಸಾಗಣೆ ವಾಹನಗಳಲ್ಲಿ ಮತಬಾಂಧವರನ್ನು ತುಂಬಿ ರವಾನಿಸುವ ರೀತಿ ಡೆಮೋಕ್ರಾಟಿಕ್ ಪಕ್ಷದವರೂ ಮಾಡಿದರೆ ಎಂಬ ಅನುಮಾನ ಬರುವಂತೆ ಇತ್ತು. ಆದರೆ, ಬೆಳಗ್ಗೆ ಬೆಳಗ್ಗೆನೇ ರೈಲುಗಳಲ್ಲಿ ಕೆಲವರು, ಕಾರಿನಲ್ಲಿ ಇನ್ನುಳಿದವರು, ಮತ್ತೆಕೆಲವರು ವಿಮಾನ ಮುಖಾಂತರ ಡಿಸಿ ಪ್ರದೇಶಕ್ಕೆ ಬಂದಿಳಿದರೆಂದು ಬಲ್ಲ ಮೂಲಗಳಿಂದ ಗೊತ್ತಾಯಿತು.
ಈಪಾಟಿ ಜನಸಂದಣಿಯನ್ನು ಕಂಡ ಅಧ್ಯಕ್ಷ ಪದವಿಗ್ರಹಣದ ಮೊದಲ ಸಮಾರಂಭವಿದು ಎಂಬ ಕೀರ್ತಿಗೆ ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್ ಪಾತ್ರವಾಯಿತು. ಮಂಗಳವಾರ ಸಂಜೆ ಕೊರೆಯುವ ಚಳಿಯಲ್ಲಿ ಅಮೆರಿಕಾದ ರಾಜಧಾನಿ ಭಾರತದೋಪಾದಿಯಲ್ಲಿ ಕಾಣುತ್ತಿತ್ತು. ಏಕೆಂದರೆ, ಫಿಲಡಲ್ಫಿಯಾದಿಂದ ಸ್ಯಾನ್ ಡಿಯಾಗೋ ತನಕ ಎಲ್ಲಿಂದ ಎಲ್ಲಿಯವರೆಗೆ ಕಣ್ಣು ಹಾಯಿಸಿದರೂ ಜನ ಜನ ಜನ ಮತ್ತು ಜನ.
ಜಗತ್ತಿನಾದ್ಯಂತ ಇನ್ನುಳಿದ ಜನ ಈ ಕಾರ್ಯಕ್ರಮವನ್ನು ತಮ್ಮ ತಮ್ಮ ಬಣ್ಣದ ಹಾಗೂ ಕಪ್ಪು ಬಿಳುಪಿನ ಟಿವಿ ಸೆಟ್ಟುಗಳಲ್ಲಿ ನೋಡಿದರು. ಯಾರಿಗೆ ಏನೇನು ಅನ್ನಿಸಿತೋ ಗೊತ್ತಿಲ್ಲ. ಅಮೆರಿಕಾದ ಜನತಾಂತ್ರಿಕ ವ್ಯವಸ್ಥೆ, ಕಾರ್ಯಕ್ರಮ ವ್ಯವಸ್ಥೆಗೊಳಿಸುವ ವ್ಯವಸ್ಥೆ, ಸಾಮೂಹಿಕ ಹಾಗೂ ವ್ಯಕ್ತಿ ಶಿಸ್ತು ಪ್ರದರ್ಶನ ಕಂಡು ಕೆಲವರು ಬೆರಗಾದರು. ಕುಳಿತರೆ ನಿಂತರೆ ಅಮೆರಿಕ ದೇಶದ ನೀತಿ ನಿಲವುಗಳನ್ನು ಕಟುವಾಗಿ ಟೀಕಿಸುವ ಮಂದಿಗೆ ಈ ಕಾರ್ಯಕ್ರಮದ ನೇರಪ್ರಸಾರ ಇನ್ನಷ್ಟು ಹೊಸ ನಿಂದನಾ ಸರಕುಗಳನ್ನು ಕೊಟ್ಟಿರುವುದು ಗೊತ್ತಾಯಿತು.
ಇಡೀ ಸಮಾರಂಭದಲ್ಲಿ ಗಮನಸೆಳೆದೂ ಸೆಳೆಯದ ಒಂದೆರಡು ವಿಚಾರ ನಿಮಗೂ ಗೊತ್ತಿರಲಿ. ಪ್ರತಿಜ್ಞಾ ವಿಧಿ ಬೋಧಿಸಿಕೊಂಡ ಕೂಡಲೇ ಬರಾಕ್ ಒಬಾಮ ಮಾಜಿ ಅಧ್ಯಕ್ಷ ಬುಷ್ ಬಳಿ ಹೋಗಿ ಮಾತನಾಡಿದರು. ಅದು ಏನೆಂದು ಇಲ್ಲಿ ಕುಳಿತ ನಮಗೆ ಹೇಗೆ ಕೇಳಿಸಬೇಕು? ಆದರೆ, ತುಟಿ ಚಲನೆಯಿಂದಲೇ ಸಂಭಾಷಣೆಯ ಜಾಡು ಹಿಡಿಯುವ ತಜ್ಞರ ಪ್ರಕಾರ ಒಬಾಮ ಹೇಳಿದ್ದು "You OK?"
ಒಬಾಮರ ಪ್ರಶ್ನೆಗೆ ಬುಷ್ ಲಿಮಿಟೆಡ್ ಉತ್ತರ ಕೊಟ್ಟರು. ದಿ ಸನ್ ಪತ್ರಿಕೆಯ ತುಟಿಪಿಟುಕುಗಳನ್ನು ಗ್ರಹಿಸುವ ವರದಿಗಾರನ ಪ್ರಕಾರ ಬುಷ್ ಉತ್ತರಿಸಿದ್ದು ಎರಡೇ ಪದ "So relieved." ಆನಂತರ ಜಾರ್ಜ್ ಡಬ್ಲ್ಯೂ ಬುಷ್ ಅವರು ಅಧಿಕಾರವನ್ನು ಹಸ್ತಾಂತರ ಮಾಡುವ ಔಪಚಾರಿಕ ವಿಧಿಗಳನ್ನು ವಿದ್ಯುಕ್ತವಾಗಿ ಪೂರೈಸಿದರು. ಶ್ವೇತಭವನದ ಕೀಲಿ ಕೈ ಕೊಡುವಾಗಲಂತೂ ಬುಷ್ (ಒಳಗೊಳಗೇ ಗದ್ಗತಿತರಾಗಿ) "It's all yours now - good luck." ಎಂದರು.
ಪ್ರತಿಭೆ ಮತ್ತು ಸ್ಫೂರ್ತಿಭರಿತ ಭಾಷಣವನ್ನು ನಿರರ್ಗಳವಾಗಿ ಹರಿಸುವ ಒಬಾಮರ ಮೊದಲ ಭಾಷಣದ ವಿಶೇಷಣವೆಂದರೆ ಅಲ್ಲಿ ಪುನರುಕ್ತಿಗಳು ಇರಲಿಲ್ಲ. ಬುಷ್ ಮಹಾಶಯನಿಗಿಂತ ಒಳ್ಳೆಯ ಇಂಗ್ಲಿಷ್ ಸ್ಕೂಲಿನಲ್ಲಿ ಓದಿರಬಹುದೆಂಬ ಅನುಮಾನ ಬಂದಿತು. ಇತ್ತ, ಲಕ್ಷಾಂತರ ಜನ ಅಪ್ಪನ ಭಾಷಣಕ್ಕೆ ಪ್ರತಿಯಾಗಿ ಹರ್ಷೋದ್ಗಾರಗಳನ್ನು ಮಾಡುತ್ತಿದ್ದರೆ ಒಬಾಮನ ಮೊದಲ ಮಗಳು ಸಾಶಾ ಮಾತ್ರ - dad: "That was a good speech, perfect." ಎಂದು ಹೇಳಿದಳೆಂದು ತುಟಿಚಲನವಲನ ತಜ್ಞರ ವಿಶ್ಲೇಷಣೆಯಿಂದ ಮನವರಿಕೆಯಾಯಿತು.