ಬೆವರ್ಲಿ ಹಿಲ್ಸ್ ತಪ್ಪಲಿನಲ್ಲಿ ಕನ್ನಡ ನಾಟಕ!


Director Vallisha Shastriದಕ್ಷಿಣ ಕ್ಯಾಲಿಫೋರ್ನಿಯಾದ ಹವ್ಯಾಸಿ ಕನ್ನಡ ನಾಟಕ ತಂಡ "ರಂಗಧ್ವನಿ "ಯು ಡಾ.ಚಂದ್ರಶೇಖರ ಕಂಬಾರರ "ಜೋಕುಮಾರ ಸ್ವಾಮಿ" ನಾಟಕ ಜೋಡಿ ಪ್ರದರ್ಶವನ್ನು ಏರ್ಪಡಿಸಿದೆ . ಕರ್ನಾಟಕ ನಾಟಕ ಅಕಾಡೆಮಿಯ ಈ ಸಾಲಿನ ಪ್ರಶಸ್ತಿ ಪುರಸ್ಕೃತರಾದ ವಲ್ಲೀಶ ಶಾಸ್ತ್ರಿ ಅವರ ನಿರ್ದೇಶನದಲ್ಲಿ ಪ್ರಯೋಗ ಮೂಡಿಬರಲಿದೆ. ವಲ್ಲೀಶ ಶಾಸ್ತ್ರಿಯವರು 5 ವರ್ಷಕ್ಕೂ ಹೆಚ್ಚು ಕಾಲ ಬೆನಕ ತಂಡದಲ್ಲಿ ಪಳಗಿದ ರಂಗಕರ್ಮಿ. ದಿ. ಬಿ ವಿ ಕಾರಂತರ ಮೂಲ ನಿರ್ದೇಶನಕ್ಕೆ ಧಕ್ಕೆ ಬರದಂತೆ ಹಾಗೂ ಕಂಬಾರರ ಸಂಗೀತವನ್ನೇ ಉಪಯೋಗಿಸಿಕೊಂಡು ಅಮೆರಿಕನ್ನಡಿಗರಿಗೆ ಸಂಕ್ರಾಂತಿಯ ಕೊಡುಗೆಯಾಗಿ ನಾಟಕ ಪ್ರದರ್ಶನವನ್ನು ಆಯೋಜಿಸಿರುವುದಾಗಿ ವಲ್ಲೀಶ ಶಾಸ್ತ್ರಿ ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.

"ರಂಗ ಧ್ವನಿ" ಈಗಾಗಲೇ ಹಲವು ಜನಪ್ರಿಯ ನಾಟಕಗಳನ್ನು ರಂಗದ ಮೇಲೆ ತಂದು ಕನ್ನಡಿಗರ ಮೆಚ್ಚುಗೆಯನ್ನು ಪಡೆದಿದೆ. "ಹಾಲಿವುಡ್‌ನಲ್ಲಿ ಯಮ", "ಯಮನ ಕಾಲ್ ಸೆಂಟರ್", "ಕೃಷ್ಣ ಸಂಧಾನ", "ಪಶ್ಚಾತ್ತಾಪ" ಮುಂತಾದ ನಾಟಕಗಳು ಅಮೆರಿಕಾದ ನಾನಾಕಡೆ ಪ್ರದರ್ಶನ ಕಂಡಿವೆ. ಇದೇ ಫೆಬ್ರವರಿ 2 ರಂದು ರಾತ್ರಿ 7 ಘಂಟೆಗೆ ಸ್ಥಳೀಯ ಸನ್ನಿವೇಲ್ ಹಿಂದು ದೇವಸ್ಥಾನದಲ್ಲಿ ಒಂದು ಪ್ರದರ್ಶನ (Visit www.kknc.org for details) ಹಾಗೂ ಫೆಬ್ರವರಿ 9 ರಂದು ಸಂಜೆ 4 ಘಂಟೆಗೆ ಲಾಸ್ ಏಂಜೆಲಸ್ ಬಳಿ ಲಾಂಗ್ ಬೀಚ್ ಕ್ಯಾಬ್ರಿಯೋ ಪ್ರೌಢಶಾಲೆಯಲ್ಲಿ (Visit www.lakannada.com for details) ಇನ್ನೊಂದು ಪ್ರದರ್ಶನವನ್ನು ಇಟ್ಟುಕೊಳ್ಳಲಾಗಿದೆ.

ಡಾ. ಚಂದ್ರಶೇಖರ ಕಂಬಾರರು ರಚಿಸಿದ "ಜೋಕುಮಾರಸ್ವಾಮಿ" ಜಾನಪದ ನಾಟಕಕ್ಕೆ ಪ್ರತಿಷ್ಠ ಕಮಲಾದೇವಿ ಛಟ್ಟೋಪಾಧ್ಯಾಯ ಪ್ರಶಸ್ತಿಯ ಬಂದಿದೆ. ಉತ್ತರ ಕರ್ನಾಟಕದ ಪ್ರದೇಶದಲ್ಲಿ ನಡೆಯುವ ದೊಡ್ಡಾಟ, ಸಣ್ಣಾಟಗಳಲ್ಲಿ ಈ ನಾಟಕ ತುಂಬಾ ಪ್ರಸಿದ್ಧಿ. ಉತ್ತರ ಕರ್ನಾಟಕದ ಭಾಷೆಯ ಸೊಗಡು, ಮತ್ತು ಕಪ್ಪು ಮಣ್ಣಿನ ಸಂಸ್ಕೃತಿ ನಾಟಕದಲ್ಲಿ ಎದ್ದು ಕುಣಿಯುತ್ತದೆ.

ಹಳ್ಳಿಯ ಕಡೆ ನಡೆಯುವ ಬಡ ರೈತರ ಶೋಷಣೆಯೇ ಈ ನಾಟಕದ ಹಿನ್ನೆಲೆ. ಕಥೆ ಮೂರು ಮುಖ್ಯ ಪಾತ್ರಗಳ ಸುತ್ತ ಹೆಣೆಯಲಾಗಿದೆ. ಇನಾಮದಾರಿಗಿರಿಯ ಗೌಡ, ಅವನ ಹೆಂಡತಿ ಗೌಡತಿ ಮತ್ತು ಹಳ್ಳಿಯ ಬಂಡಾಯ ಯುವಕ ಬಸಣ್ಯ. ಬಡ ರೈತರ ಶೋಷಣೆ ಮಾಡಿ ಜಮೀನು ಕಸಿಯುವುದೇ ತನ್ನ ವೃತ್ತಿಯಾಗಿಸಿಕೊಂಡಿದ್ದ ಗೌಡ, ಬಸಣ್ಯನ ತಂದೆಯನ್ನು ಕೊಲೆಮಾಡಿಸಿರುತ್ತಾನೆ. ಅದರಿಂದ ಬಸಣ್ಯ ಗೌಡನ ಮೇಲೆ ಬಂಡಾಯವೆದ್ದಿರುತ್ತಾನೆ. ಹಳ್ಳಿಯ ಜನಕ್ಕೆ ಜೋಕುಮಾರಸ್ವಾಮಿ ಬಂಜೆತನವನ್ನು ತೊಲಗಿಸುವ ಸಂಕೇತವಾದ ದೇವರೆಂದೇ ನಂಬಿಕೆ. ಮಕ್ಕಳಿಲ್ಲದ ಗೌಡತಿ, ಗೌಡನ ನಪುಂಸಕತೆಗೆ ಬೇಸತ್ತು ಜೋಕುಮಾರಸ್ವಾಮಿ ಪೂಜೆ ಮಾಡಿ, ಅದರ ಪಲ್ಯವನ್ನು ಗೊತ್ತಿಲ್ಲದೆ ಬಸಣ್ಯನಿಗೆ ಉಣಬಡಿಸುತ್ತಾಳೆ. ಬಸಣ್ಯ ಗೌಡತಿಯ ಹೃದಯ ಚೋರನಾಗಿ, ಗೌಡತಿ ಈ ಅನೈತಿಕ ಸಂಬಂಧದಿಂದ ಬಸರಿಯಾಗಿತ್ತಾಳೆ. ಇದನ್ನು ತಿಳಿದ ಗೌಡ ಬಸಣ್ಯನನ್ನು ಕೊಲೆಮಾಡಲು ಹೊಂಚುಮಾಡುತ್ತಾನೆ. ಕೊಲೆಮಾಡಿದನೆ, ಇಲ್ಲವೇ ಗೌಡತಿ ಬಸಣ್ಯನ ಜೋಡಿ ಓಡಿ ಹೋದಳೇ? ಬಂದು ನಾಟಕ ನೋಡಿ, ಆನಂದಿಸಿ.

ನಿರ್ದೇಶನ: ವಲ್ಲೀಶ ಶಾಸ್ತ್ರಿ

ಪ್ರಮುಖ ಪಾತ್ರವರ್ಗ:

ಗೌಡ: ವಲ್ಲೀಶ ಶಾಸ್ತ್ರಿ
ಗೌಡ್ತಿ: ವಿದ್ಯಾ ಶಾಸ್ತ್ರಿ
ಬಸಣ್ಣ: ಶ್ರೀನಿವಾಸ್ ಟಿ ವಿ
ಸೂತ್ರಧಾರ: ಶ್ರೀನಿ ಎಮ್ ಎಲ್
ಹಿಮ್ಮೇಳ: ಜಗನ್ನಾಥ್ ಶಂಕಂ
ಗುರ್‍ಯಾ:ಎಂಸಿ ವೆಂಕಟೇಶ್
ಜ್ಯೋತಿ:ಜ್ಯೋತಿ ವೆಂಕಟೇಶ್
ಸಂಗೀತ ನಿರ್ವಹಣೆ:ಹರಿ ಮನುಮಂತ ಮತ್ತು ವೀಣಾ ಕೃಷ್ಣ

ಹೆಚ್ಚಿನ ವಿವರಗಳಿಗೆ ವಲ್ಲೀಶ ಶಾಸ್ತ್ರಿ ಅವರನ್ನು ಸಂಪರ್ಕಿಸಿ.

(ದಟ್ಸ್ ಕನ್ನಡ, ಸಾಗರೋಲ್ಲಂಘನ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+